ಲಾಲೂನ ಜೈಲಿಗೆ ಕರೆದೊಯ್ದ 900 ಕೋಟಿ ಮೇವು ಹಗರಣದ ಟೈಮ್ ಲೈನ್
900 ಕೋಟಿ ರುಪಾಯಿಯ ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ತಪ್ಪಿತಸ್ಥರೆಂದು ರಾಂಚಿಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ಶನಿವಾರ ಬಂದಿದೆ. ಜನವರಿ ಮೂರನೇ ತಾರೀಕು ಶಿಕ್ಷೆಯ ಪ್ರಮಾಣ ಪ್ರಕಟ ಆಗಲಿದೆ.
ಇಪ್ಪತ್ತೆರಡು ವರ್ಷಗಳ ಸುದೀರ್ಘ ಕಾಲದ ಈ ಪ್ರಕರಣ ನಡೆದು ಬಂದ ಹಾದಿ ಇಲ್ಲಿದೆ.
ಮೇವು ತಿಂದ ಲಾಲೂ ಪ್ರಸಾದ್ ಯಾದವ್ ದೋಷಿ
ಜನವರಿ, 1996: ಜಿಲ್ಲಾಧಿಕಾರಿ ಅಮಿತ್ ಖರೆ ಪಶುಸಂಗೋಪನಾ ಇಲಾಖೆ ಕಚೇರಿ ಮೇಲೆ ದಾಳಿ ನಡೆಸಿದಾಗ ವಶಪಡಿಸಿಕೊಂಡ ದಾಖಲೆ ಮೂಲಕ ಈ ಹಗರಣ ಬೆಳಕಿಗೆ ಬಂತು. ಅಸ್ತಿತ್ವದಲ್ಲೇ ಇಲ್ಲದ ಕಂಪನಿಗಳು ಮೇವು ಪೂರೈಸಿವೆ ಎಂದು ದಾಖಲೆ ತೋರಿಸಿ, ಹಣ ದುರುಪಯೋಗ ಮಾಡಲಾಗಿತ್ತು.
ಮಾರ್ಚ್, 1996: ಹಗರಣದ ತನಿಖೆ ನಡೆಸುವಂತೆ ಪಾಟ್ನಾ ಹೈಕೋರ್ಟ್ ಸಿಬಿಐಗೆ ನಿರ್ದೇಶನ ಮಾಡಿತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಿತು.
ಮಾರ್ಚ್, 1996: ಚಾಯ್ ಬಸಾ ಖಜಾನೆ ಪ್ರಕರಣದಲ್ಲಿ ಸಿಬಿಐನಿಂದ ಎಫ್ ಐಆರ್ ದಾಖಲು
ಜೂನ್ , 1997: ಚಾರ್ಜ್ ಶೀಟ್ ದಾಖಲಿಸಿದ ಸಿಬಿಐ, ಲಾಲೂ ಪ್ರಸಾದ್ ಸೇರಿದಂತೆ ಇತರ ಐವತ್ತೈದು ಮಂದಿ ವಿರುದ್ಧ ಆರೋಪ ಪಟ್ಟಿ. ಐಪಿಸಿಯ ವಿವಿಧ ಸೆಕ್ಷನ್ ನಡಿ ಅರವತ್ತಾರು ಕೇಸುಗಳು ದಾಖಲು
ಜುಲೈ, 1997: ಸಿಬಿಐ ಕೋರ್ಟ್ ಮುಂದೆ ಶರಣಾದ ಲಾಲೂ ಪ್ರಸಾದ್, ಆ ನಂತರ ನ್ಯಾಯಾಂಗ ಬಂಧನಕ್ಕೆ.
ಮೇವು ಹಗರಣ ಬಯಲಿಗೆಳೆದ 'ಹೀರೋ' ಬಿಸ್ವಾಸ್
ಏಪ್ರಿಲ್ , 2000: ಸಿಬಿಐ ವಿಶೇಷ ನ್ಯಾಯಾಲಯದ ಎದುರು ಚಾರ್ಜ್ ಶೀಟ್. ರಾಬ್ರಿದೇವಿ ಸಹ ಆರೋಪಿ. ಆಕೆಗೆ ಜಾಮೀನು. ಲಾಲೂ ಜಾಮೀನು ತಿರಸ್ಕೃತ ಮತ್ತು ನ್ಯಾಯಾಂಗ ಬಂಧನ ಮುಂದುವರಿಕೆ
ಅಕ್ಟೋಬರ್ , 2001: ಹೊಸ ರಾಜ್ಯವಾಗಿ ಜಾರ್ಖಂಡ್ ಉದಯವಾದ ಮೇಲೆ ಹಗರಣದ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್
ಫೆಬ್ರವರಿ, 2002: ರಾಂಚಿಯಲ್ಲಿನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ
ಡಿಸೆಂಬರ್, 2006: ಸಿಬಿಐ ದಾಖಲಿಸಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಲಾಲೂ ಪ್ರಸಾದ್ ಹಾಗೂ ರಾಬ್ರಿದೇವಿ ಖುಲಾಸೆ
ಜೂನ್, 2007: ಚಾಯ್ ಬಸಾ ಖಜಾನೆಯಿಂದ ನಲವತ್ತೆಂಟು ಕೋಟಿ ರುಪಾಯಿ ವಂಚನೆ ಮೂಲಕ ವಿಥ್ ಡ್ರಾ ಮಾಡಿದ ಲಾಲೂ ಪ್ರಸಾದ್ ಇಬ್ಬರು ಸಂಬಂಧಿಕರೂ ಸೇರಿದಂತೆ ಐವತ್ತೆಂಟು ಮಂದಿ ತಪ್ಪಿತಸ್ಥರೆಂದು ರಾಂಚಿಯ ಸಿಬಿಐ ವಿಶೇಷ ಕೋರ್ಟ್ ನಿಂದ ಘೋಷಣೆ. ಶಿಕ್ಷೆಯ ಪ್ರಮಾಣ ಎರಡೂವರೆಯಿಂದ ಆರು ವರ್ಷ.
ಮಾರ್ಚ್, 2012: ಲಾಲೂ ಪ್ರಸಾದ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬಂಕಾ ಖಜಾನೆ ಹಾಗೂ ಭಾಗಲ್ಪುರದಲ್ಲಿ ಅಕ್ರಮವಾಗಿ ನಲವತ್ತೇಳು ಲಕ್ಷ ಹಣ ತೆಗೆದುಕೊಂಡು ಆರೋಪ ಹೊರಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಆರು ತಿಂಗಳ ನಂತರ ಲಾಲೂ ಪ್ರಸಾದ್ ಹಾಗೂ ಜಗನ್ನಾಥ್ ಮಿಶ್ರಾ ಹಾಜರಾದರು.
ಆಗಸ್ಟ್, 2013: ವಿಚಾರಣೆ ನಡೆಸುತ್ತಿರುವ ಜಡ್ಜ್ ವರ್ಗಾವಣೆಗಾಗಿ ಲಾಲೂ ಪ್ರಸಾದ್ ಯಾದವ್ ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ತಿರಸ್ಕೃತ
ಸೆಪ್ಟೆಂಬರ್ , 2013: ತೀರ್ಪು ಕಾಯ್ದಿರಿಸಿದ ಸಿಬಿಐ ವಿಶೇಷ ನ್ಯಾಯಾಲಯ.
ಸೆಪ್ಟೆಂಬರ್, 2013: ಲಾಲೂ ಪ್ರಸಾದ್, ಮಿಶ್ರಾ ಸೇರಿ ನಲವತ್ತೈದು ಮಂದಿ ತಪ್ಪಿತಸ್ಥರೆಂದು ಸಿಬಿಐ ವಿಶೇಷ ನ್ಯಾಯಾಲದಿಂದ ಘೋಷಣೆ. ಸಂಸದ್ ಸದಸ್ಯತ್ವದಿಂದ ಅನರ್ಹಗೊಂಡ ಲಾಲೂ ಪ್ರಸಾದ್. ಜೈಲಿನಿಂದ ಬಿಡುಗಡೆ ನಂತರದ ಆರು ವರ್ಷ ಯಾವುದೇ ಚುನಾವಣೆಯನ್ನು ಈ ಇಬ್ಬರೂ ಸ್ಪರ್ಧಿಸುವಂತಿಲ್ಲ.
ನವೆಂಬರ್, 2014: ಲಾಲೂ ಪ್ರಸಾದ್ ವಿರುದ್ಧ ಬಾಕಿಯಿದ್ದ ಉಳಿದ ನಾಲ್ಕು ಕೇಸ್ ಗಳನ್ನು ಸ್ಥಗಿತ ಮಾಡಿದ ಜಾರ್ಖಂಡ್ ಹೈಕೋರ್ಟ್ ತೀರ್ಪಿಗೆ ಮೇಲ್ಮನವಿ ಸಲ್ಲಿಸಿದ ಸಿಬಿಐ. ಒಂದು ಪ್ರಕರಣದಲ್ಲಿ ಶಿಕ್ಷೆ ಆದ ನಂತರ ಅವೇ ಸಾಕ್ಷ್ಯ ಹಾಗೂ ಆಧಾರದ ಅನ್ವಯ ವಿಚಾರ ನಡೆಸಲು ಸಾಧ್ಯವಿಲ್ಲ ಎಂಬ ಕಾರಣ. ಆದರೆ ಸಿಬಿಐ ಅರ್ಜಿಗೆ ಪುರಸ್ಕಾರ. ಲಾಲೂ ಪ್ರಸಾದ್ ವಿರುದ್ಧ ಎರಡು ಸೆಕ್ಷನ್ ಅನ್ವಯ ವಿಚಾರಣೆ ಮುಂದುವರಿಸುವ ಆದೇಶ ಎತ್ತಿಹಿಡಿಯಲಾಯಿತು.
ನವೆಂಬರ್, 2016: ಮಿಶ್ರಾ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಸಿಬಿಐ ತಡ ಮಾಡಿತು, ಎಳೆದಾಡಿತು ಎಂದು ಆರೋಪಿಸಿ ಮೇವು ಹಗರಣದ ಬಾಕಿ ನಾಲ್ಕು ಕೇಸುಗಳನ್ನು ರದ್ದುಗೊಳಿಸಿದ ಕೋರ್ಟ್
ಮೇ, 2017: ದೇವಘರ್ ಖಜಾನೆಯಲ್ಲಿ 1991-94ರ ಮಧ್ಯೆ 84.53 ಲಕ್ಷ ರುಪಾಯಿ ವಿಥ್ ಡ್ರಾ ಮಾಡಿದ್ದಕ್ಕೆ ಹಾಗೂ ಸುಳ್ಳು ದಾಖಲೆ ಸೃಷ್ಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಲಾಲೂ ಪ್ರಸಾದ್, ಮಿಶ್ರಾ ವಿರುದ್ಧ ಭಷ್ಟಾಚಾರದ ಕ್ರಿಮಿನಲ್ ಪ್ರಕರಣವನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತು.
ಡಿಸೆಂಬರ್, 2017: ಲಾಲೂ ಪ್ರಸಾದ್ ತಪ್ಪಿತಸ್ಥರೆಂದು ರಾಂಚಿಯಲ್ಲಿನ ಸಿಬಿಐ ಕೋರ್ಟ್ ತೀರ್ಪು.