ಉಕ್ರೇನ್ ಯುದ್ಧ: ಹಲವು ದೇಶಗಳಿಗೆ ಗೋಧಿ ರಫ್ತಿನತ್ತ ಭಾರತದ ಚಿತ್ತ
ಉಕ್ರೇನ್ ಮೇಲೆ ರಷ್ಯಾವು ದಾಳಿ ಮಾಡಿದ ಬಳಿಕ ಹಲವಾರು ರಾಷ್ಟ್ರಗಳಲ್ಲಿ ಬಿಕ್ಕಟ್ಟು ಉಂಟಾಗಿದೆ. ವಿಶ್ವದ ಗೋಧಿ ರಫ್ತಿನಲ್ಲಿ ರಷ್ಯಾ ಮತ್ತು ಉಕ್ರೇನ್ ಸುಮಾರು ಶೇಕಡ 25ರಷ್ಟು ಪಾಲು ಹೊಂದಿದೆ. ಆದರೆ ರಷ್ಯಾದ ಉಕ್ರೇನ್ ಆಕ್ರಮಣ ಬೆನ್ನಲ್ಲೇ ಮಾಸ್ಕೋ ವಿರುದ್ಧದ ನಿರ್ಬಂಧಗಳಿಂದಾಗಿ ಹಲವಾರು ದೇಶಗಳಲ್ಲಿ ಗೋಧಿ ಕೊರತೆ ಕಾಣಿಸಿಕೊಂಡಿದೆ. ರಷ್ಯಾ, ಉಕ್ರೇನ್ನಿಂದ ಗೋಧಿಯನ್ನು ಪಡೆಯುತ್ತಿದ್ದ ಅನೇಕ ದೇಶಗಳು ಈಗ ಪರ್ಯಾಯ ವ್ಯವಸ್ಥೆಯತ್ತ ಮುಖಮಾಡಿದೆ.
ಚೀನಾದ ನಂತರ ಅತಿ ಹೆಚ್ಚು ಗೋಧಿ ಉತ್ಪಾದನೆ ಮಾಡುವ ದೇಶ ಭಾರತ. ಭಾರತವು ಈಗ ಹಲವಾರು ದೇಶಗಳಿಗೆ ಗೋಧಿಯನ್ನು ರಫ್ತು ಮಾಡಲು ಮುಂದಾಗಿದೆ ಎಂದು ವರದಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿಯ ರಫ್ತಿನ ಮೂಲಕ ಹೆಚ್ಚಿನ ಆದಾಯ ಸಂಗ್ರಹ ಮಾಡಲು ಸರ್ಕಾರ ಯೋಜನೆ ಮಾಡಿದೆ.
ಉಕ್ರೇನ್ ಬಂದರಿನ ಮೇಲೆ ಬಾಂಬ್ ದಾಳಿ: ಕೀವ್ ಬಳಿ ಸಾಮೂಹಿಕ ಸಮಾಧಿ
ಈ ನಡುವೆ ಆಹಾರ ಭದ್ರತಾ ಪ್ರಚಾರಕರು ಸ್ಥಳೀಯ ಬೆಲೆಗಳಿಗೆ ಆದ್ಯತೆ ನೀಡುವ ಅಗತ್ಯವನ್ನು ಒತ್ತಿ ಹೇಳುತ್ತಾರೆ. ರಫ್ತು ಪ್ರಮಾಣವನ್ನು ನಿರ್ಧರಿಸುವ ಮೊದಲು ದೇಶೀಯ ಬಳಕೆಗೆ ಸಾಕಷ್ಟು ಸರಬರಾಜುಗಳನ್ನು ಖಚಿತಪಡಿಸಿಕೊಳ್ಳಬೇಕು ಎಂಬ ಸಲಹೆಯನ್ನು ಕೂಡಾ ತಜ್ಞರು ನೀಡಿದ್ದಾರೆ.
ರಂಜಾನ್ ಕದಿರೊವ್ ಯಾರು? ಉಕ್ರೇನ್ ಯುದ್ಧಕ್ಕೆ ಎಂಟ್ರಿ ಕೊಟ್ರೆ ಏನಾದೀತು?
ಯಾವ ದೇಶದಿಂದ ಎಷ್ಟು ರಫ್ತು?
ರಷ್ಯಾ ಮತ್ತು ಉಕ್ರೇನ್ 2017 ಮತ್ತು 2021 ರ ನಡುವೆ ಕ್ರಮವಾಗಿ 183 ಮತ್ತು 91 ಮಿಲಿಯನ್ ಟನ್ ಗೋಧಿಯನ್ನು ರಫ್ತು ಮಾಡಿದ್ದರೆ, ಭಾರತವು ಅದರ ಉತ್ಪಾದನೆಯ ಒಂದು ಸಣ್ಣ ಭಾಗವನ್ನು ಅಥವಾ ಈ ಅವಧಿಯಲ್ಲಿ ಕೇವಲ 12.6 ಮಿಲಿಯನ್ ಟನ್ ಗೋಧಿಯನ್ನು ರಫ್ತು ಮಾಡಿದೆ. ಐರೋಪ್ಯ ಒಕ್ಕೂಟ 157 ಮಿಲಿಯನ್ ಟನ್, ಯುಎಸ್ 125 ಮಿಲಿಯನ್ ಟನ್, ಕೆನಡಾ 112 ಮಿಲಿಯನ್ ಟನ್, ಆಸ್ಟ್ರೇಲಿಯಾ 83 ಮಿಲಿಯನ್ ಟನ್ ಗೋಧಿಯನ್ನು ರಫ್ತು ಮಾಡಿದೆ. ಈ ಅವಧಿಯಲ್ಲಿ ಎರಡನೇ ಅತಿ ಹೆಚ್ಚು ಗೋಧಿ ಪೂರೈಕೆಯನ್ನು (ಉತ್ಪಾದನೆ, ಅಸ್ತಿತ್ವದಲ್ಲಿರುವ ದಾಸ್ತಾನುಗಳು ಮತ್ತು ಆಮದು ಸೇರಿದಂತೆ) ಭಾರತವು - 613 ಮಿಲಿಯನ್ ಟನ್ಗಳು ಪೂರೈಕೆಯಲ್ಲಿ ಕೇವಲ ಶೇಕಡ 2 ರಫ್ತು ಮಾಡಿದೆ. ಸುಮಾರು ಶೇಕಡ 80ರಷ್ಟು ದೇಶದಲ್ಲೇ ಬಳಕೆ ಮಾಡಲಾಗಿದೆ. ಉಳಿದವುಗಳನ್ನು ಸಂಗ್ರಹಿಸಲಾಗಿದೆ. ಇದಕ್ಕೆ ವಿರುದ್ಧವಾಗಿ, ಇತರ ಪ್ರಮುಖ ರಫ್ತುದಾರರು ತಮ್ಮ ಸಂಗ್ರಹದ ಅಧಿಕ ಪ್ರಮಾಣವನ್ನು ಮಾರಾಟ ಮಾಡಿದೆ. ಉದಾಹರಣೆಗೆ, 2017-2021 ಅವಧಿಯಲ್ಲಿ ಯುಎಸ್ ತನ್ನ 404 ಮಿಲಿಯನ್ ಟನ್ ಉತ್ಪಾದನೆಯಲ್ಲಿ ಶೇಕಡ 31 ರಫ್ತು ಮಾಡಿದೆ. ಕೆನಡಾ ತನ್ನ 186 ಮಿಲಿಯನ್ ಟನ್ ಉತ್ಪಾದನೆಯಲ್ಲಿ ಶೇಕಡ 60.5 ರಫ್ತು ಮಾಡಿದೆ. ಆಸ್ಟ್ರೇಲಿಯಾ ತನ್ನ 146 ಉತ್ಪಾದನೆಯಲ್ಲಿ ಶೇಕಡ 57ರಷ್ಟು ರಫ್ತು ಮಾಡಿದೆ.
ಜಾಗತಿಕ ಮಾರುಕಟ್ಟೆ ಹೇಗಿದೆ?
ಆಫ್ರಿಕಾ, ಪಶ್ಚಿಮ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಅನೇಕ ದೇಶಗಳು ರಷ್ಯಾದ ಮತ್ತು ಉಕ್ರೇನ್ ಗೋಧಿಯನ್ನು ಹೆಚ್ಚು ಅವಲಂಬಿಸಿವೆ. ಈಜಿಪ್ಟ್, ಗೋಧಿಯ ಅತಿ ದೊಡ್ಡ ಆಮದುದಾರ ರಾಷ್ಟ್ರವಾಗಿದೆ. ಪೂರ್ವ ಯುರೋಪಿಯನ್ ನೆರೆಹೊರೆಯವರಿಂದ ಶೇಕಡ 93ರಷ್ಟು ಗೋಧಿಯನ್ನು ಆಮದು ಮಾಡುತ್ತದೆ. ಎರಡನೇ ಅತಿ ದೊಡ್ಡ ಆಮದುದಾರ ಇಂಡೋನೇಷ್ಯಾವು ಉಕ್ರೇನ್ ಹಾಗೂ ರಷ್ಯಾದಿಂದ ಶೇಕಡ 30ರಷ್ಟು ಅವಲಂಬನೆಯನ್ನು ಹೊಂದಿದೆ. ಆಫ್ರಿಕನ್ ರಾಷ್ಟ್ರಗಳಾದ ಸುಡಾನ್ (80% ರಿಲಯನ್ಸ್), ಟಾಂಜಾನಿಯಾ (64%), ಲಿಬಿಯಾ (53%), ಟುನೀಶಿಯಾ (52%), ಮತ್ತು ಲೆಬನಾನ್ (77%), ಯೆಮೆನ್ (50%) ಮತ್ತು ಯು.ಎ.ಇ. (42%) ಸಹ ಈಗ ಯುದ್ಧದಲ್ಲಿರುವ ಎರಡು ರಾಷ್ಟ್ರಗಳ ಸರಬರಾಜುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಭಾರತವು ಈಗ ಈ ರಾಷ್ಟ್ರಗಳಲ್ಲಿ ಗೋಧಿಯನ್ನು ರಫ್ತು ಮಾಡುವತ್ತ ಗಮನಹರಿಸುತ್ತಿದೆ ಎಂದು ಅಪೆಡಾ (ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷ ಡಾ. ಮಾದಯ್ಯನ್ ಅಂಗಮುತ್ತು ಹೇಳಿದ್ದಾರೆ. "ನಮ್ಮ ಗಮನ ಪ್ರಮುಖವಾಗಿ ಈಜಿಪ್ಟ್, ಟರ್ಕಿ, ನೈಜೀರಿಯಾ, ಅಲ್ಜೀರಿಯಾ, ಮಧ್ಯಪ್ರಾಚ್ಯ, ಇಂಡೋನೇಷ್ಯಾ, ವಿಯೆಟ್ನಾಂ, ಶ್ರೀಲಂಕಾ, ಬಾಂಗ್ಲಾದೇಶ, ಥೈಲ್ಯಾಂಡ್, ಫಿಲಿಪೈನ್ಸ್, ಮೊರಾಕ್ಕೊ ಮತ್ತು ತಾಂಜಾನಿಯಾದ ಮೇಲೆ ಇದೆ," ಎಂದು ಕೂಡಾ ಹೇಳಿದ್ದಾರೆ.
ಭಾರತದ ಅಗತ್ಯಕ್ಕೆ ಮೊದಲ ಆಧ್ಯತೆ ನೀಡಲು ಆಗ್ರಹ
"ಭಾರತದಲ್ಲಿ ಹೆಚ್ಚಾಗಿ ಗೋಧಿಯನ್ನು ಬಳಕೆ ಮಾಡಲಾಗುತ್ತದೆ. ಆದ್ದರಿಂದಾಗಿ ಆಂತರಿಕ ಬಳಕೆಗಾಗಿ ಧಾನ್ಯದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಭಾರತ ಸರ್ಕಾರಕ್ಕೆ ಹೆಚ್ಚಿನ ಆದ್ಯತೆಯಾಗಿರಬೇಕು ಮತ್ತು ರೈತರಿಗೆ ಸಮರ್ಪಕವಾಗಿ ಪರಿಹಾರವನ್ನು ಖಚಿತಪಡಿಸಿಕೊಳ್ಳಬೇಕು ಎಂದು ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲಿಬರಲ್ ಸ್ಟಡೀಸ್ನ ಸಹಾಯಕ ಪ್ರಾಧ್ಯಾಪಕರಾದ ದೀಪಾ ಸಿನ್ಹಾ ಹೇಳಿದ್ದಾರೆ. "ಎಲ್ಲಾ ಭಾರತೀಯರಿಗೆ ಆಹಾರ ಭದ್ರತೆಯ ಅವಶ್ಯಕತೆಗಳನ್ನು ಪೂರೈಸುವುದು ಸರ್ಕಾರದ ಮೊದಲ ಆದ್ಯತೆಯಾಗಿರಬೇಕು" ಎಂದು ಆಹಾರದ ಹಕ್ಕಿನ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದ ಡಾ. ಸಿನ್ಹಾ ಹೇಳಿದ್ದಾರೆ. "ಸರ್ಕಾರವು ಸ್ಥಳೀಯ ಬಳಕೆಯ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ಈ ಕ್ರಮವನ್ನು ಯೋಜಿಸಬೇಕು. ಗೋಧಿಯ ಬಂಪರ್ ಬೆಳೆ ನಿರೀಕ್ಷಿಸಲಾಗಿದೆ, ಆದ್ದರಿಂದ ಸರ್ಕಾರವು ಅದರ ರಫ್ತಿಗೆ ಮುಂದಾಗಬಹುದು. ಆದರೆ ಸ್ಥಳೀಯ ಅಗತ್ಯದ ಪೂರೈಕೆಗೆ ಮೊದಲ ಆದ್ಯತೆ ಇರಲಿ," ಎಂದಿದ್ದಾರೆ.
ಕೃಷಿ ಆದಾಯ ಹೆಚ್ಚಳಕ್ಕೆ ಒತ್ತು ನೀಡಲು ಮನವಿ
ಭಾರತೀಯ ಸುಪ್ರೀಂ ಕೋರ್ಟ್ನ ಆಯುಕ್ತರ ಮಾಜಿ ಪ್ರಧಾನ ಸಲಹೆಗಾರ ಬಿರಾಜ್ ಪಟ್ನಾಯಕ್, 2014 ರಲ್ಲಿ ವಿಶ್ವ ವಾಣಿಜ್ಯ ಸಂಸ್ಥೆಯ ಮಂತ್ರಿಮಂಡಲದಲ್ಲಿ ಅಳವಡಿಸಿಕೊಂಡ ಶಾಂತಿ ಷರತ್ತು ಭಾರತವು ಆಹಾರ ಧಾನ್ಯಗಳನ್ನು ರಫ್ತು ಮಾಡುವುದನ್ನು ತಡೆಯುವುದಿಲ್ಲ ಎಂದು ಉಲ್ಲೇಖ ಮಾಡಿದ್ದಾರೆ. "ಭಾರತದಲ್ಲಿ ಸ್ಟಾಕ್ ಇದೆ. ಜಾಗತಿಕ ಬೆಲೆಗಳನ್ನು ಎಷ್ಟು ಸಾಧ್ಯವೋ ಅಷ್ಟು ಸ್ಥಿರಗೊಳಿಸಲು ಭಾರತವು ತನ್ನ ಗೋಧಿ ರಫ್ತುಗಳನ್ನು ಹೆಚ್ಚಿಸಬೇಕು," ಎಂದು ಕೂಡಾ ಹೇಳಿದ್ದಾರೆ. "ಗೋಧಿಗಾಗಿ ರಷ್ಯಾ ಮತ್ತು ಉಕ್ರೇನ್ ಅನ್ನು ಅವಲಂಬಿಸಿರುವ ದೇಶಗಳು ಪರ್ಯಾಯ ಮೂಲವನ್ನು ಹುಡುಕುತ್ತಿವೆ. ಈ ಸಂದರ್ಭದಲ್ಲಿ ಭಾರತ ರಫ್ತು ಮಾಡಬೇಕು. ಎಂಎಸ್ಪಿಯಲ್ಲಿ ಬೆಳೆದ ಎಲ್ಲಾ ಗೋಧಿಯನ್ನು ಸರ್ಕಾರ ಖರೀದಿಸುವ ಮೂಲಕ ಈ ಅವಕಾಶವನ್ನು ಬಳಸಿಕೊಳ್ಳಬೇಕು. ಇದು ಭಾರತೀಯ ರೈತರ ಹಿತಾಸಕ್ತಿಗಳನ್ನು ಪೂರೈಸುತ್ತದೆ," ಎಂದು ಅಭಿಪ್ರಾಯಪಟ್ಟಿದ್ದಾರೆ.