2019 ರಲ್ಲಿ ವೈರಲ್ ಆದ ಟಾಪ್ 10 ವಿಡಿಯೋಗಳು...
ಬೆಂಗಳೂರು, ಡಿಸೆಂಬರ್ 26; ಇನ್ನೇನು ಕೆಲವೇ ದಿನದಲ್ಲಿ 2019 ಕ್ಕೆ ಗುಡ್ ಬೈ ಹೇಳಲಿದ್ದೇವೆ. ಈ ವರ್ಷ ಹಲವು ಸಿಹಿ ಕಹಿಗಳು ಘಟಿಸಿ, ಸ್ಮರಣೀಯವಾಗಿ ಹೊರಟಿದೆ.
ದಿನಗಳು, ವರ್ಷಗಳು ಎಷ್ಟೇ ಉರುಳಿ ಹೋದರೂ ನಮ್ಮ ಸ್ಮೃತಿಪಟಲದಿಂದ ಕೆಲವು ಘಟನೆಗಳು ಮರೆಯಾಗುವುದಿಲ್ಲ. ಜಗತ್ತಿನಲ್ಲಿ ಪ್ರತಿದಿನ ಏನಾದರೂ ಒಂದೊಂದು ಘಟನೆ ನಡೆಯುತ್ತಾ ಇರುತ್ತವೆ. ಸಾಧಾರಣವಾಗಿ ಘಟಿಸಿದ ಯಾವುದೇ ಸನ್ನಿವೇಶಗಳು ಏನಾದರೂ ಒಂದು ವಿಶೇಷ ಕಾರಣಕ್ಕೆ ಅತ್ಯಂತ ತ್ವರಿತವಾಗಿ ಜಗತ್ತಿನ ಗಮನ ಸೆಳೆದು ವೈರಲ್ ಎನಿಸಿಕೊಂಡು ಬಿಡುತ್ತವೆ.
2019 ರಲ್ಲಿ ಭಾರತ ಕಳೆದುಕೊಂಡ 'ರಾಜಕೀಯ ರತ್ನಗಳು
ಇಂದಿನ ಡಿಜಿಟಲ್ ಯುಗದಲ್ಲಿ ವೈರಲ್ ಎಂಬುದು ಹೊಸ ಸಂಚಲನ ಸೃಷ್ಟಿಸಿದೆ. 2019 ರಲ್ಲೂ ನಮ್ಮ ರಾಜ್ಯ, ದೇಶ, ಪ್ರಪಂಚದಲ್ಲಿ ಸಾಕಷ್ಟು ಘಟನೆಗಳು ವೈರಲ್ ಆಗಿ ಗಮನ ಸೆಳೆದಿವೆ. ಅದರಲ್ಲಿ ಟಾಪ್ 10 ವೈರಲ್ ಘಟನೆ, ಸುದ್ದಿ, ಸಂಗತಿಗಳು ಇಲ್ಲಿವೆ.
1 ರಾತ್ರೊರಾತ್ರಿ ಜನಪ್ರಿಯಳಾದಳು ರಾನು ಮಂಡಲ್
ಭಾರತದ ಮಟ್ಟಿಗೆ ರಾನು ಮಂಡಲ್ 2019 ರ ಅತ್ಯಂತ ವೈರಲ್ ಆದ ಹೆಸರು. ಕಲ್ಕತ್ತದ ರಣಘಾಟ್ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಾನು ಮಂಡಲ್ ತನ್ನ ಅಮೋಘ ಕಂಠಸಿರಿಯಿಂದ ರಾತ್ರೋರಾತ್ರಿ ಇಡೀ ಭಾರತದ ತುಂಬ ಪ್ರಖ್ಯಾತ ಆದಳು. ರೈಲು ನಿಲ್ದಾಣದಲ್ಲಿ ಲತಾ ಮಂಗೇಶ್ಕರ ಹಾಡುಗಳನ್ನು ಹೇಳುತ್ತಾ ಕಾಲ ಕಳೆಯುತ್ತಿದ್ದ ರಾನು ಮಂಡಲ್ಳ ಗಾಯನವನ್ನು ಯಾರೋ ಒಬ್ಬರು ತಮ್ಮ ಮೊಬೈಲಿನಲ್ಲಿ ಚಿತ್ರಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಹರಿಬಿಟ್ಟ ಎರಡೇ ದಿನದಲ್ಲಿ ರಾನು ಮಂಡಲ್ಳ ಅದ್ಭುತ ಕಂಠಕ್ಕೆ ಮನಸೋತ ನೆಟ್ಟಿಗರು, ರಾನು ಮಂಡಲ್ ಗಾಯನ ವೈರಲ್ ಆಗಲು ಕಾರಣರಾದರು. ನಂತರ ರಾನು ಬಾಲಿವುಡ್ ಗಾಯಕ ಹಿಮೇಶ್ ರೇಶಮಿಯಾರೊಟ್ಟಿಗೆ ಹಾಡು ಹೇಳಿ ಪ್ರಸಿದ್ದಿ ಪಡೆದರು.
2 'ಹೌದು ಹುಲಿಯಾ'
ಕರ್ನಾಟಕದ ಮಟ್ಟಿಗೆ ಹಿಂದೆಂದೂ ಕಾಣದಂತಹ ಹವಾ ಸೃಷ್ಟಿಸಿದ್ದು ಈ ಹೌದು ಹುಲಿಯ. ಕರ್ನಾಟಕ ವಿಧಾನಸಭೆ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ಭಾಷಣ ಮಾಡುವ ವೇಳೆ ಸಿದ್ದರಾಮಯ್ಯ ಭಾಷಣ ಕೇಳಿ ಖುಷಿಯಾಗಿ, ಅವರನ್ನು ಹುರಿದುಂಬಿಸಲು ಅತ್ಯಂತ ಸಹಜವಾಗಿ 'ಹೌದು ಹುಲಿಯ' ಎಂದು ಅದೇ ಊರಿನ ಪೀರಪ್ಪ ಕಟ್ಟಿಮನಿ ಎಂಬುವ ಡೈಲಾಗ್ ಹೊಡೆದಿದ್ದಾನೆ. ಟಿವಿ ವಾಹಿನಿಗಳಲ್ಲಿ, ಮೊಬೈನಲ್ಲಿ ಸೆರೆಯಾದ ಈ ಡೈಲಾಗ್ ಮಾರನೇ ದಿನವೇ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಹವಾ ಸೃಷ್ಟಿಸಿತು. ಎಲ್ಲರೂ ಈ ಡೈಲಾಗ್ನ್ನು ಅನುಕರಣೆ ಮಾಡಲು ಪ್ರಾರಂಭಿಸಿ, ಇಡೀ ಕರ್ನಾಟಕದ ತುಂಬ ಜನಪ್ರಿಯವಾಯಿತು. ಕಡೆಗೆ ಸಿದ್ದರಾಮಯ್ಯ ಅವರೇ ಪೀರಪ್ಪನನ್ನು ಮನೆಗೆ ಕರೆಸಿಕೊಂಡು ಭೇಟಿಯಾಗಿ ಅವಿಷ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದರು.
2019 Flashback: ಒಂದು ವರ್ಷದಲ್ಲಿ ದೇಶದ ರಾಜಕೀಯದಲ್ಲಿ ಏನೇನಾಯ್ತು?
3 ನಿಖಿಲ್ ಎಲ್ಲಿದಿಯಪ್ಪ?!
ಲೋಕಸಭಾ ಚುನಾವಣೆಯಲ್ಲಿ ವೈರಲ್ ಆದ ಡೈಲಾಗ್ ಇದು. ಜಾಗ್ವಾರ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ವೇದಿಕೆಗೆ ಕರೆತರಲು ವಿಶೇಷ ಪ್ರಯತ್ನ ನಡೆಸುವಾಗ ನಿಖಿಲ್ ಎಲ್ಲಿದಿಯಪ್ಪ ಎಂದು ಕೂಗಿದ್ದರು. ಆದರೆ ಈ ಡೈಲಾಗ್ ಲೋಕಸಭಾ ಚುನಾವಣೆ ವೇಳೆ ವೈರಲ್ ಆಗಿ ತೀವ್ರ ಸಂಚಲನ ಸೃಷ್ಟಿಸಿತು. ನಿಖಿಲ್ ಕುಮಾರಸ್ವಾಮಿಯನ್ನು ಹಣಿಯಲು ಕೂಡ ಈ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ಬಳಕೆಯಾಯಿತು. ಸುಮಲತಾ ಅಂಬರೀಶ ವಿರುದ್ಧ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಿಖಿಲ್ ಮುಗ್ಗರಿಸಿ ಬಿದ್ದರು. ಆದರೆ ನಿಖಿಲ್ ಎಲ್ಲಿದಿಯಪ್ಪ ಡೈಲಾಗ್ ಮಾತ್ರ ಅತಿ ಹೆಚ್ಚು ಜನರಿದಂದ ಟ್ರೋಲ್ಗೆ ಒಳಗಾಯಿತು.
4 ಚಂದ್ರಯಾನದ ಮೋದಿ ಶಿವನ್ ಅಪ್ಪುಗೆ
ಭಾರತದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದ ಚಂದ್ರಯಾನ 2 ಭಾರತವಷ್ಟೇ ಅಲ್ಲ. ಜಗತ್ತಿನ ಗಮನವನ್ನು ಸೆಳೆದಿತ್ತು. ಚಂದ್ರನ ದಕ್ಷಿಣ ದ್ರುವದ ಅಧ್ಯಯನಕ್ಕೆ ಭಾರತ ಈ ಯೋಜನೆ ಹಮ್ಮಿಕೊಂಡಿತ್ತು. ಯೋಜನೆಗಾಗಿ ಸಾಕಷ್ಟು ಪೂರ್ವ ತಯಾರಿ ನಡೆಸಿ, 2019 ರ ಜುಲೈ 22 ರಂದು ಇಸ್ರೋ ರಾಕೆಟ್ ಉಡಾವಣೆ ಮಾಡಿತ್ತು.ಯೋಜನೆಯ ಪ್ರಮುಖ ಗುರಿಯಾಗಿದ್ದ ವಿಕ್ರಮ್ ಲ್ಯಾಂಡರ್ ವಾಹನವನ್ನು ಚಂದ್ರನ ದಕ್ಷಿಣ ದ್ರುವದಲ್ಲಿ ಇಳಿಸುವಲ್ಲಿ ಇಸ್ರೋ ವಿಫಲವಾಯಿತು. ಇದು120 ಕೋಟಿ ಭಾರತೀಯರ ಕನಸನ್ನು ನುಚ್ಚು ನೂರು ಮಾಡಿತು. ಆಗ ಸ್ಥಳದಲ್ಲಿದ್ದು ಲ್ಯಾಂಡರ್ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರಿಗೂ ನಿರಾಶೆಯಾಯಿತು. ಚಂದ್ರಯಾನ ವಿಫಲತೆಯ ತೀವ್ರ ಬೇಸರದಲ್ಲಿದ್ದ ಇಸ್ರೋ ಅಧ್ಯಕ್ಷ ಕೆ ಶಿವನ್ ಅವರನ್ನು ತಬ್ಬಿಕೊಂಡು ಸಮಾಧಾನ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.
Flashback 2019; ಟಾಪ್ 10 ಟ್ರೆಂಡಿಂಗ್ ಸುದ್ದಿಗಳು
5 ಹೌ ಡೇರ್ ಯು?
ಹೆಸರು ಗ್ರೇಟಾ ಥನಬರ್ಗ್ ಸ್ವೀಡನ್ ದೇಶದ ಹದಿನೇಳು ವರ್ಷದ ಈ ಪುಟ್ಟ ಬಾಲೆ, ಮಲೆನಾ ಎರ್ಮಾನ್ ಎಂಬ ಪರಿಸರ ಹೋರಾಟಗಾರ್ತಿ ಮಗಳು. ಅವತ್ತು 2019 ರ ಸೆಪ್ಟೆಂಬರ್ 23. ವಿಶ್ವಸಂಸ್ಥೆ ಜಾಗತಿಕ ತಾಪಮಾನ ಬದಲಾವಣೆ ಕುರಿತು ಶೃಂಗಸಭೆ ಏರ್ಪಡಿಸಿತ್ತು.
ಗ್ರೇಟಾ ಥನಬರ್ಗ್ ಕೂಡ ಆಗಮಿಸಿದ್ದಳು. ಆದರೆ, ಅವಳ ಮನಸ್ಸು ಸಹಜವಾಗಿರಲಿಲ್ಲ. ಮನಸ್ಸು ಕುದಿಯುತ್ತಿತ್ತು. ಭಾಷಣ ಮಾಡಲು ಪ್ರಾರಂಭಿಸಿದಾಗ 'ಇಂದಿನ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಸುಂದರ ಭೂಮಿಯನ್ನು ಹೇಗೆ ಹಾಳು ಮಾಡುತ್ತಾ, ಜಾಗತಿಕ ತಾಪಮಾನವನ್ನು ಹೆಚ್ಚಿಸುತ್ತಿದ್ದಾನೆ, ನಮ್ಮ ಸುಂದರ ಕನಸು, ಭವಿಷ್ಯವನ್ನು ಕಸಿಯಲು ನಿಮಗೆಷ್ಟು ದೈರ್ಯ' ಎಂದು ಕಣ್ಣೀರು ಹರಿಸಿ, ಪ್ರಶ್ನಿಸಿದಳು. ಗ್ರೇಟಾಳ ಅಂತರಾಳದ ಈ ಮಾತುಗಳು ಇಡೀ ಜಗತ್ತಿನ ಪರಿಸರವಾದಿಗಳನ್ನು ಬಡಿದೆಬ್ಬಿಸಿದರೇ, ಜಾಗತಿಕ ತಾಪಮಾನಕ್ಕೆ ಕಾರಣರಾದವರು ಇವಳತ್ತ ವ್ಯಗ್ರವಾಗಿ ತಿರುಗಿ ನೋಡಿದರು.
6 ಮೋದಿ ಮುಕ್ಕರಿಸಿ ಬಿದ್ದಿದ್ದು
ಪ್ರಧಾನಿ ಮೋದಿ ಅವರು ಸದಾ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಆದರೆ, ಅವರ ಒಂದು ವಿಡಿಯೋ ಮಾತ್ರ ಈ ವರ್ಷ ವ್ಯಾಪಕವಾಗಿ ವೈರಲ್ ಆಗಿ ಹೋಯಿತು. ಡಿಸೆಂಬರ್ 14 ರಂದು ಮೋದಿ ಅವರು ಉತ್ತರ ಪ್ರದೇಶದಲ್ಲಿ ನಮಾಮಿ ಗಂಗೆ ಯೋಜನೆ ಪರಿಶೀಲನೆಗೆ ಹೋಗಿದ್ದು. ಕಾನ್ಪುರದ ಗಂಗಾ ಘಾಟ್ ಬಳಿ ಮೆಟ್ಟಿಲು ಹತ್ತಿ ಹೋಗುವಾಗ ಮೆಟ್ಟಿಲು ಎಡವಿ ಮೋದಿ ಕೆಳಗೆ ಬಿದ್ದು ಬಿಟ್ಟರು. ಈ ದೃಶ್ಯ ದೂರದರ್ಶನದ ಕ್ಯಾಮೆರಾದಲ್ಲಿ ಸೆರೆಯಾಗುತ್ತಿತ್ತು. ನಂತರ ವಿಡಿಯೋ ವೈರಲ್ ಆಗಿ ಹೋಯಿತು. ಏಕೆಂದರೆ ಪ್ರಧಾನಿಯವರು 2014 ರಿಂದ ಅಧಿಕಾರವಹಿಸಿಕೊಂಡ ನಂತರ ಒಮ್ಮೆಯೂ ಸಾರ್ವಜನಿಕವಾಗಿ ಮುಗ್ಗರಿಸಿದ್ದಿಲ್ಲ.
ಫ್ಲಾಶ್ ಬ್ಯಾಕ್ 2019; ಜನ ಹೆಚ್ಚು ಓದಿದ ಟಾಪ್ 10 ಒನ್ ಇಂಡಿಯಾ ಕನ್ನಡ ಸುದ್ದಿಗಳು
7 ಹೌಡಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯಾರ್ಥ ಅಲ್ಲಿನ ಭಾರತೀಯ ಸಂಘಟನೆಗಳು ಟೆಕ್ಸಾಸ್ ನ ರಾಜಧಾನಿ ಹೂಸ್ಟನ್ನಲ್ಲಿ ಸೆ.27 ರಂದು ಹೌಡಿ ಮೋದಿ ಕಾರ್ಯಕ್ರಮ ಆಯೋಜಿಸಿದ್ದವು. ಕಾರ್ಯಕ್ರಮದಲ್ಲಿ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಾಗವಹಿಸಿ ಮೋದಿ ಹಾಗೂ ಭಾರತೀಯರಿಗೆ ಶುಭಾಶಯ ಕೋರಿದ್ದರು.ಇದೇ ವೇಳೆ ಸ್ಥಳದಲ್ಲಿದ್ದ ಕರ್ನಾಟಕ ಮೂಲದ ಬಾಲಕನೊಬ್ಬ ಹಿಂದು ಮುಂದು ಯೋಚನೆ ಮಾಡದೇ ತನ್ನ ಮೊಬೈಲ್ ತೆಗೆದು ಟ್ರಂಪ್ ಹಾಗೂ ಮೋದಿಯವರನ್ನು ಸೆಲ್ಪಿ ಫೋಸ್ ನೀಡಲು ಕರದೇ ಬಿಟ್ಟ. ಟ್ರಂಪ್ ಹಾಗೂ ಮೋದಿ ಕೂಡ ನಗುತ್ತಾ ಸೆಲ್ಪಿಗೆ ಪೋಸ್ ಕೊಟ್ಟರು. ಈ ಸನ್ನಿವೇಶ ಜಗತ್ತಿನ ತುಂಬ ವೈರಲ್ ಆಗಿ ಹೋಯಿತು.
8 ಜಾಮಿಯಾ ವಿವಿ ವಿದ್ಯಾರ್ಥಿನಿಯರು
ಈ ವರ್ಷ ಭಾರತದ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆಯೇ ಅತಿದೊಡ್ಡ ಸದ್ದು ಮಾಡಿದೆ. ಭಾರತವನ್ನೂ ಮೀರಿ ಜಾಗತಿಕವಾಗಿ ಚರ್ಚೆ ಆಗುತ್ತಿದೆ. ಇದೇ ವೇಳೆ ದೆಹಲಿಯ ಜಾಮಿಯಾ ಮಿಲಿಯಾ ವಿವಿಯಲ್ಲಿ ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಪೊಲೀಸರು ನಡುವೆ ಘರ್ಷಣೆ ನಡೆಯಿತು. ಘರ್ಷಣೆ ವೇಳೆಯಲ್ಲಿ ವಿದ್ಯಾರ್ಥಿಯೊಬ್ಬನನ್ನು ಪೊಲೀಸರಿಂದ ರಕ್ಷಿಸಿದ ಮೂವರ ವಿದ್ಯಾರ್ಥಿನಿಯರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅವರ ಧೈರ್ಯಕ್ಕೆ ದೇಶಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಪೊಲೀಸರಿಂದ ಥಳಿತಕ್ಕೊಳಗಾಗಿದ್ದ ಶಹೀನ್ ಅಬ್ದುಲ್ಲಾನನ್ನು ಮೂವರು ಯುವತಿಯರು ರಕ್ಷಿಸಿದ್ದರು. ಲದೀಬಾ ಫರ್ಜಾನಾ, ಅಯೇಷಾ ರೇನಾ ಹಾಗೂ ತಾಸ್ನೀಮ್ ಅವರೇ ಆ ವಿದ್ಯಾರ್ಥಿನಿಯರು.
9 ಬಾಟಲ್ ಓಪನ್ ಚಾಲೇಂಜ್
ಜಗತ್ತಿನಾದ್ಯಂತ ಪ್ರತಿ ವರ್ಷ ಒಂದು ಅಥವಾ ಎರಡು ಚಾಲೇಂಜ್ ಗಳು ಬಹಳ ಸದ್ದು ಮಾಡುತ್ತವೆ. ಈ ವರ್ಷ ಹೆಚ್ಚು ಸದ್ದು ಮಾಡಿದ್ದು ಬಾಟಲ್ ಓಪನ್ ಚಾಲೇಂಜ್. ಕಾಲಿನಿಂದ ಬಾಟಲ್ ಓಪನ್ ಮಾಡುವ ಅತ್ಯಂತ ಜಟಿಲವಾದ ಚಾಲೇಂಜ್ನ್ನು ಶುರು ಮಾಡಿದ್ದು ಅಂತಾರಾಷ್ಟ್ರೀಯ ಟೈಕ್ವಾಂಡೋ ಪಟು ಪರಾಬಿ ಡವಲಚಿನ್. 2019 ರ ಜೂನ್ 25 ರಂದು ಪರಾಬಿ ಈ ಚಾಲೇಂಜ್ ನ್ನು ತನ್ನ ಸ್ನೇಹಿತರಿಗೆ ನೀಡಿದ್ದರು. ಕೆಲವೇ ತಾಸುಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ಚಾಲೇಂಜ್ ವೈರಲ್ ಆಗಿ ಬಿಟ್ಟಿತು. ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಅನೇಕ ಸೆಲೆಬ್ರಿಟಿಗಳು ಈ ಚಾಲೇಂಜ್ ಸ್ವೀಕರಿದ್ದರು.
10 ಸೈನಿಕರ ಗಾರ್ಬಾ ನೃತ್ಯ
ಈ ವರ್ಷದ ದಸರಾ ಹಬ್ಬದ ಸಂದರ್ಭದಲ್ಲಿ ಸೈನಿಕರು ಮಾಡಿದ ಗಾರ್ಬಾ ನೃತ್ಯ ಸಾಕಷ್ಟು ಹವಾ ಸೃಷ್ಟಿಸಿತು. ಈ ವಿಡಯೋ ವೈರಲ್ ಆಗಿ ಸೈನಿಕರ ಸಂಭ್ರಮವನ್ನು ಕೋಟ್ಯಾಂತರ ಜನ ಕಣ್ತುಂಬಿಕೊಂಡಿದ್ದರು. ನವರಾತ್ರಿ ಸಂಭ್ರಮದಲ್ಲಿ ಜೈಪುರದ ಆರ್ಮಿ ಕ್ಯಾಂಪ್ ನಲ್ಲಿ ಸೈನಿಕರು ಸ್ವಯಂಪ್ರೇರಿತವಾಗಿ ಗಾರ್ಬಾ ನೃತ್ಯ ಮಾಡುವ ಮೂಲಕ ವೈರಲ್ ಆಗಿದ್ದರು. ಈ ವಿಡಿಯೋವನ್ನು ಮಹಿಂದ್ರಾ ಗ್ರುಪ್ ಅಧ್ಯಕ್ಷ ಆನಂದ ಮಹಿಂದ್ರಾ ಟ್ವೀಟ್ಟರ್ನಲ್ಲಿ ಹಾಕಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು.