ಜನರ ಭಕ್ತಿಭಾವದ ಮುಂದೆ ದಿಕ್ಕೆಟ್ಟು ಓಡಿ ಹೋದ ಕೊರೊನಾ ವೈರಸ್
ಸರಕಾರ ಹೇರಿರುವ ಕೊರೊನಾ ನಿರ್ಬಂಧಗಳನ್ನು ಸಮರ್ಥವಾಗಿ ಜಾರಿಗೆ ತರಲು ಜಿಲ್ಲಾಡಳಿತ ವಿಫಲವಾಯಿತೋ ಅಥವಾ ಕಾಣದ ವೈರಸಿಗೆ ಬೆದರಿ ಎಷ್ಟು ದಿನಾಂತಾ ಮನೆಯಲ್ಲಿ ಕುಳಿತುಕೊಳ್ಳುವುದು ಎಂದು ಸಹನೆಯ ಕಟ್ಟೆ ಒಡೆಯಿತೋ? ಗೊತ್ತಿಲ್ಲ. ಬನದ ಹುಣ್ಣಿಮೆ ಪ್ರಯುಕ್ತ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಜಾತ್ರೆ/ಉತ್ಸವಕ್ಕೆ ಭಕ್ತರು ಪ್ರವಾಹೋಪಾದಿಯಲ್ಲಿ ಪಾಲ್ಗೊಂಡಿದ್ದಾರೆ.
ಕೊರೊನಾ ಕೇಸುಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸರಕಾರ ಹಲವು ನಿರ್ಬಂಧಗಳನ್ನು ವಿಧಿಸಿತ್ತು. ಸಂಬಂಧ ಪಟ್ಟ ದೇವಾಲಯಗಳ ಆಡಳಿತ ಮಂಡಳಿಗಳೂ ಕೋವಿಡ್ ನಿಯಮಗಳನ್ನು ಪಾಲಿಸುವುದಾಗಿ ತಿಳಿಸಿತ್ತು.
ಕೆಮ್ಮದ ಜನರಿಲ್ಲ, ಶೀತಜ್ವರವಿಲ್ಲದ ಮನೆಯಿಲ್ಲ: ಊರೆಲ್ಲಾ ಅನಾರೋಗ್ಯದ ವಾತಾವರಣ
ಹೆಚ್ಚಿನ ದೇವಾಲಯಗಳು ಸರಳವಾಗಿ ಜಾತ್ರೆಯನ್ನು ನಡೆಸಲಾಗುವುದು. ದೇವಾಲದ ಅರ್ಚಕರಿಗೆ, ಸಿಬ್ಬಂದಿಗಳಿಗೆ ಬಿಟ್ಟು ಬೇರೆಯವರಿಗೆ ಪ್ರವೇಶ ಇರುವುದಿಲ್ಲ ಎಂದು ಮೊದಲೇ ಪ್ರಕಟಿಸಿತ್ತು. ಆದರೆ, ಇದ್ಯಾವುದಕ್ಕೂ ಜನರು ಕ್ಯಾರೇ ಅಂದಿಲ್ಲ ಎನ್ನುವುದಕ್ಕೆ ಸೋಮವಾರದ (ಜ 17) ಕಾರ್ಯಕ್ರಮಗಳು ಸಾಕ್ಷಿಯಾದವು.
ಮಕರ ಸಂಕ್ರಾಂತಿಯಿಂದ ಬನದ ಹುಣ್ಣಿಮೆಯವರಿಗೆ ರಾಜ್ಯದ ಹಲವು ಪುರಾಣ ಪ್ರಸಿದ್ದ ದೇವಾಲಯಗಳಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಸಂಪ್ರದಾಯದಂತೆ ನಡೆಯಿತು. ಕೋವಿಡ್ ಕಾರಣಕ್ಕಾಗಿ ಜಿಲ್ಲಾಡಳಿತ ಬಿಗಿನಿಯಮವನ್ನು ಜಾರಿಗೆ ತಂದಿತ್ತು. ಆದರೆ, ಭಕ್ತರ ಭಕ್ತಿಯ ಮುಂದೆ ಪೊಲೀಸರು ಅಸಹಾಯಕರಾದರು.
ಉಡುಪಿ: ಮಕರ ಸಂಕ್ರಾಂತಿ ಚೂರ್ಣೋತ್ಸವದ ವೇಳೆ ನಡೆಯುವ ವಿಸ್ಮಯ
ಬಾದಾಮಿಯ ಐತಿಹಾಸಿಕ ಬನಶಂಕರಿ ದೇವಾಲಯ
ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಐತಿಹಾಸಿಕ ಬನಶಂಕರಿ ದೇವಾಲಯದಲ್ಲಿ ಬನದ ಹುಣ್ಣಿಮೆಯ ಪ್ರಯುಕ್ತ ರಥೋತ್ಸವ ಕಾರ್ಯಕ್ರಮವಿತ್ತು. ಇತಿಹಾಸದಲ್ಲಿ ಎಂದೂ ರದ್ದಾದ ಹಿನ್ನಲೆಯಿಲ್ಲದ ಈ ದೇವಾಲಯದಲ್ಲಿ ಸರಳ ಜಾತ್ರೆಯನ್ನು ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿತ್ತು ಮತ್ತು ಅದಕ್ಕೆ ದೇವಾಲಯದವರೂ ಒಪ್ಪಿಗೆ ಸೂಚಿಸಿದ್ದರು. ಭಕ್ತರಿಗೆ ದೇವಾಲಯದಲ್ಲಿ ತಾಯಿಯ ದರ್ಶನವಿಲ್ಲ, ಜಾತ್ರೆಯ ಸ್ಥಳಕ್ಕೆ ಅನುಮತಿಯಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿಯೂ ಪ್ರಕಟಣೆ ಹೊರಡಿಸಿತ್ತು. ಆದರೆ, ಅಲ್ಲಿ ಆಗಿದ್ದು ಬೇರೆ..
ಎತ್ತಿನ ಬಂಡಿಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಉಘೇ..ಉಘೇ.. ಎಂದು ಬರುತ್ತಿದ್ದ ಭಕ್ತರು
ಕೋವಿಡ್ ನಿರ್ಬಂಧಕ್ಕೆ ಕ್ಯಾರೇ ಅನ್ನದ ಭಕ್ತರು ಸಾವಿರ ಸಾವಿರ ಸಂಖ್ಯೆಯಲ್ಲಿ ಆಗಮಿಸಿದ್ದರು. ಎತ್ತಿನ ಬಂಡಿಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಉಘೇ..ಉಘೇ.. ಎಂದು ಬರುತ್ತಿದ್ದ ಭಕ್ತರನ್ನು ತಡೆಯಲು, ಬಲ ಪ್ರಯೋಗ ಮಾಡಲು ಪೊಲೀಸರಿಗೂ ಮನಸಾಗಲಿಲ್ಲ. ಜಾತ್ರೆಯ ಎಳೆಯುವ ಜಾಗ ಮೂವತ್ತು ನಿಮಿಷದ ಕೆಳಗೆ ಪೊಲೀಸರ ಸರ್ಪಗಾವಲಿನಲ್ಲಿ ಖಾಲಿ ಹೊಡೆಯುತ್ತಿತ್ತು. ಆದರೆ, ಒಮ್ಮೆಲೇ ಭಕ್ತರು ತೇರು ಎಳೆಯುವ ಸಂದರ್ಭದಲ್ಲಿ ಬಂದಿದ್ದರಿಂದ ಕ್ಷಣಾರ್ಧದಲ್ಲಿ ಮೈದಾನ ತುಂಬು ಹೋಯಿತು. ಭಕ್ತರು ತೇರನ್ನು ಎಳೆದರು, ಬನಶಂಕರಿ ತಾಯಿಗೆ ನಮಸ್ಕರಿಸಿದರು, ನಿಟ್ಟುಸಿರು ಬಿಟ್ಟು, ಕೃತಾರ್ಥವಾಗಿ ಅಲ್ಲಿಂದ ಹೊರಟು ಹೋದರು. ದೇವಾಲಯದ ಕೆಲವರು, ಗ್ರಾಮಸ್ಥರ ಮೇಲೆ ಕೇಸು ದಾಖಲಾಗಿದೆ.
ನಗರದ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ದೇವಾಲಯ
ಇನ್ನು, ಬೆಂಗಳೂರಿನಲ್ಲಿ ತಿಂಗಳಾಂತ್ಯದವರೆಗೆ ಸೆಕ್ಷನ್ 144 ಜಾರಿಯಲ್ಲಿದೆ, ಐದು ಜನರಿಗಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ನಗರದ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ದೇವಾಲಯದಲ್ಲೂ ಬನದ ಹುಣ್ಣಿಮೆಯ ದಿನ ಜಾತ್ರೆಯ ಸಂಭ್ರಮ. ಸರಳವಾಗಿ ಜಾತ್ರೆ ನಡೆಸುವುದಾಗಿ ಆಡಳಿತ ಮಂಡಳಿಯವರು ಹೇಳಿದ್ದರು. ಆದರೆ, ಬಾದಾಮಿಯಲ್ಲಿ ಎದುರಾದ ಪರಿಸ್ಥಿತಿ ಇಲ್ಲೂ ಎದುರಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ದರಿಂದ, ಪೊಲೀಸರು ಬೇರೆ ದಾರಿಯಿಲ್ಲದೇ ಭಕ್ತರಿಗೆ ಅನುವು ಮಾಡಿಕೊಟ್ಟರು.
ನಾಡಹಬ್ಬದ ರೀತಿಯಲ್ಲಿ ಆಚರಿಸಲ್ಪಡುವ ಉಡುಪಿ ಪರ್ಯಾಯ ಮಹೋತ್ಸವ
ಇನ್ನು, ಎರಡು ವರ್ಷಕ್ಕೊಮ್ಮೆ ನಾಡಹಬ್ಬದ ರೀತಿಯಲ್ಲಿ ಆಚರಿಸಲ್ಪಡುವ ಉಡುಪಿ ಪರ್ಯಾಯ ಮಹೋತ್ಸವಕ್ಕೂ ಜನವೋ ಜನ. ಜನವರಿ ಹದಿನೇಳರ ಮಧ್ಯರಾತ್ರಿಯಿಂದ ಹದಿನೆಂಟರ ನಸುಕಿನ ಹೊತ್ತಿಗೆ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಪರ್ಯಾಯ ಮೆರವಣಿಗೆಯೂ ವಿಜೃಂಭಣೆಯಿಂದ ನಡೆಯಿತು. ಒಟ್ಟಿಗೆ, ಜನರ ಭಕ್ತಿಭಾವದ ಮುಂದೆ, ಸರಕಾರದ ಆದೇಶವಾಗಲಿ, ಕೊರೊನಾ ವೈರಸ್ ಆಗಲಿ ಏನೂ ಮಾಡಲಾಗದು ಎನ್ನುವುದು ಸಾರುವಂತಿದೆ.