ಜನ-ಪೊಲೀಸರ ಸಂಘರ್ಷಕ್ಕೆ ಕಾರಣವಾಗುತ್ತಿದೆ ದುಬಾರಿ ದಂಡ
ಬೆಂಗಳೂರು, ಸೆಪ್ಟೆಂಬರ್ 13: ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಆರಂಭದಲ್ಲಿ ಫೇಸ್ಬುಕ್ನಲ್ಲಿ ಒಬ್ಬರು ಹೀಗೆ ಬರೆದಿದ್ದರು. 'ಅಮೆರಿಕದಲ್ಲಿ ತಮಗೆ ಅಡ್ಡ ಬಂದ ಸಂಚಾರ ಪೊಲೀಸನಿಗೆ ವ್ಯಕ್ತಿಯೊಬ್ಬ ಸಿಟ್ಟಿನಿಂದ ಗುಂಡು ಹೊಡೆದಿದ್ದ. ನಮ್ಮಲ್ಲಿ ಕಠಿಣವಾದ ಸಂಚಾರ ನಿಯಮಗಳು ಜಾರಿಗೆ ಬರುತ್ತಿವೆ. ಇದು ಜನಸಾಮಾನ್ಯರು ಮತ್ತು ಪೊಲೀಸರ ನಡುವೆ ಜಗಳಕ್ಕೆ ಕಾರಣವಾಗುವುದು ಖಚಿತ. ಇದು ಅಪಾಯಕಾರಿ ಮತ್ತು ಆತಂಕದ ಸನ್ನಿವೇಶಗಳಿಗೆ ಕಾರಣವಾಗುತ್ತದೆ' ಎಂದು ಕಳವಳ ವ್ಯಕ್ತಪಡಿಸಿದ್ದರು.
ಸೆ. 1ರಿಂದ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ನಿಯಮ ಜಾರಿಗೆ ಬಂದಾಗಿನಿಂದ ಇಲ್ಲಿಯವರೆಗಿನ ವಿವಿಧ ಘಟನೆಗಳನ್ನು ನೋಡಿದಾಗ ಈ ಕಳವಳ ನಿಜವಾಗುತ್ತಿದೆ ಎಂಬ ಅನಿಸಿಕೆ ಮೂಡುತ್ತಿದೆ. ವಾಹನ ಸವಾರರು ಮತ್ತು ಪೊಲೀಸರ ನಡುವಿನ ಸಂಘರ್ಷ ಹೊಸತೇನಲ್ಲ. ಈ ಹಿಂದೆಯೂ ದಂಡದಿಂದ ತಪ್ಪಿಸಿಕೊಳ್ಳಲು ಮತ್ತು ದಾಖಲೆಗಳಿದ್ದಾಗಲೂ ಪೊಲೀಸರು ಹಣಕ್ಕಾಗಿ ನೆಪಗಳನ್ನು ಹೇಳುವಾಗ ಸಾರ್ವಜನಿಕರು ಕೋಪಗೊಂಡು ಜಗಳ, ಹಲ್ಲೆಗಳು ನಡೆದ ನಿದರ್ಶನಗಳಿವೆ. ಇದು ಕೊನೆಗೆ ರಾಜಿ ರೂಪದಲ್ಲಿಯೋ ಅಥವಾ ದಂಡವನ್ನು ತೆರುವ ಮೂಲಕವೋ ಮುಕ್ತಾಯವಾಗುತ್ತಿತ್ತು. ಜತೆಗೆ ಈ ಜಗಳಗಳು ಗಂಭೀರ ಸ್ವರೂಪ ಪಡೆದುಕೊಂಡಿದ್ದು ಕಡಿಮೆ.
ದಂಡ ವಸೂಲಿಗೆ ಬಂದ ಮಫ್ತಿ ಪೊಲೀಸ್ ಮೇಲೆ ಜನಾಕ್ರೋಶ
ಇದೇ ಪರಿಸ್ಥಿತಿ ಈಗಲೂ ಮುಂದುವರಿಯಲಿದೆ ಎನ್ನುವಂತಿಲ್ಲ. ಏಕೆಂದರೆ ಈ ಹಿಂದೆ ಕೊಡುತ್ತಿದ್ದ ದಂಡದ ಮೊತ್ತಕ್ಕೂ, ಈಗ ವಿಧಿಸುತ್ತಿರುವ ದಂಡದ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ದಾಖಲೆಗಳನ್ನು ಹೊಂದಿರುವುದು, ರಸ್ತೆ ಸಂಚಾರ ಪಾಲಿಸುವ ವಿಚಾರಗಳಲ್ಲಿ ಸಣ್ಣ ತಪ್ಪಾದರೂ ಭಾರಿ ದಂಡ ತೆರಬೇಕಾಗುತ್ತದೆ. ಇನ್ನು ಚಪ್ಪಲಿ ಹಾಕಿಕೊಂಡು ವಾಹನ ಚಲಾಯಿಸಿದರೂ ದಂಡ ಬೀಳುತ್ತದೆ ಎಂಬ ವಿಚಿತ್ರ ನಿಯಮಗಳು ಜೀವ ಪಡೆದುಕೊಂಡಿವೆ. ಇವೆಲ್ಲವೂ ಜನರನ್ನು ಮತ್ತಷ್ಟು ಗಾಬರಿಗೊಳಿಸಿವೆ.
ದುಡಿದ ದುಡ್ಡು 'ದಂಡ'ಕ್ಕೆ ತೆತ್ತರೆ...
ಮುಖ್ಯವಾಗಿ ವಾಹನ ಸವಾರರೆಲ್ಲರೂ ಹಣವಂತರಲ್ಲ ಎನ್ನುವುದು ನೀತಿ ನಿರೂಪಕರು ಗಮನಿಸಬೇಕಾದ ಸಂಗತಿ. ಹೆಚ್ಚಿನವರು ಸಾಲ ಮಾಡಿ, ಇಎಂಐ ಮೂಲಕ ವಾಹನ ಖರೀದಿ ಮಾಡಿರುತ್ತಾರೆ. ಕುಟುಂಬ ಸಲಹುವ ಖರ್ಚಿನೊಂದಿಗೆ ವಾಹನದ ಸಾಲ, ನಿರ್ವಹಣೆ ವೆಚ್ಚವನ್ನೂ ಭರಿಸಬೇಕಾದ ಅಸಹಾಯಕ ಸ್ಥಿತಿಯಲ್ಲಿರುತ್ತಾರೆ. ಹೀಗಿದ್ದವರು ತಿಳಿದೋ ತಿಳಿಯದೆಯೋ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಅದಕ್ಕೆ ತೆರಬೇಕಾಗುವ ದಂಡ, ಇಡೀ ಕುಟುಂಬದ ಬದುಕಿನ ಮೇಲೆ ಬಹುದೊಡ್ಡ ಪರಿಣಾಮವನ್ನೇ ಬೀರುತ್ತದೆ. ಅದರ ಫಲಿತಾಂಶವೇ ಆಕ್ರೋಶ.
ದುಬಾರಿ ದಂಡ: ಎಲ್ಲಾ ರಾಜ್ಯಗಳ ಸಿಎಂ ಸಭೆ ಕರೆಯಲು ಕೇಂದ್ರ ನಿರ್ಧಾರ
ಆಕ್ರೋಶಕ್ಕೆ ಬಲಿಯಾಗುವುದು ಪೊಲೀಸರು
ಕೆಲವು ದಿನಗಳಿಂದ ದೇಶದ ವಿವಿಧೆಡೆ ಸಂಚಾರ ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ಘರ್ಷಣೆ ನಡೆಯುತ್ತಿರುವುದು ವರದಿಯಾಗುತ್ತಿವೆ. ಸಣ್ಣ ಜಗಳಗಳು ದೊಡ್ಡ ಸಂಘರ್ಷಕ್ಕೆ ತಿರುಗುತ್ತಿವೆ. ಮುಖ್ಯವಾಗಿ ತಾವು ಕಷ್ಟಪಟ್ಟು ದುಡಿದ ದುಡ್ಡನ್ನು ವ್ಯರ್ಥ ಮಾಡಬೇಕಲ್ಲ ಎಂಬ ಸಿಟ್ಟು, ಆಕ್ರೋಶ ಪೊಲೀಸರ ಮೇಲೆ ವ್ಯಕ್ತವಾಗುತ್ತಿವೆ. ಕಾನೂನಿನ ಪ್ರಕಾರ ನಡೆದುಕೊಳ್ಳಬೇಕಾದ ಪೊಲೀಸರೂ ಈ ವಿಚಾರದಲ್ಲಿ ಕೆಲವೊಮ್ಮೆ ಅಸಹಾಯಕರು. ಸರ್ಕಾರದ ನಿಯಮದ ಮೇಲೆ ಇರುವ ಕೋಪವನ್ನು ತೀರಿಸಿಕೊಳ್ಳಲೂ ಜನರಿಗೆ ಸಿಗುವುದು ಪೊಲೀಸರು. ಏಕೆಂದರೆ ದಂಡ ವಸೂಲಿ ಮಾಡುವ ಮೂಲಕ ಜನರಿಗೆ ಮುಖಾಮುಖಿಯಾಗುವವರು ಅವರು ಮಾತ್ರ.
ಸಾರ್ವಜನಿಕರು-ಪೊಲೀಸರ ನಡುವೆ ಜಗಳ
ಉಡುಪಿ ಜಿಲ್ಲೆಯಲ್ಲಿ ಮಫ್ತಿಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ವಾಹನಗಳನ್ನು ತಡೆದು ದಂಡ ವಸೂಲಿಗೆ ಇಳಿದಿದ್ದರು. ಸಮವಸ್ತ್ರ ಇಲ್ಲದೆ ಕಾರಣ ಸಾರ್ವಜನಿಕರಲ್ಲಿ ಅನುಮಾನ ಮೂಡಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಗುರುವಾರ ನಡೆದಿದೆ. ಇದು ಸಣ್ಣ ಉದಾಹರಣೆಯಷ್ಟೇ.
ಬಿಹಾರದ ಪಟ್ನಾದಲ್ಲಿ ದುಬಾರಿ ದಂಡವು ದೊಡ್ಡ ಮಟ್ಟದ ಗಲಾಟೆಗೆ ಕಾರಣವಾಗಿದೆ. ಕಾನೂನು ಉಲ್ಲಂಘಿಸಿದ ಮಹಿಳೆಗೆ ದಂಡ ವಿಧಿಸಲು ಪೊಲೀಸರು ಮುಂದಾದರು. ಆಗ ಮಹಿಳೆಗೂ ಪೊಲೀಸರಿಗೂ ವಾಗ್ವಾದ ನಡೆಯಿತು. ಅಲ್ಲಿ ಜಮಾಯಿಸಿದ ಸಾರ್ವಜನಿಕರು ಮಹಿಳೆಯ ಬೆಂಬಲಕ್ಕೆ ನಿಂತರು. 'ನನ್ನ ಬಳಿ ಎಲ್ಲ ದಾಖಲೆಗಳೂ ಇವೆ. ಆದರೆ ಸೀಟ್ ಬೆಲ್ಟ್ ಹಾಕದ ಕಾರಣಕ್ಕೆ 50,000 ದಂಡ ಕಟ್ಟುವಂತೆ ಹೇಳುತ್ತಿದ್ದಾರೆ' ಎಂದು ಮಹಿಳೆ ಆಕ್ರೋಶ ಹೊರಹಾಕಿದರು. ವಾಗ್ವಾದ ಜೋರಾಗುತ್ತಿದ್ದಂತೆ ಸಿಟ್ಟಿಗೆದ್ದ ಜನರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಕೊನೆಗೆ ಹೆಚ್ಚಿನ ಪೊಲೀಸರನ್ನು ಕರೆಸಿ ಲಾಠಿ ಪ್ರಹಾರ ನಡೆಸಿ ಜನರ ಗುಂಪನ್ನು ಚೆದುರಿಸಲಾಯಿತು. ಇಂತಹ ಹಲವು ಘಟನೆಗಳು ನಡೆದಿವೆ.
ಪೊಲೀಸರ ಮೇಲೆ ಹೆಚ್ಚುತ್ತಿರುವ ಸಿಟ್ಟು
ಸಂಚಾರ ನಿಯಮ ಉಲ್ಲಂಘನೆ ಮಾಡುವ ಪೊಲೀಸರ ವಿಡಿಯೋಗಳನ್ನು ಚಿತ್ರೀಕರಿಸಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಇನ್ನು ಕೆಲವರು ಪೊಲೀಸರನ್ನು ಅಡ್ಡ ಹಾಕಿ ನೇರವಾಗಿ ಪ್ರಶ್ನಿಸುತ್ತಿದ್ದಾರೆ. ಕಾರ್ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಹೆಲ್ಮೆಟ್ ಇಲ್ಲದೆ ಬೈಕ್ನಲ್ಲಿ ಹೋಗುತ್ತಿದ್ದ ಇಬ್ಬರು ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ವಿಡಿಯೋ ವೈರಲ್ ಆಗಿತ್ತು.
ಈ ಹೊಸ ಕಾನೂನು ಜನರಲ್ಲಿ ಪೊಲೀಸರ ಮೇಲಿನ ಅಸಹನೆ, ಸಿಟ್ಟು ಹೆಚ್ಚು ಮಾಡುತ್ತಿದೆ ಎನ್ನುವುದಕ್ಕೆ ಇಂತಹ ಹಲವು ನಿದರ್ಶನಗಳು ಕಾಣಿಸುತ್ತಿವೆ. ಇದು ಮತ್ತಷ್ಟು ತೀವ್ರವಾದರೂ ಅಚ್ಚರಿಯಿಲ್ಲ. ಆದರೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಷ್ಟೂ ಕಾನೂನು ಸುವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಅದಕ್ಕೆ ಆರಂಭದಲ್ಲಿಯೇ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.
ಟ್ರಾಫಿಕ್ ಪೊಲೀಸರಿಗೆ ಹೆದರಿ ತಂದೆಯೊಬ್ಬ ಮಗನಿಗೆ ಏನು ಮಾಡಿದ್ರು ಗೊತ್ತಾ? :