ಸಿನೆಮಾ ಮಾಡುವುದನ್ನೇ ಬಿಡುತ್ತೇನೆ, ಆದರೆ..: 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿದ್ದೇನು?
ಮುಂಬೈ, ನವೆಂಬರ್ 29: ಇಸ್ರೇಲಿ ಚಲನಚಿತ್ರ ನಿರ್ದೇಶಕ ನಾದವ್ ಲ್ಯಾಪಿಡ್ ಅವರು 'ದಿ ಕಾಶ್ಮೀರ ಫೈಲ್ಸ್' ಚಿತ್ರವನ್ನು ಪ್ರೊಪಗಂಡಾ ಹರಡುವ ಅಸಭ್ಯ ಸಿನಿಮಾ ಎಂದು ಹೇಳಿಕೆ ನೀಡಿದ್ದಾರೆ. ಗೋವಾ ಅಂತರಾರಾಷ್ಟ್ರೀಯ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದ್ದರು.
'ಈ ಚಿತ್ರೋತ್ಸವದ 15ನೇ ಚಿತ್ರ, ದಿ ಕಾಶ್ಮೀರ್ ಫೈಲ್ಸ್ನಿಂದ ನಾವೆಲ್ಲರೂ ವಿಚಲಿತರಾಗಿದ್ದೇವೆ ಮತ್ತು ಆಘಾತಕ್ಕೊಳಗಾಗಿದ್ದೇವೆ. ಅದು ಪ್ರೊಪಗಂಡಾವನ್ನು ಹರಡುವ ಅಸಭ್ಯ ಚಲನಚಿತ್ರ' ಎಂದು ಟೀಕಿಸಿದ್ದರು.
ನಾದವ್ ಲ್ಯಾಪಿಡ್ ಹೇಳಿಕೆ ಕುರಿತು 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅಂತಿಮವಾಗಿ ಮೌನ ಮುರಿದಿದ್ದಾರೆ.
ತಾವು ಮಾತನಾಡಿರುವ ವಿಡಿಯೊವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಿನಿಮಾ ಮಾಡುವುದನ್ನು ಬಿಡುತ್ತೇನೆ ಎಂದ ಅಗ್ನಿಹೋತ್ರಿ
ತಮ್ಮ ಚಿತ್ರದಲ್ಲಿ ತೋರಿಸಿದ್ದೆಲ್ಲವೂ ನಿಜವಲ್ಲ ಎಂದು ಯಾರಾದರೂ ಸಾಬೀತುಪಡಿಸಿದರೆ ಸಿನಿಮಾ ಮಾಡುವುದನ್ನು ನಿಲ್ಲಿಸುವುದಾಗಿ ಅಗ್ನಿಹೋತ್ರಿ ಹೇಳಿದ್ದಾರೆ.
'ಇದು ನನಗೆ ಹೊಸದೇನಲ್ಲ. ಏಕೆಂದರೆ ಇಂತಹ ವಿಚಾರಗಳನ್ನು ಭಯೋತ್ಪಾದಕ ಸಂಘಟನೆಗಳು, ನಗರ ನಕ್ಸಲರು ಮತ್ತು ದೇಶವನ್ನು ವಿಭಜಿಸಲು ಬಯಸುವವರು ಹೆಚ್ಚಾಗಿ ಮಾತನಾಡುತ್ತಾರೆ. ನನಗೆ ಆಘಾತ ತಂದ ವಿಷಯವೆಂದರೆ, ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ಬಯಸುವವರು ಹರಡುವ ನಿರೂಪಣೆಯನ್ನು ನಿನ್ನೆ ಮಾತನಾಡಲಾಗಿದೆ' ಎಂದಿದ್ದಾರೆ.
ಸರ್ಕಾರ ಆಯೋಜಿಸಿದ ಕಾರ್ಯಕ್ರಮದ ವೇದಿಕೆಯಲ್ಲಿ ಭಾರತದ ಕುರಿತು ಈ ರೀತಿ ಮಾತನಾಡಲಾಗಿದೆ. ಭಾರತದಲ್ಲಿ ವಾಸಿಸುವ ಕೆಲವರು ಇದನ್ನು ದೇಶದ ವಿರುದ್ಧ ಬಳಸುತ್ತಿದ್ದಾರೆ ಎಂದು ವಿವೇಕ್ ತಿಳಿಸಿದ್ದಾರೆ.
ನಾಲ್ಕು ವರ್ಷಗಳಿಂದಲೂ ಚಿತ್ರಕ್ಕೆ ಆಕ್ಷೇಪ
ನಾಲ್ಕು ವರ್ಷಗಳ ಹಿಂದೆ ಈ ವಿಷಯದ ಬಗ್ಗೆ ಸಂಶೋಧನೆ ಆರಂಭಿಸಿದಾಗಿನಿಂದಲೂ ಇದೇ ಜನರು ತಮ್ಮ ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿವೇಕ್ ಹೇಳಿದ್ದಾರೆ.
'ಕಾಶ್ಮೀರ್ ಫೈಲ್ಸ್ ಒಂದು ಪ್ರಪೊಗಂಡಾ ಚಲನಚಿತ್ರ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಹಾಗಾಗಿ, ಇಂದು ನಾನು ಎಲ್ಲಾ ಬುದ್ಧಿಜೀವಿಗಳಿಗೆ, ನಗರ ನಕ್ಸಲರಿಗೆ ಮತ್ತು ಇಸ್ರೇಲ್ನ ಈ ಮಹಾನ್ ಚಲನಚಿತ್ರ ನಿರ್ಮಾಪಕರಿಗೆ ಸವಾಲು ಹಾಕುತ್ತೇನೆ. ಅವರು ಕಾಶ್ಮೀರ ಫೈಲ್ಸ್ನ ಒಂದೇ ಒಂದು ಶಾಟ್, ಸಂಭಾಷಣೆ, ಘಟನೆಯನ್ನು ಸುಳ್ಳು ಎಂದು ಸಾಬೀತುಪಡಿಸಿದರೆ, ನಾನು ಚಲನಚಿತ್ರಗಳನ್ನು ಮಾಡುವುದನ್ನು ನಿಲ್ಲಿಸುತ್ತೇನೆ' ಎಂದು ಅಗ್ನಿಹೋತ್ರಿ ಸವಾಲು ಹಾಕಿದ್ದಾರೆ.
ಚಿತ್ರದ ಕುರಿತು ನಾದವ್ ಲ್ಯಾಪಿಡ್ ಹೇಳಿದ್ದು ಏನು?
ಗೋವಾದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ನಾಡವ್, 'ಈ ಚಿತ್ರೋತ್ಸವದ 15ನೇ ಚಿತ್ರ, ದಿ ಕಾಶ್ಮೀರ್ ಫೈಲ್ಸ್ನಿಂದ ನಾವೆಲ್ಲರೂ ವಿಚಲಿತರಾಗಿದ್ದೇವೆ ಮತ್ತು ಆಘಾತಕ್ಕೊಳಗಾಗಿದ್ದೇವೆ. ಅದು ಅಪಾಯಕಾರಿ ಸಿದ್ಧಾಂತವೊಂದನ್ನು ಪ್ರಚಾರ ಮಾಡುವ ಅಸಭ್ಯ ಚಲನಚಿತ್ರ' ಎಂದು ಟೀಕಿಸಿದ್ದಾರೆ.
'ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾತ್ಮಕ ವಿಭಾಗಕ್ಕೆ ಸೂಕ್ತ ಚಿತ್ರವಲ್ಲ ಇದು ಎಂದು ಭಾಸವಾಯಿತು. ವೇದಿಕೆಯಲ್ಲಿ ನಿಮ್ಮೊಂದಿಗೆ ಈ ಭಾವನೆಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ನನಗೆ ಸಂಪೂರ್ಣವಾಗಿ ಸ್ವಾತಂತ್ರ್ಯವಿದೆ. ಈ ಚಿತ್ರೋತ್ಸವದ ಮನೋಭಾವವು ಕಲೆಗೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಸಹ ಸ್ವೀಕರಿಸುವುದಾಗಿದೆ' ಎಂದು ನಾಡವ್ ಅಭಿಪ್ರಾಯ ಪಟ್ಟಿದ್ದಾರೆ.
ಇಸ್ರೇಲಿ ನಿರ್ದೇಶಕ ನಾದವ್ ಲ್ಯಾಪಿಡ್ ಕ್ಷಮೆಯಾಚನೆಗೆ ಆಗ್ರಹ
ಭಾರತ ಮತ್ತು ಇಸ್ರೇಲ್ನ ಅನೇಕ ಅಧಿಕಾರಿಗಳು, ರಾಜಕಾರಣಿಗಳು ಮತ್ತು ರಾಜತಾಂತ್ರಿಕರು ನಾದವ್ ಲ್ಯಾಪಿಡ್ ಹೇಳಿಕೆಗಳನ್ನು ಖಂಡಿಸಿದ್ದಾರೆ. ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. ಅವರ ವಿರುದ್ಧ ದೂರುಗಳನ್ನು ಸಲ್ಲಿಸಿದ್ದಾರೆ.
ಭಯೋತ್ಪಾದಕರಿಂದ ಹತ್ಯೆಗೊಳಗಾದ ಕಾಶ್ಮೀರಿ ಪಂಡಿತರ ಕುಟುಂಬಗಳು ಕಾಶ್ಮೀರವನ್ನು ತೊರೆದು ವಲಸೆ ಹೋಗಿದ್ದರು. ಇದನ್ನು 'ದಿ ಕಾಶ್ಮೀರ್ ಫೈಲ್ಸ್'ನಲ್ಲಿ ಹೇಳಲಾಗಿದೆ. ಮಾರ್ಚ್ 11 ರಂದು ಬಿಡುಗಡೆಯಾದ ಚಿತ್ರವು ಹಲವು ವಿವಾದಗಳಿಗೆ ಕಾರಣವಾಗಿದೆ.