ಅವಿಸ್ಮರಣೀಯ 2020: ಚಿತ್ರದುರ್ಗದ ವಿವಿ ಸಾಗರಕ್ಕೆ ಹರಿದ ಭದ್ರೆ ನೀರು
ಚಿತ್ರದುರ್ಗ, ಡಿಸೆಂಬರ್ 29: ಮಧ್ಯ ಕರ್ನಾಟಕದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆಯೂ ಕೂಡ ಒಂದಾಗಿದೆ. ಚಿತ್ರದುರ್ಗ ಭಾಗದ ಸುತ್ತ ಮುತ್ತಲಿನ ಪ್ರದೇಶಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಈ ಯೋಜನೆಯನ್ನು ಸರ್ಕಾರ ಜಾರಿಗೆ ಬಂದಿತ್ತು. ಸತತ ಬರಗಾಲಕ್ಕೆ ತುತ್ತಾಗಿ ಕಂಗೆಟ್ಟಿದ್ದ ಚಿತ್ರದುರ್ಗ ಜಿಲ್ಲೆಯ ಜನರು ನೀರಿಲ್ಲದೆ ಪರದಾಡುವಂತಹ ಸ್ಥಿತಿ, ಜನರು ಗುಳೆ ಹೋಗುವ ಪರಿಸ್ಥಿತಿ ಕೂಡ ನಿರ್ಮಾಣವಾಗಿತ್ತು. ಈ ಭಾಗದ ಜನರಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆಯನ್ನು ಜಾರಿಗೆ ತರಲಾಗಿದೆ.
2008 ರಲ್ಲಿ ಈ ಯೋಜನೆ ಜಾರಿಗೆ ಬಂದಿತು. 12,750 ಸಾವಿರ ಕೋಟಿ ವೆಚ್ಚದಲ್ಲಿ, ಭದ್ರಾ ಜಲಾಶಯದಿಂದ ಎರಡನೇ ಪ್ಯಾಕೆಜ್ ನ ಶಾಂತಿಪುರ ಪಂಪ್ ಹೌಸ್ 1, ತರೀಕೆರೆ ಮೂಲಕ, ಪ್ಯಾಕೆಜ್ ಎರಡನೇ ಬೆಟ್ಟದ ತಾವರೆಕೆರೆ ಪಂಪ್ ಹೌಸ್ ನಿಂದ ಹಾಗೂ 7 ಕಿ.ಮೀ. ಅಜ್ಜಂಪುರ ಸುರಂಗಮಾರ್ಗ ಮೂಲಕ ವೈ ಜಂಕ್ಷನ್ ನಿಂದ ಕುಕ್ಕೆಸಮುದ್ರ, ಬಾಲ್ಲಾಳ್ ಸಮುದ್ರ ಹಾಗೂ ಹೊಸದುರ್ಗ ತಾಲ್ಲೂಕಿನ ಕೆಲ್ಲೋಡ್ ಮುಖಾಂತರ ವಿವಿ ಸಾಗರ ನಾಲೆಗೆ ನೀರು ಹರಿಸಲು ಸುಮಾರು 137 ಕಿ.ಮೀ ದೂರ ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. 2008-2009 ರಿಂದ ಈ ಕಾಮಗಾರಿ ಪ್ರಾರಂಭವಾಗಿ ಹಲವಾರು ಕಾರಣಗಳಿಂದ, ಹತ್ತು ವರ್ಷಗಳ ಕಾಲ ಮಂದಗತಿಯಲ್ಲಿ ಸಾಗುತ್ತ ಬಂದಿತ್ತು.
ಅವಿಸ್ಮರಣೀಯ 2020: ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಹೊಡೆತ ಕೊಟ್ಟ ಕೊರೊನಾ
ರಾಜಕೀಯ ಇಚ್ಛಾಶಕ್ತಿ ಕೊರತೆ
ಭದ್ರಾ ಮೇಲ್ದಂಡೆ ಕಾಮಗಾರಿ ಪ್ರಾರಂಭವಾಗಿ ಹತ್ತು ವರ್ಷಗಳು ಕಳೆದರೂ ಕಾಮಗಾರಿ ಮುಗಿಯಲಿಲ್ಲ. ರಾಜಕೀಯ ಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ, ರೈತರ ಉಗ್ರವಾದ ಹೋರಾಟ, ಅಧಿಕಾರಿಗಳ ನಿರ್ಲಕ್ಷ, ಆಗಿನ ಸರ್ಕಾರದ ವೈಫಲ್ಯದಿಂದ ವಿಳಂಬವಾಗಿ ಹತ್ತು ವರ್ಷ ಕಳೆದರೂ ಕಾಮಗಾರಿ ವೇಗವಾಗಿ ಮುಗಿಯಲಿಲ್ಲ. ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸುಳ್ಳು ಹೇಳಿಕೆಗಳ ಮೂಲಕ ಜನರನ್ನು ತಂಡೋಪ ತಂಡವಾಗಿ ಕರೆದುಕೊಂಡು ಅಜ್ಜಂಪುರದ ಸುರಂಗಮಾರ್ಗ ತೋರಿಸಿ ಕಾಮಗಾರಿ ಮುಗಿದು, ಈಗ ನೀರು ಬಂತು.
ಶಾಸಕಿ ಕೆ. ಪೂರ್ಣಿಮಾಗೆ ದೊಡ್ಡ ಸವಾಲು
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಪೂರ್ಣಿಮಾ ಗೆಲುವು ಸಾಧಿಸಿದ ಮೊದಲಿಗೆ ಎದುರಾಗಿದ್ದು, ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆಯಿಂದ ವಿವಿ ಸಾಗರಕ್ಕೆ ನೀರು ಹರಿಸುವ ಕಾರ್ಯ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಅದೇ ಸಮಯದಲ್ಲಿ ಕ್ಷೇತ್ರದಲ್ಲಿ ಮಳೆ ಇಲ್ಲದೆ ಬರಗಾಲ ಆವರಿಸಿತ್ತು. ಕ್ಷೇತ್ರದ ಜನರ ಹಿತ ಕಾಪಾಡಲು ಪಣತೊಟ್ಟು, ಹಿರಿಯೂರು ರೈತರೊಂದಿಗೆ, ಶಾಸಕಿ ಕೆ.ಪೂರ್ಣಿಮಾ, ಸಂಸದ ಎ.ನಾರಾಯಣ ಸ್ವಾಮಿ, ಇತರೆ ಶಾಸಕರು, ಜಿಲ್ಲೆಯ ಮುಖಂಡರು ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ, ಭದ್ರಾ ಅಧಿಕಾರಿಗಳ ಜೊತೆ ಸಭೆ ಕೈಗೊಂಡು, ಬೆಂಗಳೂರು ವಿಶ್ವೇಶ್ವರಯ್ಯ ಜಲ ನಿಗಮ ಎಂಡಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನಡೆಸಿ, ಸಿಎಂ ಬಿಎಸ್ವೈ ಮೇಲೆ ಒತ್ತಡ ತಂದರು. ಚುನಾವಣೆ ಗೆದ್ದ ಬಳಿಕ ಎರಡ್ಮೂರು ವರ್ಷಗಳಲ್ಲಿ ವಿವಿ ಸಾಗರಕ್ಕೆ ನೀರು ಹರಿಸಲು ಶ್ರಮಿಸುತ್ತೇನೆಂದು ಹೇಳಿದ್ದ ಶಾಸಕರು, ಅದರಂತೆ ನೀರು ಹರಿದು ಬರಲು ಕಾರಣರಾದರು.
ರೈಲ್ವೆ ಬ್ರಿಡ್ಜ್ ಸಮಸ್ಯೆ ಬಗೆಹರಿಸಿದ್ದ ಸುರೇಶ್ ಅಂಗಡಿ
ಭದ್ರಾ ಮೇಲ್ದಂಡೆ ಯೋಜನೆಯಿಂದ ವಿವಿ ಸಾಗರಕ್ಕೆ ನೀರು ಹರಿಸಲು ಅಜ್ಜಂಪುರ ಸುರಂಗಮಾರ್ಗ ಪ್ರಮುಖ ಸಮಸ್ಯೆಯಾಗಿತ್ತು. ಚಿತ್ರದುರ್ಗ ಸಂಸದ ಎ. ನಾರಾಯಣ ಸ್ವಾಮಿ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ವಿವಿ ಸಾಗರಕ್ಕೆ ನೀರು ಹರಿಸಲು ತೊಡಕು ಉಂಟಾಗಿದ್ದ ರೈಲ್ವೆ ಬ್ರಿಡ್ಜ್ ಸಮಸ್ಯೆ ಬಗೆಹರಿಸಿ, ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ನೀರು ಹರಿಸಲು ಸಂಸದರು ಶ್ರಮಿಸಿದರು.
ಬರಗಾಲಕ್ಕೆ ತುತ್ತಾದ ಹಿರಿಯೂರು
ಕಾಲ ಕಾಲಕ್ಕೆ ಮಳೆ ಇಲ್ಲದೆ, ಇತ್ತ ವಿವಿ ಸಾಗರ ಜಲಾಶಯಕ್ಕೆ ಮಳೆ ನೀರು ಬಾರದ ಹಿನ್ನೆಲೆಯಲ್ಲಿ ಡ್ಯಾಂ ನೀರು ಇಲ್ಲ ಡೆಡ್ ಸ್ಟೋರೆಜ್ ತಲುಪಿತ್ತು. ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ಜಾನುವಾರುಗಳು ನೀರು, ಮೇವು ಇಲ್ಲದೆ ಮರಣ ಹೊಂದಿದ್ದವು. ಸಾವಿರಾರು ಎಕರೆಯಲ್ಲಿ ತೆಂಗು, ಅಡಿಕೆ, ಬಾಳೆ ಇತರೆ ತೋಟಗಳು ಒಣಗಿ ಹೋಗಿದ್ದವು. ಹಿರಿಯೂರು ನಗರ ಮತ್ತು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ಕುಡಿಯುವ ನೀರು ಸರಬರಾಜು ಮಾಡಲು ಟ್ಯಾಂಕರ್ ಮೊರೆ ಹೋಗಲಾಯಿತು. ರೈತರ ಜಮೀನುಗಳಲ್ಲಿ ಅಂತರ್ಜಲ ಮಟ್ಟ ಕುಸಿದು ತಾಲೂಕಿನಲ್ಲಿ ತೀವ್ರ ಬರ ಉಂಟಾಗಿ ಸಮಸ್ಯೆ ಉಲ್ಬಣಗೊಂಡಿತ್ತು.
ಭದ್ರಾದಿಂದ ವಿವಿ ಸಾಗರಕ್ಕೆ 2 ಟಿಎಂಸಿ ನೀರು
ಚಿತ್ರದುರ್ಗ ಜಿಲ್ಲೆಯ ಏಕೈಕ ಜಲಾಶಯವಾಗಿರುವ ವಾಣಿವಿಲಾಸ ಸಾಗರ ಜಲಾಶಯಕ್ಕೆ 5 ಟಿಎಂಸಿ ನೀರು ಬಿಡಬೇಕು ಎಂದು ಮೊದಲಬಾರಿಗೆ ಅನುಮೊದನೆ ದೊರೆಯಿತು. ಬದಲಾದ ಸನ್ನಿವೇಶದಲ್ಲಿ 5 ಟಿಎಂಸಿ ಬದಲಿಗೆ 2 ಟಿಎಂಸಿ ನೀರಿಗೆ ಬಂದು ನಿಂತಿದೆ. 2020 ನೇ ಸಾಲಿನ ಅಕ್ಟೋಬರ್ ತಿಂಗಳಿಂದ ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ಎರಡು ಟಿಎಂಸಿ ನೀರು ಹರಿಸಲು ಚಾಲನೆ ನೀಡಲಾಯಿತು. ಇದೀಗ ಪ್ರತಿದಿನ 500 ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಇಂದಿನ ವಿವಿ ಸಾಗರ ನೀರಿನ ಮಟ್ಟ 105 ಅಡಿ ಸಮೀಪದಲ್ಲಿದೆ.
ಹಿರಿಯೂರಿನ ಜೀವನಾಡಿ ವಿವಿ ಸಾಗರ
ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾದ ಹಿರಿಯೂರಿನ ವಿವಿ ಸಾಗರ ಬರಪೀಡಿತ ಪ್ರದೇಶಗಳಿಗೆ ನೀರುಣಿಸುವ ಜಲಾಶವಾಗಿದ್ದು, ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ಡಿಆರ್ ಡಿಒಗೆ ಕುಡಿಯವ ನೀರನ್ನು ಪೂರೈಸಲಾಗುತ್ತಿದೆ. ಈ ಹಿಂದೆ ಕೃಷಿ ಚಟುವಟಿಕೆಗಳಿಗೆ ವಿವಿ ಸಾಗರದ ನೀರಿನಿಂದ ಕಬ್ಬು, ಭತ್ತ, ರಾಗಿ, ಹತ್ತಿ, ತೆಂಗು, ಅಡಿಕೆ, ಬಾಳೆ ಮತ್ತಿತರರ ಬೆಳೆಗಳನ್ನು ಬೆಳೆಯುತ್ತಿದ್ದರಿಂದ ಹಿರಿಯೂರು ಮಲೆನಾಡಿನಂತೆ ಕಂಗೊಳಿಸುತಿತ್ತು. ನಂತರ ಹಿರಿಯೂರು ಬರದ ನಾಡಾಗಿತ್ತು. ಇದೀಗ ಬರದಿಂದ ಮತ್ತೆ ಚಿಗುರೊಡೆದು ಹಚ್ಚಹಸಿರಿನಿಂದ ಕೂಡಿದೆ.