ನಿಷ್ಠಾವಂತ ಅಧಿಕಾರಿಯ ನೆನಪನ್ನು ಚಿರವಾಗಿಸಿದ ಜೀಪು!
ಚಾಮರಾಜನಗರ: ಕಾಡುಗಳ್ಳ ವೀರಪ್ಪನ್ ನಿಂದ ಶಿರಚ್ಛೇದಕ್ಕೊಳಗಾಗಿ ದುರಂತ ಸಾವನ್ನಪ್ಪಿದ ನಿಷ್ಠಾವಂತ ಐಎಫ್ಎಸ್ ಅಧಿಕಾರಿ ಪಿ.ಶ್ರೀನಿವಾಸ್ ಅವರ ನೆನಪನ್ನು ಚಿರವಾಗಿಸುವ ಕೆಲಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ್ದು, ಇದೀಗ ಅವರು ಬಳಸುತ್ತಿದ್ದ ಜೀಪನ್ನು ಕೊಳ್ಳೇಗಾಲ ಅರಣ್ಯ ಇಲಾಖೆ ಕಚೇರಿಯಲ್ಲಿರಿಸಿ ಗೌರವ ಸಲ್ಲಿಸುವ ಕೆಲಸವನ್ನು ಮಾಡಲಾಗಿದೆ.
ಕಳೆದ ಎರಡು ದಶಕಗಳ ಹಿಂದೆ ಸದಾ ಸುದ್ದಿಯಲ್ಲಿರುತ್ತಿದ್ದ ಕಾಡುಗಳ್ಳ ವೀರಪ್ಪನ್ ಏನಾದರೊಂದು ಕುಕೃತ್ಯ ಎಸಗುವುದರೊಂದಿಗೆ ಸುದ್ದಿ ಮಾಡುತ್ತಿದ್ದುದಲ್ಲದೆ, ಅರಣ್ಯ ಮತ್ತು ಪೊಲೀಸ್ ಇಲಾಖೆಗೆ ಕಂಟಕವಾಗಿದ್ದನು. ಇಂತಹ ವೀರಪ್ಪನ್ ನಿಂದ ಹತರಾದರವರೆಲ್ಲ ಈಗ ಇತಿಹಾಸದ ಪುಟವಾಗಿ ಹೋಗಿದ್ದಾರೆ. ಅವರ ತ್ಯಾಗ ಜೀವಂತವಾಗಿದೆ.
ಜೀವಂತವಾಗಿ ಸೆರೆಹಿಡಿಯಲು ಯತ್ನ
ವೀರಪ್ಪನ್ ಎಂತಹ ಕ್ರೂರಿ ಮತ್ತು ಕ್ರೌರ್ಯವನ್ನು ಹೇಗೆ ಮೆರೆದಿದ್ದ ಎಂಬುದು ಆತ ಮಾಡಿದ ಕೃತ್ಯಗಳನ್ನು ಮೆಲುಕು ಹಾಕಿದರೆ ಗೊತ್ತಾಗಿ ಬಿಡುತ್ತದೆ. ವೀರಪ್ಪನ್ ನನ್ನು ಜೀವಂತವಾಗಿಯೇ ಸೆರೆಹಿಡಿಯ ಬೇಕೆಂದು ಹಲವು ಅಧಿಕಾರಿಗಳು ತೀರ್ಮಾನ ಮಾಡಿದ್ದರು. ಅಷ್ಟೇ ಅಲ್ಲ ಆತನನ್ನು ಶರಣಾಗುವಂತೆ ಮಾಡಬೇಕೆಂದು ಬಯಸಿದವರಿದ್ದರು. ಅಂತಹ ಅಧಿಕಾರಿಗಳ ಪೈಕಿ ಐಎಫ್ ಎಸ್ ಅಧಿಕಾರಿ ಪಿ.ಶ್ರೀನಿವಾಸ್ ಒಬ್ಬರಾಗಿದ್ದರು.
ಐಎಫ್ ಎಸ್ ಅಧಿಕಾರಿ ಪಿ.ಶ್ರೀನಿವಾಸ್ ಅವರ ಬಗ್ಗೆ ಹೇಳಬೇಕೆಂದರೆ, ಸೆಪ್ಟೆಂಬರ್ 12, 1954 ರಂದು ಜನಿಸಿದ ಶ್ರೀನಿವಾಸ್ ಅವರು ಅರಣ್ಯ ಇಲಾಖೆಗೆ ಸೇರ್ಪಡೆಗೊಂಡು ಚಾಮರಾಜನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 90ರ ದಶಕದಲ್ಲಿ ವೀರಪ್ಪನ್ ಉಪಟಳ ತಡೆಯಲಾರದೆ ಆತನನ್ನು ಸೆರೆ ಹಿಡಿಯುವ ಸಲುವಾಗಿ ಸರ್ಕಾರ ವಿಶೇಷ ಕಾರ್ಯಪಡೆಯನ್ನು ರಚಿಸಿತ್ತು. ಈ ಕಾರ್ಯಪಡೆಗೆ ವೀರಪ್ಪನ್ ವಾಸ್ತವ್ಯ ಹೂಡಿರುವ ಅರಣ್ಯದ ಬಗ್ಗೆ ಶ್ರೀನಿವಾಸ್ ಅವರಿಗೆ ಮಾಹಿತಿ ತಿಳಿದಿದ್ದರಿಂದ ಅವರನ್ನು ಸಹಾಯಕ ಕಮಾಂಡರ್ ಆಗಿ ನೇಮಕ ಮಾಡಲಾಗಿತ್ತು.
ಶರಣಾಗಿಸುವ ಪ್ರಯತ್ನ ನಡೆಸಿದ್ದರು
ಇವರೊಂದಿಗೆ ಅಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಬಿ ಕೆ ಸಿಂಗ್ ಇದ್ದರು. ಇಬ್ಬರು ಸೇರಿ ವೀರಪ್ಪನ್ನನ್ನು ಒಂದೇ ಒಂದು ಜೀವ ಮತ್ತು ಗುಂಡನ್ನು ಕಳೆದುಕೊಳ್ಳದೆ ಸೆರೆಹಿಡಿಯಲು ಬಯಸಿದ್ದರು. ಕಾಡುಗಳ್ಳ ವೀರಪ್ಪನ್ ನನ್ನು ಶರಣಾಗುವಂತೆ ಮಾಡಲು ವೀರಪ್ಪನ್ ಸಹೋದರ ಅರ್ಜುನನನ್ನು ವಿಶ್ವಾಸಕ್ಕೆ ಪಡೆದು ಆತನ ಮೂಲಕ ವ್ಯವಸ್ಥೆ ಮಾಡಲಾಗಿತ್ತು.
ಆದರೆ ಅರ್ಜುನ ಮಾಡಿದ್ದು ಮಾತ್ರ ಮಹಾ ನಂಬಿಕೆ ದ್ರೋಹವಾಗಿತ್ತು. ನೀವು ಒಬ್ಬರೇ ಬಂದರೆ ವೀರಪ್ಪನ್ ಶರಣಾಗುತ್ತಾನೆ ಎಂದು ಶ್ರೀನಿವಾಸ್ ಅವರಿಗೆ ಅರ್ಜುನ ತಿಳಿಸಿದ್ದನು. ಅವತ್ತು 1991 ರ ನವೆಂಬರ್ 10 ಎಂಎಂ ಹಿಲ್ಸ್ನಲ್ಲಿದ್ದ ಅವರು ಅರ್ಜುನನ ಮಾತನನ್ನು ನಂಬಿ ತಮ್ಮ ಬೈಕಿನಲ್ಲಿ ಗೋಪಿನಾಥಂಗೆ ತೆರಳಿದ್ದರು. ಆದರೆ ಅಲ್ಲಿ ನಡೆದಿದ್ದೇ ಬೇರೆಯಾಗಿತ್ತು. ಕಾದು ಕುಳಿತಿದ್ದ ವೀರಪ್ಪನ್ ದೂರ ದಿಂದಲೇ ಶ್ರೀನಿವಾಸ್ ಬರುವುದನ್ನು ನೋಡಿ ಅವರ ಮೇಲೆ ಅಟ್ಯಾಕ್ ಮಾಡಲು ಬೇಕಾದ ತಯಾರಿ ನಡೆಸಿದ್ದನು.
ಶಿರಚ್ಛೇದ ಮಾಡಿದ ವೀರಪ್ಪನ್
ಇತ್ತ ಶ್ರೀನಿವಾಸ್ ಅವರಿಗೆ ವೀರಪ್ಪನ್ ತನ್ನ ಮೇಲೆ ಅಟ್ಯಾಕ್ ಮಾಡುತ್ತಾನೆ ಎಂಬ ಚಿಕ್ಕ ಸುಳಿವು ಸಿಕ್ಕಿರಲಿಲ್ಲ. ಅವರು ಅರ್ಜುನನ ಮಾತನ್ನು ನಂಬಿದ್ದರು. ಆದರೆ ವೀರಪ್ಪನ್ ಅವರನ್ನು ಹಿಡಿದು ಚಿತ್ರಹಿಂಸೆ ನೀಡಿ ಶಿರಚ್ಛೇದ ಮಾಡಿದ್ದನು. ಅದಾದ ನಂತರ ಇದುವರೆಗೂ ಅವರ ತಲೆ ಪತ್ತೆಯಾಗಿಲ್ಲ. ಚಿತ್ರಹಿಂಸೆಯ ಗುರುತುಗಳನ್ನು ಹೊಂದಿದ್ದ ದೇಹ ದೊರೆತಿತ್ತು. ಈ ಘಟನೆ ನಡೆದು 31 ವರ್ಷವಾಗಿದೆ.
ಈಗ ನಿಷ್ಟಾವಂತ ಅಧಿಕಾರಿಯ ನೆನಪು ಆಗಾಗ್ಗೆ ಆಗುತ್ತಲೇ ಇರುತ್ತದೆ. ಅವರ ಹೆಸರನ್ನು ಚಿರವಾಗಿಸುವ ಹಿನ್ನಲೆಯಲ್ಲಿ ಅವರು ಬಳಸುತ್ತಿದ್ದ ಜೀಪನ್ನು ಕೊಳ್ಳೇಗಾಲ ಅರಣ್ಯ ಇಲಾಖೆ ಕಚೇರಿಯಲ್ಲಿ ಇರಿಸಲಾಗಿದ್ದು, ಶ್ರೀನಿವಾಸ್ ಅವರ ಭಾವಚಿತ್ರಗಳು, ಪತ್ರಗಳು, ದಾಖಲೆಗಳು ಮತ್ತು ಬರಹಗಳೊಂದಿಗೆ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗಿದೆ.
ಇದೊಂದು ಮಹಾನ್ ಗೌರವ
ಇದು ಭಾರತದಲ್ಲಿ ಹುತಾತ್ಮರಾದ ಅರಣ್ಯ ಅಧಿಕಾರಿಗೆ ನೀಡುತ್ತಿರುವ ಮೊದಲ ಗೌರವವಾಗಿದೆ. 1992ರಲ್ಲಿ ಕೀರ್ತಿ ಚಕ್ರ ಪುರಸ್ಕೃತರಾಗಿದ್ದರು. ಇದೀಗ ಸ್ಮಾರಕವಾಗಿರುವ ಅವರ ಜೀಪ್ ಬಗ್ಗೆ ಹೇಳಬೇಕೆಂದರೆ ಅದನ್ನು ತಮಿಳುನಾಡಿನ ಗಡಿಭಾಗದ ಪಾಲಾರ್ನಲ್ಲಿರುವ ಕರ್ನಾಟಕ ರೇಂಜ್ ಫಾರೆಸ್ಟ್ ಆಫೀಸ್ನಲ್ಲಿ ಇರಿಸಲಾಗಿತ್ತು.
ಅದಕ್ಕೆ 1.1ಲಕ್ಷ ರೂ ಖರ್ಚು ಮಾಡಿ ದುರಸ್ತಿ ಇದೀಗ ಸ್ಮಾರಕವಾಗಿ ಇಡಲಾಗಿದೆ. ಅರಣ್ಯ ರಕ್ಷಣೆಗಾಗಿ ಕಾಡುಗಳ್ಳ, ದಂತಚೋರನೊಂದಿಗೆ ಹೋರಾಡಿದ ಅಧಿಕಾರಿಗೆ ಇದೊಂದು ಮಹಾನ್ ಗೌರವ ಎಂದರೆ ತಪ್ಪಾಗಲಾರದು.