ಕುಶಿನಗರದಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶೇಷತೆ
ಕುಶಿನಗರ್, ಅಕ್ಟೋಬರ್ 20: ಉತ್ತರ ಪ್ರದೇಶದ ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.
ಕಳೆದ 2020 ಜೂನ್ ತಿಂಗಳಿನಲ್ಲಿ ಕೇಂದ್ರ ಸಚಿವ ಸಂಪುಟ ಉತ್ತರ ಪ್ರದೇಶ ಕುಶಿನಗರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನುಮೋದನೆ ನೀಡಿತ್ತು. ಗೌತಮ ಬುದ್ಧ ಮಹಾಪರಿನಿರ್ವಾಣ ಪಡೆದ ಸ್ಥಳ ಕುಶಿನಗರ. ಬೌದ್ಧರ ಪವಿತ್ರ ಸ್ಥಳ ಎನಿಸಿರುವ ಕುಶಿನಗರಕ್ಕೆ ಬೌದ್ಧ ಧರ್ಮಿಯರು ಹಾಗೂ ಸನ್ಯಾಸಿಗಳು ಹಾಗೂ ಅನುಯಾಯಿಗಳ ಭೇಟಿಗೆ ಅನುಕೂಲವಾಗಲಿದೆ.
ಉತ್ತರ ಪ್ರದೇಶ ಈಶಾನ್ಯ ಭಾಗದಲ್ಲಿರುವ ಕುಶಿನಗರವು ರಾಜಧಾನಿ ಗೋರಖ್ ಪುರದಿಂದ 50 ಕಿಲೋ ಮೀಟರ್ ದೂರದಲ್ಲಿದೆ. ದೇಶ ಮತ್ತು ವಿದೇಶಗಳಿಂದ ಆಗಮಿಸುವ ಬೌದ್ಧ ಧರ್ಮೀಯರಿಂದ ಪ್ರಸಿದ್ಧ ಪ್ರವಾಸಿ ತಾಣವಾಗಿ ಪರಿವರ್ತನೆ ಆಗಲಿದೆ. ಹೊಸ ವಿಮಾನ ನಿಲ್ದಾಣದಿಂದಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೆಚ್ಚು ಉಪಯುಕ್ತವಾಗಲಿದೆ.
ಶ್ರೀಲಂಕಾದ ಕೊಲಂಬೋದಲ್ಲಿ ಮೊದಲ ವಿಮಾನ ಲ್ಯಾಂಡ್:
ಉತ್ತರ ಪ್ರದೇಶ ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಯ ಮೊದಲ ದಿನ 125 ಬೌದ್ಝ ಧರ್ಮಗುರುಗಳು ಮತ್ತು ಸನ್ಯಾಸಿಗಳು ಹಾಗೂ 12 ಸದಸ್ಯರ ನಿಯೋಗವನ್ನು ಹೊತ್ತ ವಿಮಾನ ಶ್ರೀಲಂಕಾದ ರಾಜಧಾನಿ ಕೋಲಂಬೋದಲ್ಲಿ ಲ್ಯಾಂಡ್ ಆಗಲಿದೆ.
ಆರು ಬೌದ್ಧ ಸ್ಥಳಗಳ ಪ್ರವಾಸಕ್ಕೆ ಅನುಕೂಲ:
ಕುಶಿನಗರ ವಿಮಾನ ನಿಲ್ದಾಣವು ಉತ್ತರ ಪ್ರದೇಶದ ಹಾಗೂ ಉತ್ತರ ಬಿಹಾರದ ಕುಶಿನಗರ, ಸಾರನಾಥ, ಶ್ರಾವಸ್ತಿ, ಕೇಸರಿ ಸ್ತೂಪ ಮತ್ತು ವೈಶಾಲಿ ಸೇರಿದಂತೆ ಒಟ್ಟು ಆರು ಬೌದ್ಧ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಹೆಚ್ಚು ಅನುಕೂಲಕರವಾಗಿರಲಿದೆ. ಮೊದಲು ಬೌದ್ಧ ಪ್ರವಾಸಿಗರಿಗೆ ಕೋಲ್ಕತ್ತಾ, ದೆಹಲಿ, ಗಯಾ ಮತ್ತು ವಾರಣಾಸಿ ದೂರದೂರ ಎನಿಸುತ್ತಿದ್ದವು. ವಿಮಾನ ಸಂಪರ್ಕವಿಲ್ಲದ ಕಾರಣ ಒಂದು ಸಮಯದಲ್ಲಿ ಎಲ್ಲ ತಾಣಗಳಿಗೆ ಭೇಟಿ ನೀಡುವುದಕ್ಕೆ ಸಾಕಷ್ಟು ವಿಳಂಬವಾಗುತ್ತಿತ್ತು. ಇದೀಗ ಕುಶಿನಗರ ವಿಮಾನ ನಿಲ್ದಾಣವನ್ನು ಕಾರ್ಯಾರಂಭದಿಂದ ವಿದೇಶಿ ಪ್ರವಾಸಿಗರು ತಮ್ಮ ತೀರ್ಥಯಾತ್ರೆಯನ್ನು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗುತ್ತದೆ.
ಕುಶಿನಗರ ವಿಮಾನ ನಿಲ್ದಾಣದ ವಿಶೇಷತೆ:
* 590 ಎಕರೆ ಪ್ರದೇಶದಲ್ಲಿರುವ ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದೆ.
* 17.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಎಂಟು ಅಂತಸ್ತಿನ ಅತ್ಯಾಧುನಿಕ ಏರ್ ಟ್ರಾಫಿಕ್ ಕಂಟ್ರೋಲ್ (ATC) ಗೋಪುರವು ವಿಮಾನ ನಿಲ್ದಾಣದಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ.
* ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮತ್ತು ಟೇಕ್-ಆಫ್ ಮಾಡಲು ನ್ಯಾವಿಗೇಷನ್ ಸಿಸ್ಟಮ್ ಪ್ರಯೋಗವನ್ನು ಯಶಸ್ವಿಯಾಗಿ ಪಾಸು ಮಾಡಲಾಗಿದೆ.
* ಪ್ರವಾಸೋದ್ಯಮ ಉದ್ಯಮದ ತಜ್ಞರ ಪ್ರಕಾರ, ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪೂರ್ವ ಯುಪಿಯ ಅಭಿವೃದ್ಧಿಗೆ ವಾಯುಯಾನ, ಪ್ರವಾಸೋದ್ಯಮ ಮತ್ತು ವೈದ್ಯಕೀಯ ಮತ್ತು ಕೈಗಾರಿಕೆಗಳು ಪೂರಕವಾಗಿರಲಿದೆ.
* ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಕುಶಿನಗರವು 2016, 2017, 2018 ಮತ್ತು 2019 ರಲ್ಲಿ ಕ್ರಮವಾಗಿ 8.98 ಲಕ್ಷ, 9.3 ಲಕ್ಷ, 9.7 ಲಕ್ಷ, ಮತ್ತು 10.96 ಲಕ್ಷ ಪ್ರವಾಸಿಗರು ಪ್ರಮಾಣಿಸಿದ್ದಾರೆ. ಇದು ಸಾಂಕ್ರಾಮಿಕ ಮತ್ತು ನಂತರದ ಲಾಕ್ಡೌನ್ ಕಾರಣದಿಂದಾಗಿ 2020 ರಲ್ಲಿ ಪ್ರವಾಸಿಗರ ಸಂಖ್ಯೆ 3.23 ಲಕ್ಷಕ್ಕೆ ಇಳಿಕೆಯಾಗಿತ್ತು.
* ಅದೇ ರೀತಿ ಶ್ರವಸ್ತಿ ಸ್ಥಳಕ್ಕೆ ಕಳೆದ 2016, 2017, 2018, ಮತ್ತು 2019 ರಲ್ಲಿ ಕ್ರಮವಾಗಿ 2.2 ಲಕ್ಷ, 2.58 ಲಕ್ಷ, 11.32 ಲಕ್ಷ, ಮತ್ತು 12.71 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, 2020 ರಲ್ಲಿ ಈ ಸಂಖ್ಯೆ ಕೇವಲ 0.17 ಲಕ್ಷಕ್ಕೆ ಇಳಿದಿದೆ.
* ವಿಮಾನ ನಿಲ್ದಾಣವು ಸುಮಾರು 10-15 ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸಲಿದ್ದು, ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದ ಪಶ್ಚಿಮ / ಉತ್ತರ ಭಾಗದ ದೊಡ್ಡ ವಲಸಿಗರು ಸೇರಿದಂತೆ ಒಟ್ಟು 2 ಕೋಟಿಗೂ ಅಧಿಕ ಜನರಿಗೆ ಸೇವೆ ಒದಗಿಸಲಿದೆ.
* • ಪ್ರಸ್ತುತ, ಎರಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು - ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ - ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನೊಂದು ಗೌತಮ್ ಬುಧ ನಗರದ ಜೆವಾರ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ.