ಮಂಗಳ ಗ್ರಹದಲ್ಲಿ ಇನ್ನೂ ಬದುಕಿವೆ ‘ಜ್ವಾಲಾಮುಖಿ’ಯ ಜಾಲಗಳು!
ಭೂಮಿ ಮೇಲೆ ಜ್ವಾಲಾಮುಖಿ ಕಾಣುವುದು ಸಾಮಾನ್ಯ, ಇದೇ ರೀತಿ ಮಂಗಳ ಗ್ರಹದಲ್ಲೂ ಜ್ವಾಲಾಮುಖಿಯ ಅಬ್ಬರ ಜೋರಾಗಿದೆ ಎಂಬುದನ್ನ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. 'ನಾಸಾ' ರೋವರ್ಗಳ ಅಧ್ಯಯನದಿಂದ ಈ ಸತ್ಯ ಬೆಳಕಿಗೆ ಬಂದಿದೆ. ಸುಮಾರು 400 ಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದ ಮೇಲೂ ಭೂಮಿಯ ಮೇಲೆ ಇರುವಂತೆ ನೀರು, ವಾತಾವರಣ ಇತ್ತು. ಇಲ್ಲಿ ಜೀವಿಗಳೂ ಬದುಕಿದ್ದವು ಎಂಬುದಕ್ಕೆ ಪುರಾವೆ ಸಿಕ್ಕಿದೆ.
ಇಷ್ಟೆಲ್ಲದರ ನಡುವೆ ಭೂಮಿಯ ಮೇಲೆ ಆರ್ಭಟಿಸುವ ಜ್ವಾಲಾಮುಖಿಗಳ ಜಾಲ, ಮಂಗಳ ಗ್ರಹದ ಮೇಲೂ ಹಬ್ಬಿಕೊಂಡಿದೆ ಎಂಬುದನ್ನು ವಿಜ್ಞಾನಿಗಳು ಅಧ್ಯಯನದಿಂದ ಕಂಡುಕೊಂಡಿದ್ದಾರೆ. ಜ್ವಾಲಾಮುಖಿ ಅಸ್ತಿತ್ವದ ಬಗ್ಗೆ ನಮಗೆ ಅರಿವು ಮೂಡುವುದು ಅವು ಸ್ಫೋಟಗೊಂಡಾಗ ಮಾತ್ರ. ಆದರೆ ಮಂಗಳನ ಮೇಲೆ ಜ್ವಾಲಾಮುಖಿಗಳ ಸ್ಫೋಟ ಸಂಭವಿಸದೇ ಇದ್ದರೂ, ಗ್ರಹದ ಒಳಭಾಗದಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ.
ಭೂಮಿಗೂ ಕೇಳಿಸಿದ ಮಂಗಳ ಗ್ರಹದ ಸದ್ದು..! ಶತಮಾನದ ವಿಸ್ಮಯ ನಡೆದಿದ್ದೇಗೆ.?
ಆದರೂ ಅಂಗಾರಕನಲ್ಲಿ ಮುಂದೊಂದು ದಿನ ಜ್ವಾಲಾಮುಖಿ ಸ್ಫೋಟಿಸಬಹುದು ಎನ್ನುತ್ತಾರೆ ಬಾಹ್ಯಾಕಾಶ ವಿಜ್ಞಾನಿಗಳು. ಇದು ಗ್ರಹದ ಭವಿಷ್ಯವನ್ನೇ ಬದಲಿಸಬಹುದು, ಮಂಗಳ ಗ್ರಹದ ಮೇಲೆ ಬಿಸಿ ಹೆಚ್ಚಿಸಿ ಜೀವಿಗಳು ಬದುಕಲು ಅವಕಾಶವನ್ನೂ ಕಲ್ಪಿಸಬಹುದು ಎಂಬುದು ವಿಜ್ಞಾನ ಲೋಕದ ಲೆಕ್ಕಾಚಾರವಾಗಿದೆ.
‘ಜ್ವಾಲಾಮುಖಿ’ ಒತ್ತಡ ಇರಲೇಬೇಕು
ಯಾವುದೇ ಗ್ರಹಕ್ಕೆ ಬಾಹ್ಯಬಲ ಹೆಚ್ಚಾದಾಗ, ಅಂದರೆ ಹೊರಗಿನ ಒತ್ತಡ ಹೆಚ್ಚಾದರೆ ಒಳಭಾಗ ಕುಸಿಯುತ್ತದೆ. ಉದಾಹರಣೆಗೆ ತೆಳುವಾದ ಪ್ಲಾಸ್ಟಿಕ್ ಚೆಂಡನ್ನು ಹೊರಗಿನಿಂದ ಒತ್ತಿದರೆ ಅಪ್ಪಚ್ಚಿಯಾಗುತ್ತದೆ. ಹೀಗೆ ಆ ಚೆಂಡು ಅಪ್ಪಚ್ಚಿ ಆಗದೇ ಇರಲು ಒಳಭಾಗದಲ್ಲೂ ಒತ್ತಡ ಉಂಟುಮಾಡಬೇಕು. ಗ್ರಹಗಳು ಕೂಡ ಇದೇ ಆಧಾರದಲ್ಲಿ ಅಸ್ತಿತ್ವ ಪಡೆದಿವೆ. ಭೂಮಿಯ ಮೇಲೆ ನಾವು ಇಷ್ಟೆಲ್ಲಾ ಒತ್ತಡ ಹಾಕುವಾಗ ಭೂಮಿ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗಿರುವುದು ಅದರ ಆಂತರಿಕ ಒತ್ತಡದಿಂದ. ಒಂದು ಕಡೆ ಮೇಲ್ಭಾಗದಲ್ಲಿ ಒತ್ತಡ ಹಾಕುವಾಗ, ಒಳಗೂ ಒತ್ತಡ ಉಂಟಾಗಬೇಕು. ಆಗ ಎರಡೂ ಒತ್ತಡಗಳೂ ಸರಿದೂಗುತ್ತವೆ. ಆಗ ಗ್ರಹದ ಅಸ್ತಿತ್ವದಲ್ಲಿ ಬದಲಾವಣೆ ಆಗುವುದಿಲ್ಲ, ಅಂದರೆ ಗ್ರಹಕ್ಕೆ ಒತ್ತಡದಿಂದ ಯಾವುದೇ ತೊಂದರೆ ಆಗುವುದಿಲ್ಲ. ಹೀಗೆ ಗ್ರಹದ ಒಳಭಾಗದಲ್ಲಿ ಒತ್ತಡ ಉಂಟುಮಾಡುವಲ್ಲಿ ಜ್ವಾಲಾಮುಖಿಗಳ ಪಾತ್ರ ದೊಡ್ಡದಿದೆ. ಮಂಗಳ ಗ್ರಹದಲ್ಲೂ ಇದೇ ರೀತಿಯಾದ ಪ್ರಕ್ರಿಯೆ ನಡೆಯುತ್ತಿರುವ ಸಾಧ್ಯತೆ ದಟ್ಟವಾಗಿದೆ.
ಐಸ್ ‘ಜ್ವಾಲಾಮುಖಿ’ ಬಗ್ಗೆ ಗೊತ್ತಾ..?
ನಮ್ಮ ಸೌರಮಂಡಲ ಕೋಟ್ಯಂತರ ವಿಸ್ಮಯಗಳನ್ನ ಒಡಲಲ್ಲಿ ಇಟ್ಟುಕೊಂಡಿದೆ. ಇದುವರೆಗೂ ನಾವು ಕೇವಲ ಬೆಂಕಿ ಹೊರ ಹಾಕುವ ಜ್ವಾಲಾಮುಖಿ ಬಗ್ಗೆ ಕೇಳಿದ್ದೆವು. ಆದರೆ 4-5 ವರ್ಷಗಳ ಹಿಂದೆ ಶನಿಗ್ರಹದ ಉಪಗ್ರಹ, ಹಿಮ ಅಂದರೆ ಐಸ್ ರೂಪದ ಜ್ವಾಲಾಮುಖಿ ಹೊರಹಾಕುವ ಸಂಗತಿ ಬಯಲು ಮಾಡಿದ್ದರು ವಿಜ್ಞಾನಿಗಳು. ಹಾಗೇ ಇನ್ನೂ ಹಲವು ಗ್ರಹಗಳಲ್ಲಿ ಜ್ವಾಲಾಮುಖಿ ಜಾಲ ತನ್ನದೇ ಸ್ವರೂಪ ಪಡೆದಿದೆ. ಭೂಮಿಗೆ ಹತ್ತಿರದಲ್ಲೇ ಇರುವ ಶುಕ್ರ ಗ್ರಹದಲ್ಲಿ ಲೆಕ್ಕವಿಲ್ಲದಷ್ಟು ಜ್ವಾಲಾಮುಖಿಗಳು ಹಬ್ಬಿದ್ದು, ಪ್ರತಿಕ್ಷಣವೂ ಬೆಂಕಿ ಹೊರಹಾಕುತ್ತಿವೆ. ಇದೇ ಕಾರಣಕ್ಕೆ ಶುಕ್ರಗ್ರಹ ಸಾಕಷ್ಟು ಬಿಸಿಯಾಗಿದ್ದು, 'ಹಸಿರು ಮನೆ ಅನಿಲ'ದ ಕೂಪದಲ್ಲಿ ನರಳುತ್ತಿದೆ.
ಭವಿಷ್ಯ ಬದಲಿಸಬಲ್ಲ ಯೋಜನೆ ಸಕ್ಸಸ್, ನಾಸಾ ಸಾಧನೆ ಅವಿಸ್ಮರಣೀಯ..!
ನೀರು ಆವಿಯಾಗಿತ್ತು ಎಂದಿದ್ದರು..!
ಕೆಲವು ತಿಂಗಳ ಹಿಂದೆ ವರದಿಯೊಂದು ಹೊರಬಿದ್ದಿತ್ತು. ಆ ವರದಿ ಪ್ರಕಾರ ಮಂಗಳ ಗ್ರಹದಲ್ಲಿ 4 ಬಿಲಿಯನ್ ವರ್ಷ ಅಂದರೆ 400 ಕೋಟಿ ವರ್ಷಗಳ ಹಿಂದೆ ಅಪಾರ ಪ್ರಮಾಣದಲ್ಲಿ ನೀರು ಇತ್ತು, ಆದರೆ ಮಂಗಳ ಗ್ರಹದ ಉಷ್ಣಾಂಶದ ಕಾರಣ ಆವಿಯಾಗಿದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದರು. ಆದರೆ ಈ ಸಂಶೋಧನೆ ಎಲ್ಲಾ ಹೇಳಿಕೆಗಳನ್ನ ಉಲ್ಟಾ ಮಾಡಿದೆ. ಮಂಗಳ ಗ್ರಹದ ಗುರುತ್ವ ಬಲದಲ್ಲಿ ಉಂಟಾದ ಬದಲಾವಣೆ ನೀರನ್ನು ನಾಪತ್ತೆ ಮಾಡಿದೆ ಎಂಬುದು ಗೊತ್ತಾಗಿದೆ. ಹಾಗೆಂದು ಮಂಗಳ ಗ್ರಹದ ಮೇಲಿದ್ದ ನೀರು ಎಲ್ಲಿಗೂ ಹೋಗಿಲ್ಲ. ಆದರೆ ನಾಪತ್ತೆಯಾದ ನೀರು ಮಂಗಳ ಗ್ರಹದ ನೆಲದಲ್ಲೇ ಹುದುಗಿದೆ ಎನ್ನಲಾಗಿದೆ.
ಮಂಗಳ ಗ್ರಹದಲ್ಲಿ ಅಂತರ್ಜಲ..?
ಭೂಮಿ ಮೇಲೆ ಬೋರ್ ತೋಡಿದಂತೆ ಮಂಗಳ ಗ್ರಹದಲ್ಲೂ ಬೋರ್ವೆಲ್ ತೋಡುವ ದಿನಗಳು ದೂರವಿಲ್ಲ. ಏಕೆಂದರೆ ವಿಜ್ಞಾನಿಗಳು ಇದೀಗ ನೀಡಿರುವ ವರದಿಯ ಪ್ರಕಾರ ಮಂಗಳನ ಮೇಲೆ ನಾಪತ್ತೆಯಾಗಿರುವ ನೀರು, ಮಂಗಳ ಗ್ರಹದ ನೆಲದ ಒಳಗೆ ಸೇರಿದೆ ಎನ್ನಲಾಗುತ್ತಿದೆ. ವಿಜ್ಞಾನಿಗಳು ಹೇಳಿದಂತೆ ನೀರು ಮಂಗಳನ ನೆಲದಲ್ಲಿ ಹುದುಗಿದ್ದರೆ, ಅಂತರ್ಜಲ ಹೊರತೆಗೆಯಲು ಬೋರ್ವೆಲ್ ತೋಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಆಗ ಮಂಗಳ ಗ್ರಹದ ಮೇಲೂ ಬೋರ್ವೆಲ್ ತೋಡುವ ಕಂಪನಿಗಳು ಶುರುವಾದರೂ ಅಚ್ಚರಿ ಏನಿಲ್ಲ. ಇದು ಬಾಹ್ಯಾಕಾಶ ಪ್ರೇಮಿಗಳು ಹಾಗೂ ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಆಂತರಿಕ ಕ್ರಿಯೆ ಮುಳುವಾಯ್ತಾ..?
ಭೂಮಿ ಒಳಗೆ ನಡೆಯುವ ಆಂತರಿಕ ಕ್ರಿಯೆಗಳಂತೆ ಮಂಗಳ ಗ್ರಹದಲ್ಲೂ ಆಂತರಿಕ ಕ್ರಿಯೆಗಳು ನಡೆಯುತ್ತವೆ. ಈ ಆಂತರಿಕ ಕ್ರಿಯೆ ಇಲ್ಲದ ಹೊರತಾಗಿ ಒಂದು ಗ್ರಹಕ್ಕೆ ಅಸ್ತಿತ್ವ ಇರುವುದಿಲ್ಲ. ಏಕೆಂದರೆ ಬಾಹ್ಯ ಒತ್ತಡಗಳಿಗೆ ಸರಿಸಮನಾಗಿ ಆಂತರಿಕ ಒತ್ತಡವೂ ಇರಬೇಕು. ಹೀಗೆ ಆಂತರಿಕ ಒತ್ತಡದ ಏರಿಳಿತ ಒಂದು ಗ್ರಹದ ಗುರುತ್ವದ ಮೇಲೂ ಪ್ರಭಾವ ಬೀರುತ್ತದೆ. ಇದೇ ರೀತಿ ಮಂಗಳ ಗ್ರಹದಲ್ಲೂ ಗುರುತ್ವಬಲದ ಏರಿಳಿತದಿಂದ ನೀರು ಇತರ ಸಂಯುಕ್ತಗಳ ಜೊತೆ ಸೇರಿ ಮಂಗಳ ಗ್ರಹದ ಅಂತರ್ಜಲ ಸೇರಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಂಶೋಧನೆಗಳು ಮುಂದುವರಿದಿದ್ದು, ಸದ್ಯದಲ್ಲೇ ಸ್ಪಷ್ಟನೆ ಸಿಗಲಿದೆ.
2 ಕಿ.ಮೀ. ದಪ್ಪವಾಗಿತ್ತು ಹಿಮ..!
ಮಂಗಳ ಗ್ರಹದ ಮೇಲೆ 400 ಕೋಟಿ ವರ್ಷಗಳ ಹಿಂದೆ ಭಾರಿ ಪ್ರಮಾಣದಲ್ಲಿ ಹಿಮ ಹುದುಗಿತ್ತು. ಮಂಗಳನ ನೆಲದ ಮೇಲೆ ಹರಡಿದ್ದ ಈ ಹಿಮದ ಪ್ರಮಾಣ ಬರೋಬ್ಬರಿ 2 ಕಿ.ಮೀ. ದಪ್ಪವಾಗಿತ್ತು ಎಂಬ ವಿಚಾರವನ್ನೂ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಹೀಗೆ ಇಡೀ ಗ್ರಹದಲ್ಲಿ ಹರಡಿದ್ದ ಹಿಮ ಕ್ರಮೇಣ ಕರಗುತ್ತಾ ಸಾಗಿದೆ. ಮಂಗಳ ಗ್ರಹದ ಗುರುತ್ವ ಬಲದ ಬದಲಾವಣೆ ಪರಿಣಾಮ ಹಿಮ ಕರಗಿ, ಆ ನೀರು ಕೂಡ ಇತರ ಸಂಯುಕ್ತದೊಂದಿಗೆ ಬೆರೆತು ನೆಲ ಸೇರಿದೆ ಎನ್ನಲಾಗುತ್ತಿದೆ. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ಮುಂದುವರಿಸಿದ್ದಾರೆ ವಿಜ್ಞಾನಿಗಳು.