ಮಧುಚಂದ್ರಕ್ಕೆ ಭಾರತಕ್ಕೆ ಬಂದು, ರೈಲು ಬುಕ್ ಮಾಡಿ ಸುದ್ದಿಯಾದ ದಂಪತಿ
ಮಧುಚಂದ್ರವನ್ನು ಬಹಳ ಕಾಲ ನೆನಪಿಟ್ಟುಕೊಳ್ಳುವಂಥ ಸ್ಥಳಕ್ಕೆ ಹೋಗಬೇಕು ಎಂಬುದು ನವ ವಿವಾಹಿತರ ಉದ್ದೇಶವಾಗಿರುತ್ತದೆ. ಅಷ್ಟೇ ಅಲ್ಲ, ಬಾಳಸಂಗಾತಿಗೆ ಅಚ್ಚರಿ ಪಡಿಸುವಂಥ ಉಡುಗೊರೆ ನೀಡಬೇಕು ಅನ್ನೋ ಗುರಿಯೂ ಇರಬಹುದು. ಯುನೈಟೆಡ್ ಕಿಂಗ್ ಡಮ್ ನಿಂದ ಭಾರತಕ್ಕೆ ಮಧುಚಂದ್ರಕ್ಕೆ ಬಂದ ಗ್ರಹಾಮ್ ವಿಲಿಯಮ್ ಲಿನ್ ಹಾಗೂ ಸಿಲ್ವಿಯಾ ಪ್ಲಾಸಿಕ್ ಅಂಥ ಪ್ರಯತ್ನ ಮಾಡಿದ್ದಾರೆ.
ತಮಿಳುನಾಡಿನ ನೀಲಗಿರಿ ಮೌಂಟನ್ ರೈಲ್ವೆ ಯುನೆಸ್ಕೋದ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ದಕ್ಷಿಣ ರೈಲ್ವೆಯ ಸೇಲಂ ವಿಭಾಗದಲ್ಲಿ ಶುಕ್ರವಾರ ನೀಲಗಿರಿ ಮೌಂಟನ್ ರೈಲ್ವೆಯ ಚಾರ್ಟರ್ಡ್ ಸೇವೆ ಆರಂಭಿಸಿದ್ದು, ಅದರ ಮೊದಲ ಪ್ರಯಾಣಿಕರಾಗಿ ಈ ದಂಪತಿ ಪ್ರಯಾಣ ಮಾಡಿದ್ದಾರೆ. ಈ ದಂಪತಿ ಐಆರ್ ಸಿಟಿಸಿಯಿಂದ ತಮಗಾಗಿಯೇ ಇಡೀ ರೈಲು ಬುಕ್ ಮಾಡಿದ್ದಾರೆ.
ವಿಶೇಷ ಪ್ರವಾಸ ಪ್ಯಾಕೇಜ್ ಘೋಷಿಸಿದ ಭಾರತೀಯ ರೈಲ್ವೆ
ಮೆಟ್ಟುಪಾಳ್ಯಂನಿಂದ ಊಟಿ ತನಕ 48 ಕಿಲೋಮೀಟರ್ ದೂರವಿದೆ (ಒಂದು ಕಡೆಗೆ). ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್ (ಐಆರ್ ಸಿಟಿಸಿ) ನಿಂದ ಬುಕ್ ಮಾಡಿದ್ದು, 2.5 ಲಕ್ಷ ರುಪಾಯಿ ಪಾವತಿಸಿದ್ದರು. ಮೂರು ಬೋಗಿಯ ರೈಲಿನಲ್ಲಿ 143 ಸೀಟ್ ಸಾಮರ್ಥ್ಯವಿದೆ. ಪ್ರಶಾಂತ- ಅದ್ಭುತ ಅನುಭವ ನೀಡುವ ನೀಲಗಿರಿ ಬೆಟ್ಟದಲ್ಲಿ ಇಬ್ಬರೇ ಪಯಣಿಸಿದರು.
ಮೆಟ್ಟುಪಾಳ್ಯಂನಿಂದ ಊಟಿವರೆಗೆ ಐದೂವರೆ ಗಂಟೆ ಪಯಣ
ಈ ರೈಲು 13 ಸುರಂಗಗಳು ಮತ್ತು ಕಾಡಿನ ಮೂಲಕ ಸಾಗುತ್ತದೆ. ಈ ಪ್ರಯಾಣವು ಐದೂವರೆ ಗಂಟೆ ಸಾಗುತ್ತದೆ. ಈ ವಿಶೇಷ ರೈಲು ಬೆಳಗ್ಗೆ 9.10ಕ್ಕೆ ಮೆಟ್ಟುಪಾಳ್ಯಂ ನಿಲ್ದಾಣ ಬಿಟ್ಟು ಮಧ್ಯಾಹ್ನ 2.20ಕ್ಕೆ ಊಟಿ ತಲುಪಿದೆ. ಮೆಟ್ಟುಪಾಳ್ಯನಿಂದ ಕುನೂರಿಗೆ ಕಲ್ಲಿದ್ದಲಿನ ಎಂಜಿನ್ ಹಾಗೂ ಅಲ್ಲಿಂದ ಊಟಿ ನಿಲ್ದಾಣಕ್ಕೆ ಡೀಸೆಲ್ ರೈಲ್ವೆ ಎಂಜಿನ್ ನಲ್ಲಿ ಪ್ರಯಾಣ ಸಾಗಿತು.
ಎರಡು ನಿಲ್ದಾಣದಲ್ಲಿ ದಂಪತಿಗೆ ಸ್ವಾಗತ
ಕುನೂರು ರೈಲು ನಿಲ್ದಾಣ ಹಾಗೂ ಊಟಿ ರೈಲು ನಿಲ್ದಾಣದಲ್ಲಿ ದಂಪತಿಯನ್ನು ಸ್ವಾಗತಿಸಲಾಯಿತು. ಅಂದಹಾಗೆ ರೈಲ್ವೆ ಅಧಿಕಾರಿಗಳು ಹೇಳುವ ಪ್ರಕಾರ, ನೀಲಗಿರಿ ಮೌಂಟನ್ ರೈಲ್ವೆ ಹಳಿಯ ಮೇಲೆ ಈ ರೀತಿಯ ಚಾರ್ಟರ್ಡ್ ಸೇವೆ ಆರಂಭಿಸಿರುವುದು ಇದನ್ನು ಹೆಚ್ಚು ಪ್ರಚಾರ ಮಾಡುವ ಉದ್ದೇಶದಿಂದ. ಜಗತ್ತಿನಾದ್ಯಂತ ಇದು ಪ್ರಸಿದ್ಧಿ ಪಡೆಯಲಿ ಎಂಬ ಉದ್ದೇಶ ಇದೆ.
ಚಾರ್ಟರ್ಡ್ ರೈಲು ಸೇವೆ ಪುನರಾರಂಭ
ನೀಲಗಿರಿ ಮೌಂಟನ್ ರೈಲ್ವೆನಿಂದ ಈ ಹಿಂದೆ ಅಂದರೆ 1997ರಿಂದ 2000ನೇ ಇಸವಿ ಮಧ್ಯೆ ಕೂಡ ಚಾರ್ಟರ್ಡ್ ಸೇವೆ ಒದಗಿಸಲಾಗಿತ್ತು. ಆ ನಂತರ 2002 ಮತ್ತು 2004ರ ಮಧ್ಯೆ ವಿಶೇಷವಾಗಿ ರಾತ್ರಿ ವೇಳೆ ಈ ರೀತಿ ಚಾರ್ಟರ್ಡ್ ರೈಲು ಸಂಚಾರ ಮಾಡುತ್ತಿತ್ತು. ಇದೀಗ ಮತ್ತೆ ಸೇವೆ ಪುನರಾರಂಭ ಮಾಡಲಾಗಿದೆ. ಅದಕ್ಕೂ ಮುನ್ನ ಲೋಕೋಮೋಟಿವ್ ಹಾಗೂ ಬೋಗಿಗಳು ನವೀಕರಣ-ದುರಸ್ತಿ ಮಾಡಲಾಗಿದೆ.
ಬೆಂಗಳೂರಿನಿಂದ ಮೆಟ್ಟುಪಾಳ್ಯಂಗೆ 360 ಕಿ.ಮೀ.
ತಮಿಳುನಾಡಿನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಊಟಿ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೆಸರಿದೆ. ಅಲ್ಲಿನ ವಾತಾವರಣದ ಕಾರಣಕ್ಕೆ ನವವಿವಾಹಿತರು ಮಧುಚಂದ್ರಕ್ಕೆ ಹೋಗಲು ಇಷ್ಟಪಡುತ್ತಾರೆ. ಬೆಂಗಳೂರಿನಿಂದ ಊಟಿಗೆ ಅಂದಾಜು 280 ಕಿಲೋಮೀಟರ್ ದೂರವಿದ್ದು, ನೀಲಗಿರಿ ಬೆಟ್ಟ ಪ್ರದೇಶದಲ್ಲಿ ರೈಲು ಪ್ರಯಾಣ ಕೂಡ ಅದ್ಭುತ ಅನುಭವ. ಅದನ್ನು ತಮ್ಮದಾಗಿಸಿಕೊಳ್ಳಬಹುದು. ಆದರೆ ಈ ರೈಲಿನಲ್ಲಿ ಹೋಗಬೇಕು ಅಂದುಕೊಂಡರೆ ಮೆಟ್ಟುಪಾಳ್ಯಂಗೆ ಹೋಗಿ, ಅಲ್ಲಿಂದ ಊಟಿಗೆ ತೆರಳಬೇಕು. ಬೆಂಗಳೂರಿನಿಂದ ಮೆಟ್ಟುಪಾಳ್ಯಂಗೆ 360 ಕಿ.ಮೀ. ಅಲ್ಲಿಂದ ಊಟಿಗೆ ರೈಲಿನಲ್ಲಿ 48 ಕಿಲೋಮೀಟರ್.