ಟೈಮ್ಸ್ ನೌ ಸಮೀಕ್ಷೆ: ಪುದುಚೇರಿಯಲ್ಲಿ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ
ಪುದುಚೇರಿ, ಮಾರ್ಚ್ 24: ಟೈಮ್ಸ್ ನೌ ನಡೆಸಿದ ಪುದುಚೇರಿ ಜನಾಭಿಪ್ರಾಯ ಸಂಗ್ರಹದ ಪ್ರಕಾರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಕ್ಲಿನ್ ಸ್ವೀಪ್ ಮಾಡಲಿದೆ ಎಂದು ತಿಳಿಸಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ), ಅಖಿಲ ಭಾರತ ಎನ್ಆರ್ ಕಾಂಗ್ರೆಸ್ (ಎಐಎನ್ಆರ್ಸಿ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಡಿಎಂಕೆ) ಯನ್ನು ಒಳಗೊಂಡಿರುವ ಎನ್ಡಿಎ 21 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಟೈಮ್ಸ್ ನೌ-ಸಿ-ವೋಟರ್ ಅಭಿಪ್ರಾಯ ಸಂಗ್ರಹದಲ್ಲಿ ಅಂದಾಜಿಸಲಾಗಿದೆ.
ಟೈಮ್ಸ್ ನೌ ಸಿ-ವೋಟರ್ ಸಮೀಕ್ಷೆ: ತಮಿಳುನಾಡಿನಲ್ಲಿ ಪಾರುಪತ್ಯ ಸಾಧಿಸಲಿದೆ ಡಿಎಂಕೆ
ಪುದುಚೇರಿಯಲ್ಲಿ ಏಪ್ರಿಲ್ 6 ರಂದು ಒಟ್ಟು 30 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಸಮೀಕ್ಷೆ ಪ್ರಕಾರ, ಎನ್ಡಿಎ ಮೈತ್ರಿಕೂಟ 19 ರಿಂದ 23 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ಸಿ) ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಯನ್ನು ಒಳಗೊಂಡಿರುವ ಯುಪಿಎ ಮೈತ್ರಿಕೂಟ, ಮಾರ್ಚ್ನಲ್ಲಿ ನಡೆಸಿದ ಪುದುಚೇರಿ ಪೂರ್ವ-ಸಮೀಕ್ಷೆಯ ಪ್ರಕಾರ, 9 ಸ್ಥಾನಗಳೊಂದಿಗೆ (7-11 ಸ್ಥಾನಗಳು) ಎರಡನೇ ಸ್ಥಾನ ಗಳಿಸುವ ನಿರೀಕ್ಷೆಯಿದೆ ಎಂದು 1,265 ಜನರ ಅಭಿಪ್ರಾಯ ಸಂಗ್ರಹದಲ್ಲಿ ತಿಳಿದುಬಂದಿದೆ.
2021ರ ಪುದುಚೇರಿ ಚುನಾವಣೆಯ ಮತದಾನ ಪೂರ್ವ ಸಮೀಕ್ಷೆಯ ಪ್ರಕಾರ ಸ್ವತಂತ್ರರು ಸೇರಿದಂತೆ ಇತರರು ಒಂದು ಸ್ಥಾನ ಗೆಲ್ಲಬಹುದು ಅಥವಾ ಗೆಲ್ಲದಿರಬಹುದು ಎಂದು ಅಂದಾಜಿಸಲಾಗಿದೆ.
ಶೇಕಡಾವಾರು ಮತ ಹಂಚಿಕೆಯಲ್ಲಿ ಎನ್ಡಿಎ ಶೇ.47.2 ರಷ್ಟು ಮತಗಳನ್ನು ಗಳಿಸುವ ನಿರೀಕ್ಷೆಯಿದ್ದು, ಇದು ಕಳೆದ ಚುನಾವಣೆಗಿಂತ ಶೇ.16.7 ರಷ್ಟು ಹೆಚ್ಚಾಗಿದೆ. ಯುಪಿಎ ತನ್ನ 2016ರ ಮತ ಗಳಿಕೆ ಪ್ರಮಾಣ ಶೇ.39.5 ರಷ್ಟು ಉಳಿಸಿಕೊಳ್ಳುವ ನಿರೀಕ್ಷೆಯಿದ್ದು, ಇತರರು ಶೇಕಡಾವಾರು ಮತ ಗಳಿಕೆ ಪ್ರಮಾಣವನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ.
ಸದ್ಯ ವಿಧಾನಸಭಾ ಚುನಾವಣೆ ನಡೆದರೆ ನೀವು ಯಾರಿಗೆ ಮತ ಹಾಕುತ್ತೀರಿ? ಎಂಬ ಪ್ರಶ್ನೆಗೆ UPA (Congress + DMK) ಮೈತ್ರಿಕೂಟಕ್ಕೆ ಶೇ.39.5, NDA (AINRC + BJP + AIADMK) ಮೈತ್ರಿಕೂಟಕ್ಕೆ ಶೇ.47.2, ಇತರರಿಗೆ ಶೇ.13.3 ಜನರು ಉತ್ತರಿಸಿದ್ದಾರೆ.
ನೀವು ಯಾವ ಪಕ್ಷಕ್ಕೆ ಮತ ಚಲಾಯಿಸುತ್ತೀರಿ ಎಂಬುದರ ಹೊರತಾಗಿಯೂ, ಪುದುಚೇರಿ ಚುನಾವಣೆಯಲ್ಲಿ ಯಾವ ಪಕ್ಷ ಅಥವಾ ಮೈತ್ರಿ ಗೆಲ್ಲುತ್ತದೆ? ಎಂಬ ಪ್ರಶ್ನೆಗೆ UPA ಪರ ಶೇ.30.2 ಒಲವು ಹೊಂದಿದ್ದರೆ, NDA ಮೈತ್ರಿಕೂಟದ ಪರ ಶೇ.52.9 ರಷ್ಟು, ಇತರೆಗೆ ಶೇ.16.9 ರಷ್ಟು ಜನರು ಒಲವು ತೋರಿಸಿದ್ದಾರೆ.
ಮುಖ್ಯಮಂತ್ರಿಯಾಗಲು ಹೆಚ್ಚು ಸೂಕ್ತ ಅಭ್ಯರ್ಥಿ ಯಾರು? ಎಂಬ ಪ್ರಶ್ನೆಗೆ, ಯುಪಿಎ ಮೈತ್ರಿಕೂಟದ ವಿ.ನಾರಾಯಣಸ್ವಾಮಿ ಪರ ಶೇ.20 ರಷ್ಟು, ಎನ್ಡಿಎ ಮೈತ್ರಿಕೂಟದ ಎನ್.ರಂಗಸಾಮಿ ಪರ ಶೇ.49.8 ರಷ್ಟು ಹಾಗೂ ಇತರೆ ವ್ಯಕ್ತಿಗೆ ಶೇ.30.2 ರಷ್ಟು ಜನರು ಒಲವು ವ್ಯಕ್ತಪಡಿಸಿದ್ದಾರೆ ಎಂದು ಟೈಮ್ಸ್ ನೌ ಸಮೀಕ್ಷೆಯಲ್ಲಿ ತಿಳಿದುಬಂದಿದೆ.