ತ್ರಿಪುರದ ನೂತನ ಸಿಎಂ ಡಾ. ಮಾಣಿಕ್ ಸಾಹಾ ಪರಿಚಯ
ಮುಂದಿನ ವರ್ಷ ನಡೆಯಲಿರುವ ತ್ರಿಪುರಾ ರಾಜ್ಯ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಮಹತ್ತರ ಬದಲಾವಣೆ ಮಾಡಿದೆ. ತ್ರಿಪುರಾದಲ್ಲಿ ಬಿಜೆಪಿಯ ಮೊತ್ತಮೊದಲ ಮುಖ್ಯಮಂತ್ರಿ ಎನಿಸಿದ್ದ ಬಿಪ್ಲಬ್ ಕುಮಾರ್ ದೇಬ್ ಶನಿವಾರ ರಾಜೀನಾಮೆ ನೀಡಿದ್ದರು.
ಭಾನುವಾರ ಬಿಜೆಪಿಯ ತ್ರಿಪುರಾ ಘಟಕ ಅಧ್ಯಕ್ಷ ಮಾಣಿಕ್ ಸಾಹಾ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. 60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಗೆ 2023ರ ಜನವರಿ-ಫೆಬ್ರವರಿ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ತ್ರಿಪುರಾದಲ್ಲಿ 25 ವರ್ಷದ ನಿರಂತರ ಕಮ್ಯೂನಿಸ್ಟ್ ಪ್ರಾಬಲ್ಯಕ್ಕೆ 2018ರಲ್ಲಿ ಅಂತ್ಯ ಸಿಕ್ಕಿತ್ತು. ಬಿಜೆಪಿ ಇಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ಮೊದಲ ಬಾರಿಗೆ ಅಧಿಕಾರ ಹಿಡಿಯಿತು.
Breaking: ಮಾಣಿಕ್ ಸಾಹ ತ್ರಿಪುರಾ ನೂತನ ಮುಖ್ಯಮಂತ್ರಿ
ಬಿಪ್ಲವ್ ಕುಮಾರ್ ದೇಬ್ ಸಿಎಂ ಆಗಿದ್ದರು. ಇದೀಗ ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಹಾಗೂ ಪಕ್ಷದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ರಾಜೀನಾಮೆ ನೀಡಿರುವುದಾಗಿ ಅವರು ಕಾರಣ ನೀಡಿದ್ದಾರೆ. ಇತ್ತ ಮಾಣಿಕ್ ಸಾಹಾ ಯಾವುದೇ ವಿವಾದ, ಪ್ರತಿರೋಧ ಇಲ್ಲದೇ ಸಿಎಂ ಕುರ್ಚಿ ಹಿಡಿದಿದ್ದಾರೆ. ತ್ರಿಪುರಾದ 12ನೇ ಮುಖ್ಯಮಂತ್ರಿ ಆಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯಸಭೆ ಚುನಾವಣೆ: ಎನ್ಡಿಎ ಕೈತಪ್ಪಲಿರುವ ಏಳೆಂಟು ಸ್ಥಾನ
ವೈದ್ಯ ಡಾ. ಮಾಣಿಕ್ ಸಾಹಾ
69 ವರ್ಷದ ಮಾಣಿಕ್ ಸಾಹಾ ಹುಟ್ಟಿದ್ದು 1953, ಜನವರಿ 8ರಂದು. ಬಿಹಾರದ ಪಟ್ನಾದಲ್ಲಿ ದಂತ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ತ್ರಿಪುರಾದ ವೈದ್ಯಕೀಯ ಕಾಲೇಜೊಂದರಲ್ಲಿ ಬೋಧಕರಾಗಿ ಕೆಲಸ ಮಾಡುತ್ತಿದ್ದರು. ಡೆಂಟಲ್ ಸರ್ಜನ್ ಆಗಿದ್ದವರು.
2016ರಲ್ಲಿ ಬಿಜೆಪಿಗೆ
ಮಾಣಿಕ್ ಸಾಹಾ ಕಾಂಗ್ರೆಸ್ ಪಕ್ಷದ ಮೂಲಕ ರಾಜಕಾರಣಕ್ಕೆ ಅಡಿ ಇಟ್ಟಿದ್ದರು. 2016ರಲ್ಲಿ ಬಿಜೆಪಿಗೆ ಪಕ್ಷಾಂತರ ಮಾಡಿದರು. ಬಳಿಕ 2018ರಲ್ಲಿ ತ್ರಿಪುರಾದಲ್ಲಿ ಬಿಜೆಪಿ ಇತಿಹಾಸ ಬರೆಯಲು ಕಾರಣಕರ್ತರಾದವರಲ್ಲಿ ಮಾಣಿಕ್ ಸಾಹಾ ಹೆಸರೂ ಪ್ರಮುಖವಾಗಿ ಕೇಳಿಬರುತ್ತದೆ. ಅಲ್ಲದೇ ಕಳೆದ ವರ್ಷದ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಲು ಮಾಣಿಕ್ ಶ್ರಮ ಕೆಲಸ ಮಾಡಿತ್ತು. ಅಲ್ಲದೇ ಅವರಿಗಿರುವ ಕ್ಲೀನ್ ಇಮೇಜ್ ಈಗ ಸಿಎಂ ಸ್ಥಾನ ತಂದು ಕೊಟ್ಟಿದೆ ಎಂಬ ಮಾತು ಕೇಳಿಬರುತ್ತಿದೆ.
ಮಾಜಿ ಸಿಎಂಗೆ ಆಪ್ತರಾಗಿದ್ದಾರೆ
ತ್ರಿಪುರಾದ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್ ಮತ್ತು ಮಾಣಿಕ್ ಸಾಹಾ ಇಬ್ಬರೂ ಆತ್ಮೀಯರು. ಇವರಿಬ್ಬರನ್ನು ತ್ರಿಪುರಾ ಬಿಜೆಪಿಯ ಜೋಡೆತ್ತುಗಳನ್ನಲು ಅಡ್ಡಿ ಇಲ್ಲ. ಬಿಪ್ಲಬ್ ದೇಬ್ 2018ರಲ್ಲಿ ಸಿಎಂ ಆದ ಬಳಿಕ 2020ರಲ್ಲಿ ಮಾಣಿಕ್ ಸಾಹಾ ತ್ರಿಪುರಾ ರಾಜ್ಯ ಘಟಕ ಬಿಜೆಪಿ ಅಧ್ಯಕ್ಷರಾದರು. ಇದೇ ಮಾರ್ಚ್ ತಿಂಗಳಲ್ಲಿ ಮಾಣಿಕ್ ಸಾಹಾ ರಾಜ್ಯಸಭಾ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.
ಕ್ರಿಕೆಟ್ ಸಂಸ್ಥೆ ಅಧ್ಯಕ್ಷ
ಅನೇಕ ರಾಜಕಾರಣಿಗಳು ಕ್ರಿಕೆಟ್ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸುವುದು ಸರ್ವೇಸಾಮಾನ್ಯವಾಗಿದೆ. ಮಾಣಿಕ್ ಸಾಹಾ ಕೂಡ ತ್ರಿಪುರಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಕ್ರಿಕೆಟ್ಗಿಂತ ಮೊದಲು ಅವರು ತ್ರಿಪುರಾದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಆಟಗಾರರಾಗಿದ್ದರರು. ಜೊತೆಗೆ, ತ್ರಿಪುರಾ ಮೆಡಿಕಲ್ ಕಾಲೇಜು ಮತ್ತು ಅಗಾರ್ತಲಾದಲ್ಲಿರುವ ಬಿ. ಆರ್. ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಕೂಡ ಮಾಡುತ್ತಾರೆ. ಈಗ ಸಿಎಂ ಆದ ಬಳಿಕ ಈ ಹುದ್ದೆಗಳನ್ನು ಅವರು ತ್ಯಜಿಸಬಹುದು.
ಟಿಎಂಸಿ ಬಲವೃದ್ಧಿ
ತ್ರಿಪುರಾದ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 40 ಸ್ಥಾನಗಳನ್ನು ಹೊಂದಿದೆ. ಇದರಲ್ಲಿ ಬಿಜೆಪಿ 33 ಮತ್ತು ಐಪಿಎಫ್ಟಿ 7 ಸ್ಥಾನಗಳನ್ನು ಹೊಂದಿವೆ. ಎರಡ್ಮೂರು ದಶಕ ಆಡಳಿತ ನಡೆಸಿದ್ದ ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷ 15 ಸ್ಥಾನಗಳನ್ನು ಹೊಂದಿದೆ. ಇದೇ ವೇಳೆ, ಇತ್ತೀಚಿನ ಕೆಲ ವರ್ಷಗಳಿಂದ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷ ತ್ರಿಪುರಾದಲ್ಲಿ ಬೇರು ಬಿಡುತ್ತಿದೆ. ಈ ಹಿನ್ನೆಲೆಯಲ್ಲಿ ತ್ರಿಪುರಾದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ದಟ್ಟವಾಗದೆ. ಟಿಎಂಸಿ ಪಕ್ಷ ಬಿಜೆಪಿಯ ಮತಗಳನ್ನು ಸೆಳಯುತ್ತಾ, ಕಮ್ಯೂನಿಸ್ಟರ ಮತ ಬುಟ್ಟಿಗೆ ಕನ್ನಹಾಕುತ್ತಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಅವಲೋಕನ ನಡೆಸುತ್ತಿದ್ದು ಅದರಂತೆ ಮುಂದಿನ ದಿನಗಳಲ್ಲಿ ರಣತಂತ್ರ ರೂಪಿಸುವ ನಿರೀಕ್ಷೆ ಇದೆ.
(ಒನ್ಇಂಡಿಯಾ ಸುದ್ದಿ)