ವಿಕ್ರಮಾದಿತ್ಯನ ವಿಲನ್ ಬೇತಾಳಕ್ಕೆ ಭೀಮ ಯಾಕೆ ಗತಿ ಕಾಣಿಸಬಾರದು?
ನಾನು ಹುಟ್ಟಿ- ಬೆಳೆದದ್ದು ಬೆಂಗಳೂರಿನಲ್ಲಿ. ಯಾವಾಗಲೂ ನನ್ನ ಅಪ್ಪನೇ ಊಟ ಮಾಡಿಸ್ತಿದ್ದರು. ಆಗ ಕಥೆ ಹೇಳದ ಹೊರತು ತುತ್ತು ಅನ್ನ ಕೂಡ ನನ್ನ ಬಾಯೊಳಗೆ ಹೋಗ್ತಿರಲಿಲ್ಲ. ಹಾಗೆ ವರ್ಷಾನುಗಟ್ಟಲೆ ಅವರು ಊಟ ಮಾಡಿಸ್ತಾ ಹೇಳಿದ ರಾಮಾಯಣ- ಮಹಾಭಾರತದ ಪಾತ್ರಗಳು- ಸನ್ನಿವೇಶಗಳು ಈಗಲೂ ಇವೆಯೇನೋ ಎಂಬಂತೆ ನನ್ನೊಳಗೆ ಇಳಿದುಬಿಟ್ಟಿತ್ತು.
ಇನ್ನು ಮನೆಯಲ್ಲಿ ವರ್ಷ- ವರ್ಷ ಶ್ರಾದ್ಧ ಮಾಡುವಾಗ "ಇವತ್ತು ನಿಮ್ಮ ಅಜ್ಜಿ ಬರ್ತಾರೆ ಕಣೋ" ಅಂದರೆ, ಬೆಳಗ್ಗೆಯಿಂದ ಗೇಟಿನ ಹತ್ತಿರವೇ ನಿಂತು ಕಾದಿರುತ್ತಿದ್ದೆ. ಏಕೆಂದರೆ, ಅವರು ವರ್ಷಕ್ಕೆ ಒಂದೇ ಸಲ ಬರೋದು. ನಾನು ಹೊರಗೆಲ್ಲೋ ಆಟ ಆಡುವುದಕ್ಕೆ ಹೋದರೆ, ಅವರು ವಾಪಸ್ ಹೋಗಿಬಿಟ್ಟರೆ ಅನ್ನೋ ಭಯ. ಆದರೆ ಪ್ರತಿ ಸಲ ಅವರು ನನಗೆ ಗೊತ್ತಾಗದೆ ಹಾಗೆಯೇ ಬಂದು ಹೋಗಿಬಿಡುತ್ತಿದ್ದರು (ಶ್ರಾದ್ಧ ಇದೆ ಅನ್ನೋದನ್ನು ನಮ್ಮ ಅಮ್ಮ ಬರ್ತಾರೆ ಅಂತ ಹೇಳುವುದು ರೂಢಿಯಲ್ಲಿದೆ).
ಬಾಲ್ಯದ ನೆನಪು: ಹೊರಗೆ ಮಳೆ, ಒಳಗೆ ಆಹಾ! ಪತ್ರೊಡೆ, ಕಳಲೆ
ಹೀಗೆ ತೀರಿಕೊಂಡವರು, ದೇವರ ಹತ್ತಿರ ಹೋದವರು ಬಂದು ಹೋಗ್ತಾರೆ ಅನ್ನೋದು ಕೂಡ ನನ್ನ ಮನಸಿನಲ್ಲಿ ಉಳಿದುಹೋಗಿತ್ತು. ಇಂಥ ಹಲವು ವಿಚಾರಗಳು, ಚಂದಮಾಮ, ಬೊಂಬೆಮನೆ, ಬಾಲಮಿತ್ರದಲ್ಲಿ ಬರುತ್ತಿದ್ದ ಕಥೆಗಳು, ಫ್ಯಾಂಟಸಿ ಸಿನಿಮಾಗಳು ನನ್ನ ಬಾಲ್ಯದ ದಿನಗಳಲ್ಲಿ ಒಂದು ಅದ್ಭುತವಾದ ಲೋಕ ಸೃಷ್ಟಿಸಿತ್ತು.
ನನಗೆ ಇಷ್ಟವಾದ ಬೇರೆ ಬೇರೆ ಕಥೆಯ ವಿವಿಧ ಪಾತ್ರಗಳನ್ನು ಜೋಡಿಸಿಕೊಂಡು, ನನಗೆ ಬೇಕಾದ ರೀತಿಯಲ್ಲಿ ಕಥೆಗಳನ್ನು ಕಲ್ಪಿಸಿಕೊಳ್ಳುತ್ತಿದ್ದೆ. ಭೀಮನು ಬಕಾಸುರನನ್ನು ಮಾತ್ರ ಯಾಕೆ ಕೊಲ್ಲಬೇಕು, ವಿಕ್ರಮಾದಿತ್ಯನಿಗೆ ಪ್ರತಿ ಸಲ ವ್ರತ ಭಂಗ ಮಾಡುವ ಬೇತಾಳಕ್ಕೆ ಒಂದು ಗತಿ ಕಾಣಿಸಬೇಕು ಅಂದುಕೊಳ್ಳುತ್ತಿದ್ದೆ. ಇನ್ನು ರಾಮ ಯಾಕೆ ಅವರಪ್ಪ ಹೇಳಿದಂತೆಲ್ಲ ಕೇಳಬೇಕು? ನಾನು ಅತ್ತು- ಕರೆದು ರಂಪಾಟ ಮಾಡಿ, ಸುಮ್ಮನಾಗಿಸುವಂತೆ ಅವನ್ಯಾಕೆ ಮಾಡಲಿಲ್ಲ ಅಂತೆಲ್ಲ ಪ್ರಶ್ನೆಗಳು ಬರ್ತಿದ್ದವು.
ಹೀಗೆ ಸನ್ನಿವೇಶ ಸೃಷ್ಟಿಸಿದ ನನ್ನ ಬಾಲ್ಯದ ತುಂಬ ಸಿನಿಮಾಗಳು, ಅದರಲ್ಲೂ ಫ್ಯಾಂಟಸಿ ಸಿನಿಮಾಗಳೇ ಇವೆ. ಫ್ಯಾಂಟಸಿ ಸಿನಿಮಾಗಳು ಬಂದರೆ ಈಗಲೂ ಒಂದು ಕ್ಷಣ ಕಣ್ಣು ಅರಳುತ್ತದೆ. ಅಕ್ಕಪಕ್ಕದಲ್ಲಿ ಯಾರು ಇದ್ದಾರೆ ಎಂಬುದನ್ನು ಅರೆಕ್ಷಣ ಮರೆತು, ಟಿವಿ ಕಡೆಗೆ ನನಗೇ ಗೊತ್ತಾಗದ ಹಾಗೆ ಇಡೀ ದೇಹ ಅತ್ತ ತಿರುಗುತ್ತದೆ.
ಏಳು ಸಮುದ್ರ, ಅದರಾಚೆಗೆ ಮಾಯಾವಿ, ಪಂಜರದೊಳಗಿನ ಗಿಳಿಯಲ್ಲಿ ಅವನ ಜೀವ, ಆ ದುಷ್ಟನ ಸಂಹಾರಕ್ಕೆ ಹೊರಡುವ ಚಿಗುರು ಮೀಸೆಯ ರಾಜಕುಮಾರ, ಅವನಿಗೊಬ್ಬಳು ಚಂದದ ರಾಜಕುಮಾರಿ, ಬೇಕೆಂದ ಕಡೆಗೆ ಅವರನ್ನು ಹೊತ್ತೊಯ್ಯುವ ಮಾಯಾ ವಿಮಾನ, ಶಾಲೆಗೆ ಹೋಗು ಅನ್ನೋರಿಲ್ಲ, ಹೋಮ್ ವರ್ಕ್ ಯಾಕೆ ಬರೆದಿಲ್ಲ ಅನ್ನೋ ಟೀಚರ್ ಇಲ್ಲ....
ಬಾಲ್ಯದ ನೆನಪು : ಹಿಂಗಿದ್ರು ನೋಡ್ರಿ ಧಾರವಾಡದಾಗ ನಮ್ಮ ನದಾಫ್ ಮಾಸ್ತರು!
ಇಂಥ ಸಂಗತಿಗಳು ಬಹಳ ರೋಮಾಂಚನಕ್ಕೆ ಕಾರಣ ಆಗ್ತಿದ್ದವು. ಹಾಸ್ಯನಟ ಉಮೇಶ್ ಅವರು ಚಿಕ್ಕ ವಯಸ್ಸಿನಲ್ಲಿ ಹೀರೋ ಆಗಿ ಮಾಡಿದ್ದ 'ಮಕ್ಕಳ ರಾಜ್ಯ' ನನ್ನ ಆಲ್ ಟೈಮ್ ಫೇವರಿಟ್ ಸಿನಿಮಾ. ಇನ್ನು ಇದರ ಜತೆಗೆ ಯಾವುದೇ ಸಿನಿಮಾದಲ್ಲಿ ಹೀರೋ ಅಥವಾ ಹೀರೋಯಿನ್ ಡಬಲ್ ಆಕ್ಟಿಂಗ್ ಮಾಡಿದ್ದರೆ, ಸಿನಿಮಾಗಳಲ್ಲಿ ಪ್ರಾಣಿಗಳು ತೋರಿಸಿದರೆ, ಅದರಲ್ಲೂ ಕೋತಿ-ಚಿಂಪಾಂಜಿ- ಆನೆಯಂಥದ್ದು ಹೀರೋ ಅಥವಾ ಹೀರೋಯಿನ್ ಗೆ ಫ್ರೆಂಡ್ ಆಗಿದ್ದರೆ ಅದೆಷ್ಟು ಸಲ ನೋಡ್ತಿದ್ದೆನೋ!
ಬೇಬಿ ಶಾಮಿಲಿಯ ಭೈರವಿ, ಶಾಂಭವಿ, ಭುವನೇಶ್ವರಿ, ಜಗದೀಶ್ವರಿ... ರಾಮ- ಲಕ್ಷ್ಮಣ, ಜಯಸಿಂಹ ಈ ಸಿನಿಮಾಗಳೆಲ್ಲ ಎಷ್ಟು ಸಲ ನೋಡಿದ್ದೀನಿ ಅಂತ ಕೂಡ ನೆನಪಿಲ್ಲ. ಅದರಲ್ಲೂ ಯಾವುದೋ ಮಂತ್ರದಂಡ ಮುಟ್ಟಿಸಿದರೆ ಕುಳ್ಳಗೆ ಆಗಿಬಿಡುವುದು ಅಥವಾ ಯಾವುದಾದರೂ ಪ್ರಾಣಿಯಾಗಿ ಪರಿವರ್ತನೆ ಆಗುವುದು... ಇವೆಲ್ಲ ನಿಜ ಅಂತ ಬಹಳ ಕಾಲ ನಂಬಿಕೊಂಡು ಬಿಟ್ಟಿದ್ದೆ.
ಚೇಳಿನ ಬಾಲಕ್ಕೆ ದಾರ ಕಟ್ಟುವವರ್ಯಾರು? ಬಾಲ್ಯದ ಆಟ ಆ ಹುಡುಗಾಟ..!
ಈಗಿನ ಮಕ್ಕಳು ಬಹಳ ಬುದ್ಧಿವಂತರು. ಇದು ವಿಎಫ್ ಎಕ್ಸ್, ಗ್ರಾಫಿಕ್ಸ್, ಕಂಪ್ಯೂಟರ್ ನಲ್ಲಿ ಏನು ಬೇಕಾದರೂ ಮಾಡಬಹುದು ಅಂತ ಹೇಳುವಾಗ...ನನ್ನಂಥವರಿಗೆ ಕಥೆ ಹೇಳುವುದನ್ನು ಹೇಳಿಕೊಟ್ಟ, ಭಾಷೆಯನ್ನು ಕಲಿಸಿಕೊಟ್ಟ, ಬಹಳ ವರ್ಷಗಳ ಕಾಲ ಮುಗ್ಧತೆಯನ್ನು ಉಳಿಸಿದ ಸಂಗತಿಗಳನ್ನು ಮತ್ತೆ ವಾಪಸ್ ತರುವುದು ಹೇಗೆ ಅನ್ನೋ ಪ್ರಶ್ನೆ ಬರುತ್ತದೆ. ಅದಕ್ಕೆ ನನ್ನ ಹತ್ತಿರ ಉತ್ತರ ಇಲ್ಲ.
ಏಕೆಂದರೆ, ಬಹುಸಂಖ್ಯಾತ ಪೋಷಕರಿಗೆ ತಮ್ಮ ಮಕ್ಕಳ ಮುಗ್ಧತೆಗಿಂತ ಬುದ್ಧಿವಂತಿಕೆಯೇ ಹೆಮ್ಮೆಯ ವಿಚಾರ ಆದಂತೆ ಕಾಣುತ್ತಿದೆ.