2019ರ ಲೋಕಸಭಾ ಚುನಾವಣೆ ದೇವೇಗೌಡರ ಕುಟುಂಬಕ್ಕೆ ಅಗ್ನಿಪರೀಕ್ಷೆ?
ಚಾಣಕ್ಷ್ಯತನದ ರಾಜಕೀಯ ಮಾಡುತ್ತಾ ಇಳಿ ವಯಸ್ಸಿನಲ್ಲೂ ಸ್ವಲ್ಪವೂ ಆಸಕ್ತಿ ಕಳೆದುಕೊಳ್ಳದೆ ಮುಂದಿನ ಪ್ರಧಾನಿಯಾಗುವ ಬಯಕೆಯನ್ನು ಬಗಲಲ್ಲೇ ಇಟ್ಟುಕೊಂಡಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾದಂತೆ ಕಾಣುತ್ತಿದೆ.
ಮೊಮ್ಮಕ್ಕಳಿಬ್ಬರನ್ನು ಸಂಸತ್ ಮೆಟ್ಟಿಲು ಹತ್ತಿಸುವ ಆಕಾಂಕ್ಷೆಗೆ ಮೈತ್ರಿ ಪಕ್ಷದವರು, ವಿರೋಧ ಪಕ್ಷದವರು ತಣ್ಣೀರು ಎರೆಚುವ ಎಲ್ಲ ಲಕ್ಷಣಗಳು ಕಂಡು ಬರತೊಡಗಿದೆ. ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭವೇ ಇವತ್ತಿನ ಲೋಕಸಭೆಯ ತಂತ್ರವನ್ನು ಬಚ್ಚಿಟ್ಟುಕೊಂಡಿದ್ದರು.
ರಾಜ್ಯ ರಾಜಕಾರಣದಲ್ಲಿ ತಮ್ಮ ಪುತ್ರರು ಸೊಸೆಯಂದಿರು ಇರುವುದರಿಂದ ಮೊಮ್ಮಕ್ಕಳನ್ನು ಸಂಸತ್ತಿಗೆ ಕೊಂಡೊಯ್ಯುವ ಮತ್ತು ಅವಕಾಶ ಸಿಕ್ಕರೆ ತಾನು ಪ್ರಧಾನಿಯಾಗುವ ದೂ(ದು)ರಾಲೋಚನೆಯನ್ನಿಟ್ಟುಕೊಂಡಿದ್ದರು. ಹೀಗಾಗಿ ಮೊಮ್ಮಗ ಪ್ರಜ್ವಲ್ ರೇವಣ್ಣ ವಿಧಾನಸಭೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದಾಗಲೂ ಅದಕ್ಕೆ ಸೊಪ್ಪು ಹಾಕಿರಲಿಲ್ಲ.
ಅದಾದ ಬಳಿಕ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕವಂತು ತನ್ನ ಮೊಮ್ಮಕ್ಕಳ ಸಂಸತ್ ಪ್ರವೇಶದ ಹಾದಿ ಸುಗಮವಾಯಿತು ಎಂಬ ಸಂತಸದಲ್ಲಿದ್ದರು. ರಾಜಕೀಯವಾಗಿ ರೇವಣ್ಣರವರ ಪುತ್ರ ಪ್ರಜ್ವಲ್ ಆಸಕ್ತಿಯಿತ್ತು. ಆದರೆ ನಿಖಿಲ್ ಗೆ ಅಷ್ಟೊಂದಾಗಿರಲಿಲ್ಲ.
ಹೀಗಿದ್ದರೂ ಹೇಗಾದರೂ ಮಾಡಿ ರಾಜಕೀಯಕ್ಕೆ ಎಳೆದು ತರಲೇಬೇಕೆಂಬ ಹಠಕ್ಕೆ ಬಿದ್ದ ದೇವೇಗೌಡರು ವಿಧಾನಸಭಾ ಚುನಾವಣೆ ಕಳೆದ ಬಳಿಕದ ದಿನದಿಂದಲೇ ತಮ್ಮ ಮೊಮ್ಮಕ್ಕಳಿಗೆ ರಾಜಕೀಯವಾಗಿ ಪೂರಕ ವಾತಾವರಣ ನಿರ್ಮಾಣವಾಗುವಂತೆ ನೋಡಿಕೊಂಡರು.
ಲೋಕ ಚುನಾವಣೆ: ಇಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ರೈತರ ಗಮನಸೆಳೆಯುವ ಸಲುವಾಗಿ ಮಂಡ್ಯದಲ್ಲಿ ನಾಟಿ, ಕೊಯ್ಲು ಎಂಬಂತಹ ಕಾರ್ಯಕ್ರಮಗಳನ್ನು ಮಾಡಿದರು. ನಿಖಿಲ್ ಗಾಗಿ ಸಿನಿಮಾ ಮಾಡಿ ರೈತನ ಮಕ್ಕಳು ಎಂಬಂತೆ ಬಿಂಬಿಸಿದರು. ಅಷ್ಟೇ ಅಲ್ಲ ಅದನ್ನು ಬಲವಂತವಾಗಿ ಜನಕ್ಕೆ ತೋರಿಸಿದರು. ಯಾವಾಗ ನಿಖಿಲ್ ಮಂಡ್ಯದ ಜೆಡಿಎಸ್ ಕಾರ್ಯಕರ್ತರ ನಡುವೆ ಕಾಣಿಸಿಕೊಳ್ಳತೊಡಗಿದರೋ ಆಗಲೇ ಜನಕ್ಕೆ ಅರಿವಾಗಿತ್ತು. ಇದೆಲ್ಲವೂ ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ಎನ್ನುವುದು. ಮುಂದೆ ಓದಿ....
ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಗೆಲುವು
ಅವತ್ತಿನ ಪರಿಸ್ಥಿತಿಯೂ ಹಾಗೆಯೇ ಇತ್ತು. ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲ ನೀಡಿದ್ದರಿಂದ ಜೆಡಿಎಸ್ ನ ಅಭ್ಯರ್ಥಿ ಶಿವರಾಮೇಗೌಡರು ಗೆಲುವು ಸಾಧಿಸಿದ್ದರು. ಅದಾಗಲೇ ಅಂಬರೀಶ್ ಅವರು ರಾಜಕೀಯದಿಂದ ದೂರ ಸರಿದಿದ್ದರು. ಹೀಗಾಗಿ ಜೆಡಿಎಸ್ ನ ಭದ್ರಕೋಟೆಯಲ್ಲಿ ನಿಖಿಲ್ ಸುಲಭವಾಗಿ ಗೆಲುವು ಸಾಧಿಸುತ್ತಾರೆ ಎಂಬ ಸಂತಸದಲ್ಲೇ ದೇವೇಗೌಡರ ಕುಟುಂಬವಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರತಿಯೊಂದು ನಡೆಯನ್ನೂ ತನ್ನ ಪುತ್ರನಿಗೆ ರಾಜಕೀಯವಾಗಿ ಅನುಕೂಲವಾಗಿರುವಂತೆ ನೋಡಿಕೊಂಡರು. ಈ ನಡುವೆ ಅಂಬರೀಶ್ ಅವರು ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ತಾವೇ ಮುಂದೆ ನಿಂತು ಮಾಡಿಸಿದರು. (ಇವತ್ತಿನ ಅವರ ಹೇಳಿಕೆಯನ್ನು ಗಮನಿಸಿದರೆ ಅವತ್ತು ಅವರು ಅಷ್ಟು ಕಾಳಜಿ ವಹಿಸಿದ್ದು ಕೂಡ ರಾಜಕೀಯ ಲಾಭಕ್ಕಾಗಿ ಎಂಬುದು ಗೊತ್ತಾಗುತ್ತಿದೆ).
ದೇವೇಗೌಡರಿಗೆ ಗಂಗೆ ಶಾಪ ಇದೆ, ತುಮಕೂರಲ್ಲಿ ಸ್ಪರ್ಧಿಸಿದರೆ ಸೋಲು ಖಚಿತ: ಸುರೇಶ್ ಗೌಡ
ರಾಜಕೀಯದ ಕಿಡಿ ಹೊತ್ತಿಸಿದ ಮಂಜು
ಅಂಬರೀಶ್ ಅವರ ಕುಟುಂಬ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರಲ್ಲ ಎಂಬ ನಂಬಿಕೆ ದೇವೇಗೌಡರ ಕುಟುಂಬದಾಗಿತ್ತು. ಹೀಗಾಗಿಯೇ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಥೇಟ್ ರಾಜಕಾರಣಿಯ ಗೆಟಪ್ ನಲ್ಲಿ ಕಾಣಿಸಿಕೊಳ್ಳತೊಡಗಿದರು. ದೇವೇಗೌಡರ ಕುಟುಂಬದ ಬಗ್ಗೆ ಸದಾ ವಿರೋಧವನ್ನೇ ಮಾಡಿಕೊಂಡು ಬಂದಿದ್ದ ಹಾಸನದ ಮಾಜಿ ಸಚಿವ ಎ.ಮಂಜು ಮೊದಲ ಬಾರಿಗೆ ಅಂಬರೀಶ್ ಅವರ ಪುತ್ರ ಅಭಿಷೇಕ್ ರಾಜಕೀಯಕ್ಕೆ ಬರಲಿ, ಮಂಡ್ಯದಿಂದ ಸ್ಪರ್ಧಿಸಲಿ ಎಂಬ ಹೇಳಿಕೆ ನೀಡುವ ಮೂಲಕ ರಾಜಕೀಯದ ಕಿಡಿ ಹೊತ್ತಿಸಿಯೇ ಬಿಟ್ಟರು. ಅದಾದ ಬಳಿಕ ಅಂಬರೀಶ್ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರಿಗೂ ಇದು ಸರಿ ಎನಿಸಿತು. ಹಾಗಾಗಿ ಅವರು ಸುಮಲತಾ ಅವರು ರಾಜಕೀಯಕ್ಕೆ ಬರಬೇಕೆಂದು ಒತ್ತಾಯ ಮಾಡತೊಡಗಿದರು. ಅದರ ಪರಿಣಾಮ ಇವತ್ತು ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತಾಗಿದೆ.
ದೇವೇಗೌಡರು ಸ್ಪರ್ಧೆ ಮಾಡಿದರೆ ಹೆದರುವುದಕ್ಕೆ ನಾನು ಸೀರೆ ಉಟ್ಟಿಲ್ಲ: ಜಿಎಸ್ ಬಿ
ಪ್ರಜ್ವಲ್ ವಿರುದ್ಧ ಸಮರ ಸಾರಿದ ಮಂಜು
ಯಾವಾಗ ಸುಮಲತಾ ಅವರು ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದರೋ ದೇವೇಗೌಡರ ಕುಟುಂಬ ಕಂಪಿಸಿ ಹೋಯಿತು. ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಸುಮಲತಾ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸತೊಡಗಿದರು. ಇದೀಗ ಸುಮಲತಾ ಅವರ ಬೆನ್ನಿಗೆ ಕಾಂಗ್ರೆಸ್, ಬಿಜೆಪಿ ನಾಯಕರು ಸೇರಿದಂತೆ ಚಿತ್ರರಂಗದ ಹಲವರು ನಿಂತಿರುವುದು ನೋಡಿದ ಬಳಿಕ ತಮ್ಮ ಲೆಕ್ಕಾಚಾರವೆಲ್ಲವೂ ಉಲ್ಟವಾಗುತ್ತಿರುವ ಬಗ್ಗೆ ಅರಿವಾಗತೊಡಗಿದೆ. ಹೀಗಾಗಿ ಗೆಲುವು ಅಷ್ಟೊಂದು ಸುಲಭವಲ್ಲ ಎಂಬುದು ಮನದಟ್ಟಾಗತೊಡಗಿದೆ. ಮಂಡ್ಯದ ಕತೆ ಹೀಗಾದರೆ ಅತ್ತ ಹಾಸನದಲ್ಲಿ ಕಾಂಗ್ರೆಸ್ನ ಪ್ರಭಾವಿ ನಾಯಕನಾಗಿದ್ದ ಎ.ಮಂಜು ಬಿಜೆಪಿಯ ಪಾಳಯಕ್ಕೆ ಹೋಗಿ ಪ್ರಜ್ವಲ್ ರೇವಣ್ಣ ವಿರುದ್ಧ ಸಮರ ಸಾರಿದ್ದಾರೆ.
ಗೊಂದಲದಲ್ಲಿರುವ ದೇವೇಗೌಡರು
ಎ.ಮಂಜು ಮೊದಲಿನಿಂದಲೂ ದೇವೇಗೌಡರ ಕುಟುಂಬವನ್ನು ದ್ವೇಷಿಸುತ್ತಲೇ ಬಂದವರು. ಅಷ್ಟೇ ಅಲ್ಲ, ದೇವೇಗೌಡರ ವಿರುದ್ಧ ಕಾಂಗ್ರೆಸ್ನ್ನು ಕಟ್ಟಿ ಬೆಳೆಸುವಲ್ಲಿಯೂ ಶ್ರಮಿಸಿದವರು. ಜತೆಗೆ ಹಾಸನದಲ್ಲಿ ತಳಮಟ್ಟದ ಕಾಂಗ್ರೆಸ್ಸಿಗರು ಮಾನಸಿಕವಾಗಿ ಜೆಡಿಎಸ್ ನೊಂದಿಗೆ ಹೋಗಲು ತಯಾರಿಲ್ಲ. ಹೀಗಾಗಿ ಅವರು ಎ.ಮಂಜು ಅವರಿಗೆ ಹಿಂಬಾಗಿಲಿನಿಂದ ಬೆಂಬಲ ನೀಡಿದರೂ ಅಚ್ಚರಿ ಪಡಬೇಕಾಗಿಲ್ಲ. ಈ ನಡುವೆ ಎ.ಮಂಜು ಕಮಲ ಮುಡಿದ ವಿಚಾರ ತಿಳಿಯುತ್ತಿದ್ದಂತೆಯೇ ಪ್ರಜ್ವಲ್ ಅವರು ದೇವೇಗೌಡರೇ ಹಾಸನದಿಂದ ಸ್ಪರ್ಧಿಸಲಿ ಎಂಬಂತಹ ಹೇಳಿಕೆ ನೀಡುತ್ತಿದ್ದಾರೆ. ಇತ್ತ ದೇವೇಗೌಡರೂ ಕೂಡ ಸದ್ಯದ ಮಟ್ಟಿಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸುವುದು ಎಂಬ ಗೊಂದಲದಲ್ಲಿದ್ದಾರೆ. ಬೆಂಗಳೂರು ಉತ್ತರದಿಂದನಾ? ತುಮಕೂರಿನಿಂದನಾ? ಹೀಗೆ ತಡಕಾಡುತ್ತಿದ್ದಾರೆ. ಇಲ್ಲಿ ತನಕ ತನ್ನ ರಾಜಕೀಯ ವಿರೋಧಿಗಳನ್ನೆಲ್ಲ ಮುಗಿಸುತ್ತಲೇ ಬಂದಿದ್ದ ದೇವೇಗೌಡರಿಗೆ ಈ ಬಾರಿಯ ಚುನಾವಣೆ ಅಷ್ಟು ಸುಲಭವಾಗಿ ಉಳಿದಿಲ್ಲ.
ಹಾಗಾದರೆ ಏನು ಮಾಡಬಹುದು?
ಒಂದು ಕಾಲದಲ್ಲಿ ತಮ್ಮ ಪಕ್ಷದಲ್ಲಿ ಪ್ರಭಾವಿ ನಾಯಕರಾಗಿದ್ದ ಮತ್ತು ಆಪ್ತರೂ ಆಗಿದ್ದ ತುಮಕೂರಿನ ಮುದ್ದಹನುಮೇಗೌಡರು ಕಳೆದ ಲೋಕಸಭಾ ಚುನಾವಣೆ ಸಂದರ್ಭ ತಲೆ ಮೇಲಿದ್ದ ತೆನೆ ಇಳಿಸಿ ಕೈ ಸೇರಿ ಗೆಲವು ಸಾಧಿಸಿದ್ದರು. ಆ ನೋವು ದೇವೇಗೌಡರನ್ನು ಕಾಡುತ್ತಲೇ ಇತ್ತು. ಆದರೆ ಈ ಬಾರಿ ತಾವೇ ಆ ಕ್ಷೇತ್ರವನ್ನು ಕಸಿದು ಕೊಳ್ಳುವ ಮೂಲಕ ಮುದ್ದಹನುಮೇಗೌಡರನ್ನು ಖಾಲಿ ಕೈ ಮಾಡಿಕೂರಿಸಿದ್ದಾರೆ. ಒಂದು ವೇಳೆ ತುಮಕೂರಿನಿಂದ ಸ್ಪರ್ಧಿಸಿದ್ದೇ ಆದರೆ ಮುದ್ದಹನುಮೇಗೌಡರು ದೇವೇಗೌಡರನ್ನು ಬೆಂಬಲಿಸುವ ಮಾತೇ ಇಲ್ಲ. ಈಗಿನ ರಾಜಕೀಯ ಬೆಳವಣಿಗೆ ಮತ್ತು ದೇವೇಗೌಡರ ಕುಟುಂಬದ ರಾಜಕೀಯದ ಸುತ್ತ ಹಾಗೆ ಸುಮ್ಮನೆ ಕಣ್ಣು ಹಾಯಿಸಿ ನೋಡಿದರೆ ಈ ಬಾರಿಯ ಲೋಕಸಭಾ ಚುನಾವಣೆ ದೇವೇಗೌಡರ ಕುಟುಂಬಕ್ಕೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಲಿದೆ ಎನ್ನುವುದಂತು ಸತ್ಯ. ಆದರೆ ರಾಜಕೀಯ ಚಾಣಾಕ್ಷ್ಯತನ ಹೊಂದಿರುವ ದೇವೇಗೌಡರು ಇದೆಲ್ಲವನ್ನು ಮೀರಿ ಗೆಲುವು ಪಡೆಯುವಲ್ಲಿ ತಂತ್ರ-ಮಂತ್ರಗಳನ್ನು ಮಾಡದೆ ಸುಮ್ಮನೆ ಕುಳಿತು ಕೊಳ್ಳುವ ಜಾಯಮಾನದವರಲ್ಲ. ಹಾಗಾದರೆ ಅದೇನು ಮಾಡಬಹುದು? ಕಾದು ನೋಡುವ ಸರದಿ ನಮ್ಮದಾಗಿದೆ.