ಮಾನವನಿಂದಲೇ ಎದುರಾಯ್ತು ಅನಾಹುತ! ಭೂಮಿ ಸಖತ್ ಹಾಟ್ ಮಗಾ..!
ಮಾನವನ ದುರಾಸೆ ಹೆಚ್ಚಾದಷ್ಟು ಪ್ರಕೃತಿ ನಾಶವಾಗುತ್ತಿದೆ, ಭೂಮಿ ಅವಸಾನದ ಅಂಚಿಗೆ ಬಂದು ನಿಂತಿದೆ. ಈ ದುರಾಸೆಯ ಪರಿಣಾಮ ಇನ್ನಷ್ಟು ಕೆಟ್ಟದಾಗಿರಲಿದೆ ಅಂತಾ ವಿಜ್ಞಾನಿಗಳು ಎಚ್ಚರಿಸಿದರೂ ಪ್ರಯೋಜನವಾಗಿಲ್ಲ. ಈಗ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದ್ದು, ಮಾನವರೆಲ್ಲಾ ಬೆಚ್ಚಿಬೀಳಿಸುವ ವರದಿ ರಿವೀಲ್ ಆಗಿದೆ. ಕಳೆದ ತಿಂಗಳು, ಅಂದರೆ ಜುಲೈ-2021 ಭೂಮಿ ಪಾಲಿಗೆ ಕರಾಳ ಮಾಸವಾಗಿದೆ.
ಏಕೆಂದರೆ ಜುಲೈ ತಿಂಗಳಿನಲ್ಲಿ ಈವರೆಗೂ ದಾಖಲಾಗದ ಅತಿಹೆಚ್ಚು ತಾಪಮಾನ ದಾಖಲಾಗಿದೆ. ಅಂದರೆ ಭೂಮಿಯ ಇತಿಹಾಸದಲ್ಲೇ ಅತಿ ಹೆಚ್ಚು ಬಿಸಿ ಅನುಭವಕ್ಕೆ ಬಂದಿದೆ ಎಂದು ಅಮೆರಿಕದ ವಿಜ್ಞಾನಿಗಳು ಮಾಹಿತಿ ಹೊರಹಾಕಿದ್ದಾರೆ.
ಪ್ರಕೃತಿ ಜೊತೆ ಮಾನವರೂ ಸರ್ವನಾಶ! ವರ್ಷಕ್ಕೆ ಕೋಟಿ ಕೋಟಿ ಮರ ಉಡೀಸ್!
ಅಮೆರಿಕದ 'ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲ ಆಡಳಿತ'ದ ವಿಜ್ಞಾನಿಗಳ ಮಾಹಿತಿಯಂತೆ, ಜುಲೈನಲ್ಲಿ ಸಾಗರ ಹಾಗೂ ನೆಲದ ತಾಪಮಾನ ಸರಾಸರಿ 1.67 ಡಿಗ್ರಿ ಫ್ಯಾರನ್ ಹೀಟ್ನಲ್ಲಿ ಇತ್ತು. ಇದು 20ನೇ ಶತಮಾನದ ದಾಖಲೆ ಪುಡಿ ಮಾಡಿದೆ. 2016ರಲ್ಲಿ ದಾಖಲಾಗಿದ್ದ ಅತಿಹೆಚ್ಚು ತಾಪಮಾನ ಮೀರಿಸಿದ್ದು, ಭೂಮಿಯ ಮೇಲೆ ಮಾನವರ ಭವಿಷ್ಯವೇ ಅಲ್ಲೋಲ ಕಲ್ಲೋಲವಾಗುತ್ತಿದೆ.
142 ವರ್ಷಗಳಲ್ಲೇ ಭಯಾನಕ
ಸುಮಾರು 142 ವರ್ಷದಿಂದ ಭೂಮಿ ಮೇಲಿನ ತಾಪಮಾನ ಅಳೆಯಲಾಗುತ್ತಿದೆ. ಕೈಗಾರಿಕೆಗಳ ಸ್ಥಾಪನೆ ಬಳಿಕ ಭೂಮಿ ಮೇಲೆ ತಾಪಮಾನ ಏರುತ್ತಲೇ ಸಾಗಿದೆ. ಈಗ ನೋಡಿದರೆ ದಿಢೀರ್ 1.67 ಡಿಗ್ರಿ ಫ್ಯಾರನ್ ಹೀಟ್ಗೆ ಸರಾಸರಿ ತಾಪಮಾನ ಬಂದು ತಲುಪಿದೆ. ಹಿಂದೆ 2012ರಲ್ಲಿ 1.54 ಡಿಗ್ರಿ ಫ್ಯಾರನ್ ಹೀಟ್ ತಾಪಮಾನವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದರು. ಈಗ ಅದು 1.67 ಡಿಗ್ರಿ ಫ್ಯಾರನ್ ಹೀಟ್ಗೆ ಬಂದು ತಲುಪಿದ್ದು, ಇತಿಹಾಸದಲ್ಲೇ ಅತ್ಯಂತ ಬಿಸಿಯಾದ ತಿಂಗಳು ಎಂದು ಜುಲೈ 2021ನ್ನ ಗುರುತಿಸಲಾಗಿದೆ. ಹಾಗೇ ಮುಂಬರುವ ದಿನಗಳಲ್ಲಿ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.
ಪ್ರಳಯ ಫಿಕ್ಸ್ ಅಂತಿದ್ದಾರೆ ವಿಜ್ಞಾನಿಗಳು, ಮುಳುಗಿ ಹೋಗಲಿದೆ 'ಮಾನವ ಸಾಮ್ರಾಜ್ಯ'..!
ಅಮೆರಿಕ, ಕೆನಡಾ ಬಿಸಿಗಾಳಿ ಪ್ರಭಾವ..?
ಮತ್ತೊಂದು ಕಡೆ ಕಳೆದ ತಿಂಗಳು ಅಮೆರಿಕ ಮತ್ತು ಕೆನಡಾ ಬಿಸಿಗಾಳಿ ಪ್ರಭಾವಕ್ಕೆ ಸಿಲುಕಿ ನಲುಗಿದ್ದವು. ಹಾಗೇ ಅತಿಹೆಚ್ಚು ತಾಪಮಾನ ಕೂಡ ದಾಖಲಾಗಿದೆ. ಈ ಘಟನೆ ವಾತಾವರಣ ಬದಲಾವಣೆಯ ಭೀಕರತೆಗೆ ಕೈಗನ್ನಡಿ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಕಳೆದ ವರ್ಷ ಪ್ರವಾಹದ ಭೀಕರತೆಗೆ ತತ್ತರಿಸಿದ್ದ ಅಮೆರಿಕ ಈ ಬಾರಿ ಬಿಸಿಗಾಳಿಯ ಅಬ್ಬರಕ್ಕೆ ಪತರುಗುಟ್ಟಿತ್ತು. ನೂರಾರು ಪ್ರದೇಶಗಳಲ್ಲಿ ಕಾಡ್ಗಿಚ್ಚು ಹಬ್ಬಿಕೊಂಡು, ಹಲವರು ಬಲಿಯಾಗಿದ್ದರು. ಈ ನಡುವೆ ಕೆನಡಾ ಕೂಡ ಭೀಕರ ಕಾಡ್ಗಿಚ್ಚು ಹಾಗೂ ಬಿಸಿಗಾಳಿ ಅಬ್ಬರಕ್ಕೆ ನಲುಗಿ ಹೋಗಿತ್ತು. ನೂರಾರು ಜನರು ಬಿಸಿಗಾಳಿಗೆ ಬಲಿಯಾಗಿದ್ದರು.
ಭೂಮಿ ಮೇಲಿನ ಹಿಮ ಖಾಲಿ..!
ಭೂಮಿ ಬದಲಾಗುತ್ತಿದೆ, ಭೂಮಿ ಮೊದಲಿನಂತೆ ಇಲ್ಲ, ಎಲ್ಲಾ ಬುಡಮೇಲು ಮಾಡುತ್ತಿರುವುದು ಮಾನವನ ಕೃತ್ಯಗಳು. ಮಳೆಗಾಲ ಬಂದಾಗ ಸರಿಯಾಗಿ ಮಳೆ ಬೀಳುತ್ತಿಲ್ಲ, ಚಳಿಗಾಲ ಬಂದಾಗ ಪದೇ ಪದೆ ಭಾರಿ ಮಳೆ ಸುರಿಯುತ್ತೆ. ಇನ್ನು ಬೇಸಿಗೆಯ ಬಿಸಿ ದುಪ್ಪಟ್ಟಾಗುತ್ತಾ ಸಾಗುತ್ತಿದೆ. ಇದು ಒಂದು ದೇಶದ ಕಥೆಯಲ್ಲ, ವಿಶ್ವದ ಎಲ್ಲಾ ರಾಷ್ಟ್ರಗಳು ತಾಪಮಾನ ಏರಿಕೆಯ ಬಿಸಿ ಅನುಭವಿಸುತ್ತಿವೆ. ಅದ್ರಲ್ಲೂ ಭಾರಿ ಪ್ರಮಾಣದ ಹಿಮ ಪದರ ಹೊಂದಿದ್ದ ಧ್ರುವ ಪ್ರದೇಶದಲ್ಲಿ ಹಿಮ ಕರುಗುತ್ತಿದೆ. ಅದು ಎಷ್ಟರಮಟ್ಟಿಗೆ ಎಂದ್ರೆ, ಇನ್ನೇನು ಅಷ್ಟೋ-ಇಷ್ಟೋ ಹಿಮ ಉಳಿದುಕೊಂಡಿದೆ. ಅಂದಹಾಗೆ ನಾಸಾ ಅಧ್ಯಯನದ ಪ್ರಕಾರ 1981ರಿಂದ 2021ರ ನಡುವೆ ಪ್ರತಿ 10 ವರ್ಷದಲ್ಲಿ ಶೇಕಡಾ 13ರಷ್ಟು ಹಿಮ ಕರಗಿದೆ. ದಕ್ಷಿಣ ಧ್ರುವದಲ್ಲಿ ಹಿಮ ಕರಗುವ ಪ್ರಮಾಣ ಕಡಿಮೆ ಇದ್ದರೂ, ಉತ್ತರ ಧ್ರುವದಲ್ಲಿ ತುಂಬಾ ಆತಂಕ ಹುಟ್ಟಿಸಿದೆ. ಒಂದಿಷ್ಟು ರೊಟ್ಟಿ ಚೂರಿನಂತೆ ಅಲ್ಲಿ ಹಿಮ ಉಳಿದುಕೊಂಡಿದೆ. ಮಾನವನ ದುರಾಸೆ ಪರಿಣಾಮ ಮುಂದಿನ 10-20 ವರ್ಷದಲ್ಲಿ ಸಂಪೂರ್ಣ ಹಿಮ ಕರಗುವ ಆತಂಕವಿದೆ.
ಪರಿಸ್ಥಿತಿ ಕೈಮೀರಿ ಹೋಗಿದೆ
‘ಭೂಮಿ' ಜೀವಿಗಳ ವಾಸಕ್ಕೆ ಯೋಗ್ಯವಾದ ಗ್ರಹ. ಆದ್ರೆ ಹೀಗೆ ಭೂಮಿ ರೂಪುಗೊಳ್ಳಲು ಕೋಟ್ಯಂತರ ವರ್ಷ ಬೇಕಾಯಿತು. ಈ ಪರಿಶ್ರಮವನ್ನ ಮನುಷ್ಯ ಕೆಲವೇ ಕೆಲವು ವರ್ಷಗಳಲ್ಲಿ ಹಾಳು ಮಾಡಿದ್ದಾನೆ. ಕೈಗಾರಿಕೆಗಳೂ ಸೇರಿದಂತೆ ಮನುಷ್ಯರು ದಿನನಿತ್ಯ ಲಕ್ಷಾಂತರ ಟನ್ ಕಾರ್ಬನ್ ಹಾಗೂ ಕಾರ್ಬನ್ ಸಂಯುಕ್ತಗಳನ್ನು ಭೂಮಿ ವಾತಾವರಣಕ್ಕೆ ಸೇರಿಸುತ್ತಿದ್ದಾರೆ. ಇದರಿಂದ ಭೂಮಿ ತನ್ನ ಮೊದಲಿನ ಶಕ್ತಿ-ಸಾಮರ್ಥ್ಯ ಕಳೆದುಕೊಂಡಿದೆ. ಈ ಹಿಂದೆ ಸೂರ್ಯನಿಂದ ಬರುವ ವಿಕಿರಣ ಹಾಗೂ ಬಿಸಿಯನ್ನ ಬಾಹ್ಯಾಕಾಶಕ್ಕೆ ಬಿಡುತ್ತಿತ್ತು ಭೂಮಿ. ಜೀವಿಗಳಿಗೆ ಈ ಪ್ರಕ್ರಿಯೆ ಶ್ರೀರಕ್ಷೆಯಾಗಿತ್ತು. ಆದ್ರೆ ಈಗ ಎಲ್ಲಾ ಉಲ್ಟಾ ಆಗಿದೆ, ವಾತಾವರಣದಲ್ಲಿ ಅತಿಯಾದ ಕಾರ್ಬನ್ ಸಂಯುಕ್ತಗಳು ಸೇರಿರುವ ಪರಿಣಾಮ, ಸೂರ್ಯನಿಂದ ಬರುವ ಅಷ್ಟೂ ಬಿಸಿಯನ್ನ ಭೂಮಿ ಹೀರಿಕೊಳ್ಳುತ್ತಿದೆ. ಇದರಿಂದ ಭೂಮಿಯ ವಾತಾವರಣದಲ್ಲಿ ಅಪಾಯಕಾರಿ ವಿಕಿರಣಗಳ ಹಾವಳಿ ಕೂಡ ಹೆಚ್ಚಾಗುತ್ತಿದೆ.
ಸಂಕಷ್ಟಕ್ಕೆ ಕೊನೆಯೇ ಇಲ್ವಾ..?
ಜಾಗತಿಕ ತಾಪಮಾನ ಏರಿಕೆ ಹಾಗೂ ಇದರಿಂದ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ಮೊದಲು ಬಲಿ ಆಗುವುದೇ ದ್ವೀಪ ರಾಷ್ಟ್ರಗಳು. ಏಕೆಂದರೆ ಧ್ರುವ ಪ್ರದೇಶದ ಹಿಮ ಕರಗಿ, ಸಮುದ್ರದ ನೀರಿನ ಮಟ್ಟ ಹೆಚ್ಚಾದ ಸಂದರ್ಭದಲ್ಲಿ ಕರಾವಳಿ ಭಾಗದ ಅದರಲ್ಲೂ ಸಣ್ಣಪುಟ್ಟ ದ್ವೀಪ ರಾಷ್ಟ್ರಗಳ ಜನ ನಲುಗಿ ಹೋಗುತ್ತಾರೆ. ಈ ಬಗ್ಗೆ ವಿಜ್ಞಾನಿಗಳು ಎಚ್ಚರಿಸುತ್ತಾ ಬಂದರೂ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಬರುತ್ತಿಲ್ಲ. ಸಮುದ್ರದಲ್ಲಿನ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದು ಸಹಜವಾಗಿ ಭೂಮಿಯನ್ನು ನುಂಗಿ ಹಾಕುತ್ತಿದೆ. ಈಗಾಗಲೇ ಅದೆಷ್ಟೋ ಸಣ್ಣಪುಟ್ಟ ದ್ವೀಪಗಳು ಹೀಗೆ ಸಮುದ್ರದ ಆರ್ಭಟಕ್ಕೆ ಮುಳುಗಿ ಹೋಗಿರುವ ಉದಾಹರಣೆ ಇದೆ.