'ಟಿಎಂಸಿ, ಎಎಪಿಯಿಂದ ಗೋವಾದಲ್ಲಿ ಬಿಜೆಪಿಯೇತರ ಮತ ವಿಭಜನೆ': ಪಿ ಚಿದಂಬರಂ
ಪಣಜಿ, ಡಿಸೆಂಬರ್ 26: "ಗೋವಾದಲ್ಲಿ ಬಿಜೆಪಿಯೇತರರ ಮತವನ್ನು ತೃಣಮೂಲ ಕಾಂಗ್ರೆಸ್ ಹಾಗೂ ಎಎಪಿ ವಿಭಜನೆ ಮಾಡುತ್ತದೆ," ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದಾರೆ. ಹಾಗೆಯೇ "ಕಾಂಗ್ರೆಸ್ ಮಾತ್ರ ಗೋವಾದಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯ," ಎಂದು ಅಭಿಪ್ರಾಯಿಸಿದ್ದಾರೆ.
ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಹಿರಿಯ ಚುನಾವಣಾ ವೀಕ್ಷಕರಾಗಿರುವ ಪಿ ಚಿದಂಬರಂ, ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪಕ್ಷ ಮತ್ತು ಮತದಾರರಿಗೆ ನಿಷ್ಠೆಯೇ ಮೊದಲ ಮಾನದಂಡ. ಆಯ್ಕೆಯಾದ ಬಳಿಕ ಅವರು ಪಕ್ಷ ಹಾಗೂ ಮತದಾರರು ಎರಡಕ್ಕೂ ನಿಷ್ಠರಾಗಿರುತ್ತಾರೆ," ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ ಈ ಪ್ರತಿಕ್ರಿಯೆ ಬಂದಿದೆ. ಗೋವಾ ವಿಧಾನಸಭೆಯ ಸದಸ್ಯತ್ವಕ್ಕೆ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ರಾಜೀನಾಮೆ ನೀಡಿದ ಬಳಿಕ 40 ಸದಸ್ಯರ ಸದನದಲ್ಲಿ ಕಾಂಗ್ರೆಸ್ ಸಂಸದರ ಸ್ಥಾನವು ಎರಡಕ್ಕೆ ಇಳಿಕೆ ಆಗಿದೆ. ಈ ತಿಂಗಳ ಆರಂಭದಲ್ಲಿ ಗೋವಾದ ಮಾಜಿ ಮುಖ್ಯಮಂತ್ರಿ ರವಿ ನಾಯ್ಕ್ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೆಲವು ತಿಂಗಳ ಹಿಂದೆ, ಮಾಜಿ ಸಿಎಂ ಲುಜಿನ್ಹೋ ಫಲೈರೊ ಕೂಡ ಕಾಂಗ್ರೆಸ್ ತೊರೆದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದ್ದರು.
ಕಾಂಗ್ರೆಸ್ಗೆ ಮಾತ್ರ ಆಳವಾದ ಬೇರಿದೆ ಎಂದ ಚಿದಂಬರಂ
ಈ ಎಲ್ಲಾ ಬೆಳವಣಿಗೆಯ ಬಳಿಕ ಪಿಟಿಐಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ ಚಿದಂಬರಂ, "ಗೋವಾದ ಎಲ್ಲಾ 40 ಕ್ಷೇತ್ರಗಳಲ್ಲಿ ಆಳವಾದ ಬೇರುಗಳನ್ನು ಹೊಂದಿರುವ ಏಕೈಕ ಪಕ್ಷ ಕಾಂಗ್ರೆಸ್. ಹಣಬಲ ಮತ್ತು ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ಕಾಂಗ್ರೆಸ್ಗೆ ಮಾತ್ರ ಇದೆ ಎಂದು ಜನರಿಗೆ ತಿಳಿದಿದೆ," ಎಂದು ಹೇಳಿದರು. "ಶೇಕಡ ತೊಂಬತ್ತೊಂಬತ್ತು ರಷ್ಟು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ನಲ್ಲೇ ಉಳಿದಿದ್ದಾರೆ. ರೆಜಿನಾಲ್ಡೊ ಲೌರೆಂಕೊ ಟಿಎಂಸಿಗೆ ಪಕ್ಷಾಂತರ ಆಗಿದ್ದಕ್ಕೆ ನನಗೆ ಅಸಮಾಧಾನವಿಲ್ಲ. ಟಿಎಂಸಿ ನಮ್ಮ ಕೈಯಿಂದ ಸೋತ ಅಭ್ಯರ್ಥಿಯನ್ನು ತೆಗೆದುಕೊಂಡಿದೆ. ಚುನಾವಣೆಯಲ್ಲಿ ಅವರನ್ನು ಕಣಕ್ಕಿಳಿಸಿದರೆ ಅವರು ಸೋತ ಅಭ್ಯರ್ಥಿಗಳಾಗಿಯೇ ಉಳಿಯುತ್ತಾರೆ," ಎಂದು ಮಾಜಿ ಕೇಂದ್ರ ಸಚಿವರು ತಿಳಿಸಿದರು.
ಟಿಎಂಸಿ, ಎಎಪಿ ಬಿಜೆಪಿಯ ಬಿ ಟೀಂ
ಟಿಎಂಸಿ ಬಿಜೆಪಿಗೆ ಸಹಾಯ ಮಾಡುತ್ತಿದೆ ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು, ಆಮ್ ಆದ್ಮಿ ಪಕ್ಷ (ಎಎಪಿ) ಬಿಜೆಪಿಯ ಬಿ-ಟೀಮ್ಗಳಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನೀವು ನಂಬುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಚಿದಂಬರಂ, "ನಾನು ಯಾವುದೇ ಪಕ್ಷದ ಉದ್ದೇಶಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. 2022 ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹೋರಾಟದಲ್ಲಿ ಕಾಂಗ್ರೆಸ್ ಸ್ಪಷ್ಟ ವಿಜಯಶಾಲಿಯಾಗಿ ಹೊರಹೊಮ್ಮಲಿದೆ. ಟಿಎಂಸಿ ಮತ್ತು ಎಎಪಿ ಬಿಜೆಪಿಯೇತರ ಮತಗಳನ್ನು ಒಡೆಯುತ್ತಿವೆ. ಅದು ಬಿಜೆಪಿಗೆ ಲಾಭವಾಗಲಿದೆಯೇ ಎಂದು ನಾನು ಹೇಳಲಾರೆ," ಎಂದು ಹೇಳಿದ್ದಾರೆ.
ಗೋವಾದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು?
ಚುನಾವಣೆಗೂ ಮುನ್ನ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುತ್ತದೆಯೇ ಎಂಬ ಬಗ್ಗೆ ಚಿದಂಬರಂ ಪ್ರತಿಕ್ರಿಯಿಸಿ, "ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದ ನಂತರ, ಅವರೊಂದಿಗೆ ಸಮಾಲೋಚಿಸಿ, ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದೇ ಬೇಡವೇ ಎಂಬ ನಿರ್ಧಾರ ಮಾಡುತ್ತೇವೆ," ಎಂದು ಮಾಹಿತಿ ನೀಡಿದ್ದಾರೆ. ಇನ್ನು ಆ ಆಯ್ಕೆಯು ಮುಕ್ತವಾಗಿದೆ ಎಂದು ಕೂಡಾ ತಿಳಿಸಿದ್ದಾರೆ.
ಚುನಾವಣೆ ಬಳಿಕ ಕಾಂಗ್ರೆಸ್ ತೊರೆದರೆ...
ಚುನಾವಣೆಯ ನಂತರ ಪಕ್ಷದ ಚುನಾಯಿತ ನಾಯಕರು ಕಾಂಗ್ರೆಸ್ ತೊರೆದು ಹೋದರೆ ಎಂಬ ಪ್ರಶ್ನೆಗೆ ಕೂಡಾ ಚಿದಂಬರಂ ಪ್ರತಿಕ್ರಿಯೆ ನೀಡಿದ್ದಾರೆ. "ಆ ರೀತಿಯ ಏನೂ ಆಗುವುದಿಲ್ಲ. ನಾವು ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಮತ್ತು ಬ್ಲಾಕ್ ಕಾರ್ಯಕರ್ತರಿಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಸೂಚಿಸುವ ಜವಾಬ್ದಾರಿಯನ್ನು ನೀಡಿದ್ದೇವೆ. ನಿಷ್ಠೆ, ಪ್ರಾಮಾಣಿಕತೆ ಹಾಗೂ ಗೆಲ್ಲುವ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಹೇಳಿದ್ದೇವೆ. ಪಕ್ಷ ಮತ್ತು ಮತದಾರರಿಗೆ ನಿಷ್ಠೆಯೇ ಮೊದಲ ಮಾನದಂಡ. ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಸಮಿತಿ ಸೂಚಿಸಿದ ಹೆಸರುಗಳ ಪೈಕಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ನಮ್ಮ ಅಭ್ಯರ್ಥಿಗಳು ಆಯ್ಕೆಯಾದಾಗ ಪಕ್ಷ ಮತ್ತು ಮತದಾರರಿಗೆ ನಿಷ್ಠರಾಗಿ ಉಳಿಯುತ್ತಾರೆ," ಎಂದು ವಿವರಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)
Recommended Video