ಮೋದಿ ಸರ್ಕಾರಕ್ಕೆ 4ರ ಸಂಭ್ರಮ, ಟಾಪ್ 15ಯೋಜನೆಗಳು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು ಕಳೆದಿವೆ. 2019ರಲ್ಲಿ ಮಹತ್ವದ ಲೋಕಸಭೆ ಚುನಾವಣೆ ಎದುರಾಗಲಿರುವುದರಿಂದ ಇದು ಮೋದಿ ಸರ್ಕಾರಕ್ಕೆ ನಿರ್ಣಾಯಕ ವರ್ಷವಾಗಲಿದೆ.
ಮೋದಿ ತಮ್ಮ ಕನಸಿನ ಯೋಜನೆಗಳ ಬೀಜವನ್ನು ಈಗಾಗಲೇ ಬಿತ್ತಾಗಿದೆ. ಎಷ್ಟೋ ಯೋಜನೆಗಳು ಫಲ ನೀಡುತ್ತಿದ್ದು, ಇನ್ನಷ್ಟು ಕೊನೆ ವರ್ಷದಲ್ಲಿ ಪ್ರಗತಿ ಕಾಣಲಿವೆ.
ಸಾರ್ವಜನಿಕರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಭದ್ರತೆ ಒದಗಿಸುವ ಯೋಜನೆಗಳನ್ನು ಜಾರಿಗೊಳಿಸಿದ ಮೋದಿ ಅವರು, ಬನ್ನಿ ಒಟ್ಟಿಗೆ ಕಾರ್ಯ ನಿರ್ವಹಿಸೋಣ ಎಂದು ಕರೆ ನೀಡಿದ್ದಲ್ಲದೆ, 'ಸಾಫ್ ನಿಯತ್, ಸಹಿ ವಿಕಾಸ್' ಎನ್ನುತ್ತಾ ಮತ್ತೊಮ್ಮೆ ಸರ್ಕಾರ ಸ್ಥಾಪನೆಗೆ ನೆರವಾಗಿ ಎಂದು ಕೋರಿದ್ದಾರೆ.
ನನ್ನ ಬಗ್ಗೆ ಭಾರತೀಯರು ಹೆಮ್ಮೆ ಪಡುತ್ತಾರೆ: ಇದು ಮೋದಿ ಮಾತು
ಸ್ವಚ್ಛ ಭಾರತ ಯೋಜನೆ, ಜನಧನ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಉಜ್ವಲ ಯೋಜನೆ, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಸೇರಿದಂತೆ ಅನೇಕ ಯೋಜನೆಗಳನ್ನು ಎನ್ಡಿಎ ಸರ್ಕಾರ ಜಾರಿಗೆ ಬಂದಿದೆ.
ಮುಂಬರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಎನ್ಡಿಎ ಸರ್ಕಾರದ ಜನಪ್ರಿಯ ಯೋಜನೆಗಳತ್ತ ಒಂದು ನೋಟ ಇಲ್ಲಿದೆ...
ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರಶಂಸೆ
ಮಹಾತ್ಮಾ ಗಾಂಧೀಜಿ ಕಂಡ ಕನಸಿನಂತೆ ಅಕ್ಟೋಬರ್ 2 ರಂದು ಆರಂಭವಾದ ಸ್ವಚ್ಛ ಭಾರತ ಅಭಿಯಾನಕ್ಕೆ ವಿವಿಧ ಕ್ಷೇತ್ರಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 2019ರ ವೇಳೆಗೆ ಈ ಕನಸಿನ ಅಭಿಯಾನ ಪೂರ್ಣಗೊಳಿಸುವ ಸಂಕಲ್ಪ ಹೊಂದಲಾಗಿತ್ತು. ಸಿನಿಮಾ ತಾರೆಯರು, ಉದ್ಯಮಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ದೇಶದ ಎಲ್ಲೆಡೆ ಒಗ್ಗಟ್ಟಿನಿಂದ ಸ್ವಚ್ಛತೆ ಬಗ್ಗೆ ಚಿಂತಿಸುವಂತೆ ಮಾಡುವಲ್ಲಿ ಯೋಜನೆ ಸಫಲವಾಗಿದೆ. ಸ್ವಚ್ಛತಾ ನಗರಿ ಎಂಬ ಪಟ್ಟ ಗಳಿಸಲು ದೇಶದ ವಿವಿಧ ಸಿಟಿಗಳ ನಡುವೆ ಪೈಪೋಟಿ ಏರ್ಪಟ್ಟು, ಉತ್ತಮ ಫಲಿತಾಂಶ ಹೊರ ಬಂದಿದೆ.
ನಾರಿಶಕ್ತಿ, ವಿಜ್ಞಾನ ಶಕ್ತಿ, ಸಹಕಾರದ ಬಗ್ಗೆ ಮೋದಿ ಮನದ ಮಾತು
ಮೇಕ್ ಇನ್ ಇಂಡಿಯಾ
ಮೇಕ್ ಇನ್ ಇಂಡಿಯಾ.. ಭಾರತವನ್ನು ಬೃಹತ್ ಉತ್ಪಾದನಾ ಕೇಂದ್ರವನ್ನಾಗಿಸುವುದು ಸೆಪ್ಟೆಂಬರ್ 25 ರಂದು ಆರಂಭವಾದ ಯೋಜನೆ. ಪ್ರತಿ ರಾಜ್ಯದಲ್ಲೂ ಹೂಡಿಕೆ ಮಾಡುವಂತೆ ಸ್ಥಳೀಯ ಮಟ್ಟದಲ್ಲಿ ಆಂದೋಲನ ಆರಂಭಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹರಿದು ಬರುವಂತೆ ಎಫ್ ಡಿಐ ನಿಯಮಗಳನ್ನು ಸಡಿಲಿಸಲಾಗಿದೆ.
ಬೇಟಿ ಬಚಾವೋ ಯೋಜನೆ
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಮೂಲಕ ಹೆಣ್ಣು ಮಕ್ಕಳ ರಕ್ಷಣೆ ಹಾಗೂ ವಿದ್ಯಾಭ್ಯಾಸಕ್ಕೆ 100 ಕೋಟಿ ರು ಮೀಸಲಿಡಲಾಗಿದೆ. ಸ್ತ್ರೀ ಹಾಗೂ ಪುರುಷ ಅನುಪಾತ ಸರಿ ಹೊಂದಿಸುವುದು, ಭ್ರೂಣ ಹತ್ಯೆ ತಡೆ, ಬಾಲಕಿಯರಿಗೆ ರಕ್ಷಣೆ, ಶಿಕ್ಷಣ ಮುಂತಾದವು ಯೋಜನೆಯ ಉದ್ದೇಶ
ಮುದ್ರಾ ಬ್ಯಾಂಕ್ ಯೋಜನೆ
ಸಣ್ಣ ಉದ್ದಿಮೆಗಳಿಗೆ ಬಲ ನೀಡಲು ಸಾರ್ವಜನಿಕ ಕ್ಷೇತ್ರದ ಆರ್ಥಿಕ ಸಂಸ್ಥೆಯಾಗಿ ಮುದ್ರಾ ಬ್ಯಾಂಕ್ ಸ್ಥಾಪನೆ ಮಾಡಲಾಯಿತು. ಏಪ್ರಿಲ್ 8 ರಂದು ಯೋಜನೆ ಆರಂಭಿಸಲಾಯಿತು. ಶಿಶು, ಕಿಶೋರ, ತರುಣ ಹೀಗೆ ಮೂರು ಹಂತದಲ್ಲಿ ಸಾಲ ನೀಡಿಕೆ, 2 ರಿಂದ 10 ಲಕ್ಷ ರು ತನಕ ಸಣ್ಣ ಉದ್ದಿಮೆದಾರರಿಗೆ ಸಾಲ ನೀಡಲಾಗುತ್ತದೆ.
ಡಿಜಿಟಲ್ ಇಂಡಿಯಾ
ಇ ಅಡಳಿತ, ಎಂ ಆಡಳಿತಕ್ಕೆ ಹೆಚ್ಚಿನ ಒತ್ತು. 2.5 ಲಕ್ಷ ಗ್ರಾಮಗಳಿಗೆ ಬ್ರಾಡ್ ಬ್ಯಾಂಡ್ ಹಾಗೂ ಫೋನ್ ಸಂಪರ್ಕ ಸಾಧಿಸುವ ಗುರಿ. 2.5 ಲಕ್ಷ ಶಾಲೆಗಳಿಗೆ ವೈಫೈ ಹೊಂದಿಸುವ ಗುರಿ, ಸಾರ್ವಜನಿಕ ವೈಫೈ ಹಾಟ್ ಸ್ಪಾಟ್ ನಿರ್ಮಾಣ. ಜೊತೆಗೆ 1.7 ಕೋಟಿ ನೇರ ಹಾಗೂ 8.5 ಕೋಟಿ ಪರೋಕ್ಷವಾಗಿ ಹುದ್ದೆಗಳ ಸೃಷ್ಟಿ.
ಸ್ಕಿಲ್ ಇಂಡಿಯಾ
ಭಾರತದ ಯುವಜನತೆಯ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗಕ್ಕೆ ತಯಾರಿಗೊಳಿಸುವ ಯೋಜನೆ. 2020ರ ಹೊತ್ತಿಗೆ 500 ಮಿಲಿಯನ್ ಯುವ ಜನತೆಗೆ ಇದರಿಂದ ಲಾಭ ಸಿಗುವ ಭರವಸೆ.
ಶೈಕ್ಷಣಿಕ ಯೋಜನೆಗಳು
ವಿದ್ಯಾಲಕ್ಷ್ಮಿ ಕಾರ್ಯಕ್ರಮ, ದೀನ್ ದಯಾಳ್ ಉಪಾಧ್ಯಾಯ್ ಗ್ರಾಮ ಕೌಶಲ್ಯ ಯೋಜನೆ, ಸ್ಕಾಲರ್ ಶಿಫ್, ಡಿಜಿಟಲ್ ಇಂಡಿಯಾ, ಶಿಶಿಕ್ಷು ತರಬೇತಿ ಕಾಯ್ದೆಗೆ ತಿದ್ದುಪಡಿ, ಮುದ್ರಾ ಬ್ಯಾಂಕ್, ಅಟಲ್ ಮಿಷನ್ ನಿಂದ ಹೊಸ ಸಂಶೋಧನೆಗೆ ಪ್ರೋತ್ಸಾಹ
ಹಿರಿಯ ನಾಗರಿಕರಿಗೆ ಯೋಜನೆ
ಪ್ರಧಾನ್ ಮಂತ್ರಿ ಸುರಕ್ಷಾ ವಿಮಾ ಯೋಜನೆಯಿಂದ ಅಪಘಾತ ವಿಮೆ 2 ಲಕ್ಷ ರು ತನಕ ಪ್ರತಿ ತಿಂಗಳು 1 ರು ನಂತೆ ಲಭ್ಯ.ವರಿಷ್ಠ ವಿಮಾ ಯೋಜನೆಯಿಂದ ತಿಂಗಳ ಪಿಂಚಣಿ ಲಭ್ಯ, ಹಿರಿಯ ನಾಗರಿಕರಿಗೆ ತೆರಿಗೆ ರಹಿತ ಯೋಜನೆಗಳ ಲಾಭ.
ಕೃಷಿಕರಿಗೆ ಯೋಜನೆಗಳು
ಕೃಷಿ ಸಿಂಚಾಯಿ ಯೋಜನೆ, ಮಣ್ಣಿನ ಫಲವತ್ತತೆ ಬಗ್ಗೆ ತಿಳಿಯಲು ಹೆಲ್ತ್ ಕಾರ್ಡ್, ಸಾವಯಮ ಕೃಷಿಗಾಗಿ ವಿಕಾಸ ಯೋಜನೆ, ದೀನ್ ದಾಯಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಿಂದ ನಿರಂತರ ವಿದ್ಯುತ್, ಅಪಘಾತ ವಿಮೆ, ಪಿಂಚಣಿ ಯೋಜನೆ, ವಸತಿ ಯೋಜನೆಗಳು.
ಒಂದು ದೇಶ, ಒಂದು ತೆರಿಗೆ
ನಾನಾ ರಾಜ್ಯಗಳಲ್ಲಿ ಒಂದೊಂದು ರೀತಿಯ ತೆರಿಗೆ ವ್ಯವಸ್ಥೆಗಳು ಜಾರಿಯಲ್ಲಿದ್ದರಿಂದಾಗಿ ದೇಶದ ಆರ್ಥಿಕತೆ, ಸಂಪನ್ಮೂಲ ಕ್ರೋಢೀಕರಣವು ಕಗ್ಗಂಟಾಗಿ ಪರಿಣಮಿಸಲ್ಪಟ್ಟಿದ್ದವು. ಈ ಕಗ್ಗಂಟನ್ನು ನಿವಾರಿಸಬೇಕು ಹಾಗೂ ದೇಶದಾದ್ಯಂತ ಏಕ ರೂಪ ತೆರಿಗೆ ವ್ಯವಸ್ಥೆ ಜಾರಿಗೊಳಿಸಬೇಕೆಂಬ ಆಶಯದಲ್ಲಿ ಮೋದಿ ಸರ್ಕಾರ ಜಾರಿಗೆ ತರಲು ನಿರ್ಧರಿಸಿದ್ದು - ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ).
ಆರ್ಥಿಕತೆಗೆ ಬಲ ತಂಡ ಐಡಿಯಾ
ಈ ಯೋಜನೆಯಡಿ, ಜನ ಸಾಮಾನ್ಯರನ್ನು ದೇಶದ ಆರ್ಥಿಕ ಹೆದ್ದಾರಿಗೆ ತರುವ ಪ್ರಯತ್ನವನ್ನು ಮೋದಿ ಸರ್ಕಾರ ಮಾಡಿತು. ಈ ಯೋಜನೆಯಡಿ, 2020ರ ಹೊತ್ತಿಗೆ ದೇಶದ ಎಲ್ಲಾ ಹಳ್ಳಿಗಳಿಗೆ ಬ್ರಾಂಡ್ ಬ್ಯಾಂಡ್ ಸೌಕರ್ಯ ನೀಡುವ ಗುರಿಯನ್ನು ಹೊಂದಲಾಗಿದೆ. ಇದರ ಫಲಿತಾಂಶ ತಕ್ಷಣಕ್ಕೆ ಲಭ್ಯವಾಗದಿದ್ದರೂ ಮುಂದಿನ ದಿನಗಳಲ್ಲಿ ಇದರ ಲಾಭವೇನು ಎಂಬುದು ಜನರಿಗೆ ನಿಧಾನವಾಗಿ ಅರ್ಥವಾಗಲಿದೆ. ಅಂಥ ದೂರದೃಷ್ಟಿಯುಳ್ಳ ಯೋಜನೆಯಿದು
ಗ್ರಾಮೀಣ ಜನತೆಗೆ ಅನುಕೂಲ
ಮನೆಗೆ ಬಳಸುವ ಗ್ಯಾಸ್ ಸಿಲಿಂಡರ್ ಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಆರ್ಥಿಕವಾಗಿ ಅನುಕೂಲವುಳ್ಳವರು ಕೈಬಿಡಬೇಕೆಂದು ಪ್ರಧಾನಿ ಮೋದಿ ಮಾಡಿದ ಮನವಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಇದರ ಫಲವಾಗಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಡವರಿಗೆ ಅಡುಗೆ ಅನಿಲದ ಸೌಕರ್ಯ ನೀಡಲು ಸಹಾಯವಾಯಿತು
ಹೆಣ್ಣು ಮಕ್ಕಳ ಅಭಿವೃದ್ಧಿಗೆ ಹೊಸ ಚಿಂತನೆ
ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು ಹಾಗೂ ಹೆಣ್ಣು ಮಕ್ಕಳ ಸಾಕ್ಷರತೆಗೆ ನಾಂದಿ ಹಾಡುವ ಉದ್ದೇಶದಿಂದ ಶುರುವಾಗಿದ್ದು 'ಬೇಟಿ ಬಚಾವೊ, ಬೇಟಿ ಪಢಾವೊ' ಅಭಿಯಾನ. ಈ ಮೂಲಕ ಸಾರ್ವಜನಿಕರಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಹಾಗೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸದಿಂದಾಗುವ ಲಾಭಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು. ಇದರೊಂದಿಗೆ, ಹೆಣ್ಣು ಮಕ್ಕಳಿಗೆ ಆರ್ಥಿಕ ಸುಭದ್ರತೆ ಒದಗಿಸಲು ಬೇಕಾದ ಸುಕನ್ಯ ಸಮೃದ್ಧಿ ಯೋಜನೆಯನ್ನು ಜಾರಿಗೆ ತರಲಾಯಿತು
ಕಪ್ಪು ಹಣ ನಿಯಂತ್ರಣಕ್ಕೆ ದಿಟ್ಟ ಕ್ರಮ
ದೇಶದ ಆರ್ಥಿಕ ವ್ಯವಹಾರಗಳನ್ನು ಸುಸ್ಥಿತಿಗೆ ತರಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಕ್ರಮಗಳಲ್ಲಿ ಅಪನಗದೀಕರಣ ಬಹು ಮುಖ್ಯವಾದದ್ದು ಹಾಗೂ ಗಾಢವಾದ ಪರಿಣಾಮ ಬೀರಿದಂಥದ್ದು. ಕಳೆದ ವರ್ಷ ನವೆಂಬರ್ 8ರಂದು ಮಧ್ಯರಾತ್ರಿ ಇದ್ದಕ್ಕಿದ್ದಂತೆ 500 ಹಾಗೂ 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದು ಸಾಮಾಜಿಕ ವಲಯಗಳಲ್ಲಿ, ಆರ್ಥಿಕ ವಲಯಗಳಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಕೋಟ್ಯಂತರ ಜನರಿಗೆ ತೊಂದರೆಯಾದರೂ ಮೋದಿ ನಿರ್ಧಾರಕ್ಕೆ ಜನತೆಯಿಂದ ಶಹಬ್ಬಾಶ್ ಗಿರಿ ಲಭಿಸಿತು.
ಸೇನೆಗೆ ಆತ್ಮವಿಶ್ವಾಸ ತುಂಬಿದ ನಿರ್ಧಾರ
ಭಾರತದ ವಿರುದ್ಧದ ಭಯೋತ್ಪಾದನೆಯನ್ನು ಬೆಳೆಸುತ್ತಾ ಗಡಿಯಲ್ಲಿ ಪದೇ ಪದೇ ಭಾರತವನ್ನು ಕೆಣಕುವ ಪಾಕಿಸ್ತಾನಕ್ಕೆ ಚುರುಕು ಮುಟ್ಟಿಸಿದ ಮೋದಿ, 2016ರ ಸೆಪ್ಟಂಬರ್ 29ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದರು. ಭಾರತೀಯ ಸೈನಿಕರನ್ನು ಹೀಗೆ ಕೆಚ್ಚೆದೆಯಿಂದ ಹೋರಾಡುವಂತೆ ಮಾಡಿದ ಮೋದಿಯವರನ್ನು ಇಡೀ ಜನತೆ 'ಭಲೆ, ಭಲೆ' ಎಂದು ಕೊಂಡಾಡಿತು. 2017ರ ಮೇ ನಲ್ಲಿ23 ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿದ ಭಾರತ, ಜಮ್ಮು ಕಾಶ್ಮೀರದ ಗಡಿಯಾಚೆಗಿದ್ದ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ ಸುಮಾರು 10 ನೆಲೆಗಳನ್ನು ಧ್ವಂಸಗೊಳಿಸಿ ಮತ್ತೆ ಶಹಬ್ಬಾಸ್ ಗಿರಿ ಪಡೆಯಿತು