ವರ್ಷದ ವಿಶೇಷ; ಕಲಬುರಗಿ ಕಾಡಿದ 'ಭೀಮಾ' ನದಿ ಪ್ರವಾಹ
2020ನೇ ವರ್ಷ ಮುಗಿಯುತ್ತಾ ಬಂದಿದೆ. ಈ ವರ್ಷ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕರ್ನಾಟಕದಲ್ಲಿ ಮಳೆ ಕಡಿಮೆ ಇತ್ತು. ಪ್ರತಿವರ್ಷ ಮಲೆನಾಡು ಮತ್ತು ಕರಾವಳಿ ಭಾಗದ ಜನರು ಮಳೆ, ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಈ ವರ್ಷ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದರು.
ಮಳೆ ಮತ್ತು ಪ್ರವಾಹಕ್ಕೆ ಸಿಲುಕಿದ ಜಿಲ್ಲೆಗಳಲ್ಲಿ ಕಲಬುರಗಿಯೂ ಸಹ ಒಂದು. ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿನ ಮಳೆ, ಕಲಬುರಗಿಯಲ್ಲಿ ಸುರಿದ ಮಳೆಯಿಂದಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಕಲಬುರಗಿ ಜಿಲ್ಲೆಯ ಜನರು ಸಂಕಷ್ಟ ಅನುಭವಿಸಿದರು. 'ಭೀಮಾ' ನದಿ ಅಪಾಯಮಟ್ಟವನ್ನು ಮೀರಿ ಹರಿಯಿತು. ಅಪಾರವಾದ ಬೆಳೆ ಪ್ರವಾಹಕ್ಕೆ ಸಿಲುಕಿ ಹಾನಿಗೊಳಗಾಯಿತು.
ಸೊನ್ನ ಬ್ಯಾರೇಜ್ನಿಂದ 2 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ
ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಮಳೆ ಕಲಬುರಗಿ ಜಿಲ್ಲೆಯಲ್ಲಿ ಅಪಾರವಾದ ಹಾನಿಯನ್ನು ಉಂಟು ಮಾಡಿದೆ. ದಾಖಲೆ ಮಳೆ ಮತ್ತು ಭೀಮಾ ನದಿಯ ಭೀಕರ ಪ್ರವಾಹದಿಂದ ಉಂಟಾದ ನೆರೆ ಹಾನಿ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ತಂಡ ಜಿಲ್ಲೆಗೆ ಬಂದಿದೆ.
ಕಲಬುರಗಿ ಪ್ರವಾಹ ಇಳಿಮುಖ; 27,809 ಜನರ ರಕ್ಷಣೆ
ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ಕೃಷಿ, ಲೋಕೋಪಯೋಗಿ, ಪಂಚಾಯತ್ ರಾಜ್, ಗ್ರಾಮೀಣ ಕುಡಿಯುವ ನೀರು, ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಕಾರ್ಯ ನಿರ್ವಹಣೆ ಮಾಡಿವೆ. ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿದ ಜನರನ್ನು ರಕ್ಷಣೆ ಮಾಡಲು ಸೇನಾಪಡೆಯನ್ನು ಸಹ ನಿಯೋಜನೆ ಮಾಡಲಾಗಿತ್ತು.
ಕಲಬುರಗಿಯಲ್ಲಿ ಪ್ರವಾಹ; ನಷ್ಟ ವೀಕ್ಷಿಸಿದ ಕೇಂದ್ರ ತಂಡ
ಕಲಬುರಗಿ ಜಿಲ್ಲೆಯಲ್ಲಿ ಸೆಪ್ಟೆಂಬರ್ನಲ್ಲಿ ವಾಡಿಕೆಗಿಂತ ಶೇ 120 ಮತ್ತು ಅಕ್ಟೋಬರ್ ತಿಂಗಳಿನಲ್ಲಿ ವಾಡಿಕೆಗಿಂತ ಶೇ 933ರಷ್ಟು ಅಧಿಕ ಮಳೆಯಾಗಿದೆ. ಭೀಮಾ ನದಿ ಪಾತ್ರದ ಪ್ರದೇಶದಲ್ಲಿ ಮಳೆ ಹೆಚ್ಚಾದ ಕಾರಣ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿನಿಂದ 8 ಲಕ್ಷಕ್ಕೂ ಹೆಚ್ಚಿನ ಕ್ಯುಸೆಕ್ ನೀರನ್ನು ಹೊರಬಿಡಲಾಯಿತು. ಇದರಿಂದಾಗಿ ನದಿಪಾತ್ರದ ಹಳ್ಳಿಗಳು ಮುಳುಗಡೆಯಾದವು.
ಸೊನ್ನ ಬ್ಯಾರೇಜಿನಿಂದ 2.80 ಲಕ್ಷ ಕ್ಯುಸೆಕ್ ನೀರು ಹೊರಬಿಟ್ಟಿದ್ದು ಇದುವರೆಗಿನ ದಾಖಲೆಯಾಗಿತ್ತು. ಆದರೆ, ಅಕ್ಟೋಬರ್ ತಿಂಗಳಿನಲ್ಲಿ8 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ನದಿಗೆ ಹರಿಬಿಡಲಾಯಿತು. ಅಕ್ಟೋಬರ್ 14ರ ಇಡೀ ರಾತ್ರಿ ಮಳೆ ಸುರಿದ ಕಾರಣ ಬೆಳೆಗಳು ನಾಶವಾದವು. ಮಳೆಯ ಮುನ್ಸೂಚನೆ ಸಿಕ್ಕಿದ್ದರಿಂದ ಅಧಿಕಾರಿಗಳು ಸಭೆ ನಡೆಸಿ, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದರು.
ಗ್ರಾಮಗಳಿಗೆ ವಾಹನ ಮತ್ತು ಅಂಬುಲೆನ್ಸ್ ಕಳುಹಿಸಲಾಯಿತು. ಮೈಕ್ ಮತ್ತು ಡಂಗೂರ ಬಾರಿಸಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಿತು. ಇದರಿಂದಾಗಿ ಜೀವಹಾನಿಯನ್ನು ಸಾಕಷ್ಟು ಕಡಿಮೆ ಮಾಡಲಾಯಿತು. ಆದರೆ, ಬೆಳೆ, ಮನೆ ನೀರಿನಲ್ಲಿ ಮುಳುಗಿ ಹೋದವು.
ಭೀಮಾ ನದಿ ಪ್ರವಾಹದಲ್ಲಿ 11 ಪೂರ್ಣ ಗ್ರಾಮಗಳು ಸೇರಿದಂತೆ 92 ಜಲಾವೃತಗೊಂಡ ಗ್ರಾಮಗಳ 27,809 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿತ್ತು. ಸೇನಾಪಡೆಯ 98 ಸಿಬ್ಬಂದಿ, 73 ಸದಸ್ಯರ 3 ಎನ್ಡಿಆರ್ಎಫ್ ತಂಡಗಳು, 75 ಸದಸ್ಯರ ಅಗ್ನಿಶಾಮಕ ದಳದ ತಂಡ, 101 ಸದಸ್ಯರ ತಜ್ಞ ಈಜುಗಾರರ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿತ್ತು.
ಪ್ರವಾಹದಿಂದ ಸಂತ್ರಸ್ತರಾದ ಜನರಿಗಾಗಿ ಜಿಲ್ಲೆಯಲ್ಲಿ 163 ಕಾಳಜಿ ಕೇಂದ್ರ ತೆಗೆದು 6,234 ಕುಟುಂಬಗಳ 36,691 ಜನರಿಗೆ ಆಶ್ರಯ ಕಲ್ಪಿಸಲಾಯಿತು. ಕೇಂದ್ರದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಸಹ ಪಾಲನೆ ಮಾಡಲಾಯಿತು.
ಪ್ರವಾಹದಿಂದಾಗಿ 3,542 ಮನೆಗಳು ಭಾಗಶ: ಹಾನಿಯಾದರೆ 13055 ಮನೆಗಳ ಸಾಮಗ್ರಿಗಳು ನೀರಿನಲ್ಲಿ ಮುಳುಗಿದವು. 904 ಜಾನುವಾರಗಳ ಜೀವ ಹಾನಿಯಾಗಿದೆ. 154696 ಹೆಕ್ಟೇರ್ ಕೃಷಿ ಮತ್ತು 2492 ಹೆಕ್ಟೇರ್ ತೋಟಗಾರಿಕೆ ಪ್ರದೇಶ ಹಾನಿಯಾಗಿದೆ.
ಕಲಬುರಗಿ ನಗರದಲ್ಲಿಯೇ ರಸ್ತೆಗೆ ಆಗಿರುವ ಹಾನಿಯನ್ನು ಸರಿಪಡಿಸಲು 8246 ಲಕ್ಷ ರೂ. ಬೇಕು ಅಂದಾಜು ಮಾಡಲಾಗಿ. ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಉಡುಪಿ, ಕಾರವಾರದಿಂದ ಬೋಟ್ ತರಿಸಲಾಗಿತ್ತು. ಅಗತ್ಯವಿದ್ದರೆ ಸಂತ್ರಸ್ತರ ರಕ್ಷಣೆಗೆ ಬಳಕೆ ಮಾಡಲು ಬೀದರ್ ವಾಯುನೆಲೆಯಲ್ಲಿ ಹೆಲಿಕಾಪ್ಟರ್ ಸಹ ಸಿದ್ಧಗೊಳಿಸಲಾಗಿತ್ತು.