ನನ್ನ ರಾಜಕೀಯ ಜೀವನದ ಮಾರ್ಗದರ್ಶಕರು ಮತ್ತು ಗುರು ಅಂಬೇಡ್ಕರ್ : ಸಿದ್ದರಾಮಯ್ಯ
ಅಂಬೇಡ್ಕರ್ ಸುಡರ್ ಪ್ರಶಸ್ತಿಯನ್ನು ನನಗೆ ನೀಡಿದ್ದರೂ, ಇದು ವೈಯಕ್ತಿಕವಾಗಿ ನನಗೆ ಸಂದಿದ್ದಲ್ಲ. ಶಾಸಕ, ಸಚಿವ, ಮುಖ್ಯಮಂತ್ರಿಯಾಗಿ ಕರ್ನಾಟಕದ ಜನರಿಗೆ ಮಾಡಿದ ಸೇವೆಗಾಗಿ ನೀಡಿರುವ ಪ್ರಶಸ್ತಿ ಎಂದು ನಾನು ತಿಳಿದುಕೊಂಡಿದ್ದೇನೆ. ಈ ಪ್ರಶಸ್ತಿಯನ್ನು ಕರ್ನಾಟಕದ ಸಮಸ್ತ ಜನತೆಗೆ ಅರ್ಪಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಮಿಳುನಾಡಿನ ನಿಡುದಲೈ ಚಿರುದೈಗಳ್ (ವಿಸಿಕೆ) ಪಕ್ಷ ನೀಡಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸುಡರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ಅವರು, ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರೀತಿ-ಅಭಿಮಾನವಿಟ್ಟು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವ ಎಲ್ಲ ಹಿರಿಯರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಮಂಗಳೂರು ಕೊಲೆ ಪ್ರಕರಣ, ಹಿಂದೂ-ಮುಸ್ಲಿಂ ನಡುವೆ ಬಿಜೆಪಿ ತಾರತಮ್ಯ : ಡಿಕೆಶಿ ಖಂಡನೆ
ನಾನು ಸಾಮಾನ್ಯವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಲು ಹೋಗುವುದಿಲ್ಲ, ಹೀಗಿದ್ದರೂ ಹಿತೈಷಿಗಳು, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಕೆಲವು ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇನೆ. ಈ ರೀತಿ ಪಡೆದುಕೊಂಡ ಎಲ್ಲ ಪ್ರಶಸ್ತಿಗಳಗಿಂತ 'ಅಂಬೇಡ್ಕರ್ ಸುಡರ್' ಪ್ರಶಸ್ತಿ ನನಗೆ ಹೆಚ್ಚು ಸಂತೋಷ ಮತ್ತು ತೃಪ್ತಿ ತಂದಿದೆ. ನನ್ನ ರಾಜಕೀಯ ಜೀವನದ ಮಾರ್ಗದರ್ಶಕರು ಮತ್ತು ರೋಲ್ ಮಾಡೆಲ್ ಅಂಬೇಡ್ಕರ್ ಎಂದು ಹೇಳಿದ್ದಾರೆ.
ನನ್ನ ಇನ್ನೊಬ್ಬ ವೈಚಾರಿಕ ಗುರು ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು ಹುಟ್ಟಿದ ಮತ್ತು ತನ್ನ ಕ್ರಾಂತಿಕಾರಿ ಚಿಂತನೆಗಳ ಮೂಲಕ ಕಟ್ಟಿದ ದ್ರಾವಿಡನಾಡಿನ ನೆಲದಲ್ಲಿ ನನ್ನ ಸೋದರರಾದ ದ್ರಾವಿಡ ಬಂಧುಗಳು ಅಂಬೇಡ್ಕರ್ ಪ್ರಶಸ್ತಿ ನೀಡಿರುವುದು ನನಗೆ ವಿಶೇಷವಾದ ಗೌರವ ಎಂದರು.
ನನ್ನ ಯೌವ್ವನದ ದಿನಗಳಲ್ಲಿ ಪೆರಿಯಾರ್ ಅವರ ಬಗ್ಗೆ ಕೇಳಿದ್ದೆ, ಅವರ ಚಿಂತನೆಗಳನ್ನು ಒಂದಷ್ಟು ಓದಿ ತಿಳಿದುಕೊಂಡು ಪ್ರಭಾವಿತನಾಗಿದ್ದೇನೆ, ಆದರೆ ವೈಯಕ್ತಿಕವಾಗಿ ಭೇಟಿ ಮಾಡುವ ಅವಕಾಶ ಸಿಕ್ಕಿರಲಿಲ್ಲ ಎಂದರು. ಇಂದಿನ ಚುನಾವಣಾ ರಾಜಕೀಯದಲ್ಲಿ ಪೆರಿಯಾರ್ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಸವಾಲಿನ ಕೆಲಸ ಎಂದರು.
ಪೆರಿಯಾರ್ ಅವರು ಇಂದು ಭೌತಿಕವಾಗಿ ನಮ್ಮೊಡನೆ ಇಲ್ಲ, ಆದರೆ ತಮಿಳು ನಾಡಿನ ಜನ ಅವರನ್ನು ಅವರ ಚಿಂತನೆಗಳ ಮೂಲಕ ಜೀವಂತವಾಗಿಟ್ಟಿದ್ದಾರೆ. ಈ ಕಾರಣದಿಂದಾಗಿ ದೇಶಾದ್ಯಂತ ಆಕ್ರಮಿಸಿಕೊಂಡು ಕೇಕೆ ಹಾಕುತ್ತಿರುವ ಕೋಮುವಾದಿ ಶಕ್ತಿಗಳು ಏನೇ ತಂತ್ರ-ಕುತಂತ್ರಗಳನ್ನು ಮಾಡಿದರೂ ಈ ದ್ರಾವಿಡ ಕೋಟೆಯ ಹೆಬ್ಬಾಗಿಲು ಮುರಿದು ಒಳಗೆ ಪ್ರವೇಶಿಸಲು ಇನ್ನೂ ಸಾಧ್ಯವಾಗಿಲ್ಲ. ಇದಕ್ಕಾಗಿ ತಮಿಳುನಾಡಿನ ಸಮಸ್ತ ದ್ರಾವಿಡ ಸೋದರರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ನನ್ನ ಚಿಂತನೆಗಳಿಗೆ ಅಂಬೇಡ್ಕರ್ ಪ್ರೇರಣೆ
ನನ್ನ ಸಾರ್ವಜನಿಕ ಬದುಕಿನ ವ್ಯಕ್ತಿತ್ವವನ್ನು ರೂಪಿಸಿರುವ ರಾಜಕೀಯ ಚಿಂತನೆಗಳು ಮತ್ತು ಆಲೋಚನೆಗಳು ಸಮಾಜವಾದಿ, ಮತ್ತು ಅಂಬೇಡ್ಕರ್ ವಾದಿ ದಲಿತ ಹೋರಾಟಗಳಿಂದ ಪ್ರೇರಣೆ ಪಡೆದು, ರೂಪುಗೊಂಡಿದೆ ಎಂದು ಹೇಳಿದ್ದಾರೆ.
ಹಿಂದುಳಿದ ಜಾತಿಯ ರೈತ ಕುಟುಂಬದಿಂದ ಬಂದ ನಾನು ನಾಲ್ಕು ದಶಕಗಳ ರಾಜಕೀಯದಲ್ಲಿದ್ದು ಶಾಸಕ, ಸಚಿವ, ಮುಖ್ಯಮಂತ್ರಿಯಾಗಿದ್ದರೆ ಅದಕ್ಕೆ ಮುಖ್ಯ ಕಾರಣ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೋರಾಟ, ಚಿಂತನೆ ಮತ್ತು ಅವರು ದೇಶಕ್ಕೆ ಕೊಟ್ಟ ಸಂವಿಧಾನ ಕಾರಣ ಎಂದು ತಿಳಿಸಿದ್ದಾರೆ.
ಹಣದ ಜೊತೆ ಸಿಕ್ಕಿಬಿದ್ದ ಕಾಂಗ್ರೆಸ್ ಶಾಸಕರ ಬಂಧನ
ಅಂಬೇಡ್ಕರ್ ಸಂವಿಧಾನದಿಂದಲೇ ನಾನು ಸಿಎಂ ಆದೆ
ಡಾ. ಬಿ.ಆರ್. ಅಂಬೇಡ್ಕರ್ ಹುಟ್ಟದೆ ಇದ್ದಿದ್ದರೆ, ಅವರು ನಮ್ಮೆಲ್ಲರ ಪರವಾಗಿ ಹೋರಾಟ ಮಾಡದೆ ಇದ್ದಿದ್ದರೆ, ಸಂವಿಧಾನವನ್ನು ಬರೆಯದೆ ಇದ್ದಿದ್ದರೆ. ನಾನು ಖಂಡಿತ ಶಾಸಕ, ಸಚಿವ, ಮುಖ್ಯಮಂತ್ರಿ ಯಾವುದೂ ಆಗುತ್ತಿರಲಿಲ್ಲ. ಬಹುಷ: ರಾಜಕೀಯಕ್ಕೂ ಬರುತ್ತಿರಲಿಲ್ಲ, ನಾನು ನಮ್ಮೂರಲ್ಲಿ ಕುರಿ-ದನ ಮೇಯಿಸಿಕೊಂಡು ಇರುತ್ತಿದ್ದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಋಣದ ಭಾರ ನನ್ನ ಮೇಲಿದೆ ಎಂದರು.
ದಲಿತರು, ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರು ಒಂದುಗೂಡಿದರೆ ಮಾತ್ರ ಅಂಬೇಡ್ಕರ್ ಅವರ ಕನಸುಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವವನ್ನು ಸಾಕಾರಗೊಳಿಸಲು ಸಾಧ್ಯ ಎಂದು ಹೇಳಿದರು.
ಸಿಎಂ ಎಂ.ಕೆ.ಸ್ಟಾಲಿನ್-ಸಿದ್ದರಾಮಯ್ಯ ಭೇಟಿ
ಚೆನ್ನೈ ಭೇಟಿಯ ಸಂದರ್ಭದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ರನ್ನು ಭೇಟಿ ಮಾಡಿದರು. ಎಂ.ಕೆ. ಸ್ಟಾಲಿನ್ ಭೇಟಿ ನನ್ನ ಚೆನ್ನೈ ಭೇಟಿಯನ್ನು ಅರ್ಥಪೂರ್ಣವನ್ನಾಗಿ ಮಾಡಿದೆ ಎಂದು ಹೇಳಿದರು.
ದಿವಂಗತ ಎಂ.ಕೆ.ಕರುಣಾನಿಧಿ ಅವರನ್ನು ಹಿಂದೆ ಕೆಲವು ಬಾರಿ ಭೇಟಿ ಮಾಡಿದ್ದರು ಸ್ಟಾಲಿನ್ ಮತ್ತು ನನ್ನ ಭೇಟಿ ಇದೇ ಮೊದಲ ಬಾರಿ ಎಂದರು. ದ್ರಾವಿಡ ಚಳುವಳಿಯ ಅರ್ಹ ವಾರಸುದಾರನಂತೆ ಕಾಣಿಸುತ್ತಿರುವ ಎಂ.ಕೆ.ಸ್ಟಾಲಿನ್ ಅವರ ಸೈದ್ಧಾಂತಿಕ ಬದ್ದತೆ, ಜನಪರ ಯೋಜನೆಗಳು ಮತ್ತು ಆಡಳಿತ ಕೌಶಲ ಅವರನ್ನು ತಮಿಳುನಾಡಿನ ರಾಜಕೀಯದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.
ಕನ್ನಡಿಗರು-ತಮಿಳರು ಸಹೋದರರು
ತಮಿಳರು ಮತ್ತು ಕನ್ನಡಿಗರ ನಡುವೆ ವೈಚಾರಿಕ ಮತ್ತು ರಕ್ತ ಸಂಬಂಧಗಳಿವೆ ಎಂದು ನಂಬಿದ್ದೇನೆ. ನಮ್ಮ ಮೂಲವನ್ನು ಶೋಧಿಸುತ್ತಾ ಹೋದರೆ ತಮಿಳರು, ಕನ್ನಡಿಗರು ಮಾತ್ರವಲ್ಲ ತೆಲುಗರು ಮತ್ತು ಮಲೆಯಾಳಿಗಳು ಕೂಡಾ ನಮ್ಮ ಅಣ್ಣ-ತಮ್ಮಂದಿರೇ ಆಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ನಾವು ತಮಿಳು, ಕನ್ನಡ, ತೆಲುಗು, ಮಲೆಯಾಳಿ ಮತ್ತು ತುಳು ಎನ್ನುವ ಪಂಚ ದ್ರಾವಿಡ ಭಾಷೆಯ ಸೋದರರು. ನಮ್ಮ ಸಂಸ್ಕೃತಿ, ನಂಬಿಕೆ. ಆಚಾರ, ವಿಚಾರ, ಹಬ್ಬ ಹರಿದಿನ ಎಲ್ಲದರಲ್ಲಿಯೂ ಅನೇಕ ಸಾಮ್ಯತೆಗಳಿವೆ. ಕೆಲವು ವಿರೋಧಿಗಳು ಭಾಷೆಯ ವಿಚಾರವನ್ನೋ, ನೀರಿನ ವಿಚಾರವನ್ನೋ ಎಳೆದು ತಂದು ಪರಸ್ಪರ ಕಾದಾಟಕ್ಕಿಳಿಸುತ್ತಾರೆ. ಈ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯ ತಮಿಳರು ಬದುಕು ಕಟ್ಟಿಕೊಂಡಿದ್ದಾರೆ. ಅವರೆಲ್ಲ ದುಡಿಯುವ ವರ್ಗಕ್ಕೆ ಸೇರಿದವರು, ಕನ್ನಡ-ತಮಿಳು ಭಾಷೆಗಳನ್ನು ಆಡುವ ಅವರು ನಮ್ಮವರೇ ಆಗಿದ್ದಾರೆ. ಇಂದಿನ ಕರ್ನಾಟಕದ ನಿರ್ಮಾಣದಲ್ಲಿ ತಮಿಳರ ದುಡಿಯುವ ಕೈಗಳ ಪಾಲೂ ಇದೆ ಎಂದರು.
ತಮಿಳರು ಕನ್ನಡ ವಿರೋಧಿಗಳು, ಕರ್ನಾಟಕ ವಿರೋಧಿಗಳು, ಪ್ರಾಂತೀಯ ಮನಸ್ಸಿನವರು ಎಂದೆಲ್ಲ ಪ್ರಚಾರ ಮಾಡುತ್ತಾರೆ. ಕರ್ನಾಟಕದ ಜಯಲಲಿತಾ, ರಜನಿಕಾಂತ್ ಅವರನ್ನು ತಮಿಳರು ತಮ್ಮವರು ಎಂದೇ ಬೆಳೆಸಿದ್ದಾರೆ. ಡಾ. ರಾಜ್ಕುಮಾರ್ ಸೇರಿದಂತೆ ಇಡೀ ಕನ್ನಡ ಚಿತ್ರರಂಗ ಒಂದು ಕಾಲದಲ್ಲಿ ಮದ್ರಾಸ್ನಲ್ಲೇ ಇತ್ತು ಎನ್ನುವುದನ್ನು ನೆನಪಿಸಿಕೊಂಡರು.