ಸಂಜಯ್ ಗಾಂಧಿಯಿಂದ ಡಿಕೆಶಿವರೆಗೆ, ತಿಹಾರ್ ಜೈಲಲ್ಲಿ ಕಂಬಿ ಎಣಿಸಿದ ಘಟಾನುಘಟಿಗಳು...
ತಿಹಾರ್ ಜೈಲಿನ ಕಂಬಿಗಳು ಗದ್ದುಗೆಯಲ್ಲಿ ಮೆರೆದವರ ತೇವಗೊಂಡ ಕಣ್ಣೀರನ್ನು ಕಂಡಿವೆ, ಪ್ರಭಾವಿಗಳು ಏನೂ ಅಲ್ಲ ಎಂಬಂತಾಗಿ ಬಿಳಿ ಬಟ್ಟೆಯಲ್ಲಿ ದಿನ ಕಳೆದಿದ್ದನ್ನು ನೋಡಿವೆ. ಕೋಟಿ ಕೋಟಿ ಭ್ರಷ್ಟಾಚಾರ ಆರೋಪ ಹೊತ್ತವರು ಸರತಿ ಸಾಲಲ್ಲಿ ತಟ್ಟೆ ಹಿಡಿದು ಊಟಕ್ಕಾಗಿ ನಿಂತಿದ್ದನ್ನು ನೋಡಿವೆ... ಹೌದು, ತಿಹಾರ್ ಜೈಲಿನ ಎಷ್ಟೋ ಕಂಬನಿಗಳ ಹಿಂದೆ ಅಪರಾಧ, ಭ್ರಷ್ಟಾಚಾರ, ವಂಚನೆ, ಸುಲಿಗೆಯ ಕತೆಗಳಿವೆ.... ಪ್ರಾಯಶ್ಚಿತ್ತದ ಮನಸ್ಸಿದೆ, ಸನ್ನಡತೆಯಿಂದ ಬಿಡುಗಡೆಯಾಗುವ ತವಕವಿದೆ...
ದಕ್ಷಿಣ ಏಷ್ಯಾದಲ್ಲೇ ಅತೀ ದೊಡ್ಡ ಜೈಲು ಆವರಣವನ್ನು ಹೊಂದಿರುವ ತಿಹಾರ್ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು, ಕರ್ನಾಟಕದ ಕಾಂಗ್ರೆಸ್ ಮುಖಂಡ, ಶಾಸಕ ಡಿ.ಕೆ.ಶಿವಕುಮಾರ್ ಅವರ ಬಂಧನದಿಂದ.
ಅವತ್ತು ಜಾರ್ಜ್; ಇವತ್ತು ಡಿಕೆ: ತಿಹಾರ್ ಜೈಲಿಗೆ ಕಾಲಿಟ್ಟ ಎರಡನೇ ಕನ್ನಡಿಗ
ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರು ಜಾರಿ ನಿರ್ದೇಶನಾಲಯದ ವಶದಲ್ಲಿದ್ದರು. ಸತತ 14 ದಿನಗಳನ್ನು ಇ.ಡಿ. ವಶದಲ್ಲಿ ಕಳೆದಿರುವ ಡಿಕೆಶಿ ಅವರಿಗೆ ಸೆಪ್ಟೆಂಬರ್ 17 ರಂದು ವಿಶೇಷ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿತ್ತು.
ಆದರೆ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದ ಡಿಕೆ ಶಿವಕುಮಾರ್ ಅವರನ್ನು ಬುಧವಾರ ತಿಹಾರ್ ಜೈಲಿನ ಬದಲಿಗೆ ರಾಮಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆಯ ನಂತರ, ವೈದ್ಯರು ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಇಂದು ತಿಹಾರ್ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಜೈಲಿಂದಲೇ ಚುನಾವಣೆಗೆ ನಿಂತು, ಗೆದ್ದಿದ್ದ ಮೋಡಿಗಾರ ಜಾರ್ಜ್ ಫರ್ನಾಂಡಿಸ್!
ಇತ್ತೀಚೆಗಷ್ಟೇ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರನ್ನು ತಿಹಾರ್ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಈ ಎರಡು ಬೆಳವಣಿಗೆಯ ನಂತರ ಇದುವರೆಗೆ ತಿಹಾರ್ ಜೈಲು ಸೇರಿದ್ದ ಸೆಲೆಬ್ರಿಟಿಗಳು ಯಾರ್ಯಾರು ಎಂಬ ಚರ್ಚೆ ನಡೆಯುತ್ತಿದೆ. ಕನ್ನಿಮೋಳಿಯಿಂದ ಡಿಕೆಶಿ ವರೆಗೆ ತಿಹಾರ್ ಜೈಲಿನ ಕಂಬಿ ಎಣಿಸಿದ ಘಟಾನುಘಟಿಗಳ ಪಟ್ಟಿ ಇಲ್ಲಿದೆ...
ಸಂಜಯ್ ಗಾಂಧಿಯನ್ನು ಜೈಲಿಗೆ ತಳ್ಳಿದ ಕಿಸ್ಸಾ ಕುರ್ಸಿ ಕಾ ಚಿತ್ರ!
ಜನತಾ ಪಕ್ಷದ ಸಂಸದೆ ಅಮೃತಾ ನಹಾತಾ ಎಂಬುವವರು 1977 ರಲ್ಲಿ ನಿರ್ಮಿಸಿದ್ದ ರಾಜಕೀಯ ವಿಡಂಬನೆಯನ್ನೊಳಗೊಂಡ 'ಕಿಸ್ಸಾ ಕುರ್ಸಿ ಕಾ' ಚಿತ್ರದಲ್ಲಿ ವಿವಾದಾತ್ಮಕ ಅಂಶಗಳಿವೆ ಎಂದು ದೂರಿ ಅದನ್ನು ನಿಷೇಧಿಸಲಾಗಿತ್ತು. ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದ ಆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಯಾವುದೇ ನಡೆ ಕಂಡುಬಂದರೂ ಅದನ್ನು ಹತ್ತಿಕ್ಕುವ ಪ್ರಯತ್ನವನ್ನು ಸಂಜಯ್ ಗಾಂಧಿ ಮಾಡುತ್ತಿದ್ದರು. ಈ ಚಿತ್ರದ ಎಲ್ಲಾ ಪ್ರಿಂಟ್ ಗಳನ್ನು ಅಂದಿನ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವಿ.ಸಿ.ಶುಕ್ಲಾ ಮತ್ತು ಸಂಜಯ್ ಗಾಂಧಿ ನಾಶ ಪಡಿಸಿದ್ದಾರೆ ಎಂಬ ಆರೋಪ ಎದುರಾಗಿತ್ತು. ಹನ್ನೊಂದು ತಿಂಗಳುಗಳ ಕಾಲ ನಡೆದ ಈ ಪ್ರಕರಣದ ತೀರ್ಪು 1979 ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು. ನಂತರ ಆಗಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಪುತ್ರ ಸಂಜಯ್ ಗಾಂಧಿ ತಿಹಾರ್ ಜೈಲಿನ ಕಂಬಿಗಳನ್ನು ಎಣಿಸಿದ್ದರು!
ಡಿಕೆಶಿಗೆ ನ್ಯಾಯಾಂಗ ಬಂಧನ, ತಿಹಾರ್ ಜೈಲು ಬದಲಿಗೆ ಆಸ್ಪತ್ರೆ ವಾಸ
ತಿಹಾರ್ ಜೈಲು ವಾಸ ಮಾಡಿದ ಮೊದಲ ಕನ್ನಡಿಗ ಫರ್ನಾಂಡೀಸ್
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿ ಭಾಷಣ ಮಾಡುತ್ತಿದ್ದ ಕಡೆಯೆಲ್ಲ ಡೈನಮೈಟ್ ಸಿಡಿಸುತ್ತಿದ್ದ ಜಾರ್ಝ್ ಫರ್ನಾಂಡೀಸ್ ಮತ್ತು ಅವರ ಸಹಚರರು ಬರೋಡಾದಲ್ಲಿ ಡೈನಮೈಟ್ ಸಿಡಿಸಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲಿ ಅವರನ್ನು ತಿಹಾರ್ ಜೈಲಿಗೆ ಕಳಿಸಲಾಗಿತ್ತು. ನಂತರ ಜೈಲಿನಿಂದಲೇ ಬಿಹಾರದ ಮುಜಾಫರ್ ನಗರ ಕ್ಷೇತ್ರದಿಂದ ಚುನಾವಣೆಗೆ ನಿಂತು ಕಾಂಗ್ರೆಸ್ ಅಭ್ಯರ್ಥಿಯನ್ನು ಫರ್ನಾಂಡೀಸ್ ಮೂರು ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದು ಈಗ ಇತಿಹಾಸ!
ಕನ್ನಿಮೋಳಿ
2008 ರಲ್ಲಿ ಬೆಳಕಿಗೆ ಬಂದ 2ಜಿ ಹಗರಣ ಸರ್ಕಾರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿಯಷ್ಟು ಮೌಲ್ಯದ ನಷ್ಟವುಂಟು ಮಾಡಿತ್ತು. 2ಜಿ (ಸೆಕೆಂಡ್ ಜನರೇಶನ್ ದೂರಸಂಪರ್ಕ ಸೇವೆ) ಮೊಬೈಲ್ ಸೇವೆಗೆ 2008 ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿ ಸರ್ಕಾರ 9 ದೂರಸಂಪರ್ಕ ಕಂಪೆನಿಗಳಿಗೆ ಬೇಕಾಬಿಟ್ಟಿ ಲೈಸೆನ್ಸ್ ನೀಡಿದೆ ಎಂಬ ಪ್ರಕರಣ ಇದಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಡಿಎಂಕೆಯ ಕನ್ನಿಮೋಳಿ ಅವರನ್ನು ಬಂಧಿಸಿ, ತಿಹಾರ್ ಜೈಲಿನಲ್ಲಿರಿಸಲಾಗಿತ್ತು.
ಡಿಕೆಶಿ ಹಾಗೂ ಆಪ್ತರಿಗೆ ಇಡಿ ಕೇಸಲ್ಲಿ ಕೋರ್ಟಿನಿಂದ ಸಿಹಿ ಕಹಿ ಸುದ್ದಿ
ಪಿ.ಚಿದಂಬರಂ
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿದ್ದ ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರನ್ನು ಸೆಪ್ಟೆಂಬರ್ 5 ರಂದು ತಿಹಾರ್ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಸದ್ಯಕ್ಕೆ ಡಿ.ಕೆ. ಶಿವಕುಮಾರ್ ಅವರನ್ನೂ ತಿಹಾರ್ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಕಾಂಗ್ರೆಸ್ ನ ಇಬ್ಬರು ಮಹಾನ್ ನಾಯಕರ ಜೈಲುವಾಸಕ್ಕೆ ತಿಹಾರ್ ಸಾಕ್ಷಿಯಾಗಿದೆ.
ಲಾಲೂ, ಕಲ್ಮಾಡಿ ಸೇರಿ ಮತ್ತಷ್ಟು ಖೈದಿಗಳು
ಮೇವು ಹಗರಣದಲ್ಲಿ ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, ಸಹರಾ ಕಂಪನಿಯ ಸುಬ್ರತಾ ರಾಯ್, ಕಾಮನ್ ವೆಲ್ತ್ ಗೇಮ್ಸ್ ಹಗರಣದಲ್ಲಿ ಸುರೇಶ್ ಕಲ್ಮಾಡಿ, 2ಜಿ ಹಗರಣದಲ್ಲಿ ಎ. ರಾಜಾ, ರೂಪದರ್ಶಿ ಜೆಸ್ಸಿಕಾ ಲಾಲ್ ಕೊಲೆ ಪ್ರಕರಣದಲ್ಲಿ ಮನು ಶರ್ಮಾ, ದೇಶವಿರೋಧಿ ಘೋಷಣೆ ಕೂಗಿದ ಆರೋಪ ಎದುರಿಸುತ್ತಿದ್ದ ಕನ್ನಯ್ಯ ಕುಮಾರ್ ಮುಂತಾದ ಘಟಾನುಘಟಿಗಳು ತಿಹಾರ್ ಜೈಲಿನ ಕಂಬಿ ಎಣಿಸಿದ್ದನ್ನು ಇಲ್ಲಿ ಸ್ಮರಿಸಬಹುದು.