ಲಿಂಗಾಯತ ಚಳವಳಿಯನ್ನು ಹದಗೆಡಿಸಿದ ರಾಜಕೀಯ ಮುಖಂಡರು
ಲಿಂಗಾಯತ ಚಳವಳಿ ಕಳೆದ ಎರಡು ಶತಮಾನದಿಂದ ಬೇರೆ ಬೇರೆ ರೂಪದಲ್ಲಿ ನಡೆದು ಬಂದಿದೆ. ಧರ್ಮ ಮಾನ್ಯತೆ ಕಾನೂನಿನ ಧಾರ್ಮಿಕ ಹಕ್ಕು ಸಂವಿಧಾನ ನೀಡಿದ ಅಧಿಕಾರವೂ ಹೌದು. ಲಿಂಗಾಯತ ಧರ್ಮದ ಚಳವಳಿಯಲ್ಲಿ ರಾಜಕಾರಣಿಗಳು ಬಂದು ಆಟವಾಡಿ ತಮಗೆ ಲಾಭವಾಗಿಲ್ಲವೆಂಬ ಕಾರಣಕ್ಕೆ ಈಗ ಲಿಂಗಾಯತ ಚಳವಳಿಯ ಹೋರಾಟವನ್ನು ಕೈ ಬಿಟ್ಟಿದ್ದೇವೆ ಎಂದು ಹೇಳಿಕೆ ನೀಡಿರುವುದು ಅವರವರ ಸ್ವಾರ್ಥ ಮನೋಭಾವನೆಯನ್ನು ಬಿಂಬಿಸುತ್ತದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
1) ಧರ್ಮ ಮಾನ್ಯತೆ ಚಳವಳಿಯು ರಾಜಕಾರಣಿಗಳ ಆಶ್ರಯಕ್ಕೆ ಹೋಗಿದ್ದು ಅಥವಾ ರಾಜಕಾರಣಿಗಳು ಧಾರ್ಮಿಕ ಮಾನ್ಯತೆಗೆ ಹೊರಡುವುದಾಗಿ ಹೇಳಿದ್ದು ಒಂದು ರೀತಿ ಜನರಲ್ಲಿ ಹೊಸ ಭರವಸೆ ಆಶೆ ಹುಟ್ಟಿಸಿತ್ತು. ಆ ಭ್ರಮೆ, ಭ್ರಾಂತಿ ಈಗ ಬಯಲಾಗಿದೆ. ಧಾರ್ಮಿಕ ಮುಖಂಡರು ರಾಜಕಾರಣಿಗಳನ್ನು ಆಶ್ರಯಿಸಿ ಸಹಾಯ ಕೇಳೋದು ಎಷ್ಟು ತಪ್ಪೋ, ಅಷ್ಟೇ ತಪ್ಪು ರಾಜಕೀಯ ವ್ಯಕ್ತಿಗಳು ಧರ್ಮವನ್ನು ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಳಸುವುದು. ಈ ಇಬ್ಬದಿಯ ದ್ವಂದ್ವ ನೀತಿಯನ್ನು ನಾನು ಕೆಲ ದಿನಗಳ ಹಿಂದೆ ಪ್ರಶ್ನಿಸಿದ್ದಕ್ಕೆ ಒಬ್ಬ 'ಜವಾಬ್ದಾರಿಯುತ' ಮುಖಂಡರು ತಮ್ಮ ಅನಾಗರಿಕ ಭಾಷೆಯನ್ನು ಬಳಸಿ ಕಿರುಚಾಡಿದ್ದು ಈಗ ಹಳೆಯದ್ದಾಗಿದೆ.
ಶಿವನೇ! ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ ನಲ್ಲಿ ಮತ್ತೆ ಶುರುವಾಯ್ತು ಲಿಂಗಾಯತ ಜಗಳ
2) ರಾಜಕೀಯ ಮುಖಂಡರು ತಮ್ಮ ಲಾಭಕ್ಕಾಗಿ ಲಿಂಗಾಯತರು - ವೀರಶೈವರು ಬೇರೆ ಬೇರೆ ಎಂದು ಹೇಳಿದರು. ಅವರ ಸೋಲಿಗೆ ಅದುವೇ ಕಾರಣ ಎಂದೂ ಹೇಳಿಕೊಂಡರು. ಈಗ ಎರಡು ಒಂದೇ ಎನ್ನುತ್ತಿದ್ದಾರೆ! ಮತ್ತೆ ಸೋತರೆ ಮುಂದೆ ಏನು ಹೇಳುತ್ತಾರೆ ಎನ್ನುವುದು ಬಲು ಕಷ್ಟ. ರಾಜಕೀಯ ವ್ಯಕ್ತಿಗಳು ಲಿಂಗಾಯತ ಚಳವಳಿಯನ್ನು ಹದಗೆಡಿಸಿದ್ದಂತೂ ನಿಜ ಅಲ್ಲವೇ?
3) ಮಹಾರಾಷ್ಟ್ರದಲ್ಲಿ ಲಿಂಗಾಯತರು ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರಿ, ಅಲ್ಲಿನ ಪ್ರದೇಶ ಕಾಂಗ್ರೆಸ್ ಪಕ್ಷದಿಂದ ಹಿಂದಿನ ಮುಖ್ಯ ಮಂತ್ರಿಗಳಾದ ಅಶೋಕ ಚವಾಣ ಅವರಿಂದ, ಲಿಂಗಾಯತ ಧರ್ಮ ಮಾನ್ಯತೆಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಮಟ್ಟಿಗೆ ಹೋರಾಟಕ್ಕೆ ನ್ಯಾಯವನ್ನು ಒದಗಿಸುತ್ತೇವೆ ಎಂಬ ಎಂಬ ಲಿಖಿತ ಪತ್ರವೊಂದರಲ್ಲಿ ಹೇಳಿಕೆಯನ್ನು ಪಡೆದಿದ್ದೇವೆ. ಅಲ್ಲಿ ಜನಸಂಖ್ಯೆ ಕೇವಲ ಒಂದು ಕೋಟಿ ಆಸು ಪಾಸು. ಕರ್ನಾಟಕದಲ್ಲಿ ನಮ್ಮ ರಾಜಕಾರಣಿಗಳೇ ಹುಯಿಲೆಬ್ಬಿಸಿ, ಹುಸಿ ಭರವಸೆ ನೀಡಿ ಲಿಂಗಾಯತ ಮಾನ್ಯತೆ ಇನ್ನೇನು ಸಿಕ್ಕೇ ಬಿಟ್ಟಿತು ಎಂಬ ಉನ್ಮಾದ ಮೂಡಿಸಿ ಭರವಸೆಗಳು ಹಾಗೆ ಕರಗಿ ಹೋಗುವಂತೆ ಮಾಡಿದರು.
ಪ್ರತ್ಯೇಕ ಲಿಂಗಾಯತ ಧರ್ಮ ಶಿಫಾರಸ್ಸು ತಿರಸ್ಕಾರ, ಹೈಕೋರ್ಟಿಗೆ ಮಾಹಿತಿ
ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದು ರಾಜಕೀಯ ಪಕ್ಷಗಳ ಅಣತಿಯಂತೆ ವರ್ತಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಅಷ್ಟೇ ಅಲ್ಲ ಔರಂಗಾಬಾದ್ ಮತ್ತು ಸೋಲಾಪುರದಲ್ಲಿ ನಡೆದ ಲಿಂಗಾಯತ ಚಳವಳಿಯಲ್ಲಿ ನಾನು ಮತ್ತು ಅರವಿಂದ ಜತ್ತಿಯವರು ಪಾಲ್ಗೊಂಡು ಅಲ್ಲಿನ ಲಿಂಗಾಯತರಿಗೆ ಲಿಂಗಾಯತ ಧರ್ಮ ಮಾನ್ಯತೆ ಹೋರಾಟದ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ ರೂಪುರೇಷೆ ನೀಡಿದ್ದೆವು. ಆಗ ಒಬ್ಬ ಲಿಂಗಾಯತ ಮುಖಂಡರು ಅರವಿಂದ ಜತ್ತಿಯವರಿಗೆ ಮಹಾರಾಷ್ಟ್ರದಲ್ಲಿ ಲಿಂಗಾಯತ ಚಳವಳಿಯಲ್ಲಿ ಪಾಲ್ಗೊಳ್ಳದಿರಲು ವಿನಂತಿಸಿಕೊಂಡರಂತೆ.
ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?
4) ಒಬ್ಬ ಸಾಮಾಜಿಕ ಮುಖಂಡ ನಾಯಕನಾದವನು ಸಂಯಮ ಸಮಾಧಾನ ವಿವೇಕ ಚಿತ್ತನಾಗಿರಬೇಕು. ಲಾಬಿ ಮಾಡುವ ಅಥವಾ ಉಧೋ ಉಧೋ ಎನ್ನುವ ಪಡ್ಡೆ ಹುಡುಗರ ಮಧ್ಯೆ ತಮ್ಮನ್ನೇ ವೈಭವೀಕರಿಸಿಕೊಂಡು ಮೂಲ ಕರ್ತೃತ್ವವನ್ನು ಮರೆಯಬಾರದು. ನಾವು ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ ವಿನಯತೆ ಇರಬೇಕು, ಅಹಂಭಾವ ಬಿಡಬೇಕು. ವೈಚಾರಿಕ ಭಿನ್ನಾಭಿಪ್ರಾಯಗಳು ಸಹಜ, ಅವುಗಳನ್ನು ಪರಸ್ಪರ ಚರ್ಚಿಸಿ ಬಗೆ ಹರಿಸಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳಬೇಕು. ಅಂತಹ ದೊಡ್ಡ ಗುಣ ಮೊದಲು ದೊಡ್ಡವರಲ್ಲಿ ಮೂಡಿ ಬರಬೇಕು.
5) ಟೀಕೆಗಾಗಿ ಟೀಕೆ, ವಿರೋಧಕ್ಕಾಗಿ ವಿರೋಧ ವ್ಯಕ್ತಪಡಿಸುವುದು ಮೂರ್ಖತನ. ಸಾರ್ವತ್ರಿಕ ಸಮಾಲೋಚನೆ ಚಿಂತನೆ ಮಾಡಿ ಸಾಮಾಜಿಕ ಧಾರ್ಮಿಕ ಹೋರಾಟವನ್ನು ತೀವ್ರಗೊಳಿಸುವುದು ಇಂದಿನ ಅವಶ್ಯಕತೆಗಳಲ್ಲೊಂದು.
6) ಲಿಂಗಾಯತ ಚಳವಳಿ ಕಳೆದ ಆರು ವರುಷದಿಂದ ಕರ್ನಾಟಕ ಮಹಾರಾಷ್ಟ್ರದಲ್ಲಿ ತೀವ್ರಗೊಂಡಿದೆ. ಜೈನರ ಜಾಣ್ಮೆ, ಸಿಖ್ ಧರ್ಮಿಯರ ಒಕ್ಕಟ್ಟು, ಕ್ರೈಸ್ತರ ತಾಳ್ಮೆ, ಬೌದ್ಧರ ಪ್ರೀತಿ ನಮಗೆ ಆದರ್ಶವಾಗಬೇಕು. ಲಿಂಗಾಯತ ಚಳವಳಿಯಿಂದ ಲಿಂಗಾಯತ ವೀರಶೈವ ಬೇರೆ ಬೇರೆ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಒಂದಂತೂ ನಿಜ, ಒಡೆದು ಹೋಗಿದ್ದ ಅಲ್ಪಸಂಖ್ಯಾತ ವೀರಶೈವರು ಒಕ್ಕಟ್ಟಾದರು. ಲಿಂಗಾಯತರು ಒಡೆದು ಚೂರು ಚೂರಾದರೂ ಹತಾಶೆ ನಿರಾಶೆಯಿಂದ ಮತ್ತೆ ನಾವು ಶೈವರಿಗೆ ಪಟ್ಟಕಟ್ಟಬೇಕಾಯಿತು.
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು : ಸಚಿವ ಸಂಪುಟದ ನಿರ್ಣಯ
7) ಚಳವಳಿ ವಿರೋಧಾಭಾಸಗಳ ಸಂತೆಯಾಗಿದೆ. ಹೇಳಿಕೆ, ಪ್ರತಿ ಹೇಳಿಕೆ, ಪತ್ರಿಕಾ ಹೇಳಿಕೆ, ಅದಕ್ಕೆ ವಿರುದ್ಧವಾದ ನಡವಳಿಕೆ, ಮೂಲ ಹೋರಾಟದ ಆಶಯ ಅದು ವಿಫಲಗೊಂಡ ರಾಜಕೀಯ ಷಡ್ಯಂತ್ರ. ಸತ್ಯ ಮಿಥ್ಯಗಳು ಅರಿವಿಗೆ ಬಾರದ ಹಾಗೆ ಕೇವಲ ಗೊಂದಲವನ್ನು ಸೃಷ್ಟಿಸಿದವು. ಕಂತೆ ಕಂತೆ ಪುರಾಣ ದಾಖಲೆಗಳಿದ್ದರೂ ಸಾಧಿಸಿದ್ದು ಶೂನ್ಯ. ಕಾರಣ ನಮ್ಮಲ್ಲಿ ರಾಜಕೀಯ ಮತ್ತು ಸಾಮಾಜಿಕ ಒಗ್ಗಟ್ಟಿನ ಕೊರತೆ. ರಾಜಕಾರಣಿಗಳಿಗೂ ಅಥವಾ ಸ್ವಾಮಿ ಕಾವಿಗಳಿಗೋ ಶರಣಾಗಬೇಕು. ಸ್ವಾರ್ಥವಿಲ್ಲದೆ ಸಂಘಟನೆಗಳು ಬೆಳೆಯುವುದಿಲ್ಲ. ಇನ್ನೊಂದು ಅತಿ ನೋವಿನ ಸಂಗತಿ ಎಂದರೆ, ಪ್ರತಿಯೊಬ್ಬರೂ ಹೋರಾಟವು ತನ್ನ ಅಣತಿಯಂತೆ ನಡೆಯಬೇಕು, ತಾನೇ ಮಾಡಿದೆನು ಎನ್ನುವ ಹುಚ್ಚು ಪ್ರಚಾರಕ್ಕೆ ತಮ್ಮನ್ನು ತೊಡಗಿಸಿಕೊಂಡದ್ದು ಅತ್ಯಂತ ದುರ್ದೈವದ ಸಂಗತಿಯಾಗಿದೆ.
8) ಧರ್ಮ ಮತ್ತು ರಾಜಕೀಯ - ಆದ್ಯತೆಗಳ ಆಯ್ಕೆ - ನಾವು ಒಂದು ಕಡೆಗೆ ರಾಜಕಾರಣಿಗಳನ್ನು ಇನ್ನೊಂದು ಕಡೆಗೆ ಕಾವಿಧಾರಿಗಳನ್ನು ಓಲೈಸುವ ಕಾರ್ಯವನ್ನು ಮಾಡುತ್ತೇವೆ. ನಾನು ಸದ್ಯ ಒಂದು ರಾಜಕೀಯ ಪಕ್ಷಕ್ಕೆ ಒಲವು ಹೊಂದಿದ್ದೇನೆ, ಇದು ವ್ಯತ್ಯಾಸವಾಗಬಹುದು. ಕಾರಣ 1977ರಲ್ಲಿ ನಡೆದ ಜೆಪಿ ಚಳವಳಿಯ ನಂತರ ನಾನು ಜನತಾ ಪರಿವಾರದ ಬೆಂಬಲಿಸುತ್ತಿದ್ದೆ. ನನ್ನ ಮನೆಯಲ್ಲಿ ಕಾಂಗ್ರೆಸಿನ ವಾತಾವರಣವಿದ್ದರೂ ನಾನು ಜನತಾ ಪಕ್ಷವನ್ನು ಬೆಂಬಲಿಸುತ್ತಿದ್ದೆ. ನಂತರ ಬದಲಾದ ರಾಜಕೀಯ ಧ್ರುವೀಕರಣದಲ್ಲಿ ನಾನು ಕಾಂಗ್ರೆಸ್ ಪಕ್ಷವನ್ನು ಒಪ್ಪಿಕೊಂಡಿದ್ದೇನೆ. ಆದರೆ ಧರ್ಮ ಹಾಗಲ್ಲ. ಧರ್ಮದಲ್ಲಿ ಬದ್ಧತೆ. ಸ್ಪಷ್ಟತೆ. ಶಿಸ್ತು ಆಚರಣೆ ಪಾಲನೆ ಇರಬೇಕು. ಬೇಕಾದ ಹಾಗೆ ಧರ್ಮ ನೀತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ಆದ್ಯತೆಯ ವಿಷಯದಲ್ಲಿ ಧರ್ಮವು ನಮ್ಮ ಮೊದಲ ಆದ್ಯತೆ, ನಂತರ ನಮ್ಮ ನಮ್ಮ ರಾಜಕೀಯ ಪಕ್ಷಗಳಾಗಬೇಕು.
ಸುಪ್ರೀಂ ಅಂಗಳಕ್ಕೆ 'ಪ್ರತ್ಯೇಕ ಲಿಂಗಾಯತ ಧರ್ಮ' ಹೋರಾಟ
9) ಕರ್ನಾಟಕದಲ್ಲಿ ಲಿಂಗಾಯತ ಚಳವಳಿಗೆ ಡಾ ಎಂಬಿ ಪಾಟೀಲರ ಕೊಡುಗೆ ಅಪಾರ. ಕೋಟಿ ಕೋಟಿ ಹಣವನ್ನು ಖರ್ಚು ಮಾಡಿ ಲಿಂಗಾಯತ ಧಾರ್ಮಿಕ ಅಸ್ಮಿತತೆಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ ಹೋರಾಟವನ್ನು ಜೀವಂತವಿಡುವುದರ ಜೊತೆಗೆ ಅದನ್ನು ರಾಷ್ಟ್ರಮಟ್ಟದಲ್ಲಿ ಒಯ್ದರು. ನಾನು ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಅಲ್ಲದೆ ಸಂಯಮ ಶಾಂತಿ ಪ್ರೀತಿಯಿಂದ ಸಹನೆಯಿಂದ ವಿಚಾರ ವಿನಿಮಯ ಮಾಡುತ್ತಾರೆ. ಜಾಗತಿಕ ಲಿಂಗಾಯತ ಮಹಾಸಭೆಗೆ ಕಚೇರಿ ಇಲ್ಲದಾದಾಗ ಬೆಂಗಳೂರಿನಂತಹ ಪ್ರಮುಖ ನಗರದಲ್ಲಿ ಕಚೇರಿಗೆ ಅನುವು ಮಾಡಿಕೊಟ್ಟರು. ಈಗಲೂ ಅವರಿಗೆ ಒಳಗೊಳಗೇ ಲಿಂಗಾಯತ ಧರ್ಮ ಮಾನ್ಯತೆಯ ಬಗ್ಗೆ ಕಾಳಜಿ ಇದೆ. ಉಳಿದ ರಾಜಕಾರಣಿಗಳಂತೆ ಬಣ್ಣ ಬದಲಾಯಿಸುವ ಸ್ವಭಾವವಲ್ಲ. ಆದರೆ ಯಾವುದೊ ಒತ್ತಡ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ. ಅವರ ಸಹಾಯ ಸಂದರ್ಭ ಬಂದಾಗ ಕೇಳೋಣ, ಅವರನ್ನೂ ಸಹಿತ ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಮುಕ್ತಗೊಳಿಸೋಣ.
10) ಗೂಳಿ ಬಿದ್ದರೆ ಆಳಿಗೊಂದು ಕಲ್ಲು. ಯಶಕ್ಕೆ ನೂರಾ ಜನ ತಂದೆಯರು, ಸೋಲು ಅನಾಥ. ನಾವು ಮೊದಲು ನಮ್ಮ ಸೋಲನ್ನು ಒಪ್ಪಿಕೊಳ್ಳುವ ಮನಸಿನವರಾಗಬೇಕು, ಹಾಗೇನೇ ಗೆಲ್ಲುವ ತಂತ್ರಗಾರಿಕೆಯನ್ನು ರೂಪಿಸಬೇಕು. ಸಲಹೆ ಸೂಚನೆ ಟೀಕೆಗಳನ್ನು ಆರೋಗ್ಯಕರವಾಗಿ ಸ್ವೀಕರಿಸಬೇಕು. ನಾನು ಮಾಡಬಲ್ಲೆ ಎಂಬುದು ಸಾಮರ್ಥ್ಯ, ನಾನೇ ಮಾಡಬಲ್ಲೆ ಎಂಬುದು ಅಹಂಕಾರ.
ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?
ಎಲ್ಲವನ್ನೂ ಮರೆತು ಎಲ್ಲರೂ ಕೂಡಿ ಪ್ರಾಮಾಣಿಕ ಹೋರಾಟ ಮಾಡಿ, ಯಾರನ್ನೂ ಅನಿವಾರ್ಯವಾಗಿ ಪರಿಗಣಿಸದೆ ಹೋರಾಟವನ್ನು ಮಾಡಿ ಅಪ್ಪ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಮಾನ್ಯತೆ ತರೋಣ. ಹಳೆಯದನ್ನು ಮರೆಯಬೇಕು. ಸಿಟ್ಟು ಕೋಪ ಟೀಕೆ ಟಿಪ್ಪಣಿಯನ್ನು ತಲೆಯಿಂದ ತೆಗೆದುಹಾಕಬೇಕು. ಆದರೆ ಲಿಂಗಾಯತ ಧರ್ಮ ಮಾನ್ಯತೆ ಹೋರಾಟದ ವಿಷಯದಲ್ಲಿ ಇನ್ನು ಮಾತ್ರ ಎಚ್ಚರದ ಹೆಜ್ಜೆಗಳನ್ನು ಇಡುವುದು ಸೂಕ್ತ. ನನ್ನ ಮುಕ್ತ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ ಯಾವುದೇ ವ್ಯಕ್ತಿ ಸಂಘಟನೆಯ ವಿರುದ್ಧವಲ್ಲ.