ದಿಲ್ಲಿ ಆಗಲಿ, ಬೆಂಗಳೂರ್ ಆಗಲಿ; ಬಜಾರ್ ದಾಗ್ ತರಕಾರಿ ಬಲು ದುಬಾರಿ!
ನವದೆಹಲಿ, ಏಪ್ರಿಲ್ 11: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದೇ ಬಿದ್ದಿದ್ದು, ಪೆಟ್ರೋಲ್-ಡೀಸೆಲ್ ದರ ಸಾಮಾನ್ಯ ಜನರ ಕೈಗೆ ಸಿಗದಂತೆ ಓಟ ಕಿತ್ತಿದೆ. ಇಂಧನ ದರ ಏರಿಕೆ ಬಿಸಿ ತರಕಾರಿಗಳಿಗೂ ತಟ್ಟಿದೆ. ನಿಂಬೆ ಹಣ್ಣಿಗಂತೂ ಬಂಗಾರದ ಬೆಲೆ ಬಂದಿದೆ.
ರಾಷ್ಟ್ರ ರಾಜಧಾನಿಯಲ್ಲಿ ಇಂಧನ ದರ ಏರಿಕೆಯಿಂದಾಗಿ ಸಾರಿಗೆ ವೆಚ್ಚ ಡಬ್ಬಲ್ ಆಗಿದೆ. ಒಂದು ಕಡೆ ಖರೀದಿಸಿದ ತರಕಾರಿ ಅನ್ನು ಮಾರಾಟ ಮಾಡುವ ವ್ಯಾಪಾರಿಗಳ ಕೈಗೆ ಕಿಲುಬು ಕಾಸಿನ ಲಾಭ ಸಿಗುತ್ತಿಲ್ಲ, ಇನ್ನೊಂದು ಕಡೆ ದುಬಾರಿ ದುನಿಯಾದಲ್ಲಿ ಜನರು ಮೊದಲಿನಂತೆ ತರಕಾರಿಗಳನ್ನೂ ಖರೀದಿ ಮಾಡುತ್ತಿಲ್ಲ.
ಭಾರತೀಯರ ಬದುಕೇ ಹಂಡಾವರಣ; ಇದು 16 ತಿಂಗಳಿನಲ್ಲೇ ಗರಿಷ್ಠ ಹಣದುಬ್ಬರ ಕೊಟ್ಟ ಹೊಡೆತ!
ಒಂದು ಕೆಜಿ ತರಕಾರಿ ಖರೀದಿ ಮಾಡುವ ಜಾಗದಲ್ಲಿ ಜನ ಸಾಮಾನ್ಯರು ಅರ್ಧ ಕೆಜಿ ತರಕಾರಿಗಳನ್ನು ಖರೀದಿ ಮಾಡುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ತರಕಾರಿ ಖರೀದಿಸಿ ಚಿಲ್ಲರೇ ಆಗಿ ಅದನ್ನು ಮಾರಾಟ ಮಾಡುವ ವ್ಯಾಪಾರಿಗಳು ತಾವು ಹೂಡಿಕೆ ಮಾಡಿದಷ್ಟು ಹಣ ಸಂಪಾದನೆ ಮಾಡುವುದುಕ್ಕೂ ಸಾಧ್ಯವಾಗುತ್ತಿಲ್ಲ. ಇದಕ್ಕೆ ಏನಪ್ಪಾ ಕಾರಣ ಎಂದರೆ ಮತ್ತದೇ ಪೆಟ್ರೋಲ್-ಡೀಸೆಲ್ ದರ ಏರಿಕೆ ಎನ್ನುವ ಉತ್ತರ ಸಿಗುತ್ತದೆ. ಇಂಧನ ದರದ ಏರಿಕೆಯು ತರಕಾರಿ ಮತ್ತು ಮೂಲಭೂತ ಅಗತ್ಯ ವಸ್ತುಗಳ ಸರಬರಾಜು ವೆಚ್ಚವನ್ನು ದುಪ್ಪಟ್ಟು ಮಾಡಿದೆ. ರಾಷ್ಟ್ರ ರಾಜಧಾನಿಯೇ ಆಗಲಿ, ರಾಜ್ಯ ರಾಜಧಾನಿಯೇ ಆಗಲಿ.. ನಿಂಬೆ ಹಣ್ಣಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಅನ್ನೋ ಪರಿಸ್ಥಿತಿ ಸೃಷ್ಟಿಯಾಗಿ ಬಿಟ್ಟಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.
LPG Price In India : ಭಾರತದ ಎಲ್ಪಿಜಿ ದರ ವಿಶ್ವದಲ್ಲೇ ದುಬಾರಿ; ಪೆಟ್ರೋಲ್, ಡೀಸೆಲ್ ಬೆಲೆ ಕೂಡ ಹೆಚ್ಚು
ಟೊಮ್ಯಾಟೋಗೆ ಬೆಂಗಳೂರಲ್ಲಿ 10, ದೆಹಲಿಯಲ್ಲಿ 40 ರೂ.
ಒಂದು ಕೆಜಿ ಟೊಮ್ಯಾಟೋ ಬೆಲೆ ಬೆಂಗಳೂರಿನಿಂದ ದೆಹಲಿಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಟೊಮ್ಯಾಟೋಗೆ 10 ರೂಪಾಯಿ ಆಗಿದ್ದರೆ, ಅದೇ ಒಂದು ಕೆಜಿ ಟೊಮ್ಯಾಟೋಗೆ ದೆಹಲಿಯ ಲಜಪತ್ ನಗರದ ಮಾರುಕಟ್ಟೆಯಲ್ಲಿ 40 ರೂಪಾಯಿ ನೀಡಬೇಕಾಗಿದೆ. ಈ ಮೊದಲ ಒಂದು ಕೆಜಿಗೆ 10 ರೂಪಾಯಿ ಆಗಿದ್ದ ಆಲೂಗಡ್ಡೆ ಬೆಲೆಯು ಈಗ 25 ರೂಪಾಯಿಗೆ ಏರಿಕೆ ಆಗಿದೆ.
"ದೆಹಲಿಯ ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳ ಬೆಲೆಯು ಏರಿಕೆ ಆಗಿದೆ. ನಾವು ಲಾಭ ಗಳಿಸುವುದೇ ಕಷ್ಟಸಾಧ್ಯವಾಗಿದೆ. ನಾವು ಮಾರುಕಟ್ಟೆಯಲ್ಲಿ ನಿಗದಿಪಡಿಸಿದ ಬೆಲೆಗೆ ತರಕಾರಿಗಳನ್ನು ಖರೀದಿ ಮಾಡುತ್ತೇವೆ. ಆದರೆ ಬೆಲೆಗಳು ಏರಿಕೆ ಆಗುತ್ತಿದ್ದಂತೆ ಜನರು ತಾವು ಖರೀದಿಸುವ ತರಕಾರಿಯ ಪ್ರಮಾಣವನ್ನು ತಗ್ಗಿಸುತ್ತಾರೆ," ಎಂದು ವ್ಯಾಪಾರಿ ಧರ್ಮೇಂದ್ರ ಸಿಂಗ್ ಹೇಳಿದ್ದಾರೆ.
ದೆಹಲಿಯಲ್ಲಿ ನಿಂಬೆ ಹಣ್ಣಿಗೆ ಸಖತ್ ಡಿಮ್ಯಾಂಡ್
ದೆಹಲಿ ಲಜಪತ್ ನಗರ ಮಾರುಕಟ್ಟೆಯಲ್ಲಿ ತರಕಾರಿಯಷ್ಟೇ ಅಲ್ಲದೇ ಹಣ್ಣು, ಹಳಿ ಮೆಣಸಿನಕಾಯಿ ಮತ್ತು ನಿಂಬೆ ಹಣ್ಣಿನ ಬೆಲೆಯೂ ದುಪ್ಪಟ್ಟಾಗಿದೆ ಎಂದು ಮತ್ತೊಬ್ಬ ವ್ಯಾಪಾರಿ ಅಖಿಲೇಶ್ ಹೇಳಿದ್ದಾರೆ. ಬೇಸಿಗೆಯ ಹಿನ್ನೆಲೆ ನಿಂಬೆ ಹಣ್ಣಿನ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಒಂದು ಕೆಜಿ ನಿಂಬೆ ಹಣ್ಣಿಗೆ ಮಾರುಕಟ್ಟೆಯಲ್ಲಿ 350 ರೂಪಾಯಿ ಬೆಲೆಯಿದೆ. ಈ ಲೆಕ್ಕದಲ್ಲಿ ನೋಡುವುದಾದರೆ ಒಂದು ನಿಂಬೆ ಹಣ್ಣಿಗೆ ಕನಿಷ್ಠ 10 ರೂಪಾಯಿ ನೀಡಬೇಕಾಗುತ್ತದೆ. ಅದೇ ರೀತಿ ಒಂದು ಕೆಜಿ ದೊಣ್ಣ ಮೆಣಸಿನಕಾಯಿ ಬೆಲೆಯು 100 ರೂಪಾಯಿ ಗಡಿ ದಾಟಿದೆ.
ನಿಂಬೆ ಹಣ್ಣು ಗುಜರಾತ್, ತೆಲಂಗಾಣದಲ್ಲೂ ಕಾಸ್ಟ್ಲಿ
ನಿಂಬೆ ಹಣ್ಣಿನ ಬೆಲೆಯು ದೆಹಲಿಯಲ್ಲಿ ಮಾತ್ರ ಏರಿಕೆ ಆಗಿಲ್ಲ. ಗುಜರಾತ್, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲೂ ನಿಂಬೆಹಣ್ಣು ದುಬಾರಿ ಆಗಿದೆ. "ನಾವು ಈ ಮೊದಲು ಒಂದು ಗೋಣಿ ಚೀಲದಷ್ಟು ನಿಂಬೆ ಹಣ್ಣು ಖರೀದಿಸುವುದಕ್ಕೆ ಕೇವಲ 700 ರಿಂದ 800 ರೂಪಾಯಿ ಪಾವತಿ ಮಾಡುತ್ತಿದ್ದೆವು. ಆದರೆ, ಈಗ ಅದೇ ಒಂದು ಚೀಲ ನಿಂಬೆ ಹಣ್ಣಿಗೆ 3500 ರೂಪಾಯಿ ಹಣ ನೀಡಬೇಕಾಗಿದೆ. ಹಾಗೆ ಖರೀದಿಸಿದ ನಿಂಬೆ ಹಣ್ಣನ್ನು 10 ರೂಪಾಯಿ ಒಂದರಂತೆ ಮಾರಾಟ ಮಾಡುವುದಕ್ಕೆ ನಾವು ಸಿದ್ಧರಾಗಿದ್ದರೂ, ಜನರು ಅಷ್ಟು ಹಣ ಕೊಟ್ಟು ನಿಂಬೆ ಖರೀದಿಸುವುದಕ್ಕೆ ಮುಂದೆ ಬರುತ್ತಿಲ್ಲ ಎಂದು ವ್ಯಾಪಾರಿಯೊಬ್ಬರು ಹೇಳಿದ್ದಾರೆ.
120 ರೂಪಾಯಿಗೆ ಒಂದು ಡಜನ್ ನಿಂಬೆ ಹಣ್ಣು
ನಾವು ಒಂದು ಚೀಲ ನಿಂಬೆ ಹಣ್ಣನ್ನು ಖರೀದಿಸುವುದಕ್ಕೆ 3000 ರೂಪಾಯಿ ಹಣವನ್ನು ಪಾವತಿ ಮಾಡಿರುತ್ತೇವೆ. ಆದರೆ ಒಂದು ಡಜನ್(12) ನಿಂಬೆ ಹಣ್ಣನ್ನು 120 ರೂಪಾಯಿಗೆ ಮಾರಾಟ ಮಾಡುತ್ತೇವೆ ಎಂದರೂ ಜನರು ಖರೀದಿಸುವುದಕ್ಕೆ ಮುಂದೆ ಬರುತ್ತಿಲ್ಲ. ಉತ್ತರಾಖಂಡದಲ್ಲೂ ಪೆಟ್ರೋಲ್-ಡೀಸೆಲ್ ದರ ಏರಿಕೆಯಿಂದಾಗಿ ಸರಬರಾಜು ವೆಚ್ಚವು ದುಬಾರಿಯಾಗಿದ್ದು, ತರಕಾರಿಗಳ ಬೆಲೆಯೂ ಏರಿಕೆಯಾಗಿದೆ ಎಂದು ಲಕ್ಷ್ಮೀ ಎಂಬ ವ್ಯಾಪಾರಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹೇಗಿದೆ ನಿಂಬೆ ಹಣ್ಣಿನ ಬೆಲೆ?
ಸಿಲಿಕಾನ್ ಸಿಟಿಯಲ್ಲಿ ನಿಂಬೆ ಹಣ್ಣಿನ ಉತ್ಪಾದನೆ ಪ್ರಮಾಣವು ಶೇ.25 ರಿಂದ 30ರಷ್ಟು ಇಳಿಕೆಯಾಗಿದೆ. ಒಂದು ಕೆಜಿ ನಿಂಬೆ ಹಣ್ಣಿಗೆ 200 ರಿಂದ 250 ರೂಪಾಯಿ ನಿಗದಿಪಡಿಸಿದ್ದು, ಒಂದು ನಿಂಬೆ ಹಣ್ಣನ್ನು ಕನಿಷ್ಠ 8 ರಿಂದ 10 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಬೇಸಿಗೆ ಹಿನ್ನೆಲೆ ಬೆಂಗಳೂರಿನಲ್ಲಿ ನಿಂಬೆ ಹಣ್ಣಿಗೆ ಬೇಡಿಕೆ ಹೆಚ್ಚಾಗುತ್ತಿರುವುದರ ಮಧ್ಯೆ ಬೆಲೆ ಏರಿಕೆಯ ಪೆಟ್ಟು ಬಿದ್ದಿದೆ. ಪ್ರತಿ ವರ್ಷ 40 ಕೆಜಿಯ ಒಂದು ಚೀಲ ನಿಂಬೆ ಹಣ್ಣನ್ನು 3500 ರಿಂದ 4000 ರೂಪಾಯಿಗೆ ಮಾರಾಟ ಮಾಡಲಾಗುತ್ತಿದ್ದು, ಈ ಬಾರಿ ಅದೇ 40 ಕೆಜಿ ತೂಕದ ನಿಂಬೆ ಹಣ್ಣಿನ ಚೀಲಕ್ಕೆ 5,000 ರಿಂದ 5,500 ರೂಪಾಯಿ ದರ ನಿಗದಿಪಡಿಸಲಾಗಿದೆ," ಎಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿರುವ ಕರ್ನಾಟಕ ರಾಜ್ಯ ಸುಣ್ಣ ಅಭಿವೃದ್ಧಿ ಮಂಡಳಿ ನಿರ್ದೇಶದ ಸಂತೋಷ್ ಸಪ್ಪಂಡಿ ಹೇಳಿದ್ದಾರೆ.