ಮಗುವಿನ ಚಿಕಿತ್ಸೆಗೆ ಹಣ ಸಂಗ್ರಹ: ಮಂಗಳಮುಖಿಯರ ಮಾನವೀಯ ಮುಖ
ಉಡುಪಿ, ನವೆಂಬರ್ 18: ಮಂಗಳಮುಖಿಯರೆಂದರೆ ನಿರ್ಲಕ್ಷ್ಯದಿಂದ ಕಾಣುವವರೇ ಹೆಚ್ಚು. ಸಮಾಜದಲ್ಲಿ ಅವರನ್ನು ಒಂದಾಗಿಸಿಕೊಳ್ಳುವ ಪ್ರಯತ್ನಗಳು ನಡೆದಿರುವುದು ವಿರಳವೇ. ಅವರಿಗೆ ಒಂದು ಗೌರವಾನ್ವಿತ ಬದುಕು ರೂಪಿಸುವುದು ನಮ್ಮ ಸಮಾಜದಲ್ಲಿ ಇನ್ನೂ ಸಾಧ್ಯವಾಗಿಲ್ಲ.
ಆದರೆ ಎಲ್ಲರಿಂದಲೂ ಅವಮಾನಕ್ಕೆ, ಅವಹೇಳನಕ್ಕೆ ಈಡಾಗಿಯೂ, ತಮ್ಮಿಂದ ಸಮಾಜಕ್ಕೆ ಒಳ್ಳೆಯದಾಗಬೇಕು ಎಂದು ಉಡುಪಿಯ ಮಂಗಳಮುಖಿಯರ ತಂಡವೊಂದು ಮಾಡಿರುವ ಮಾನವೀಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಉಡುಪಿ ಜಿಲ್ಲೆಯಲ್ಲಿ ಒಟ್ಟಾರೆ ಎರಡು ಸಾವಿರದಷ್ಟು ಮಂಗಳಮುಖಿಯರಿದ್ದಾರೆ. ಈ ಪೈಕಿ ಮುಖ್ಯವಾಹಿನಿಯಲ್ಲಿ 283 ಮಂಗಳಮುಖಿಯರು ಭಿಕ್ಷಾಟನೆ ಮಾಡುತ್ತಾ, ಸೆಕ್ಸ್ ವರ್ಕ್ ಮಾಡುತ್ತಾ ನಮ್ಮ ನಡುವೆ ಬದುಕುತ್ತಿದ್ದಾರೆ. ಅವರ ಒಂದು ತಂಡದಿಂದ ಸಮಾಜಕ್ಕೆ ಮಾದರಿ ಎನಿಸುವಂಥ ಕಾರ್ಯವೊಂದು ನಡೆದಿದೆ. ಮುಂದೆ ಓದಿ...
ಮಗುವಿನ ನೆರವಿಗೆ ಬಂದ ಮಂಗಳಮುಖಿಯರು
ದಕ್ಷಿಣ ಕನ್ನಡ ಜಿಲ್ಲೆಯ ಮಡಂತ್ಯಾರಿನ ನಿವಾಸಿ ಆರಾಧ್ಯ ಎಂಬ ಎರಡೂವರೆ ವರ್ಷದ ಹೆಣ್ಣು ಮಗುವಿಗೆ ಸಂಪೂರ್ಣ ಶ್ರವಣದೋಷ ಇತ್ತು. ಜೊತೆಗೆ ಮಗುವಿಗೆ ಮಾತನಾಡಲಾಗುತ್ತಿರಲಿಲ್ಲ. ಮಗುವಿನ ಕಿವಿಯ ಸರ್ಜರಿಗೆ ಬರೋಬ್ಬರಿ 14 ಲಕ್ಷ ರೂಪಾಯಿಗಳ ಅಗತ್ಯ ಇತ್ತು. ಮಾತ್ರವಲ್ಲ, ಮೂರು ತಿಂಗಳ ಒಳಗಾಗಿ ಈ ಸರ್ಜರಿ ಮಾಡಲೇಬೇಕಿತ್ತು. ಆಗ ಈ ಮಗುವಿನ ನೆರವಿಗೆ ಬಂದಿದ್ದು ಮಂಗಳಮುಖಿಯರ ಒಂದು ಗುಂಪು.
ದೇಣಿಗೆ ಸಂಗ್ರಹಿಸಿ ಸಂತ್ರಸ್ತರ ನೆರವಿಗೆ ನಿಂತ ಮಂಗಳಮುಖಿಯರು
ಮಾನವೀಯತೆಗೆ ಬೆಲೆ ಕಟ್ಟಲು ಸಾಧ್ಯವೇ?
ಮಗುವಿನ ವಿಷಯ ತಿಳಿದುಕೊಂಡ ಉಡುಪಿಯ ಮಂಗಳಮುಖಿಯರ ತಂಡ ಆ ಹೆಣ್ಣು ಮಗುವಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲೆಯಾದ್ಯಂತ ಸಂಚರಿಸಿ ಹಣಸಂಗ್ರಹ ಮಾಡಿದೆ. ಈ ತಂಡದ ನೇತೃತ್ವ ವಹಿಸಿದವರು ಸಮೀಕ್ಷಾ ಎಂಬಾಕೆ. ಈಕೆ ಎಂಬಿಎ ಪದವೀಧರೆ. ಸಮೀಕ್ಷಾ, ಸಾನ್ವಿ, ರೇಖಾ, ಸಂಧ್ಯಾ,ನಿಶಾ ಲಾವಣ್ಯ ಎಂಬುವರು ಉಡುಪಿ ಜಿಲ್ಲೆಯ ಕಾರ್ಕಳ, ಮಣಿಪಾಲ ಮತ್ತಿತರ ಕಡೆ ಸಂಚರಿಸಿ ಅಂಗಡಿ-ಮುಂಗಟ್ಟುಗಳು, ಮಾರುಕಟ್ಟೆ ಪ್ರದೇಶ ಮತ್ತು ಮನೆಗಳಿಗೆ ತೆರಳಿ ಎರಡೂವರೆ ವರ್ಷದ ಪುಟ್ಟ ಕಂದನಿಗಾಗಿ ಹಣ ಸಂಗ್ರಹ ಮಾಡಿದ್ದಾರೆ. ಸುಮಾರು 21 ಸಾವಿರ ರೂಪಾಯಿಯನ್ನು ಸಂಗ್ರಹಿಸಿ ಅದನ್ನು ಮಗುವಿಗೆ ತಲುಪಿಸಿದ್ದಾರೆ. ಈ ಮೂಲಕ ಮಂಗಳಮುಖಿಯರು ಮಾನವೀಯತೆ ಮೆರೆದಿದ್ದಾರೆ. ಈ ಹಣ ಸಣ್ಣ ಮೊತ್ತದ್ದೇ ಆಗಿದ್ದರೂ ಮಗುವಿಗಾಗಿ ಮಿಡಿದ ಮಂಗಳಮುಖಿಯರ ಮಾನವೀಯತೆ ಬೆಲೆ ಕಟ್ಟಲಾಗದ್ದು.
ತಂಡದಿಂದ ಹತ್ತು ಹಲವು ಸಮಾಜ ಕಾರ್ಯ
ಉಡುಪಿ ಜಿಲ್ಲೆಯಲ್ಲಿ ಆಶ್ರಯ ಸಮುದಾಯ ಎಂಬ ಸಂಘಟನೆಯನ್ನು ಮಂಗಳಮುಖಿಯರು ಮಾಡಿಕೊಂಡಿದ್ದಾರೆ. ಇದರಲ್ಲಿ 283 ಸದಸ್ಯರಿದ್ದಾರೆ. ಪಿಯುಸಿ ಮಾಡಿದವರು, ಪದವಿ ಮಾಡಿದವರು, ಎಂಬಿಎ ಕಲಿತವರು ಮತ್ತು ಬಿಬಿಎಂ ಕಲಿತವರು ಈ ಸಂಘಟನೆಯಲ್ಲಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಸಮೀಕ್ಷಾ ಎಂಬಾಕೆಯ ತಂಡ ಉಡುಪಿಯ ಬಸ್ ನಿಲ್ದಾಣದಲ್ಲಿದ್ದ ನಿರ್ಗತಿಕರು, ಅಶಕ್ತರು ಮತ್ತು ಮನೆಯಿಲ್ಲದವರಿಗೆ ಊಟ ನೀಡಿದೆ. ಸಮೀಕ್ಷಾ ಎಂಬಾಕೆ ತನ್ನ ಸ್ವಂತ ದುಡ್ಡಿನಲ್ಲಿ ಹತ್ತು ಮನೆಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದಾರೆ. ಎರಡೂವರೆ ವರ್ಷದ ಹೆಣ್ಣು ಮಗುವಿನ ಆಪರೇಷನ್ ಗಾಗಿ ಯಾವುದೇ ಪ್ರಚಾರ ಬಯಸದೆ ಹಣ ಸಂಗ್ರಹ ಮಾಡಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಈ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿರುವ ಜನರಿಗೂ ಮಾದರಿಯಾಗಿದ್ದಾರೆ.
ಚುನಾವಣೆ: ನೋಂದಣಿಗೆ ತೃತೀಯ ಲಿಂಗಿಗಳ ನಿರಾಸಕ್ತಿ, ಕಾರಣಗಳು
"ಮಂಗಳಮುಖಿಯರ ಬಗ್ಗೆ ಅರಿವು ಮೂಡಿಸಬೇಕು"
ಮಂಗಳಮುಖಿಯರ ಬಗ್ಗೆ ಈ ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಜನಸಾಮಾನ್ಯರಲ್ಲಿ ಈ ಕುರಿತು ಅರಿವು ಮೂಡಿಸಬೇಕು. ಮಾನವೀಯ ನೆಲೆಯಲ್ಲಿ ಇವರಿಗೂ ಮೀಸಲಾತಿ ಒದಗಿಸಬೇಕು. ಮಂಗಳಮುಖಿಯರನ್ನೂ ಮುಖ್ಯವಾಹಿನಿಗೆ ತರುವ ಪ್ರಯತ್ನ ಆಗಬೇಕು. ಶಾಲಾ ಹಂತದಲ್ಲೇ ಮಂಗಳಮುಖಿಯರ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಿದರೆ ಮಂಗಳಮುಖಿಯರ ಕುರಿತು ಸಮಾಜಕ್ಕೆ ಬೇರೆಯೇ ದೃಷ್ಟಿಕೋನ ಬರುತ್ತದೆ ಎನ್ನುತ್ತಾರೆ ಮಂಗಳಮುಖಿಯರು ಮತ್ತು ಪರಿತ್ಯಕ್ತರ ಬಗ್ಗೆ ಸಾಮಾಜಿಕ ಕೆಲಸ ಮಾಡುತ್ತಿರುವ ಆಪ್ತಸಮಾಲೋಚಕಿ ಜಯಶ್ರೀ ಭಟ್.