ಸರಕಾರ ಟೀಕಾಕಾರರ ಮಾತನ್ನು ಆಲಿಸಬೇಕು: ರಘುರಾಮ್ ರಾಜನ್
ನವದೆಹಲಿ, ಆ. 3: ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಮ್ ರಾಜನ್ ಆಗಾಗ ಸುದ್ದಿಯಲ್ಲಿರುತ್ತಾರೆ. ಸರಕಾರದ ನೀತಿಗಳನ್ನು ಆಗಾಗ ವಿಮರ್ಶೆ ಮಾಡುತ್ತಿರುತ್ತಾರೆ. ಟೀಕೆ ಮಾಡುತ್ತಿರುತ್ತಾರೆ, ಟೀಕೆಗೊಳಗಾಗುತ್ತಿರುತ್ತಾರೆ
ಸರಕಾರದ ಸಮರ್ಥಕರು ರಘುರಾಮ್ ರಾಜನ್ರನ್ನು ಕಾಂಗ್ರೆಸ್ ಏಜೆಂಟ್ ಎಂದು ಕರೆಯುವುದುಂಟು. ಇದ್ಯಾವುದೂ ಕೂಡ ರಾಜನ್ರನ್ನು ಧೃತಿಗೆಡಿಸುವುದಿಲ್ಲ. ಭಾರತದ ಆರ್ಥಿಕತೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಲೇ ಇರುತ್ತಾರೆ.
ಭಾರತವು ಅಭಿವೃದ್ಧಿಶೀಲ ಆರ್ಥಿಕತೆಯಾಗಿ ಉಳಿದಿದೆ: ನಿರ್ಮಲಾ ಸೀತಾರಾಮನ್
ಭಾರತದ ಆರ್ಥಿಕತೆ ಸದ್ಯದ ಸಂದರ್ಭದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿದೆ. ಇಲ್ಲಿ ಆರ್ಥಿಕ ದಿವಾಳಿಯಾಗುವ ಸಾಧ್ಯತೆ ಸದ್ಯಕ್ಕೆ ಇಲ್ಲ ಎಂದು ಮೊನ್ನೆಮೊನ್ನೆ ರಘುರಾಮ್ ರಾಜನ್ ಹೇಳಿದಾಗ ಹಲವರು ಅಚ್ಚರಿ ಹುಬ್ಬೇರಿಸಿದ್ದರು. ಸರಕಾರವೇ ಅಚ್ಚರಿಯಿಂದ ಕಿವಿ ಅಗಲಿಸಿತ್ತು.
ಟೀಕಾಕಾರರೇ ಈಗ ಸರಕಾರದ ಕ್ರಮಗಳನ್ನು ಪ್ರಶಂಸಿಸುವ ಮಟ್ಟಕ್ಕೆ ಬಂದಿದ್ದಾರೆ. ದೇಶ ಆರ್ಥಿಕವಾಗ ಸುಭಿಕ್ಷವಾಗಿದೆ ಎಂದು ಸರಕಾರ ಎದೆತಟ್ಟಿಕೊಂಡು ಹೇಳಿತು. ಇದರ ಬೆನ್ನಲ್ಲೇ ರಘುರಾಮ್ ರಾಜನ್ ಮತ್ತೊಮ್ಮೆ ಆರ್ಥಿಕತೆ ಬಗ್ಗೆ ತಮ್ಮ ನಿಲುವೇನೆಂಬುದನ್ನು ಸ್ಪಷ್ಟಪಡಿಸಿದ್ದು, ಹೊಗಳಿಕೆಯ ನಿರೀಕ್ಷೆಯಲ್ಲಿರುವ ಸರಕಾರದ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ ಕಾದಿದೆಯಾ ಆರ್ಥಿಕ ಗಂಡಾಂತರ? ಚೇತರಿಕೆ ಯಾವಾಗ ಸಾಧ್ಯ?
ಎನ್ಡಿಟಿವಿ ಜೊತೆ ನಡೆಸಿದ ಸಂದರ್ಶನದಲ್ಲಿ ಅವರು ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಏನು ಸಮಸ್ಯೆಯಾಗಿದೆ, ಸುಧಾರಣೆಗೆ ಯಾವ ಕ್ರಮ ಸೂಕ್ತ ಎಂಬಿತ್ಯಾದಿ ವಿಚಾರಗಳನ್ನು ಚರ್ಚಿಸಿದ್ದಾರೆ.
ಸರಕಾರಕ್ಕೆ ವಂದಿ ಮಾಗಧರು ಬೇಕಾ?
"ಸರಕಾರ ತಾನು ಯಾವುದೇ ತಪ್ಪು ಮಾಡುವುದಿಲ್ಲ ಎಂದು ನಂಬಿಕೊಂಡಿದೆ. ವಂದಿ ಮಾಗಧರು, ಹೊಗಳುಭಟ್ಟರನ್ನು ಸರಕಾರ ಉತ್ತೇಜಿಸುತ್ತದೆ. ಯಾವುದೇ ಸರಕಾರವಾಗಲೀ ತಪ್ಪು ಮಾಡುವುದು ಸಹಜ. ನಾನು ಸಾಮಾನ್ಯವಾಗಿ ಸಮತೋಲಿತ ರೀತಿಯ ವಿಮರ್ಶೆಯನ್ನು ಮಾಡುತ್ತೇನೆ. ಇದರಲ್ಲಿ ಕೆಲವೊಮ್ಮೆ ಕಟು ಟೀಕೆ ಕೂಡ ಮಾಡುತ್ತೇನೆ.
"ಹಿಂದೆ ನಾನು ಯುಪಿಎ ಸರಕಾರವನ್ನೂ ಟೀಕಿಸಿದ್ದೇನೆ. ಅದಕ್ಕೆ ಮುಂಚಿನ ಎನ್ಡಿಎ ಸರಕಾರದಲ್ಲೂ ನಾನು ಕೆಲಸ ಮಾಡಿದ್ದೇನೆ. ತೀರಾ ಕಟುವಾಗಿ ಟೀಕಿಸಬೇಕೆಂಬ ಹುಚ್ಚು ನನಗಿಲ್ಲ. ಹಾಗೆಯೇ, ಸ್ವಲ್ಪವಾದರೂ ಟೀಕೆ ಇರಬೇಕು. ವಿಮರ್ಶಿಸುವವರನ್ನು ಟೀಕಾಕಾರರೆಂದು ಹಣೆಪಟ್ಟಿ ಹಾಕುವುದು ಸರಿಯಲ್ಲ" ಎಂದು ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಉದ್ಯೋಗಸೃಷ್ಟಿ ಅಗತ್ಯ
ಭಾರತದಲ್ಲಿ ಆರ್ಥಿಕ ಪ್ರಗತಿ ಶೇ. 7ರ ದರದಲ್ಲಿ ಇದೆ ಎಂದು ಸರಕಾರ ಮೊನ್ನೆ ಸಂಸತ್ನಲ್ಲಿ ಹೇಳಿಕೊಂಡಿತ್ತು. ಈ ಬಗ್ಗೆ ಎನ್ಡಿಟಿವಿ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ರಘುರಾಮ್ ರಾಜನ್, ಈ ಬೆಳವಣಿಗೆಯಲ್ಲಿರುವ ಅಸಮತೋಲನವನ್ನು ಎತ್ತಿ ತೋರಿಸಿದ್ದಾರೆ. ಆರ್ಥಿಕತೆಯಲ್ಲಿ ಉದ್ಯೋಗ ಮತ್ತು ಬೇಡಿಕೆ ಎರಡೂ ಡಬಲ್ ಎಂಜಿನ್ ಇದ್ದಂತೆ ಎಂಬುದು ಅವರ ಅನಿಸಿಕೆ.
"ಭಾರತದಲ್ಲಿ ಬೆಳವಣಿಗೆಯಾಗುತ್ತಿದೆಯಾದರೂ ಸಾಮರ್ಥ್ಯದ ಬಳಕೆ ಕಡಿಮೆ ಇದೆ. ಇದನ್ನು ನೀಗಿಸಲು ನಮಗೆ ಬೇಡಿಕೆ ಹೆಚ್ಚು ಅಗತ್ಯ... ಶೇ. 7ರ ಅಭಿವೃದ್ಧಿ ದರ ಇದೆ ಎಂದು ಹೆಮ್ಮೆ ಪಡಲು ಆಗುವುದಿಲ್ಲ. ಇಲ್ಲಿ ಕಾಣುತ್ತಿರುವುದು ಉದ್ಯೋಗಸೃಷ್ಟಿಯಿಲ್ಲದ ಅಭಿವೃದ್ಧಿ. ಆರ್ಥಿಕತೆಗೆ ಉದ್ಯೋಗಗಳು ತೀರಾ ಅಗತ್ಯ. ಎಲ್ಲರೂ ಸಾಫ್ಟ್ವೇರ್ ಎಂಜಿನಿಯರ್ ಆಗಬೇಕೆಂದಲ್ಲ, ಆದರೆ ಉತ್ತಮ ಉದ್ಯೋಗಗಳ ಸೃಷ್ಟಿ ಅಗತ್ಯತೆ ಇದೆ" ಎಂದು ಅವರು ಹೇಳಿದ್ದಾರೆ.
"ಉದ್ಯೋಗಸೃಷ್ಟಿಗೆ ಸಮೀಪ ದಾರಿ ಯಾವುದೂ ಇಲ್ಲ. ನಮ್ಮ ಜನರ ಶಿಕ್ಷಣ ಮತ್ತು ಕೌಶಲ್ಯವನ್ನು ಹೆಚ್ಚಿಸಬೇಕು. ಕೌಶಲ್ಯದ ತಳಹದಿ ನಿರ್ಮಿಸಿದರೆ ಉದ್ಯೋಗ ಸೃಷ್ಟಿ ಸಾಧ್ಯವಾಗುತ್ತದೆ" ಎಂದೂ ಭೋಪಾಲ್ ಸಂಜಾತ ರಘುರಾಮ್ ರಾಜನ್ ಸಲಹೆ ನೀಡಿದ್ದಾರೆ.
ಸಮಾಲೋಚನೆ ಮಾಡಲಿ
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾತುಕತೆ, ಸಮಾಲೋಚನೆ, ಚರ್ಚೆಯ ಮಹತ್ವ ಎಷ್ಟು ಎಂಬುದನ್ನು ರಾಜನ್ ತಿಳಿಸಿದ್ದಾರೆ.
"ಕಳೆದ ಕೆಲ ವರ್ಷಗಳಲ್ಲಿ ಸರಕಾರ ಹೆಚ್ಚು ಸಮಾಲೋಚನೆ ಇಲ್ಲದೇ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದನ್ನು ನೀವು ಕಂಡಿದ್ದೀರಿ. ನೋಟ್ ಬ್ಯಾನ್ ಇದಕ್ಕೆ ಉದಾಹರಣೆ. ಹಾಗೆಯೇ, ಕೃಷಿ ಕಾಯ್ದೆಯೂ ಇನ್ನೊಂದು ಉದಾಹರಣೆ. ಪ್ರಜಾಪ್ರಭುತ್ವದಲ್ಲಿ ನೀವು ಸಂವಾದಕ್ಕಿಳಿದರೆ ಅದು ಶಕ್ತಿಯಾಗುತ್ತದೆ. ಅಂತ್ಯವೇ ಕಾಣದಂತೆ ಮಾತುಕತೆ ಆಗಬೇಕೆಂದಿಲ್ಲ. ಪ್ರಧಾನಿ ಕಚೇರಿಯಲ್ಲಿ ಕೂತಿರುವ ಅಧಿಕಾರಿಗಳಿಗಿಂತ ಜನರಿಗೆ ವಾಸ್ತವ ಸ್ಥಿತಿಯ ಅರಿವಿರುತ್ತದೆ" ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ಅಲ್ಪಸಂಖ್ಯಾತರ ವಿಚಾರ
ಅಲ್ಪಸಂಖ್ಯಾತರು ಸಂತುಷ್ಟರಾಗಿದ್ದರೆ ಒಂದು ದೇಶದ ಆರ್ಥಿಕ ವ್ಯವಸ್ಥೆ ಉತ್ತಮವಾಗಿ ಹೇಗೆ ಸಾಗಬಲ್ಲುದು. ದೊಡ್ಡ ಸಂಖ್ಯೆಯ ಅಲ್ಪಸಂಖ್ಯಾತರೊಂದಿಗೆ ತಿಕ್ಕಾಟಕ್ಕಿಳಿದರೆ ಆರ್ಥಿಕತೆ ಹೇಗೆ ನಲುಗುತ್ತದೆ ಎಂದೂ ಅವರು ವಿಶ್ಲೇಷಣೆ ನೀಡಿದ್ದಾರೆ. ಶ್ರೀಲಂಕಾವನ್ನು ಉದಾಹರಣೆಯಾಗಿ ನೀಡಿದ್ದಾರೆ.
"ಶ್ರೀಲಂಕಾದಲ್ಲಿ ತಮಿಳರು ದೊಡ್ಡ ಅಲ್ಪಸಂಖ್ಯಾತ ವರ್ಗ. ಆ ದೇಶದಲ್ಲಿ ಉದ್ಯೋಗಸೃಷ್ಟಿಯಿಲ್ಲದ ಆರ್ಥಿಕ ಅಭಿವೃದ್ಧಿಯ ಸಮಸ್ಯೆ ಎದುರಾದಾಗ ರಾಜಕಾರಣಿಗಳು ಅಲ್ಪಸಂಖ್ಯಾತರ ವಿಚಾರದತ್ತ ಜನರ ಗಮನ ಸೆಳೆಯತೊಡಗಿದರು. ಅಲ್ಪಸಂಖ್ಯಾತರವನ್ನು ಖಳನಾಯಕರಾಗಿ ಬಿಂಬಿಸಿದರು. ನಾಗರಿಕ ಯುದ್ಧ ನಡೆಯುವ ಮಟ್ಟಕ್ಕೆ ಸಮುದಾಯಗಳ ಮಧ್ಯೆ ಬಿರುಕು ಮೂಡಿಸಿದರು.
"ಶ್ರೀಲಂಕಾದ ಪಾಠವನ್ನು ನಾವು ಕಲಿಯಬೇಕು. ನಮ್ಮ ದೇಶದಲ್ಲಿ ಕೋಮು ಸೌಹಾರ್ದತೆ ಮತ್ತು ಏಕತೆಯತ್ತ ನಾವು ಕೆಲಸ ಮಾಡಬೇಕು. ಇದರಿಂದ ದೇಶದ ಸಮಗ್ರತೆಗೆ ಒಳ್ಳೆಯದಾಗುತ್ತದೆ, ಆರ್ಥಿಕತೆಗೂ ಒಳ್ಳೆಯದಾಗುತ್ತದೆ" ಎಂದಿದ್ದಾರೆ.
"ಶ್ರೀಲಂಕಾದ ಪರಿಸ್ಥಿತಿಗೆ ಭಾರತ ಸಮೀಪವೇ ಇದೆ. ಕೋಮು ಸೌಹಾರ್ದತೆಗೆ ತಗುಲಿರುವ ಬೆಂಕಿಗೆ ಕೆಲ ರಾಜಕಾರಣಿಗಳು ತುಪ್ಪ ಸುರಿಯುವ ಕೆಲಸ ಮಾಡುತ್ತಿರುವುದು ಆತಂಕದ ಸಂಗತಿ" ಎಂದೂ ಅವರು ವಿಷಾದಿಸಿದ್ದಾರೆ.
ಕೋಮುಸೌಹಾರ್ದತೆ ಯಾಕೆ ಮುಖ್ಯ?
ಕೋಮುಸೂಕ್ಷ್ಮ ವಾತಾವರಣದಿಂದ ಆರ್ಥಿಕತೆ ಹೇಗೆ ನಲುಗುತ್ತದೆ ಎನ್ನುವುದಕ್ಕೆ ರಾಜನ್ ಇನ್ನಷ್ಟು ಉದಾಹರಣೆ ನೀಡಿದ್ದಾರೆ. "ಕೋಮು ಸಂಘರ್ಷ ವಾತಾವರಣ ಇದ್ದರೆ ಜನರು ಹೆದರುತ್ತಾರೆ. ಮುಂದಿನ ದಿನಗಳಲ್ಲಿ ಏನೆಲ್ಲಾ ಆಗಬಹುದು ಎಂದು ಆಲೋಚಿಸುತ್ತಾರೆ. ಅಲ್ಪಸಂಖ್ಯಾತರನ್ನು ಸರಿಯಾಗಿ ನಡೆಸಿಕೊಳ್ಳದ ದೇಶದೊಂದಿಗೆ ನಾವು ವ್ಯವಹಾರ ನಡೆಸುವ ಅಗತ್ಯವಿದೆಯಾ ಎಂದು ಪ್ರಶ್ನಿಸಿಕೊಳ್ಳುತ್ತಾರೆ" ಎಂದು ಹೇಳಿದ ಅವರು ಚೀನಾದ ಉದಾಹರಣೆಯನ್ನೂ ನೀಡಿದ್ದಾರೆ.
"ಚೀನಾದಲ್ಲಿ ಊಯ್ಗುರ್ ಮುಸ್ಲಿಮರನ್ನು ದಮನ ಮಾಡಲಾಗುತ್ತಿರುವ ವಿಚಾರವಾಗಿ ಆ ದೇಶದೊಂದಿಗೆ ಅಮೆರಿಕ ಮತ್ತು ಯೂರೋಪ್ ಅನೇಕ ನಿರ್ಬಂಧಗಳನ್ನು ಹಾಕಿದೆ. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿರುವ ಪ್ರದೇಶಗಳಲ್ಲಿ ಉದ್ಯಮಿಗಳು ವ್ಯವಹಾರ ನಿಲ್ಲಿಸುವ ಪ್ರವೃತ್ತಿ ಹೆಚ್ಚುತ್ತಿದೆ" ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಮ್ ರಾಜನ್ ಎನ್ಡಿಟಿವಿ ಸಂದರ್ಶನದಲ್ಲಿ ತಿಳಿಸಿದ್ದಾರೆ.
ರಘುರಾಮ್ ರಾಜನ್ ಇತ್ತೀಚಿನ ಹೇಳಿಕೆಯೊಂದರಲ್ಲಿ ಆರ್ಬಿಐನ ಕೆಲ ಕ್ರಮಗಳನ್ನು ಪ್ರಶಂಸಿಸಿದ್ದರು. ಭಾರತದ ವಿದೇಶ ವಿನಿಮಯ ಮೀಸಲು ನಿಧಿಯನ್ನು ಹೆಚ್ಚಿಸುವ ಆರ್ಬಿಐ ಕ್ರಮವನ್ನು ಸ್ವಾಗತಿಸಿದ್ದರು. ಇದರಿಂದ ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ತಾಳಿಕೊಳ್ಳುವ ಶಕ್ತಿ ಬರುತ್ತದೆ ಎಂದು ಹೇಳಿದ್ದರು.
(ಒನ್ಇಂಡಿಯಾ ಸುದ್ದಿ)
Recommended Video