52 ವರ್ಷಗಳ ರಾಜಕೀಯ ವೃತ್ತಿ ಬದುಕಿಗೆ ಅಂತ್ಯ ಘೋಷಿಸಿದ ಎಕೆ ಆಂಟನಿ
"ಚುನಾವಣಾ ರಾಜಕೀಯ ಮತ್ತು ನನ್ನ ಸಂಸದೀಯ ವೃತ್ತಿಜೀವನದಲ್ಲಿ ನನ್ನ ಪ್ರಯಾಣವನ್ನು ಕೊನೆಗೊಳಿಸುವ ಸಮಯ ಇದೀಗ ಬಂದಿದೆ. ನಾನು ಏಪ್ರಿಲ್ನಲ್ಲಿ ದೆಹಲಿಯಿಂದ ಹೊರಟು ತಿರುವನಂತಪುರದಲ್ಲಿ ವಾಸಕ್ಕೆ ಮರಳುತ್ತೇನೆ" ಎಂದು ಕಾಂಗ್ರೆಸ್ ಹಿರಿಯ ನಾಯಕ, ಕೇರಳದ ಮಾಜಿ ಸಿಎಂ, ಕೇಂದ್ರದ ಮಾಜಿ ಸಚಿವ ಎಕೆ ಆಂಟನಿ ಘೋಷಿಸಿದ್ದಾರೆ.
ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಸ್ಥಾನಕ್ಕೆ ಮರು ಆಯ್ಕೆ ಬಯಸುವುದಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ತಿಳಿಸಿದ್ದಾರೆ. ಕೇರಳದ ಮೂರು ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 31ರಂದು ಚುನಾವಣೆ ನಡೆಯಲಿದೆ.
ಮಂಗಳವಾರದಂದು ತಿರುವನಂತಪುರಂನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಕೆ ಅಂಟನಿ(81ವರ್ಷ) ಅವರು ತಮಗೆ ಇದುವರೆವಿಗೂ ಸೂಕ್ತ ಹುದ್ದೆ ನೀಡಿ, ರಾಜ್ಯಸಭಾ ಸದಸ್ಯನಾಗಲು ಅವಕಾಸ ನೀಡಿದ್ದಕ್ಕಾಗಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ಅರ್ಪಿಸಿದರು.
ರಾಜ್ಯಸಭೆ ಮರು ಆಯ್ಕೆ ಬಯಸುವುದಿಲ್ಲ ಎಂದು ಎರಡು ತಿಂಗಳ ಹಿಂದೆಯೇ ಸೋನಿಯಾ ಅವರಿಗೆ ತಿಳಿಸಿದ್ದೆ, ಕಳೆದ ತಿಂಗಳು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೂ ವಿಷಯ ಮುಟ್ಟಿಸಿದ್ದೆ ಎಂದು ಹೇಳಿದರು.
ಕೇರಳದ ಯುವ ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವರಾಗಿ 2006 ರಿಂದ 2014ರ ಅವಧಿಯಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
"ಚುನಾವಣಾ ರಾಜಕೀಯ ಮತ್ತು ನನ್ನ ಸಂಸದೀಯ ವೃತ್ತಿಜೀವನದಲ್ಲಿ ನನ್ನ ಪ್ರಯಾಣವನ್ನು ಕೊನೆಗೊಳಿಸುವ ಸಮಯ ಇದೀಗ ಬಂದಿದೆ. ನಾನು ಏಪ್ರಿಲ್ನಲ್ಲಿ ದೆಹಲಿಯಿಂದ ಹೊರಟು ತಿರುವನಂತಪುರದಲ್ಲಿ ವಾಸಕ್ಕೆ ಮರಳುತ್ತೇನೆ" ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಹಿಂದೆ, ಆಂಟನಿ, ಸಿಪಿಐ(ಎಂ)ನ ಕೆ ಸೋಮಪ್ರಸಾದ್ ಮತ್ತು ಎಂವಿ ಶ್ರೇಯಮ್ಸ್ ಕುಮಾರ್ ಅವರಿಂದ ತೆರವಾಗುವ ಕೇರಳದ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ಆಯೋಗವು ಚುನಾವಣೆಯ ದಿನಾಂಕಗಳನ್ನು ಘೋಷಿಸಿದೆ.
ಕೇರಳದ ಅತ್ಯಂತ ಕಿರಿಯ ಸಿಎಂ, ಭಾರತದ ಅತ್ಯಂತ ದೀರ್ಘಾವಧಿಯ ರಕ್ಷಣಾ ಮಂತ್ರಿ
1970 ರ ದಶಕದಲ್ಲಿ ಕೇರಳ ರಾಜಕೀಯದಲ್ಲಿ ಪ್ರಾರಂಭವಾದ ಅವರ ವೃತ್ತಿಜೀವನದುದ್ದಕ್ಕೂ, ಆಂಟನಿ ಅವರು ಕಾಂಗ್ರೆಸ್ನ ಅತ್ಯಂತ ಪ್ರಾಮಾಣಿಕ ಮತ್ತು ನೇರ ನಾಯಕರಲ್ಲಿ ಒಬ್ಬರು ಎಂಬ ಖ್ಯಾತಿಯನ್ನು ಹೊಂದಿದ್ದರು ಮತ್ತು ಅವರಿಗೆ 'ಕಾಂಗ್ರೆಸ್ನ ಸಂತ(St) ಆಂಟನಿ' ಎಂಬ ಗೌರವದಿಂದ ಕರೆಯಲಾಗುತ್ತದೆ. ಸೋನಿಯಾ ಗಾಂಧಿಯವರ ಅತ್ಯಂತ ವಿಶ್ವಾಸಾರ್ಹ ಗುಂಪಿನ ಪ್ರಮುಖ ಸದಸ್ಯರಲ್ಲಿ ಒಬ್ಬರು ಎಂದು ಹೇಳಬಹುದು ಮತ್ತು ಇಂದಿರಾ ಮತ್ತು ರಾಜೀವ್ ಗಾಂಧಿಯವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದ ಕಟ್ಟಾ ಕಾಂಗ್ರೆಸ್ ಪಟು.
ವಿದ್ಯಾರ್ಥಿ ರಾಜಕೀಯದ ದಿನಗಳಿಂದ ಪದವಿ ಪಡೆದ ನಂತರ ಆಂಟನಿ 1970 ರಲ್ಲಿ ಕೇರಳ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಶಾಸಕರಾದರು ಮತ್ತು 1977 ರಲ್ಲಿ 37 ನೇ ವಯಸ್ಸಿನಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅವರ ಮೂರು ಅವಧಿಗಳಲ್ಲಿ ಮೊದಲ ಬಾರಿಗೆ ಕರ್ತವ್ಯ ನಿರ್ವಹಿಸಿದರು. ಐದು ಅವಧಿಗಳ ಕಾಲ ಶಾಸಕರಾಗಿದ್ದರು ಜೊತೆಗೆ , ಅವರು 10 ವರ್ಷಗಳ ಕಾಲ ಕಾಂಗ್ರೆಸ್ನ ಕೇರಳ ಘಟಕದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದರು. ನಂತರ ಮೂರು ಅವಧಿಗೆ ಕೇಂದ್ರ ಸಚಿವರಾದರು - 2006 ರಿಂದ 2014 ರವರೆಗೆ ದೇಶದ ಯಾವುದೇ ರಕ್ಷಣಾ ಸಚಿವರ ಸುದೀರ್ಘ ಅವಧಿ ಸೇರಿದಂತೆ - ಅವರು ಐದು ಅವಧಿಗೆ ರಾಜ್ಯಸಭಾ ಸಂಸದರಾಗಿದ್ದಾರೆ.
1978 ರಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ವಿಭಜನೆಯ ನಂತರ, ಅವರು ಕೇರಳದಲ್ಲಿ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಿದ್ದ ಕಾಂಗ್ರೆಸ್ (ಯು) ಬಣದ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಿದರು. ಈ ನಿರ್ಧಾರವು 1978 ರ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿಗೆ ಪಕ್ಷದ ಬೆಂಬಲದ ವಿರುದ್ಧದ ಪ್ರತಿಭಟನೆಯಾಗಿತ್ತು. ಆಂಟನಿ ಕೂಡ ತುರ್ತುಪರಿಸ್ಥಿತಿಯನ್ನು ಹಿಂದೆಗೆದುಕೊಳ್ಳುವಂತೆ ಇಂದಿರಾ ಗಾಂಧಿಯನ್ನು ಕೇಳಿಕೊಂಡಿದ್ದರು. ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ನಂತರ, ಆಂಟನಿ ಅವರು ಕಾಂಗ್ರೆಸ್ (ಎ) ಎಂಬ ತಮ್ಮದೇ ಆದ ಕಾಂಗ್ರೆಸ್ ಬಣವನ್ನು ಪ್ರಾರಂಭಿಸಿದರು, ಅದು ನಂತರ ಕಾಂಗ್ರೆಸ್ ಮಾತೃ ಪಕ್ಷವನ್ನು ಸೇರಿಕೊಂಡಿತು - ಕೊಚ್ಚಿಯಲ್ಲಿ ನಡೆದ ವಿಲೀನ ಸಮಾರಂಭದಲ್ಲಿ ಇಂದಿರಾ ಗಾಂಧಿ ಭಾಗವಹಿಸಿದ್ದು ವಿಶೇಷ.