ಉತ್ತರಾಖಂಡ್ ನೂತನ ಸಿಎಂ ತೀರಥ್ ಸಿಂಗ್ ರಾವತ್ ವ್ಯಕ್ತಿಚಿತ್ರ
ಡೆಹ್ರಾಡೂನ್, ಮಾರ್ಚ್ 10: ಉತ್ತರಾಖಂಡ್ ರಾಜ್ಯದ ಮೊದಲ ಶಿಕ್ಷಣ ಸಚಿವ ಈಗ ರಾಜ್ಯದ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. 2000ನೇ ಇಸವಿಯಲ್ಲಿ ಉತ್ತರಾಖಂಡ್ ರಾಜ್ಯ ರಚನೆಯಾದಾಗ ಅಲ್ಲಿನ ಸರ್ಕಾರದಲ್ಲಿ, ತೀರಥ್ ಸಿಂಗ್ ರಾವತ್ ಮೊದಲ ಶಿಕ್ಷಣ ಸಚಿವರಾಗಿದ್ದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಉತ್ತರ ಪ್ರದೇಶ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಹಾಗೂ ಉತ್ತರಾಖಂಡ್ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮೃದು ಭಾಷಿ ರಾವತ್ಗೆ ಪಕ್ಷದಿಂದ ಈಗ ಅಚಾನಕ್ ಆಗಿ ಮುಖ್ಯಮಂತ್ರಿ ಹುದ್ದೆ ದೊರೆತಿದೆ.
Breaking: ಉತ್ತರಾಖಂಡ್ ನೂತನ ಸಿಎಂ ಆಗಿ ತೀರಥ್ ಸಿಂಗ್ ರಾವತ್ ಆಯ್ಕೆ
ಚುನಾವಣೆಗೂ ಮುನ್ನ ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ ಸರಿಪಡಿಸಿ, ಆಡಳಿತ ವಿರೋಧಿ ಅಲೆಯನ್ನು ಕಡಿಮೆ ಮಾಡಿ, ಮತ್ತೆ ಪಕ್ಷ ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ಈಗ ಬಿಜೆಪಿ ಹೈಕಮಾಂಡ್ ತೀರಥ್ ಸಿಂಗ್ ರಾವತ್ ಮೇಲೆ ಹೊರಿಸಿದೆ.
1997ರಲ್ಲಿ ಉತ್ತರ ಪ್ರದೇಶ ವಿಧಾನಪರಿಷತ್ ಸದಸ್ಯರಾಗಿ, ಆಯ್ಕೆಯಾದ ರಾವತ್ ಹೊಸ ರಾಜ್ಯ ರಚನೆಯಾದ ಬಳಿಕ ಉತ್ತರಾಖಂಡ್ ವಿಧಾನಸಭೆಗೆ ಸತತವಾಗಿ ಆಯ್ಕೆಯಾಗಿ ಬರುತ್ತಿದ್ದಾರೆ.
2007ರಲ್ಲಿ ಉತ್ತರಾಖಂಡ್ ಬಿಜೆಪಿ ಪ್ರಧಾನಕಾರ್ಯದರ್ಶಿಯಾಗಿದ್ದ ರಾವತ್, 2013ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದರು. 2012 ಹಾಗೂ 2017ರಲ್ಲಿ ತಮ್ಮ ಹುಟ್ಟೂರಿಗೆ ಸಂಬಂಧಿಸಿದ ಚೌಬತ್ಕಾಲ್ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
2019ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ ರಾವತ್ ಕಾಂಗ್ರೆಸ್ನ ಮನೀಷ್ ಕಂಡೂರಿ ವಿರುದ್ಧ ಮೂರೂವರೆ ಲಕ್ಷ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಲ್ಲಿ ಸಾಕಷ್ಟು ಅಧಿಕಾರ ಅನುಭವ ಹೊಂದಿರುವ ರಾವತ್ಗೆ ಈಗ ರಾಜ್ಯ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಮತ್ತೆ ಗೆಲ್ಲಿಸಿಕೊಂಡು ಅಧಿಕಾರಿ ಉಳಿಸಿಕೊಳ್ಳುವ ಜವಾಬ್ದಾರಿ ಇದೆ.