'ಕಾಂಗ್ರೆಸ್ ಪಕ್ಷಪಾತಿಗಳಾಗಿ' ಜೆಡಿಎಸ್ ಬಿಡಲು ಸಜ್ಜಾಗಿರುವ ಮೂವರು ಶಾಸಕರು
ಮುಂಬರುವ ಅಸೆಂಬ್ಲಿ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಷ ಸಂಘಟನೆಯ ವಿಚಾರದಲ್ಲಿ ಜೆಡಿಎಸ್, ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸಿಗಿಂತ ಮುಂದಿದೆ. ಜೆಡಿಎಸ್ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗುತ್ತಿದೆ.
ಪ್ರಮುಖವಾಗಿ ಜೆಡಿಎಸ್ ಪ್ರಾಭಲ್ಯವಿರುವ ಕ್ಷೇತ್ರಗಳಲ್ಲಿ ಹಾಲೀ ಶಾಸಕರ ಜೊತೆ ಸ್ಟ್ಯಾಂಡ್ ಬೈಯಾಗಿ ಇನ್ನೋರ್ವ ಸ್ಥಳೀಯ ಮುಖಂಡರನ್ನು ಗುರುತಿಸುವ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡುತ್ತಿದ್ದಾರೆ. ತುಮಕೂರು ಮತ್ತು ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಈಗಾಗಲೇ ಈ ಕೆಲಸವನ್ನು ಆರಂಭಿಸಿದ್ದಾರೆ.
2023ರ ಚುನಾವಣೆಯಲ್ಲಿ ನಿಮ್ಮ ಆಯ್ಕೆ ಬಹಳ ಮುಖ್ಯ: ಎಚ್ಡಿಕೆ ಮಹತ್ವದ ಸಂದೇಶ
ಹಾಲೀ ಮುಖಂಡರಿಂದ ಚುನಾವಣೆಯ ಹೊಸ್ತಿಲಲ್ಲಿ ಏನಾದರೂ ತೊಂದರೆ ಎದುರಾದರೆ, ಪರ್ಯಾಯವಾಗಿ ಇನ್ನೊಂದು ಶಕ್ತಿಯನ್ನು ಬೆಳೆಸುವ ಕುಮಾರಸ್ವಾಮಿಯವರ ಈ ಕೆಲಸಕ್ಕೆ ಅಲ್ಲಲ್ಲಿ ಅಪಸ್ವರವೂ ಕೇಳಿ ಬರುತ್ತಿದೆ. ಈಗಿರುವ ಮುಖಂಡರು ಮೂಲೆಗುಂಪಾಗುತ್ತಾರಾ ಎನ್ನುವ ಭಯ ಅವರವರ ಕಾರ್ಯಕರ್ತರಲ್ಲಿ ಕಾಡುತ್ತಿದೆ.
ಮೋದಿ ಎನ್ನುವ 'ಭ್ರಮೆ' ಬಿಡಿ: ಬಿಎಸ್ವೈ ಹೇಳಿಕೆಯ ಅರ್ಥವಾದರೂ ಏನು?
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟಿನಿಂದ ಗೆದ್ದು, ಈಗ ಪಕ್ಷಕ್ಕೆ ನಿಯತ್ತು ತೋರದೇ ಇರುವ ಮೂವರು ಶಾಸಕರ ಕ್ಷೇತ್ರದಲ್ಲಿ ಕುಮಾರಸ್ವಾಮಿ ವಿಶೇಷ ಮುತುವರ್ಜಿಯನ್ನು ತೋರುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಈ ಮೂವರು ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿದರೆ, ಅವರನ್ನು ಸೋಲಿಸಲು ಕುಮಾರಸ್ವಾಮಿ ತಂತ್ರಗಾರಿಕೆಯನ್ನು ಹಣೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಶಾಸಕರಾಗಿ 'ಕಾಂಗ್ರೆಸ್ ಪಕ್ಷಪಾತಿಗಳಾಗಿರುವ' ಮೂವರು ನಾಯಕರು?
ಜೆಡಿಎಸ್ ಪಕ್ಷದಿಂದಲೂ ಹಲವರು ಡಿ.ಕೆ.ಶಿವಕುಮಾರ್ ಅವರ ಸಂಪರ್ಕದಲ್ಲಿದ್ದಾರೆ
ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ನಮ್ಮ ಶಾಸಕರನ್ನು ಕಾಂಗ್ರೆಸ್ ಓಲೈಸುತ್ತಿದೆ ಎನ್ನುವ ಮಾತನ್ನು ಹೇಳುತ್ತಿದ್ದರು. ಇನ್ನು, ಜೆಡಿಎಸ್ ಪಕ್ಷದಿಂದಲೂ ಹಲವರು ಡಿ.ಕೆ.ಶಿವಕುಮಾರ್ ಅವರ ಸಂಪರ್ಕದಲ್ಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಮೂವರು ಹಾಲೀ ಜೆಡಿಎಸ್ ಶಾಸಕರ ಪೈಕಿ ಇಬ್ಬರಂತೂ, ಈ ಅಸೆಂಬ್ಲಿ ಅವಧಿ ಮುಗಿಯುವವರೆಗೆ ಮಾತ್ರ ನಾನು ಜೆಡಿಎಸ್ ಶಾಸಕ ಎನ್ನುವ ಮಾತನ್ನು ಬಹಿರಂಗವಾಗಿಯೇ ಹೇಳಿದ್ದರು.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಸ್.ಆರ್. ಶ್ರೀನಿವಾಸ್
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಸ್.ಆರ್. ಶ್ರೀನಿವಾಸ್ ಅವರು ಬಿಜೆಪಿ ಅಭ್ಯರ್ಥಿ ವಿರುದ್ದ ಸುಮಾರು ಒಂಬತ್ತು ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಕೇವಲ ಹದಿಮೂರು ಸಾವಿರ ಮತಗಳನ್ನಷ್ಟೇ ಪಡೆದಿದ್ದರು. ಆದರೆ, ಶ್ರೀನಿವಾಸ್ ಅವರು ಕುಮಾರಸ್ವಾಮಿ ವಿರುದ್ದ ಹೇಳಿಕೆಯನ್ನು ನೀಡುತ್ತಾ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಹಲವು ವೇದಿಕೆಯಲ್ಲಿ ಹೊಗಳುವ ಮೂಲಕ ಪಕ್ಷಕ್ಕೆ ಮುಜುಗರವನ್ನು ತಂದೊಡ್ಡುತ್ತಿದ್ದಾರೆ. ಇವರಿಗೆ ಪರ್ಯಾಯವಾಗಿ ಉದ್ಯಮಿಯೊಬ್ಬರ ಜೊತೆ ಎಚ್ಡಿಕೆ ಮಾತುಕತೆ ನಡೆಸಿದ್ದಾರೆ. ಇವರು ಜೆಡಿಎಸ್ ತೊರೆಯುವುದಿಲ್ಲ ಎಂದು ಹೇಳಿದ್ದರೂ, ಇವರು ಮುಂದಿನ ಚುನಾವಣೆಯ ವೇಳೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದೇ ಹೇಳಲಾಗುತ್ತಿದೆ.
ಕೋಲಾರ ಕ್ಷೇತ್ರದ ಹಾಲೀ ಜೆಡಿಎಸ್ ಶಾಸಕ ಕೆ.ಶ್ರೀನಿವಾಸ ಗೌಡ
ಇನ್ನು, ಕೋಲಾರ ಕ್ಷೇತ್ರದ ಹಾಲೀ ಜೆಡಿಎಸ್ ಶಾಸಕ ಕೆ.ಶ್ರೀನಿವಾಸ ಗೌಡ ಅವರು ಅಧಿಕೃತವಾಗಿಯೇ ಕಾಂಗ್ರೆಸ್ ಸೇರುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಜೊತೆ ಹಲವು ಸುತ್ತಿನ ಮಾತುಕತೆ ನಡೆದಿದ್ದಾಗಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು ಕೂಡಾ ಇವರ ವಿರುದ್ದ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಕಳೆದ ಚುನಾವಣೆಯಲ್ಲಿ ಶ್ರೀನಿವಾಸ ಗೌಡ ಅವರು ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು.
ಮೂರನೇ ಜೆಡಿಎಸ್ ಶಾಸಕರೆಂದರೆ ಮೈಸೂರಿನ ಹಿರಿಯ ರಾಜಕಾರಣಿ ಜಿ.ಟಿ.ದೇವೇಗೌಡ
ಮೂರನೇ ಜೆಡಿಎಸ್ ಶಾಸಕರೆಂದರೆ ಮೈಸೂರಿನ ಹಿರಿಯ ರಾಜಕಾರಣಿ ಜಿ.ಟಿ.ದೇವೇಗೌಡ ಅವರು. ಇವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಹಲವು ಕಸರತ್ತುಗಳನ್ನು ದೇವೇಗೌಡ್ರು ಮಾಡುತ್ತಿದ್ದಾರೆ. ಆದರೆ, ಜಿಟಿಡಿ ಮತ್ತು ಕುಮಾರಸ್ವಾಮಿ ನಡುವಿನ ಸಂಬಂಧ ಹಳಸಿರುವುದರಿಂದ ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ. ಇವರ ಜೊತೆಗೂ, ಡಿಕೆಶಿ ಮತ್ತು ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ.