ಗಡಿಪಾರು ಆದೇಶ ಬಂದರೂ ಮಲ್ಯ ಭಾರತಕ್ಕೆ ಸದ್ಯಕ್ಕಂತೂ ಬರಲ್ಲ!
ಬೆಂಗಳೂರು, ಡಿಸೆಂಬರ್ 10: ಭಾರತದ ವಿವಿಧ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ರು ಸಾಲ ಮಾಡಿ, ಲಂಡನ್ನಿನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ವಿಚಾರಣೆಗಾಗಿ ಕರೆ ತರುವ ಯತ್ನದಲ್ಲಿ ತನಿಖಾ ಸಂಸ್ಥೆಗಳಿಗೆ ಯಶ ಸಿಕ್ಕಿದೆ. ಆದರೆ, ಲಂಡನ್ನಿನ ಕೋರ್ಟಿನಿಂದ ಆದೇಶ ಬಂದರೂ ಮಲ್ಯ ಅವರು ಭಾರತಕ್ಕೆ ಸದ್ಯಕ್ಕಂತೂ ಬರುವ ಸಾಧ್ಯತೆಗಳಿಲ್ಲ.
ಕಾನೂನು ತಜ್ಞರ ಪ್ರಕಾರ, ಸುಮಾರು 13 ಸಾವಿರ ಕೋಟಿ ರು ಗೂ ಅಧಿಕ ಮೊತ್ತವನ್ನು ಪಾವತಿಸಬೇಕಿರುವ ಮಲ್ಯ ಅವರು ಅಸಲು ಪಾವತಿಸಲು ಸಿದ್ಧ ಎಂದು ಹೇಳಿದ್ದಾರೆ. ಹಣ ಹಿಂತಿರುಗಿಸಿಲ್ಲ ಎಂಬ ಕಾರಣಕ್ಕೆ ವಿಚಾರಣೆ ಹಾಜರಾಗಬೇಕಿರುವ ಮಲ್ಯ ಅವರು ಅಸಲು ಕಟ್ಟಲು ಸಿದ್ಧರಾಗಿರುವುದರಿಂದ ಗಡಿಪಾರು ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಉದ್ಯಮಿ ವಿಜಯ್ ಮಲ್ಯ ಗಡಿಪಾರಿಗೆ ಯುಕೆ ಜಡ್ಜ್ ಆದೇಶ
ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ಪ್ರತಿ ಬ್ರಿಟನ್ ಗೃಹ ಕಾರ್ಯದರ್ಶಿಗೆ ತಲುಪುತ್ತದೆ. ಅವರು ಬ್ರಿಟಿಷ್ ಸರ್ಕಾರದ ಪರವಾಗಿ ಕಾರ್ಯದರ್ಶಿ ಗಡಿಪಾರು ಆದೇಶ ಹೊರಡಿಸಿ, ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ. ಆದೇಶ ನೀಡಿದ ಮೇಲೆ ಮಾತ್ರ ಗಡಿಪಾರಿನ ಸಾಧ್ಯಸಾಧ್ಯತೆ ಬಗ್ಗೆ ಯೋಚಿಸಬೇಕಾಗುತ್ತದೆ.
ಅತ್ಯಂತ ಪುರಾತನ ಕಾನೂನು ಪಾಲಕ ರಾಷ್ಟ್ರ ಇಂಗ್ಲೆಂಡಿಗೂ ಮಲ್ಯರನ್ನು ಭಾರತಕ್ಕೆ ಕಳಿಸಲು ಕಾನೂನಿನ ತೊಡಕು ಎದುರಾಗಿದೆ. ಸುಮ್ಮನೆ ಗಡಿಪಾರು ಮಾಡುವುದು ಯುಕೆ ಸರ್ಕಾರಕ್ಕೂ ಬೇಕಿಲ್ಲ. ಎಲ್ಲದ್ದಕ್ಕೂ ಎಂಎಲ್ ಎಟಿ ಒಪ್ಪಂದ ಇಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಏನಿದು ಎಂಎಲ್ ಎಟಿ ಒಪ್ಪಂದ
A mutual legal assistance treaty (MLAT) ಎಂದು ಕರೆಯುವ ಒಪ್ಪಂದಕ್ಕೆ ಭಾರತ ಮತ್ತು ಇಂಗ್ಲೆಂಡ್ 1995ರಲ್ಲಿ ಸಹಿ ಮಾಡಿವೆ. ಈ ಪರಸ್ಪರ ಕಾನೂನು ಸಹಕಾರ ಒಪ್ಪಂದದ ಪ್ರಕಾರ ಎರಡು ದೇಶಕ್ಕೆ ಬೇಕಾದ ವ್ಯಕ್ತಿಯನ್ನು ಪರಸ್ಪರ ಹಸ್ತಾಂತರ ಮಾಡಿಕೊಳ್ಳಲು ಅವಕಾಶ ಇದೆ. ಇಲ್ಲಿ ತನಕ ಈ ಒಪ್ಪಂದ ಬಳಸಿಕೊಂಡು ಒಬ್ಬರನ್ನು ಮಾತ್ರ ಇಂಗ್ಲೆಂಡಿನಿಂದ ಭಾರತಕ್ಕೆ ಕರೆಸಿಕೊಳ್ಳಲಾಗಿದೆ. ವಿನುಭಾಯಿ ಪಟೇಲ್ ಅವರು ಗಡಿಪಾರು ಮಾಡಿದರೂ ನನ್ನ ಅಭ್ಯಂತರವಿಲ್ಲ ಎಂದಿದ್ದರಿಂದ ಕೆಲಸ ಸುಲಭವಾಗಿತ್ತು.
ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಕರೆ ತರಲು ಇಲ್ಲಿನ ತನಿಖಾ ಸಂಸ್ಥೆಗಳಿಗೆ ಕನಿಷ್ಟ 10 ರಿಂದ 15 ವರ್ಷಗಳಾದರೂ ಬೇಕು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಲಂಡನ್ನಿನಲ್ಲಿ ಮಲ್ಯ ಅಪರಾಧಿಯಾಗಿರಬೇಕು
ಎಂಎಲ್ಎಟಿ ಒಪ್ಪಂದದ ಪ್ರಕಾರ ಒಂದು ವೇಳೆ ಒಂದು ದೇಶ ಮತ್ತೊಂದು ದೇಶಕ್ಕೆ ವ್ಯಕ್ತಿಯನ್ನು ಹಸ್ತಾಂತರ ಮಾಡಬೇಕಿದ್ದರೆ ಆ ವ್ಯಕ್ತಿ ಎರಡು ದೇಶದ ಲೆಕ್ಕದಲ್ಲಿ ಅಪರಾಧಿಯಾಗಿರಬೇಕು. ಆದರೆ ಮಲ್ಯ ಸದ್ಯ ಭಾರತದ ಲೆಕ್ಕದಲ್ಲಿ ಮಾತ್ರ ಅಪರಾಧಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರ ಕಸ್ಟಡಿಯಲ್ಲಿದ್ದರಿಂದ ಭಾರತ ತನಿಖಾ ಸಂಸ್ಥೆಗಳಿಗೆ ಮಲ್ಯರನ್ನು ಕರೆತರಲು ಸುಲಭ ಮಾರ್ಗ ಸಿಕ್ಕ ಖುಷಿ ಉಂಟಾಗಿತ್ತು. ನಂತರ, ಜಾಮೀನು ಸಿಕ್ಕಿದ್ದರಿಂದ ಈಗ ಮತ್ತೆ ಎಲ್ಲವೂ ವಿಳಂಬವಾಗಿತ್ತು. ಈಗ ಗಡಿಪಾರು ಮಾಡಲು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ನೀಡಿದೆ. ಆದೇಶ ಪಾಲನೆಗೂ ಒಪ್ಪಂದಕ್ಕೆ ತಿದ್ದುಪಡಿಯಾಗಬೇಕಿದೆ.
ಮಲ್ಯ ಅವರ ಮುಂದಿನ ನಡೆಯೇನು?
ಮಲ್ಯ ಅವರನ್ನು ಗಡಿಪಾರು ಮಾಡಲು ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ನೀಡಿದೆ. ಈಗ ಮಲ್ಯ ಅವರು ಬ್ರಿಟಿಷ್ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಬಹುದು. ಯುಕೆ ಗೃಹ ಕಾರ್ಯದರ್ಶಿಗಳಿಗೆ ಮನವಿ ಮಾಡಬಹುದು ಅಥವಾ ಸುಪ್ರೀಂಕೋರ್ಟ್ ಮೊರೆ ಹೊಕ್ಕಬಹುದು.
ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸಲು 14 ದಿನಗಳ ಕಾಲ ಅವಧಿ ಇದೆ. ಮೇಲ್ಮನವಿ ಸಲ್ಲಿಸದಿದ್ದರೆ, ಗೃಹ ಕಾರ್ಯದರ್ಶಿಗಳು ಸರ್ಕಾರದ ಪರವಾಗಿ ಗಡಿಪಾರು ಆದೇಶವನ್ನು ಹೊರಡಿಸಬಹುದು. ಅದೇಶ ಬಂದ 28 ದಿನಗಳ ಒಳಗೆ ಮಲ್ಯ ಬ್ರಿಟನ್ ತೊರೆಯಬೇಕು.ಟೈಗರ್ ಹನೀಫ್ ಪ್ರಕರಣದ ಉಲ್ಲೇಖ
1993ರ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ಟೈಗರ್ ಹನೀಫ್ ನನ್ನು ಹಸ್ತಾಂತರಿಸುವ ಪ್ರಕರಣ ಇನ್ನು ನೆನಗುದಿಗೆ ಬಿದ್ದಿದೆ. 2013ರಿಂದ ಈ ಬಗ್ಗೆ ಹೆಚ್ಚಿನ ಬೆಳವಣಿಗೆಯಾಗಿಲ್ಲ. ಬ್ರಿಟನ್ನಿನ ಗೃಹ ಕಾರ್ಯದರ್ಶಿಗಳು ಇನ್ನೂ ಗಡಿಪಾರು ಆದೇಶ ಹೊರಡಿಸಿಲ್ಲ. ಈಗ ಯುರೋಪಿನ ಮಾನವ ಹಕ್ಕುಗಳ ನ್ಯಾಯಾಲಯಕ್ಕೆ ಟೈಗರ್ ಹನೀಫ್ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾನೆ. ಇದೆ ಪ್ರಕರಣವನ್ನು ಉಲ್ಲೇಖಿಸಿ, ಸ್ಥಳೀಯ ನ್ಯಾಯಾಲಯದಲ್ಲಿ ಮಲ್ಯ ಪರ ವಕೀಲರು ವಾದಿಸಬಹುದಾಗಿದೆ.
ಯುಕೆಯಲ್ಲಿ ಭಾರತದ ಹಸ್ತಾಂತರ ಪ್ರಕರಣಗಳು
ಯುಕೆಯಿಂದ ಹಸ್ತಾಂತರ ಪ್ರಕರಣದ ವಿಷಯದಲ್ಲಿ ಭಾರತಕ್ಕೆ ಇನ್ನೂ ಯಶಸ್ಸು ಸಿಕ್ಕಿಲ್ಲ. 131ಕ್ಕೂ ಅಧಿಕ ಹಸ್ತಾಂತರ ಮನವಿಗಳನ್ನು ಭಾರತ ಮಾಡಿದೆ. ಆದರೆ, ಎಲ್ಲವೂ ರಾಜಕೀಯ ಪ್ರೇರಿತ, ಪೊಲೀಸ್ ಅಥವಾ ತನಿಖಾಧಿಕಾರಿಗಳ ಹಿಂಸೆ ಮುಂತಾದ ಕಾರಣದಿಂದ ಮನವಿಗಳು ವಿಳಂಬವಾಗಿವೆ ಕೆಲವು ತಿರಸ್ಕೃತಗೊಂಡಿವೆ.
ಇದೇ ರೀತಿ ಕಾರಣ ನೀಡಿ, ಲಲಿತ್ ಮೋದಿ ಕೂಡಾ ಗಡಿಪಾರು ತಪ್ಪಿಸಿಕೊಂಡು ಲಂಡನ್ನಿನಲ್ಲೆ ನೆಲೆಸಲು ಸಾಧ್ಯವಾಗಿದೆ. ಟೀ ಸೀರಿಸ್ ನ ಗುಲ್ಶನ್ ಕುಮಾರ್ ಅವರ ಕೊಲೆ ಕೇಸಿನಲ್ಲಿ ಸಿಕ್ಕಿಬಿದ್ದಿದ್ದ ನದೀಮ್ ಅವರನ್ನು ಭಾರತಕ್ಕೆ ಕರೆ ತರಲು ಆಗಲಿಲ್ಲ. ಕೊನೆಗೆ ಅವರು ಪ್ರಕರಣದಿಂದ ಖುಲಾಸೆಗೊಂಡರು.