ಮೋದಿ ಸಂಪುಟದಲ್ಲಿ ಮೇಲ್ವರ್ಗದ ಸಚಿವರ ಸಂಖ್ಯೆಯೇ ಹೆಚ್ಚು
ನವದೆಹಲಿ, ಮೇ 31: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 58 ಸಚಿವರು ಗುರುವಾರ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 25 ಮಂದಿ ಸಂಪುಟ ದರ್ಜೆ, 9 ಮಂದಿ ರಾಜ್ಯ ಸಚಿವ (ಸ್ವತಂತ್ರ ಖಾತೆ) ಮತ್ತು 24 ಮಂದಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ತಮ್ಮ ಸಂಪುಟದಲ್ಲಿ ಬಹುತೇಕ ಎಲ್ಲ ಜಾತಿಯವರನ್ನೂ ಒಳಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸಿದ್ದರೂ, ಅವರಲ್ಲಿ ಮೇಲ್ವರ್ಗದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. 58 ಸಚಿವರ ಪೈಕಿ 32 ಮಂದಿ ಮೇಲ್ಜಾತಿಯವರಿದ್ದಾರೆ. ಇತರೆ ಹಿಂದುಳಿದ ವರ್ಗಗಳಿಂದ 13 ಮಂದಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ.
ಕೇಂದ್ರ ಸಂಪುಟದಲ್ಲಿ 9 ಮಂದಿ ಬ್ರಾಹ್ಮಣ ಸಂಸದರು ಸ್ಥಾನಪಡೆದಿದ್ದಾರೆ. ಇವರಲ್ಲಿ ನಿತಿನ್ ಗಡ್ಕರಿ ಕೂಡ ಸೇರಿದ್ದಾರೆ. ಠಾಕೂರ್ ಸಮುದಾಯದ ಮೂವರು ಮುಖಂಡರು ಸಂಪುಟಕ್ಕೆ ಸೇರಿಕೊಂಡಿದ್ದಾರೆ. ರಾಜನಾಥ್ ಸಿಂಗ್, ಜೋಧಪುರದ ಸಂಸದ ಗಜೇಂದ್ರ ಸಿಂಗ್ ಠಾಕೂರ್ ಮತ್ತು ನರೇಂದ್ರ ಸಿಂಗ್ ತೋಮರ್ ಈ ಸಮುದಾಯದವರು. ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ ಸಂಪುಟದಲ್ಲಿ ಗುರುತಿಸಿಕೊಂಡ ಮತ್ತೊಂದು ಜನಪ್ರಿಯ ಒಬಿಸಿ ಮುಖವೆಂದರೆ ಧರ್ಮೇಂದ್ರ ಪ್ರಧಾನ್ ಅವರದ್ದು.
ಮೋದಿ ಸರ್ಕಾರ್ 2 : ಕೇಂದ್ರ ಸಚಿವ ಸಂಪುಟದ ನೂತನ ಸದಸ್ಯರು
ಈ ಬಾರಿಯ ಚುನಾವಣೆಯಲ್ಲಿ ಜಾತಿ ಆಧಾರಿತ ರಾಜಕೀಯವನ್ನೂ ಮೀರಿ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿವೆ. ಸಂಪುಟದಲ್ಲಿ ಎಲ್ಲ ಜಾತಿಯವರಿಗೂ ಸಾಧ್ಯವಾದಷ್ಟು ಸಮಾನ ಪ್ರಾತಿನಿಧ್ಯ ನೀಡಲು ಪ್ರಯತ್ನಿಸಲಾಗಿದೆ.
ಬಿಜೆಪಿಗೆ ದೇಶದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ವ್ಯಕ್ತಪಡಿಸಿರುವ ಬ್ರಾಹ್ಮಣ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು, ಪಕ್ಷವು ತನ್ನನ್ನು ಬೆಂಬಲಿಸುವ ಸಮುದಾಯಕ್ಕೆ ತಕ್ಕ ಮಹತ್ವ ನೀಡಲಿದೆ ಎಂಬ ಸಂದೇಶ ರವಾನಿಸಿದೆ.
ಆರು ಎಸ್ಸಿ, ನಾಲ್ಕು ಎಸ್ಟಿ
ಗುರುವಾರ ಪ್ರಮಾಣ ವಚನ ಸ್ವೀಕರಿಸಿದ 58 ಸಚಿವರ ಪೈಕಿ ಆರು ಮಂದಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ನಾಲ್ಕು ಮಂದಿ ಪರಿಶಿಷ್ಟ ಪಂಗಡದವರು. ಇವರಲ್ಲಿ ಹೆಚ್ಚಿನವರು ಒಡಿಶಾ ಮತ್ತು ಜಾರ್ಖಂಡ್ನಿಂದ ಆಯ್ಕೆಯಾಗಿದ್ದಾರೆ. ಮಧ್ಯಪ್ರದೇಶದ ರಾಜ್ಯಸಭಾ ಸಂಸದ ತಾವರಚಂದ್ ಗೆಹ್ಲೋಟ್ ಅವರಿಗೆ ಸಂಪುಟ ಸಚಿವ ಸ್ಥಾನ ನೀಡಲಾಗಿದೆ. ಅವರು ಕಳೆದ ಸಾಲಿನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದರು.
ಮೋದಿ 2.0 ಸರ್ಕಾರದಲ್ಲಿ ಯಾರು ಹಿರಿಯ ಹಾಗೂ ಕಿರಿಯ ಸಚಿವರು
ಇಬ್ಬರು ಸಿಖ್, ಒಬ್ಬ ಮುಸ್ಲಿಂ
ಅಕಾಲಿದಳದ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಮತ್ತು ಬಿಜೆಪಿಯ ಹರ್ದೀಪ್ ಪುರಿ ಸಿಖ್ ಸಮುದಾಯದ ಸಚಿವರಾಗಿದ್ದಾರೆ. ಇನ್ನು ಮುಖ್ತಾರ್ ಅಬ್ಬಾಸ್ ನಖ್ವಿ ಮುಸ್ಲಿಂ ಸಮುದಾಯದ ಏಕೈಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮೇಲ್ವರ್ಗದ ಮತ ಸೆಳೆದ ಪಾಂಡೆಗೆ ಉಡುಗೊರೆ
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದಾಗ ಕೆಲವು ಸಮುದಾಯಗಳಿಂದ ಅಪಸ್ವರಗಳು ಕೇಳಿಬಂದಿದ್ದರೂ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಇಲ್ಲಿ ಮೇಲ್ವರ್ಗದವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದ ಬ್ರಾಹ್ಮಣ ಸಮುದಾಯದ ಮುಖಂಡ, ಬಿಜೆಪಿಯ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ಅವರಿಗೆ ಅವರ ಪರಿಶ್ರಮಕ್ಕಾಗಿ ಸಂಪುಟ ದರ್ಜೆ ಸಚಿವ ಸ್ಥಾನ ನೀಡಲಾಗಿದೆ.
'ಜೈ ಶ್ರೀರಾಮ್' ಎಂದಿದ್ದಕ್ಕೆ ಕಾರಿನಿಂದ ಇಳಿದುಬಂದ ದೀದಿ ಮಾಡಿದ್ದೇನು?
ಬುಡಕಟ್ಟು ಸಮುದಾಯಕ್ಕೆ ಪ್ರಾತಿನಿಧ್ಯ
ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಬುಡಕಟ್ಟು ಸಮುದಾಯದ ಮುಖಂಡ ಅರ್ಜುನ್ ಮುಂಡಾ ಅವರಿಗೆ ಸಂಪುಟ ಸಚಿವ ಸ್ಥಾನ ನೀಡಲಾಗಿದೆ. ಈ ವರ್ಷದಲ್ಲಿಯೇ ಜಾರ್ಖಂಡ್ನಲ್ಲಿ ಚುನಾವಣೆ ನಡೆಯಲಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ಮುಂಡಾ ಅವರಿಗೆ ಆದ್ಯತೆ ನೀಡಲಾಗಿದೆ. ಜಾರ್ಖಂಡ್ನಲ್ಲಿ ಈಗ ಮುಖ್ಯಮಂತ್ರಿಯಾಗಿರುವ ರಘುಬರ್ ದಾಸ್ ಅವರು ಬುಡಕಟ್ಟು ಸಮುದಾಯದವರಲ್ಲ. ಆದರೆ, ಜೆಎಂಎಂ ಸಂಸ್ಥಾಪಕ ಶಿಬು ಸೊರೇನ್ ಸೇರಿದಂತೆ ಪ್ರಮುಖರು ಸ್ಪರ್ಧಿಸಿದ್ದ ಹಲವು ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.