300 ರುಪಾಯಿ ಹೊಂದಿಸಲಾಗದ ವ್ಯಕ್ತಿ ಖಾತೆಯಲ್ಲಿ 300 ಕೋಟಿ: ಇದು ಪಾಕಿಸ್ತಾನ!
Recommended Video
ಪಾಕಿಸ್ತಾನದ ಸ್ಥಿತಿ ಎಂಥ ದೈನೇಸಿಯಾಗಿದೆ ಅಂದರೆ ದೇಶದ ಆರ್ಥಿಕತೆ ಆತಂಕದ ಸನ್ನಿವೇಶದಲ್ಲಿದ್ದರೆ, ಆ ದೇಶದ ಅಧಿಕಾರಿಗಳು ನುಂಗಿ ನೀರು ಕುಡಿದ ಹಣದ ಬಗ್ಗೆ ಅಚ್ಚರಿ ಜತೆಗೆ ಗಾಬರಿ ಆಗುವಂಥ ಮಾಹಿತಿಗಳು ಹೊರಬರುತ್ತಿವೆ. ಅಕ್ರಮ ಹಣ ವರ್ಗಾವಣೆ ಎಂಬುದು ಪಾಕಿಸ್ತಾನದ ಹೆಗಲ ಮೇಲೆ ಕೂತಿರುವ ಭೂತ. ಆ ಬಗ್ಗೆ ಪ್ರಧಾನಿ ಇಮ್ರಾನ್ ಖಾನ್ ಇನ್ನಿಲ್ಲದಂತೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ಈ ಉದಾಹರಣೆಯೇ ಕೇಳಿ. ಮೊಹಮ್ಮದ್ ರಶೀದ್ ಒಬ್ಬ ಆಟೋರಿಕ್ಷಾ ಚಾಲಕ. ತನ್ನ ಮಗಳಿಗೆ ಒಂದು ಸೈಕಲ್ ಕೊಡಿಸುವ ಸಲುವಾಗಿ 300 ರುಪಾಯಿ ಕೂಡಿಡಲು ಆತನಿಗೆ ಒಂದು ವರ್ಷ ಹಿಡಿಸಿದೆ. ಆದರೆ ಅವನು ಬಳಕೆ ಮಾಡದ ಬ್ಯಾಂಕ್ ಖಾತೆಯಲ್ಲಿ 300 ಕೋಟಿ ಪಾಕಿಸ್ತಾನಿ ರುಪಾಯಿ ಇತ್ತು. ಅಮೆರಿಕ ಡಾಲರ್ ಲೆಕ್ಕದಲ್ಲಿ ಹೇಳಬೇಕು ಅಂದರೆ 22.5 ಮಿಲಿಯನ್ ಡಾಲರ್.
ಪಾಕ್ ಆರ್ಥಿಕ ಸ್ಥಿತಿ ಹೀನಾಯ, ಸೌದಿಯಿಂದ ನೆರವು ಕೇಳಲು ಹೊರಟ ಇಮ್ರಾನ್
ಇದನ್ನು ಕೇಳಿ ಬೆವೆತು ಹೋದೆ ಎನ್ನುತ್ತಾನೆ ನಲವತ್ಮೂರು ವರ್ಷದ ಮೊಹ್ಮದ್ ರಶೀದ್. ಆತನಿಗೆ ಪಾಕಿಸ್ತಾನದ ತನಿಖಾ ಏಜೆನ್ಸಿಗಳ ಕರೆ ಬಂದಾಗ ಗಾಬರಿ ಬಿದ್ದು ಎಲ್ಲೋ ಹೋಗಿ ಅಡಗಿಕೊಳ್ಳಲು ಯತ್ನಿಸಿದ್ದಾನೆ. ಕೊನೆಗೆ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಆತನ ಮನವೊಲಿಸಿ, ವಿಚಾರಣೆಗೆ ಸಹಕರಿಸುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ಭಯದಿಂದ ಆಟೋ ಓಡಿಸಲು ಬಿಟ್ಟ ರಶೀದ್
ಇದೇ ರೀತಿ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಬಡವರ ಬ್ಯಾಂಕ್ ಖಾತೆಗಳಿಗೆ ಹಣ ನೀರಿನಂತೆ ಹರಿದು ಬಂದಿದೆ. ಆ ನಂತರ ಕೆಲವೇ ದಿನಗಳಲ್ಲಿ ನೂರಾರು ಕೋಟಿ ಅಮೆರಿಕನ್ ಡಾಲರ್ ಗಳು ಹಾಗೇ ದೇಶದಿಂದ ಹೊರಹೋಗಿವೆ. ಸದ್ಯಕ್ಕೆ ರಶೀದ್ ಮೇಲಿದ್ದ ಅನುಮಾನ ಬಗೆಹರಿದಿದೆ. ಆದರೆ ಆತನ ಆತಂಕ ಹಾಗೇ ಉಳಿದುಹೋಗಿದೆ. "ಭಯದ ಕಾರಣಕ್ಕೆ ರಸ್ತೆ ಮೇಲೆ ಬಾಡಿಗೆ ಆಟೋ ಓಡಿಸುವುದನ್ನು ಸಹ ನಿಲ್ಲಿಸಿದ್ದೀನಿ. ಇನ್ಯಾವುದೋ ತನಿಖಾ ಸಂಸ್ಥೆಯವರು ಬಂದು, ನನ್ನನ್ನು ಬಂಧಿಸಿ ಕರೆದುಕೊಂಡು ಹೋಗಿಬಿಟ್ಟರೆ ಎಂಬ ಭಯ ಕಾಡುತ್ತದೆ. ಇದೇ ಆತಂಕದಲ್ಲಿ ನನ್ನ ಹೆಂಡತಿ ಆರೋಗ್ಯ ಕೂಡ ಹಾಳಾಗಿದೆ" ಎಂದು ಅಳಲು ತೋಡಿಕೊಳ್ಳುತ್ತಾನೆ. ಕೆಲವೇ ವಾರಗಳ ಹಿಂದೆ ಬಹು ಶ್ರಮಪಟ್ಟು ಕೂಡಿಸಿಟ್ಟಿದ್ದ ಮುನ್ನೂರು ರುಪಾಯಿಯಲ್ಲಿ ತನ್ನ ಮಗಳಿಗೆ ಸೈಕಲ್ ಕೊಡಿಸಲು ಸಾಧ್ಯವಾಗಿರುವ ಆತನ ಕಣ್ಣಿನಲ್ಲಿ ಆ ಸಂತಸವೂ ಇಲ್ಲ.
ಪ್ರಹಾರಕ್ಕೆ ಇಳಿದ ಇಮ್ರಾನ್ ಖಾನ್
ಯಾವಾಗ ಪಾಕಿಸ್ತಾನದ ಆರ್ಥಿಕ ಮಟ್ಟ ಅಧೋಗತಿಗೆ ಇಳಿಯಿತೋ ಆಗ ಇಮ್ರಾನ್ ಖಾನ್ ಪ್ರಹಾರಕ್ಕೆ ಇಳಿದರು. ಇವೆಲ್ಲ ಅಕ್ರಮ ಹಣ ವರ್ಗಾವಣೆಯ ಮೊತ್ತ. ನಿಮ್ಮದೇ ಹಣ ಕದ್ದಿದ್ದಾರೆ ನೋಡಿ ಎಂದು ಜನರ ಮುಂದೆ ಹೇಳತೊಡಗಿದರು. ಸಾರ್ವಜನಿಕ ಕೆಲಸಗಳಿಗೆ ಬಳಕೆಯಾಗಬೇಕಿದ್ದ ಹಣ ನಾನಾ ಖಾತೆಗಳಿಗೆ ವರ್ಗಾವಣೆ ಆಗಿ, ಆ ನಂತರ ವಿದೇಶಗಳಿಗೆ ಅಕ್ರಮವಾಗಿ ರವಾನೆಯಾಗಿದೆ. ಈ ದೇಶದ ಯಾವುದೇ ಭ್ರಷ್ಟ ವ್ಯಕ್ತಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆದರೆ ಮತ್ತೊಬ್ಬ ಸಂತ್ರಸ್ತ ಮೊಹಮ್ಮದ್ ಖಾದಿರ್ ನಂಥವರ ಬದುಕಿನಲ್ಲಿ ಯಾವ ಅನಾಹುತ ಮಾಡಬೇಕೋ ಅದು ಆಗಿಹೋಗಿದೆ.
ದೇಶ ನಡೆಸಲು ಹಣವಿಲ್ಲ: ಅಲ್ಲಾ ಮೇಲೆ ಭಾರ ಹಾಕಿದ ಇಮ್ರಾನ್ ಖಾನ್
ಬ್ಯಾಂಕ್ ಒಳಗೆ ಹೇಗಿರುತ್ತದೆ ಅಂತಲೇ ನೋಡಿಲ್ಲ
"ನನ್ನ ಜೀವನದಲ್ಲಿ ಬ್ಯಾಂಕ್ ಒಳಗೆ ಹೇಗಿರುತ್ತದೆ ಅಂತಲೇ ನೋಡಿಲ್ಲ" ಎಂದು ಮಾತಿಗಾರಂಭಿಸುತ್ತಾರೆ ಐವತ್ತೆರಡು ವರ್ಷದ ಐಸ್ ಕ್ರೀಮ್ ಮಾರಾಟಗಾರ ಖಾದಿರ್. ಆದರೆ ಅವರ ಖಾತೆಯಲ್ಲಿ 225 ಕೋಟಿ ಪಾಕಿಸ್ತಾನಿ ರುಪಾಯಿ ವ್ಯವಹಾರ ಆಗಿದೆ. ಯಾವಾಗ ಈ ಘಟನೆ ಬಯಲಾಯಿತೋ ನೆರೆಮನೆಯವರೆಲ್ಲ ಆಡಿಕೊಳ್ಳುತ್ತಿದ್ದಾರಂತೆ. ಈಗಲೂ ತನ್ನ ಬಳಿ ಹಣವಿದೆ ಎಂದು ಭಾವಿಸಿ, ಇನ್ಯಾರಾದರೂ ಕ್ರಿಮಿನಲ್ ಗಳು ತನ್ನನ್ನು ಅಪಹರಿಸಿ, ಕೋಟಿಗಟ್ಟಲೆ ಹಣಕ್ಕೆ ಬೇಡಿಕೆ ಇಟ್ಟರೆ ಏನು ಮಾಡುವುದು ಎಂದು ಆತ ಆತಂಕ ತೋಡಿಕೊಳ್ಳುತ್ತಾರೆ. "ಪೈಸೆ ಹಣವಿಲ್ಲದ ಶತಕೋಟ್ಯಧಿಪತಿ" ಎಂದು ಖಾದಿರ್ ಐಸ್ ಕ್ರೀಮ್ ಗಾಡಿ ಮುಂದೆ ತೆರಳುವಾಗ ಆಡಿಕೊಳ್ಳುವವರು ಇದ್ದಾರೆ. ಇಂದಿಗೂ ಖಾದಿರ್ ಕರಾಚಿಯ ಕೊಳೆಗೇರಿಗಳಲ್ಲಿ ಐಸ್ ಕ್ರೀಮ್ ಮಾರುತ್ತಾರೆ.
ಲೋಕಸಭೆ ಚುನಾವಣೆ ನಂತರವೇ ಭಾರತದ ಜತೆ ಶಾಂತಿ ಮಾತುಕತೆ: ಇಮ್ರಾನ್ ಖಾನ್
1.3 ಕೋಟಿ ರುಪಾಯಿ ತೆರಿಗೆ ಕಟ್ಟಿ ಎಂದು ನೋಟಿಸ್
56 ವರ್ಷದ ಸರ್ವತ್ ಝೆಹ್ರಾ ಅವರದು ಮತ್ತೊಂದು ವ್ಯಥೆ. ಅವರಿಗೀಗ ವಿಪರೀತ ರಕ್ತದೊತ್ತಡ. ಯಾವಾಗಿನಿಂದ ಈ ಸಮಸ್ಯೆ ಅಂದರೆ, ಒಂದು ದಿನ ಅವರಿಗೆ 1.3 ಕೋಟಿ ರುಪಾಯಿ ತೆರಿಗೆ ಕಟ್ಟಿ ಎಂದು ನೋಟಿಸ್ ಬಂದಿದೆ. ಆಗಿನಿಂದ ಈ ರೀತಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. "ನನಗೆ ಹೇಳಿದ ಪ್ರಕಾರ ಕಂಪನಿಯೊಂದು ಕಾನೂನು ಬಾಹಿರವಾಗಿ ನನ್ನ ಖಾತೆಯಿಂದ 140ರಿಂದ 150 ಕೋಟಿ ರುಪಾಯಿ ವರ್ಗಾವಣೆ ಮಾಡಿದೆ" ಎನ್ನುತ್ತಾರೆ. ಪಾಕಿಸ್ತಾನದ ಬಡವರು ಬಹಳ ಕಾಲದಿಂದ ಹೀಗೇ ಬಳಕೆ ಆಗುತ್ತಿದ್ದಾರೆ. ದೊಡ್ಡ ಮೊತ್ತದ ಆಸ್ತಿಗಳನ್ನು ಬೇನಾಮಿಯಾಗಿ ಅವರ ಹೆಸರಲ್ಲಿ ಮಾಡಲಾಗುತ್ತಿದೆ. ಕರಾಚಿಯ ಕೆಲವು ಶ್ರೀಮಂತ ಪವರ್ ಬ್ರೋಕರ್ ಗಳ ಕೈ ಇದರಲ್ಲಿ ಇದೆ ಎಂಬ ಮಾತನ್ನು ಹೇಳುತ್ತಾರೆ ಅಧಿಕಾರಿಗಳು. ಅವರಿಗೆ ಮಾಜಿ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ನಂಟು ಕೂಡ ಇದೆ ಎಂಬುದನ್ನೂ ಸೇರಿಸುತ್ತಾರೆ.
ಇಮ್ರಾನ್ ಖಾನ್ ರ ಪ್ರೀತಿಯ ಸಾಕು ನಾಯಿಗಳಿಗೆ ವಿಕಿಪೀಡಿಯಾದಲ್ಲಿ ಸ್ಥಾನ
ಭಸ್ಮಾಸುರನಂತೆ ತನ್ನಿಂದ ತಾನೇ ನಾಶ ಆಗಿಹೋಗುತ್ತದೆ ಪಾಕಿಸ್ತಾನ
ಕಳೆದ ಸೆಪ್ಟೆಂಬರ್ ನಲ್ಲಿ ಪಾಕಿಸ್ತಾನ ಸುಪ್ರೀಂ ಕೋರ್ಟ್ ಇದರ ತನಿಖೆಗಾಗಿಯೇ ಆಯೋಗವನ್ನು ರಚಿಸಿತು. ಆಗ ಗೊತ್ತಾಗಿದ್ದೇನು ಅಂದರೆ ಸಾವಿರಾರು ಬ್ಯಾಂಕ್ ಖಾತೆಗಳಿಂದ ಕನಿಷ್ಠ 400 ಮಿಲಿಯನ್ ಅಮೆರಿಕ ಡಾಲರ್ ವರ್ಗಾವಣೆ ಮಾಡಲಾಗಿದೆ. ಅವರೆಲ್ಲ ಬಡವರು. 600ರಷ್ಟು ಕಂಪನಿಗಳು ಹಾಗೂ ವ್ಯಕ್ತಿಗಳು ಈ ಹಗರಣದಲ್ಲಿ ಇದ್ದಾರೆ ಎಂದು ನಿಯೋಗವು ತಿಳಿಸಿದೆ. ದೇಶದ ಆರ್ಥಿಕತೆ ಚೇತರಿಸಿಕೊಳ್ಳಲು ನೂರಾರು ಕೋಟಿ ಡಾಲರ್ ನೆರವು ನಿರೀಕ್ಷೆ ಮಾಡುತ್ತಿರುವ ಇಮ್ರಾನ್ ಖಾನ್ ಸರಕಾರಕ್ಕೆ ಈಗ ಮುಜುಗರದ ಸನ್ನಿವೇಶ. ಪ್ಯಾರಿಸ್ ನಲ್ಲಿರುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಅಕ್ರಮ ಹಣ ವರ್ಗಾವಣೆ ಮೇಲೆ ನಿಗಾ ಮಾಡುವ ದಳ) ಈ ವರ್ಷ ಪಾಕಿಸ್ತಾನದ ನಿಗಾ ಇಟ್ಟಿದೆ. ಏಕೆ ಗೊತ್ತಾ? ಭಯೋತ್ಪಾದನೆ ನಿಗ್ರಹಕ್ಕಾಗಿ ಆ ದೇಶಕ್ಕೆ ಬರುತ್ತಿರುವ ಹಣಕಾಸಿನ ನೆರವನ್ನು ಪೂರ್ತಿಯಾಗಿ ಬಳಕೆ ಮಾಡಲು ವಿಫಲ ಆಗುತ್ತಿದೆ ಎಂಬ ಕಾರಣಕ್ಕೆ. ಈಗಿನ ಪರಿಸ್ಥಿತಿಯೇ ಇನ್ನು ಸ್ವಲ್ಪ ಕಾಲ ಮುಂದುವರಿದರೆ ಭಸ್ಮಾಸುರನಂತೆ ತನ್ನಿಂದ ತಾನೇ ನಾಶ ಆಗಿಹೋಗುತ್ತದೆ.