ವಿಡಿ ಸಾವರ್ಕರ್ 'ವೀರ' ಆಗಿದ್ದು ಹೇಗೆ? ವಿವಾದ ಸತ್ಯವಾ?
ವಿನಾಯಕ ದಾಮೋದರ್ ಸಾವರ್ಕರ್ ಬಗ್ಗೆ ವಿವಾದಗಳು ನಿಲ್ಲುತ್ತಲೇ ಇಲ್ಲ. 'ಸ್ವಾತಂತ್ರ್ಯ ವೀರ ಸಾವರ್ಕರ್' ಎಂದು ಸರಕಾರ ದೊಡ್ಡ ಘೋಷಣೆ ಮಾಡುತ್ತಿರುವಂತೆಯೇ ಈಗ ಕೆಲವೆಡೆಯಿಂದ ಸಾವರ್ಕರ್ಗೆ ವೀರ ಬಿರುದು ಸಿಕ್ಕಿದ ಮೂಲವನ್ನೇ ಕೆದಕುತ್ತಿದ್ದಾರೆ.
ಮೋಹನದಾಸ್ ಕರಮ್ ಚಂದ್ ಗಾಂಧಿಯನ್ನು ಮಹಾತ್ಮ ಗಾಂಧಿ ಎಂದೇ ಸಂಬೋಧಿಸಲಾಗುತ್ತದೆ. ಅದೇ ರೀತಿ ವಿನಾಯಕ್ ದಾಮೋದರ್ ಸಾವರ್ಕರ್ ಅವರನ್ನು ವೀರ ಸಾವರ್ಕರ್, ಅಥವಾ ಸ್ವಾತಂತ್ರ್ಯವೀರ ಸಾವರ್ಕರ್ ಎಂದು ಕರೆಯುವುದು ವಾಡಿಕೆಯಾಗಿದೆ.
ಅವರ ಜೀವನಚರಿತ್ರೆಯ ಒಂದು ಸಿನಿಮಾಗೆ ವೀರ್ ಸಾವರ್ಕರ್ ಹೆಸರು ನೀಡಲಾಗಿದೆ. ಅವರ ಜೀವನಚರಿತ್ರೆಯ ಪುಸ್ತಕಗಗಳೂ ವೀರ್ ಸಾವರ್ಕರ್ ಹೆಸರು ಅಡಕವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ನ ರಾಜಧಾನಿ ಪೋರ್ಟ್ ಬ್ಲೇರ್ನ ವಿಮಾನ ನಿಲ್ದಾಣಕ್ಕೆ ವೀರ್ ಸಾವರ್ಕರ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಎಂದು ಹೆಸರಿಡಲಾಗಿದೆ.
ವಿಡಿ ಸಾವರ್ಕರ್ ಬಗ್ಗೆ ಇರುವ ತಗಾದೆ, ಆಕ್ಷೇಪಗಳೇನು?
ಬ್ರಿಟಿಷರ ಪರ ನಿಂತಿದ್ದ ಸಾವರ್ಕರ್ ಯಾವಾಗ ವೀರ ಸಾವರ್ಕರ್ ಆದರು? ಯಾರು ಅವರಿಗೆ ಸ್ವಾತಂತ್ರ್ಯ ವೀರ ಎಂದು ಬಿರುದು ಕೊಟ್ಟರು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವಾಗಿ ಕೆಲ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.
ಚಿತ್ರಗುಪ್ತ ಮತ್ತು ಸಾವರ್ಕರ್
ವಿಡಿ ಸಾವರ್ಕರ್ 1924 ಜನವರಿ 6ರಂದು ರತ್ನಗಿರಿ ಜೈಲಿನಿಂದ ಬಿಡುಗಡೆ ಆದರು. 14 ವರ್ಷಗಳ ಜೈಲುವಾಸದ ಬಳಿಕ ಅವರು ಬಿಡುಗಡೆ ಭಾಗ್ಯ ಪಡೆದಿದ್ದರು. ಬಿಡುಗಡೆಯಾಗಿ ಎರಡು ವರ್ಷಗಳ ಬಳಿಕ 1926ರಲ್ಲಿ "ಲೈಫ್ ಆಫ್ ಬ್ಯಾರಿಸ್ಟರ್ ಸಾವರ್ಕರ್" ಎಂಬ ಪುಸ್ತಕ ಬಿಡುಗಡೆ ಆಯಿತು. ಅದು ಸಾವರ್ಕರ್ ಅವರ ಮೊದಲ ಜೀವನ ಚರಿತ್ರೆ. ಆ ಪುಸ್ತಕದ ಲೇಖಕರ ಹೆಸರು ಚಿತ್ರಗುಪ್ತ.
ಈ ಚಿತ್ರಗುಪ್ತ ಯಾರೆಂಬುದು ಯಾರಿಗೂ ಗೊತ್ತಿರಲಿಲ್ಲ. ಆದರೆ, 1987ರಲ್ಲಿ ಇದಕ್ಕೆ ಉತ್ತರ ಸಿಕ್ಕಿತು. 1987ರಲ್ಲಿ 'ಲೈಫ್ ಆಫ್ ಬ್ಯಾರಿಸ್ಟರ್ ಸಾವರ್ಕರ್' ಪುಸ್ತಕವನ್ನು 'ಲೈಫ್ ಆಫ್ ವೀರ್ ಸಾವರ್ಕರ್' ಎಂದು ಮರು ಮುದ್ರಣ ಮಾಡಲಾಯಿತು.
ಈ ಎರಡನೇ ಆವೃತ್ತಿಯ ಪುಸ್ತಕಕ್ಕೆ ರವೀಂದ್ರ ವಾಮನ್ ರಾಮದಾಸ್ ಮುನ್ನುಡಿ ಬರೆದಿದ್ದರು. ಅದರಲ್ಲಿ ಅವರು 'ಲೈಫ್ ಆಫ್ ಬ್ಯಾರಿಸ್ಟರ್ ಸಾವರ್ಕರ್' ಪುಸ್ತಕ ಕರ್ತೃ ಚಿತ್ರಗುಪ್ತ ಬೇರಾರೂ ಅಲ್ಲ ಸ್ವತಃ ವಿಡಿ ಸಾವರ್ಕರ್ ಎಂದು ಹೇಳಿದ್ದಾರೆ. ಹೀಗಾಗಿ, ತನ್ನದೇ ಜೀವನಚರಿತ್ರೆಯನ್ನು ಬೇರೆಯವರ ಹೆಸರಿನಲ್ಲಿ ಬರೆದ ಮೊದಲ ವ್ಯಕ್ತಿ ಸಾವರ್ಕರ್ ಎಂದು ಟೀಕಿಸಲಾಗುತ್ತಿದೆ. ಆ ಪುಸ್ತಕದಲ್ಲಿ ಸಾವರ್ಕರ್ ಅನ್ನು ವೀರ ಸಾವರ್ಕರ್ ಎಂದು ಸಂಬೋಧಿಸಲಾಗಿರಲಿಲ್ಲ ಎಂಬುದು ನಿಜ.
ದೇಶ ವಿಭಜನೆಗೆ ಜಿನ್ನಾ ಜೊತೆ ಸಾವರ್ಕರ್ ಒಪ್ಪಿಗೆ ಇತ್ತು: ಸಿಎಂ ಭೂಪೇಶ್ ಬಘೇಲ್
ಸಾವರ್ಕರ್ ಬರೆದಿದ್ದಲ್ಲವೇ?
'ಲೈಫ್ ಆಫ್ ಬ್ಯಾರಿಸ್ಟರ್ ಸಾವರ್ಕರ್' ಪುಸ್ತಕದ ಲೇಖಕ ಚಿತ್ರಗುಪ್ತ ಮತ್ತು ಸಾವರ್ಕರ್ ಇಬ್ಬರೂ ಒಂದೇ ಅಭಿಪ್ರಾಯವನ್ನು ಕೆಲವರು ಅಲ್ಲಗಳೆಯುತ್ತಾರೆ. ಈ ಬಗ್ಗೆ ಪರ ವಿರೋಧ ಅಭಿಪ್ರಾಯಗಳನ್ನು ಉಲ್ಲೇಖಿಸಬಹುದು.
ಲೈಫ್ ಆಫ್ ಬ್ಯಾರಿಸ್ಟರ್ ಪುಸ್ತಕವನ್ನು ಬರೆದಾಗ ಸಾವರ್ಕರ್ ಅವರು ಬ್ರಿಟಿಷರಿಂದ ಕ್ಷಮಾದಾನದ ಮೇಲೆ ಹೊರಬಂದು ತಮ್ಮದೇ ಕಟ್ಟುಪಾಡುಗಳಿಗೆ ಒಳಪಟ್ಟಿದ್ದರು. ಬ್ರಿಟಿಷರ ವಿರುದ್ಧ ತಾನು ಮಾಡಿದ್ದ ಹೋರಾಟಗಳ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳಲು ಅಗುತ್ತಿರಲಿಲ್ಲ. ಹೀಗಾಗಿ, ಚಿತ್ರಗುಪ್ತ ಹೆಸರಿನಲ್ಲಿ ಅವರು ಬರೆದಿರುವುದು ನಿಜವೇ ಆಗಿರುತ್ತದೆ ಎಂಬುದು ಒಂದು ಗುಂಪಿನವರ ಪ್ರಬಲ ವಾದ.
ಆದರೆ, ಸಾವರ್ಕರ್ ತಾನು ಬದುಕಿದ್ದಷ್ಟೂ ಕಾಲ ಅವರು ಆ ಪುಸ್ತಕದ ಕರ್ತೃ ತಾನು ಎಂಬ ವಿಚಾರವನ್ನು ಅಲ್ಲಗಳೆಯುತ್ತಲೇ ಬಂದಿದ್ದರು. ಬ್ರಿಟಿಷರಿಂದ ಸ್ವಾತಂತ್ರ್ಯ ಬಂದ ನಂತರ ಸಾವರ್ಕರ್ ಅವರಿಗೆ ಯಾವ ಕಟ್ಟುಪಾಡೂ ಇರಲಿಲ್ಲ. ಆ ಪುಸ್ತಕ ತಾನೇ ಬರೆದದ್ದು ಎಂದು ಅವರು ಹೇಳಿಕೊಂಡಿಲ್ಲ ಎಂದರೆ ಅದು ಅವರು ಬರೆದದ್ದಲ್ಲ ಎಂದು ವಾದಿಸುವವರೂ ಇದ್ದಾರೆ. ಅವರು ಬರೆದದ್ದಲ್ಲ ಎಂದ ಮೇಲೆ ಚಿತ್ರಗುಪ್ತ ಯಾರು ಎಂಬ ವಿಚಾರವಾದರೂ ಇಷ್ಟರೊಳಗೆ ಬೆಳಕಿಗೆ ಬರಬೇಕಿತ್ತಲವೇ?
ಸ್ವಾತಂತ್ರ್ಯ ವೀರ ಬಿರುದು ಹೇಗೆ?
ಲೈಫ್ ಅಫ್ ಬ್ಯಾರಿಸ್ಟರ್ ಸಾವರ್ಕರ್ ಪುಸ್ತಕ ಬಿಡುಗಡೆಯಾಗಿದ್ದು 1926ರಲ್ಲಿ. ಅದೇ ವರ್ಷ ಮರಾಠಿ ಲೇಖಕ ಸದಾಶಿವ್ ರಾಜಾರಾಮ್ ರಾಣಡೆ ಎಂಬುವರು ಬರೆದ "ಸ್ವಾತಂತ್ರವೀರ ವಿನಾಯಕರಾವ್ ಸಾವರ್ಕರ್ ಹಾಂಚೆ ಸಂಕ್ಷಿಪ್ತ್ ಚರಿತ್ರ್" (ಸ್ವಾತಂತ್ರ್ಯವೀರ ವಿನಾಯಕರಾವ್ ಸಾವರ್ಕರ್ ಅವರ ಸಂಕ್ಷಿಪ್ತ ಚರಿತ್ರೆ) ಪುಸ್ತಕ ಬಿಡುಗಡೆಯಾಗಿತ್ತು. ಸಾವರ್ಕರ್ ಅವರನ್ನು ಸ್ವಾತಂತ್ರ್ಯವೀರ ಎಂದು ಮೊದಲ ಬಾರಿಗೆ ಸಂಬೋಧಿಸಿದ್ದು ಆಗಲೇ ಎಂದು ಹೇಳಲಾಗುತ್ತದೆ.
ಸಾವರ್ಕರ್ ಬಗ್ಗೆ ಪರಿಚಯ
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ 1883 ಮೇ 28ರಂದು ಜನಿಸಿ 82 ವರ್ಷ ಕಾಲ ಬದುಕಿದವರು ವಿನಾಯಕ ದಾಮೋದರ್ ಸಾವರ್ಕರ್. ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟದಲ್ಲಿ ಸಾವರ್ಕರ್ ಹಿಂದೂಗಳ ಸಂಘಟನೆಗೆ ಒತ್ತು ಕೊಟ್ಟವರು. ವೈಯಕ್ತಿಕವಾಗಿ ನಾಸ್ತಿಕನಾದರೂ ಹಿಂದುತ್ವದ ಸಿದ್ಧಾಂತ ಪ್ರತಿಪಾದಿಸುತ್ತಿದ್ದವರು.
ಹಿಂದೂ ಮಹಾಸಭಾ ಎಂಬ ಕಟ್ಟರ್ ಹಿಂದೂ ಸಂಘಟನೆಯ ಮುಂಚೂಣಿಯ ನಾಯಕರಾಗಿದ್ದವರು. ಅಭಿನವ ಭಾರತ್ ಸೊಸೈಟಿ ಎಂಬ ಮತ್ತೊಂದು ರಹಸ್ಯ ಉಗ್ರ ಚಟುವಟಿಕೆಯ ಸಂಘಟನೆಯನ್ನು ಸ್ಥಾಪಿಸಿದವರು. ಬ್ರಿಟಿಷರ ವಿರುದ್ಧ ತಮ್ಮದೇ ರೀತಿಯಲ್ಲಿ ಹೋರಾಟ ನಡೆಸಿದವರು. ಅಂಡಮಾನ್ ಜೈಲಿನಲ್ಲಿ 10 ವರ್ಷ ಕರಿನೀರಿನ ಕಠಿಣ ಜೈಲುಶಿಕ್ಷೆ ಅನುಭವಿಸಿದವರು.
ಬ್ರಿಟಿಷರಿಂದ ಕ್ಷಮಾದಾನ ಪಡೆದು, ಮತ್ತೆಂದೂ ಸರಕಾರದ ವಿರುದ್ಧ ನಿಲ್ಲುವುದಿಲ್ಲ ಎಂದು ವಾಗ್ದಾನದ ಮೇರೆಗೆ ಬಿಡುಗಡೆಯಾದ ಬಳಿಕ ಸಾವರ್ಕರ್ ಬಹಿರಂಗವಾಗಿ ಸ್ವಾತಂತ್ರ್ಯ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಿಲ್ಲ. ಬ್ರಿಟಿಷರಿಗೆ ಅವರು ನೇರವಾಗಿ ಬೆಂಬಲ ಕೊಟ್ಟಿದ್ದುಂಟು. ಕಾಂಗ್ರೆಸ್ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ನಡೆದ ಕ್ವಿಟ್ ಇಂಡಿಯಾ ಚಳವಳಿಯನ್ನು ಸಾವರ್ಕರ್ ವಿರೋಧಿಸಿದ್ದರು. ಹಿಂದೂಗಳು ಈ ಚಳವಳಿಯಲ್ಲಿ ಭಾಗವಹಿಸಬಾರದು ಎಂದು ಬಹಿರಂಗವಾಗಿಯೇ ಕರೆ ಕೊಟ್ಟಿದ್ದರು.
ಜರ್ಮನಿಯ ನಾಜಿಸಂ, ಇಟಲಿಯ ಫ್ಯಾಸಿಸಿಸಂ ಅನ್ನು ಮಾದರಿ ರಾಷ್ಟ್ರೀಯವಾದ ಎಂದು ಪರಿಗಣಿಸಿದ್ದ ಸಾವರ್ಕರ್ ತಮ್ಮ ನಿಲುವನ್ನು ಬದಲಿಸಿ ಬ್ರಿಟಿಷರಿಗೆ ಬೆಂಬಲ ಕೊಟ್ಟಿದ್ದರು. ಮತ್ತೊಮ್ಮೆ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಅವರು ಇಂಥ ನಿಲುವು ತಳೆದಿರಬಹುದು ಎಂಬ ಸಂಶಯ ಇದೆ. ಇದು ನಿಜವೇ ಅಂದುಕೊಂಡರೂ ಸಾವರ್ಕರ್ಗೆ ಪ್ರಾಣಭಯ ಇತ್ತು ಎಂದಾಗುತ್ತದೆ. ಹೀಗಾಗಿ, ಅವರು ವೀರ ಪಟ್ಟಕ್ಕೆ ನಾಲಾಯಕ್ಕು ಎಂದು ಟೀಕಾಕಾರರು ಕುಟುಕಿದ್ದಾರೆ.
(ಒನ್ಇಂಡಿಯಾ ಸುದ್ದಿ)
Recommended Video