ಅಪರೂಪದ ರಾಜಕಾರಣಿ, ಮಾಜಿ ಕಮ್ಯೂನಿಸ್ಟ್ ಮುಖಂಡ ಸೋಮನಾಥ್ ಚಟರ್ಜಿ
ಸೋಮನಾಥ್ ಚಟರ್ಜಿ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ ಎಂಬತ್ತೊಂಬತ್ತು ವರ್ಷ ವಯಸ್ಸಾಗಿತ್ತು. ಲೋಕಸಭೆಯ ಮಾಜಿ ಸ್ಪೀಕರ್ ಆಗಿದ್ದರು. ಆ 'ಮಾಜಿ' ಎಂಬ ಪದವು ಕಮ್ಯೂನಿಸ್ಟ್ ಮುಖಂಡ ಎಂಬುದರ ಹಿಂದೆ ಕೂಡ ಸೇರಿಹೋಗಿತ್ತು. ಅದ್ಭುತ ಸಂಸದೀಯ ಪಟುವಾಗಿದ್ದ ಸೋಮನಾಥ್ ಚಟರ್ಜಿ ಅವರು ಯುಪಿಎ- 1ರ (2004) ಅವಧಿಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ, ಸ್ಪೀಕರ್ ಆಗಿದ್ದರು.
ಸಿಪಿಎಂಗೆ ಕಾಂಗ್ರೆಸ್ ಜತೆಗಿದ್ದ ಸ್ನೇಹ ಹಳಸಿ, 2008ರ ಹೊತ್ತಿಗೆ ಸ್ಪೀಕರ್ ಸ್ಥಾನವನ್ನು ಬಿಟ್ಟು ಇಳಿದು ಬನ್ನಿ ಎಂದು ಚಟರ್ಜಿ ಅವರಿಗೆ ಕಮ್ಯೂನಿಸ್ಟ್ ಪಕ್ಷದಿಂದ ಸೂಚಿಸಲಾಯಿತು. ಈ ಹುದ್ದೆ ಪಕ್ಷಾತೀತವಾದದ್ದು. ನಾನು ರಾಜೀನಾಮೆ ನೀಡಲ್ಲ ಎಂದು ಹೇಳಿದ್ದರು ಚಟರ್ಜಿ. ಅದೇ ವರ್ಷದ ಜುಲೈನಲ್ಲಿ ಯುಪಿಎಗೆ ನೀಡಿದ್ದ ಬೆಂಬಲವನ್ನು ಸಿಪಿಎಂ ವಾಪಸ್ ಪಡೆಯಿತು. ಆಗ ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಿದ್ದವರು ಪ್ರಕಾಶ್ ಕಾರಟ್.
ಲೋಕಸಭೆ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ನಿಧನ
ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡದ ಚಟರ್ಜಿ ಅವರನ್ನು ಸಿಪಿಎಂ ಪಕ್ಷದಿಂದಲೇ ಉಚ್ಚಾಟಿಸಲಾಯಿತು. 2009ರಲ್ಲಿ ಸಕ್ರಿಯ ರಾಜಕಾರಣದಿಂದ ಸೋಮನಾಥ್ ಚಟರ್ಜಿ ನಿವೃತ್ತಿ ಘೋಷಿಸಿದರು.
ಆ ದಿನವನ್ನು (ಜುಲೈ 23, 2008) ಸೋಮನಾಥ್ ಚಟರ್ಜಿ ವಿವರಿಸಿದ್ದದ್ದು ಹೀಗೆ: ನನ್ನ ಜೀವನದಲ್ಲೇ ಅತ್ಯಂತ ದುಃಖಕರ ದಿನ ಅದು. ಲೋಕಸಭೆ ಸ್ಪೀಕರ್ ಯಾವುದೇ ಅಸೆಂಬ್ಲಿಯ ಚುನಾಯಿತ ಸ್ಪೀಕರ್ ನಂತೆಯೇ. ಅಂಥ ಪಾತ್ರ ನಿರ್ವಹಿಸುವಾಗ ಯಾವುದೇ ರಾಜಕೀಯ ಪಕ್ಷವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಅಂದರು.
ಲೋಕಸಭೆ ಟೀವಿ ಚಾನಲ್ ಆರಂಭ
ಕಮ್ಯೂನಿಸ್ಟ್ ಪಕ್ಷವನ್ನು ಪ್ರತಿನಿಧಿಸಿ, ಸ್ಪೀಕರ್ ಆಗಿದ್ದ ಮೊದಲ ವ್ಯಕ್ತಿ ಸೋಮನಾಥ್ ಚಟರ್ಜಿ. ಶೂನ್ಯ ವೇಳೆಯಲ್ಲಿ ನಡೆಯುವ ಕಲಾಪ ನೇರ ಪ್ರಸಾರ ಆಗಬೇಕು ಎಂಬುದು ಸಾಧ್ಯವಾಗಿದ್ದು ಸೋಮನಾಥ್ ಚಟರ್ಜಿ ಅವರ ಪ್ರಯತ್ನದಿಂದ. ಅವರು ಸ್ಪೀಕರ್ ಆಗಿದ್ದ ವೇಳೆಯಲ್ಲೇ ಇಪ್ಪತ್ನಾಲ್ಕು ಗಂಟೆ ಪ್ರಸಾರ ಆಗುವ ಲೋಕಸಭಾ ಟಿವಿ ಚಾನಲ್ ಆರಂಭವಾಯಿತು.
ಸಿಪಿಎಂ ಬೆಂಬಲದೊಂದಿಗೆ ಮೊದಲ ಬಾರಿ ಆಯ್ಕೆ
ಚಟರ್ಜಿ ಅವರ ತಂದೆ ಮೃತಪಟ್ಟಿದ್ದರಿಂದ ತೆರವಾದ ಸ್ಥಾನಕ್ಕೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ಮೊದಲ ಸಲ ಸಂಸತ್ ಗೆ ಆಯ್ಕೆಯಾದರು. ಆಗ ಅವರನ್ನು ಸಿಪಿಎಂ ಪಕ್ಷ ಬೆಂಬಲಿಸಿತ್ತು. ಅಲ್ಲಿಂದ (1971) ನಂತರ ಹತ್ತು ಸಲ ಲೋಕಸಭೆಗೆ ಪಕ್ಷದ ಟಿಕೆಟ್ ನಿಂದಲೇ ಸೋಮನಾಥ್ ಚಟರ್ಜಿ ಆರಿಸಿಬಂದರು.
ಒಮ್ಮೆ ಮಾತ್ರ ಮಮತಾ ಬ್ಯಾನರ್ಜಿಯಿಂದ ಸೋಲು
ಸೋಮನಾಥ್ ಚಟರ್ಜಿ ಅವರು ಒಂದೇ ಒಂದು ಸಲ 1984ರಲ್ಲಿ ಮಮತಾ ಬ್ಯಾನರ್ಜಿಯಿಂದ ಸೋಲನುಭವಿಸಿದರು. ಆಕೆ ಹೆಸರು ಖ್ಯಾತವಾಗಿದ್ದು ಅಲ್ಲಿಂದ ಆಚೆಗೆ. ಚಟರ್ಜಿ ಅವರು 1989ರಿಂದ 2004ರ ವರೆಗೆ ಲೋಕಸಭೆಯಲ್ಲಿ ಸಿಪಿಎಂನ ನಾಯಕರಾಗಿದ್ದರು. ಸೋಮನಾಥ್ ಚಟರ್ಜಿ ತಂದೆ ಎನ್.ಸಿ.ಚಟರ್ಜಿ ಅವರು ಒಮ್ಮೆ ಅಖಿಲ ಭಾರತೀಯ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದರು.
ಜ್ಯೋತಿ ಬಸು ಜತೆಗೆ ಆಪ್ತತೆ
ಸಿಪಿಎಂನ ಅಗ್ರ ನಾಯಕ ಅಂತಲೇ ಪರಿಗಣಿಸುವ ಜ್ಯೋತಿ ಬಸು ಅವರ ಜತೆಗೆ ಸೋಮನಾಥ್ ಚಟರ್ಜಿಗೆ ಆಪ್ತತೆ ಇತ್ತು. ಪಶ್ಚಿಮ ಬಂಗಾಲಕ್ಕೆ ಹೊಸ ಯೋಜನೆಗಳು, ಬಂಡವಾಳ ತರಲಿ ಎಂಬ ಮಹತ್ತರವಾದ ಜವಾಬ್ದಾರಿಯೊಂದಿಗೆ ಸೋಮನಾಥ್ ಚಟರ್ಜಿ ಅವರನ್ನು ಪಶ್ಚಿಮ ಬಂಗಾಲ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದರು ಬಸು.
ಅತ್ಯುತ್ತಮ ಸಂಸದೀಯ ಪಟು
ಸೋಮನಾಥ್ ಚಟರ್ಜಿ ಅವರು ಅತ್ಯುತ್ತಮ ಸಂಸದೀಯ ಪಟು ಎಂಬ ಗೌರವಕ್ಕೂ ಪಾತ್ರರಾಗಿದ್ದರು. ರಾಷ್ಟ್ರೀಯ- ಅಂತರರಾಷ್ಟ್ರೀಯ ವಿಚಾರಗಳ ಬಗ್ಗೆ ಚಟರ್ಜಿ ಅವರಿಗಿದ್ದ ಅಪಾರ ಜ್ಞಾನ, ಯಾವುದೇ ವಿಚಾರವನ್ನು ಹಾಸ್ಯದ ಮೂಲಕ ಹೇಳುತ್ತಿದ್ದ ಪರಿ ಆಕರ್ಷಣೀಯವಾಗಿತ್ತು. ಪತ್ನಿ ರೇಣು, ಮಗ ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದ ಕುಟುಂಬವಂದಿಗ ಸೋಮನಾಥ್ ಚಟರ್ಜಿ ನೆನಪುಗಳನ್ನು ಬೇಕಾದಷ್ಟು ಉಳಿಸಿದ್ದಾರೆ. ದೀರ್ಘಕಾಲದ ಅಸ್ವಾಸ್ಥ್ಯದಿಂದ ತೀರಿಕೊಂಡ ಅವರ ನೆನಪಲ್ಲಿ ಇಷ್ಟನ್ನೇ ಹೆಕ್ಕಿಕೊಳ್ಳಲಾಗಿದೆ.