ರಾಜ್ಯಸಭಾ ಚುನಾವಣಾ ಫಲಿತಾಂಶ: ಬೆಕ್ಕಿಗೆ ಗಂಟೆ ಕಟ್ಟುವವರಾರು?
ರಾಜ್ಯದ ರಾಜ್ಯಸಭಾ ಚುನಾವಣೆಯಲ್ಲಿ ಅಂತಿಮವಾಗಿ ಕಣದಲ್ಲಿ ಆರು ಅಭ್ಯರ್ಥಿಗಳು ಉಳಿದಾಗ, ಮೂರನೆಯವರಾಗಿ ಬಿಜೆಪಿಯ ಅಭ್ಯರ್ಥಿ ಗೆಲ್ಲುವುದು ಬಹುತೇಕ ಖಚಿತವಾಗಿತ್ತು. ಅದರಂತೆಯೇ ಫಲಿತಾಂಶವೂ ಹೊರಬಿದ್ದಿದೆ. ಬಿಜೆಪಿಯ ಮೂವರು ಮತ್ತು ಕಾಂಗ್ರೆಸ್ಸಿನ ಒಬ್ಬರು ಜಯಶೀಲರಾಗಿದ್ದಾರೆ.
ಅಭ್ಯರ್ಥಿಯನ್ನು ಹಿಂದಕ್ಕೆ ಪಡೆಯುವ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಇನ್ನಿಲ್ಲದ ಬೆಳವಣಿಗೆಗಳು ನಡೆದಿದ್ದವು. ಆದರೆ, ರಾಜ್ಯದ ಕಾಂಗ್ರೆಸ್ ನಾಯಕರು ಮತ್ತು ದಳಪತಿಗಳು ಜಿದ್ದಿಗೆ ಬಿದ್ದಿದ್ದರಿಂದ, ಮೂರನೇ ಸ್ಥಾನಕ್ಕಾಗಿ ತ್ರಿಕೋಣ ಸ್ಪರ್ಧೆ ಏರ್ಪಟ್ಟಿತ್ತು.
ರಾಜ್ಯಸಭೆ: ಬಿಜೆಪಿಗೆ ಬಿದ್ದ ಆ ಎರಡು ಕಾಂಗ್ರೆಸ್ಸಿನ ಅಡ್ಡಮತ ಯಾರದ್ದು?
ರಾಜ್ಯಸಭಾ ಚುನಾವಣೆಯ ಫಲಿತಾಂಶ ರಾಜ್ಯ ರಾಜಕಾರಣದಲ್ಲಿ ಹಲವು ರಾಜಕೀಯ ಲೆಕ್ಕಾಚಾರಕ್ಕೆ ನಾಂದಿ ಹಾಡಿರುವುದಂತೂ ಹೌದು. ಚುನಾವಣಾ ವರ್ಷವಾಗಿರುವುದರಿಂದ, ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಮುಂದಿನ ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿಲ್ಲದಿಲ್ಲ.
ತಮ್ಮತಮ್ಮ ಅಭ್ಯರ್ಥಿಗಳ ಸೋಲಿಗೆ ಜೆಡಿಎಸ್-ಕಾಂಗ್ರೆಸ್ ಪರಸ್ಪರ ಒಬ್ಬರೊಬ್ಬರನ್ನು ದೂಷಿಸುತ್ತಿವೆ. ತನ್ನ ಮೀಸೆ ಮಣ್ಣಾದರೂ ಪರವಾಗಿಲ್ಲ ಎನ್ನುವ ರಾಜ್ಯ ನಾಯಕರ ನಿಲುವಿನಲ್ಲಿ ಸೋಲಿಗೆ ಜವಾಬ್ದಾರರು ಯಾರು ಎನ್ನುವುದಕ್ಕೆ ಯಾರ ಬಳಿಯೂ ಉತ್ತರವಿಲ್ಲ.
ಬಿಜೆಪಿ 'ಬಿ ಟೀಂ' ಯಾವುದೆಂದು ಬಯಲಾಯಿತು: ಎಚ್.ಡಿ.ಕುಮಾರಸ್ವಾಮಿ
ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ಜೆಡಿಸ್ ವರಿಷ್ಠ ಎಚ್.ಡಿ.ದೇವೇಗೌಡ್ರು ಅಭ್ಯರ್ಥಿ ಕಣಕ್ಕೆ ಇಳಿಸುವ ವಿಚಾರದಲ್ಲಿ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸಿದ್ದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಸ್ವಾಭಿಮಾನಕ್ಕೆ ಬಿದ್ದ ಪೆಟ್ಟು. ಇದರಿಂದಾಗಿಯೇ, ರಾಜ್ಯ ಕಾಂಗ್ರೆಸ್ ನಾಯಕರು ಹಠಕ್ಕೆ ಬಿದ್ದು, ವರಿಷ್ಠರ ಅನುಮತಿ ಪಡೆದು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಮಲ್ಲಿಕಾರ್ಜುನ ಖರ್ಗೆ ಮೂಲಕ ವರಿಷ್ಠರ ಮನವೊಲಿಸುವ ಕೆಲಸ
ಮಲ್ಲಿಕಾರ್ಜುನ ಖರ್ಗೆ ಮೂಲಕ ವರಿಷ್ಠರ ಮನವೊಲಿಸುವ ಕೆಲಸ ವರ್ಕೌಟ್ ಆಗದೇ ಇದ್ದಾಗ, ಪಕ್ಷದ ಕೆಲವು ಮುಖಂಡರನ್ನು ಸಂಧಾನಕ್ಕೆ ಕುಮಾರಸ್ವಾಮಿ ಕಳುಹಿಸಿದರು. ಇದರ ಜೊತೆಗೆ, ಕಾಂಗ್ರೆಸ್ ನಾಯಕರನ್ನು ಅದರಲ್ಲೂ ಸಿದ್ದರಾಮಯ್ಯನವರನ್ನು ಟೀಕಿಸುವುದನ್ನು ಕುಮಾರಸ್ವಾಮಿ ಮುಂದುವರಿಸಿದ್ದರಿಂದ ಮೈತ್ರಿ ಸಾಧ್ಯತೆಯ ಕೊನೆಯ ಆಸೆಯೂ ಒಡೆದು ಹೋಯಿತು. ಇನ್ನೊಂದು ಕಡೆ ಬಿಜೆಪಿ ಸೈಲೆಂಟಾಗಿ ಗೆಲುವಿಗೆ ಏನು ಬೇಕೋ ಅದನ್ನು ಮಾಡಿಕೊಂಡು ಬಂದಿತು.
ಕುಮಾರಸ್ವಾಮಿಗೆ ಪಕ್ಷದೊಳಗೆ ಆದ ಪ್ಲಸ್ ಪಾಯಿಂಟ್
ಜೆಡಿಎಸ್ಸಿಗೆ ಕ್ರಾಸ್ ವೋಟಿಂಗ್ ಭೀತಿ ಇತ್ತು, ಇದರ ಜೊತೆಗೆ ತಮ್ಮ ಪಕ್ಷದ ಶಾಸಕರಿಗೆ ಸಿದ್ದರಾಮಯ್ಯ ಪತ್ರ ಬರೆದದ್ದು ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಆದರೂ, 32 ಶಾಸಕರಲ್ಲಿ ಮೂವತ್ತು ಶಾಸಕರು ಜೆಡಿಎಸ್ ಮೇಲೆ ನಿಯತ್ತು ಮುಂದುವರಿಸಿದ್ದು, ಕುಮಾರಸ್ವಾಮಿಗೆ ಪಕ್ಷದೊಳಗೆ ಆದ ಪ್ಲಸ್ ಪಾಯಿಂಟ್ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಐದರಿಂದ ಆರು ಶಾಸಕರ ಮೇಲೆ ದಳಪತಿಗಳು ಹದ್ದಿನ ಕಣ್ಣನ್ನು ಇಟ್ಟಿದ್ದರು.
ಗೌಡ್ರು ರಾಜ್ಯಸಭೆ ಸ್ಪರ್ಧಿಸಲು, ಕುಮಾರಸ್ವಾಮಿ ಸಿಎಂ ಆಗಲು ಬೆಂಬಲಿಸಲಿಲ್ಲವೇ?
ಗೌಡ್ರು ರಾಜ್ಯಸಭೆ ಸ್ಪರ್ಧಿಸಲು, ಕುಮಾರಸ್ವಾಮಿ ಸಿಎಂ ಆಗಲು ನಾವು ಬೆಂಬಲಿಸಲಿಲ್ಲವೇ ಈಗ ನಮ್ಮನ್ನು ಬೆಂಬಲಿಸಲಿ ಎನ್ನುವ ಕಾಂಗ್ರೆಸ್ ನಾಯಕರ ಮಾತಿಗೆ ಎಚ್ಡಿಕೆ ತಿರುಗೇಟನ್ನು ನೀಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸೋತರೂ ಪರವಾಗಿಲ್ಲ, ಜೆಡಿಎಸ್ ಅಭ್ಯರ್ಥಿ ಗೆಲ್ಲಬಾರದು ಎನ್ನುವುದು ಸಿದ್ದರಾಮಯ್ಯನವರ ರಾಜಕೀಯ ದಾಳ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಒಟ್ಟಿನಲ್ಲಿ, ಇವರಿಬ್ಬರ ಪ್ರತಿಷ್ಠೆಯ ಲಾಭವನ್ನು ಬಿಜೆಪಿಯಂತೂ ಪಡೆದುಕೊಂಡಿತು. ಹಾಗಾದರೆ, ಇಲ್ಲಿ ಬೆಕ್ಕಿಗೆ ಗಂಟೆ ಕಟ್ಟುವರಾರು?