ನುಡಿ ನಮನ; ಮರೆಯಾದ ಅಪರೂಪದ ಇತಿಹಾಸಕಾರ ಷ.ಶಟ್ಟರ್
ಬೆಂಗಳೂರು ಫೆಬ್ರವರಿ 28: ಕನ್ನಡ ಸಾರಸ್ವತ ಲೋಕ ಮತ್ತೊಬ್ಬ ದಿಗ್ಗಜರನ್ನು ಕಳೆದುಕೊಂಡು ಬಡವಾಗಿದೆ. ನಾಡು ನುಡಿ ಬಗೆಗಿನ ತಮ್ಮ ವಿಶಿಷ್ಟ ಸಂಶೋಧನೆಗಳ ಮೂಲಕ ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದ ಖ್ಯಾತ ಇತಿಹಾಸಕಾರ ಷ ಶೆಟ್ಟರ್ ಅವರು ಶುಕ್ರವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದರು.
ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರಕಲು ಷ ಶೆಟ್ಟರ್ ಅವರ ಕೊಡುಗೆ ಅನನ್ಯವಾಗಿದ್ದನ್ನು ಇಂದು ಅನೇಕ ಸಾಹಿತಿಗಳು, ಅವರ ಸ್ನೇಹಿತರು ಪ್ರಮುಖವಾಗಿ ನೆನೆಯುತ್ತಾರೆ. ಹಳಗನ್ನಡ, ಜೈನ ಸಾಹಿತ್ಯ ಮತ್ತು ಸಂಸ್ಕೃತಿ, ಶಾಸನ ಸಾಹಿತ್ಯ, ದ್ರಾವಿಡ ಭಾಷೆಗಳ ಮೇಲಿನ ಅವರ ಲೇಖನ, ಸಂಶೋಧನೆಗಳು ಆಯಾ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಹುಟ್ಟಿಹಾಕಿದ್ದವು.
ಅಂತರರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ ಷ. ಶೆಟ್ಟರ್ ನಿಧನ
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಬಳಿಯ ಹಂಪಸಾಗರದಲ್ಲಿ 1935 ರಲ್ಲಿ ಜನಿಸಿದ್ದ ಶೆಟ್ಟರ್ ಅವರು ಕನ್ನಡಕ್ಕೆ ಮರೆಯಲಾರದ ಕೊಡುಗೆ ಕೊಟ್ಟು ಹೋಗಿದ್ದಾರೆ.
ಷಡಕ್ಷರಪ್ಪ ಶೆಟ್ಟರ್
ಶೆಟ್ಟರ್ ಅವರ ಪೂರ್ಣ ಹೆಸರು ಷಡಕ್ಷರಪ್ಪ ಶೆಟ್ಟರ್. ಸ್ವಾತಂತ್ರ್ಯ ಚಳವಳಿಯ ಉತ್ತುಂಗದ ಕಾಲದಲ್ಲಿ ಬಾಲ್ಯವನ್ನು ಕಳೆದರು ಷ ಶೆಟ್ಟರ್ ಅವರು. ಸ್ವಾತಂತ್ರ್ಯಾನಂತರ ಪ್ರಾಂತ್ಯಗಳ ಮರು ವಿಂಗಡಣೆಯಿಂದ ಬಳ್ಳಾರಿ ಮೈಸೂರು ಪ್ರಾಂತ್ಯಕ್ಕೆ ಸೇರಿತು. ಇದರಿಂದ ಮದ್ರಾಸ್ ಪ್ರಾಂತ್ಯದ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿಗೆ ಉನ್ನತ ವ್ಯಾಸಂಗಕ್ಕೆ ಸೇರಬೇಕು ಎಂದು ಕನಸು ಕಂಡಿದ್ದ ಶೆಟ್ಟರ್ ಅವರ ಆಸೆ ಕಮರಿತು. ಹೀಗಾಗಿ ಅವರು ಮೈಸೂರು ಮಹಾರಾಜ ಕಾಲೇಜಿಗೆ ಸೇರಿ ಇತಿಹಾಸದಲ್ಲಿ ಬಿ ಎ ಹಾಗೂ ಮೈಸೂರು ವಿವಿಯಲ್ಲಿ ಎಂ ಎ ಪದವಿ ಪಡೆದರು.
ಧಾರವಾಡದತ್ತ ಪಯಣ
ಉನ್ನತ ವ್ಯಾಸಂಗದ ನಂತರ ಸಾಂಸ್ಕೃತಿಕ ನಗರಿ ಸಾಹಿತಿಗಳ ತವರೂರು ಧಾರವಾಡಕ್ಕೆ ತೆರಳಿದ ಷ ಶೆಟ್ಟರ್ ಅವರು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗವನ್ನು ಸುಮಾರು ಮೂರು ದಶಕಗಳ ಮುನ್ನಡೆಸಿದರು. ಈ ವೇಳೆಯಲ್ಲಿ ಶಾಸನ ಸಾಹಿತ್ಯದ ಬಗ್ಗೆ ಅವರು ಮಾಡಿದ ಸಂಶೋಧನೆಗಳು ಅವರಿಗೆ ಖ್ಯಾತಿ ತಂದು ಕೊಟ್ಟಿತು.
ಜೈನ ಸಾಹಿತ್ಯದ ಅಧ್ಯಯನ
ಜೈನ ಧರ್ಮ, ಸಲ್ಲೇಖನ ವ್ರತ, ಸಂಸ್ಕೃತಿ ಸಾಹಿತ್ಯದ ಬಗ್ಗೆ ಶೆಟ್ಟರ್ ಅವರು ಬರೆದ 'ಸಾವಿಗೆ ಆಹ್ವಾನ', 'ಸಾವನ್ನು ಅರಸಿ', 'ಸಾವನ್ನು ಸ್ವಾಗತಿಸಿ' ಕೃತಿಗಳು ಅವರಿಗೆ ಸಾಕಷ್ಟು ಖ್ಯಾತಿ ತಂದು ಕೊಟ್ಟವು. 'ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ' ಗ್ರಂಥ ದ್ರಾವಿಡ ಭಾಷೆಗಳ ಬಗೆಗೆ ಹೊಸ ಬೆಳಕನ್ನು ಚೆಲ್ಲಿದ್ದಲ್ಲದೇ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ತಂದುಕೊಡುವಲ್ಲಿ ಬಹಳಷ್ಟು ಸಹಾಯವಾಯಿತು. ಬಾದಾಮಿ ಚಾಲುಕ್ಯರ ಶಾಸನ ಸಾಹಿತ್ಯ ಅವರ ಇನ್ನೊಂದು ಪ್ರಸಿದ್ಧ ಗ್ರಂಥ.
ಹಿಸ್ಟಾರಿಕಲ್ ರಿಸರ್ಚನ ಅಧ್ಯಕ್ಷ
ಪ್ರಾಧ್ಯಾಪಕ ಸ್ಥಾನದಿಂದ ನಿವೃತ್ತಿಗೊಂಡ ನಂತರ ಅವರು ಬೆಂಗಳೂರಿನಲ್ಲಿ ನೆಲೆಸಿ ಇತಿಹಾಸದ, ಕನ್ನಡ ಸಾಹಿತ್ಯ, ಜೈನ ಸಾಹಿತ್ಯದ ಬಗ್ಗೆ ತಮ್ಮ ಸಂಶೋಧನೆಗಳನ್ನು ಮುಂದುವರೆಸಿದರು. 1996 ರಿಂದ 1999 ರ ಅವಧಿಯಲ್ಲಿ ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚನ ಅಧ್ಯಕ್ಷರಾಗಿ ಸಾಕಷ್ಟು ಕೆಲಸ ಮಾಡಿದರು. ಅವರ ಸಂಶೋಧನಾ ಲೇಖನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವು. ಕೇಂಬ್ರಿಡ್ಜ್ ಸೇರಿದಂತೆ ಅನೇಕ ದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು.
ಧಾರವಾಡ ಸಾಹಿತ್ಯ ಸಂಭ್ರಮದ ನಂಟು
ದೇಶದ ಗಮನ ಸೆಳೆದಿರುವ ಧಾರವಾಡ ಸಾಹಿತ್ಯ ಸಂಭ್ರಮದ ಐದು ಆವೃತ್ತಿಗಳಲ್ಲಿ ಪಾಲ್ಗೊಂಡಿದ್ದ ಶೆಟ್ಟರ್ ಅವರು, ಹಲವಾರು ಗೋಷ್ಠಿಗಳಲ್ಲಿ ಪಾಲ್ಗೊಂಡು ಹಳಗನ್ನಡ ಸಾಹಿತ್ಯ, ಶಾಸನ ಸಾಹಿತ್ಯದ ಬಗ್ಗೆ ಗಮನ ಸೆಳೆದಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ನಿವೃತ್ತಿಗೊಂಡ ನಂತರವೂ ಧಾರವಾಡದೊಂದಿಗೆ ವಿಶೇಷ ನಂಟು ಇಟ್ಟುಕೊಂಡಿದ್ದರು ಶೆಟ್ಟರ್.
ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕೆ ಅಸಡ್ಡೆ
"ಹತ್ತು ವರ್ಷಗಳ ಸತತ ಹೋರಾಟದ ನಂತರ ದೊರಕಿರುವ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಇಂದು ಅಸಡ್ಡೆಯಿಂದ ನೋಡಲಾಗುತ್ತಿದೆ'' ಎಂದು ಶಟ್ಟರ್ ಅವರು ಇತ್ತೀಚೆಗೆ ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿ ಅಸಮಾಧಾನ ಹೊರ ಹಾಕಿದ್ದರು. "ಪುರಾತನ ಭಾಷೆಯಾದ ಕನ್ನಡಕ್ಕೆ ನೂರಾರು ಜನರ ಸಂಸ್ಥೆಗಳ ಹೋರಾಟದಿಂದ ಶಾಸ್ತ್ರೀಯ ಸ್ಥಾನ ಮಾನ ಲಭಿಸಿತು. ಆರು ವರ್ಷಗಳು ಕಳೆದರೂ ಇನ್ನೂ ಶಾಸ್ತ್ರೀಯ ಸ್ಥಾನಮಾನಕ್ಕೆ ಕೇಂದ್ರ ಭವನವನ್ನು ಸರಕಾರ ನಿರ್ಮಾಣ ಮಾಡಿಲ್ಲ. ಭಾಷಾ ಸಂಶೋಧನೆ ಆಗದೇ ಭಾಷಾ ಅಭಿವ್ಯಕ್ತಿ ಸಾಧ್ಯವಿಲ್ಲ'' ಎಂದು ಶಟ್ಟರ್ ಸರ್ಕಾರಕ್ಕೆ ಚಾಟಿ ಬೀಸಿದ್ದರು.
ಶಟ್ಟರ್ ಅವರ ಪ್ರಮುಖ ಕೃತಿಗಳು
ಶ್ರವಣಬೆಳಗೊಳ (1981)
ಸಾವಿಗೆ ಆಹ್ವಾನ (2004, 2014)
ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ ಆರಂಭ ಕಾಲದ ದ್ರಾವಿಡ ಭಾಷಾ ಚಿಂತನೆ(2007)
ಸೋಮನಾಥಪುರ (2008)
ಬಾದಾಮಿ ಚಾಲುಕ್ಯರ ಶಾಸನ ಸಾಹಿತ್ಯ (2012)
ಸಾವನ್ನು ಅರಸಿ (2014)
ಸಾವನ್ನು ಸ್ವಾಗತಿಸಿ(2014)
ಹಳಗನ್ನಡ- ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ (2014)
ಹಳಗನ್ನಡ ಭಾಷೆ, ಭಾಷಾ ಬೆಳವಣಿಗೆ ಮತ್ತು ಭಾಷಾ ಬಾಂಧವ್ಯ(2016)
ಪ್ರಾಕೃತ ಜಗದ್ವಲಯ(ಪ್ರಾಕೃತ, ಕನ್ನಡ ಮತ್ತು ಸಂಸ್ಖೃತ ಭಾಷೆಗಳ ಅನುಸಂಧಾನ) 2018.