ಮಗನನ್ನು ಶಾಲೆ ಬಿಡಿಸಿ, ಟೆನಿಸ್ ಕೋಚಿಂಗ್ ಸೇರಿಸಿದ ತಂದೆಯ ಮನದ ಮಾತು
Recommended Video
ಬೆಂಗಳೂರು, ಡಿಸೆಂಬರ್ 12: "ಎಂಜಿನಿಯರಿಂಗ್- ಮೆಡಿಕಲ್ ಸಹ ಮಾಡಬೇಕು. ಜತೆಗೆ ಕ್ರೀಡೆಯಲ್ಲೂ ಸಾಧನೆ ಮಾಡಬೇಕು ಅಂದುಕೊಳ್ಳೋದು ತಪ್ಪು. ನನಗೆ ಮಗನಿಗೆ ಎಷ್ಟು ಮಾರ್ಕ್ಸ್- ಗ್ರೇಡ್ ಬಂತು ಅನ್ನೋದು ಖಂಡಿತಾ ಮುಖ್ಯವಲ್ಲ. ಆದ್ದರಿಂದಲೇ ಅವನನ್ನು ಶಾಲೆ ಬಿಡಿಸಿ, ಟೆನಿಸ್ ಆಟದಲ್ಲೇ ಪೂರ್ತಿಯಾಗಿ ತೊಡುಗುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದೀವಿ"
-ಹೀಗೆಂದವರು ಮಲ್ನಾಡ್ ಕೋಚಿಂಗ್ ಸೆಂಟರ್ ನ ತೀರ್ಥಹಳ್ಳಿ ಕೇಶವಮೂರ್ತಿ. ತಂದೆ-ತಾಯಿ ತಮ್ಮ ಮಗನನ್ನು ಯಾವ ಶಾಲೆಗೆ ಸೇರಿಸುವುದು, ಯಾವುದು ಒಳ್ಳೆ ಟ್ಯೂಷನ್ ಅಂತ ಹುಡುಕಾಡಿ, ಅತ್ಯುತ್ತಮ ಅನ್ನೋದಿಕ್ಕೆ ಸೇರಿಸಬೇಕು ಎಂದು ಧಾವಂತ ಪಡುತ್ತಾರೆ. ಆದರೆ ಕೇಶವಮೂರ್ತಿ ಹಾಗೂ ಪದ್ಮಾವತಿ ದಂಪತಿ ಮಗನ ಟೆನಿಸ್ ರಾಕೆಟ್, ಷೂ, ಬಟ್ಟೆ, ಪೋಷಕಾಂಶ ಇರುವ ಆಹಾರ ಈ ಬಗ್ಗೆಯೇ ಯೋಚಿಸುತ್ತಾರೆ.
ಮನದನ್ನೆಯ ಆಸೆ ಪೂರೈಸಲು ಆತ ಬಂದಿದ್ದು ಹೆಲಿಕಾಪ್ಟರ್ ನಲ್ಲಿ
ತಮ್ಮ ಮಗ ಅನೂಪ್ ನನ್ನು ಎರಡು ವರ್ಷದ ಹಿಂದೆ ಶಾಲೆ ಬಿಡಿಸಿದ್ದಾರೆ. ಅಂದರೆ ಶಾಲೆಗೆ ಹೋಗಲ್ಲ. ಆದರೆ ಫೀ ಕಟ್ಟಿದ್ದಾರೆ. ಪಾಠವನ್ನು ಕೇಶವಮೂರ್ತಿ ಮತ್ತು ಪದ್ಮಾವತಿ ಅವರೇ ಮಾಡ್ತಾರೆ. ಹುಡುಗ ವಾರ್ಷಿಕ ಪರೀಕ್ಷೆಯನ್ನು ಬರೆಯುತ್ತಾನೆ.
ಉಳಿದಂತೆ ಪೂರ್ಣ ಸಮಯ ಟೆನಿಸ್ ಗಾಗಿಯೇ ಮೀಸಲು. ಈಗ ಆರನೇ ತರಗತಿಯಲ್ಲಿರುವ ಅನೂಪ್, ಕಳೆದ ವರ್ಷದಿಂದ ಶಾಲೆಗೆ ಹೋಗಿಲ್ಲ. ಈಗಂತೂ ಎರಡೆರಡು ಕಡೆ ತರಬೇತಿ ಪಡೆಯುತ್ತಿರುವುದರಿಂದ ಆಟದ ಕಡೆಗೆ ಪೂರ್ಣ ಗಮನ. ಮಹೇಶ್ ಭೂಪತಿ ಅಕಾಡೆಮಿಯಲ್ಲಿ ಸದ್ಯಕ್ಕೆ ಅನೂಪ್ ತರಬೇತಿ ನಡೆಯುತ್ತಿದೆ. ಪ್ರವೀಣ್ ಕುಮಾರ್ ತರಬೇತುದಾರರು.
ವಿಶ್ವದರ್ಜೆಯ ಟೆನಿಸ್ ಆಟಗಾರನಾಗಲಿ, ಇಲ್ಲದಿದ್ದರೆ ತರಬೇತುದಾರನಾಗಲಿ
"ನನಗೆ ಪೂರ್ತಿ ನಂಬಿಕೆ ಇದೆ. ಇಷ್ಟು ಶ್ರದ್ಧೆಯಿಂದ ಯಾವುದೇ ಪ್ರಯತ್ನ ಮಾಡಿದರೂ ಯಶಸ್ಸು ಖಚಿತ. ಒಂದೋ ಅವನು ವಿಶ್ವದರ್ಜೆಯ ಟೆನಿಸ್ ಆಟಗಾರನಾಗಲಿ. ಇಲ್ಲದಿದ್ದರೆ ವಿಶ್ವದರ್ಜೆಯ ಟೆನಿಸ್ ತರಬೇತುದಾರನಾಗಲಿ. ಮೂರನೇ ಆಯ್ಕೆ ಅಂತ ಕೂಡ ನಾವೇನೂ ಯೋಚನೆ ಕೂಡ ಮಾಡಿಲ್ಲ" ಎಂದು ತುಂಬ ಆತ್ಮವಿಶ್ವಾಸದಿಂದ ಹೇಳುತ್ತಾರೆ ಕೇಶವಮೂರ್ತಿ.
ನಮ್ಮ ಮನೆಯಲ್ಲಿ ವರ್ಷಕ್ಕೆ ನಾಲ್ಕು ಹಬ್ಬ
"ನಮ್ಮ ಮನೆಯಲ್ಲಿ ನಾಲ್ಕೇ ಹಬ್ಬ. ಆಸ್ಟ್ರೇಲಿಯಾ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಹಾಗೂ ಯುಎಸ್ ಓಪನ್. ಇವು ನಾಲ್ಕು ಗ್ರ್ಯಾನ್ ಸ್ಲಾಮ್ ಗಳು ನಡೆಯುವಾಗ ನಾನು, ನನ್ನ ಪತ್ನಿ, ಮಗ ಅನೂಪ್, ಮಗಳು ಶ್ರೇಯಾ ನಿದ್ದೆಗೆಟ್ಟು ನೋಡ್ತೀವಿ. ನಮಗೆ ಇವೇ ಹಬ್ಬ. ನನ್ನ ಮಗನನ್ನು ಶಾಲೆಗೂ ಹೋಗು- ಟೆನಿಸ್ ಆಡು ಅಂತ ಒತ್ತಡ ಹೇರುವುದು ಸರಿಯಲ್ಲ ಅಂತ ನನಗೆ ಅನ್ನಿಸಿತು. ಆದ್ದರಿಂದ ಶಾಲೆಯವರ ಹತ್ತಿರ ಮಾತನಾಡಿ ಈ ತೀರ್ಮಾನ ತೆಗೆದುಕೊಂಡೆ" ಎಂದರು.
ಸಾಧಕರ ಸಂಖ್ಯೆ ಕಡಿಮೆ
ಜಾಗತಿಕ ಮಟ್ಟದಲ್ಲೇ ಹೇಳುವುದಾದರೂ ಬೆಂಗಳೂರಿನಲ್ಲಿ ಸಿಗುವಂಥ ಟೆನಿಸ್ ತರಬೇತಿ ಉಳಿದ ಕಡೆ ಖಂಡಿತಾ ಸಿಗಲ್ಲ. ಇಪ್ಪತ್ತು ಸಾವಿರ ಮಂದಿ ಟೆನಿಸ್ ತರಬೇತಿಗೆ ಹೋದರೆ ಹೆಚ್ಚೆಂದರೆ ಇಪ್ಪತ್ತು ಜನ ದೊಡ್ಡ ಸಾಧನೆ ಮಾಡಬಹುದು, ಅಷ್ಟೇ. ಅದೇ ನನ್ನ ಬಳಿ ಒಂದು ಸಾವಿರ ಮಂದಿಯನ್ನು ಕರೆದುಕೊಂಡು ಬನ್ನಿ. ಆ ಪೈಕಿ ಇನ್ನೂರು ಮಂದಿಯನ್ನು ಮೂರೇ ವರ್ಷದಲ್ಲಿ ಯುಪಿಎಸ್ ಸಿ ಟಾಪರ್ ಆಗಿ ಮಾಡ್ತೀನಿ. ಅಂದರೆ ಕ್ರೀಡೆಯ ಹಾದಿ ಬಹಳ ಶ್ರಮ ಹಾಗೂ ಪ್ರಯತ್ನವನ್ನು ಕೇಳುತ್ತದೆ ಎನ್ನುತ್ತಾರೆ ಕೇಶವಮೂರ್ತಿ.
ಭಾಷೆ-ಸಾಫ್ಟ್ ಸ್ಕಿಲ್ ಸಾಕು
ನಿಮಗೆ ಮೂರು ಭಾಷೆ ಬಂದು, ಸಾಫ್ಟ್ ಸ್ಕಿಲ್, ಒಂದು ಪದವಿ, ಒಂದಿಷ್ಟು ಲೋಕಜ್ಞಾನ ಇದ್ದರೆ ಒಂದು ಕೆಲಸ ದಕ್ಕಿಸಿಕೊಳ್ಳುವುದು ಕಷ್ಟವೇ ಅಲ್ಲ. ಬಹಳ ಜನ ಹೇಳ್ತಾರೆ ಯುರೋಪಿಯನ್ನರ ದೇಹದಾರ್ಢ್ಯದ ಮುಂದೆ ಭಾರತೀಯ ಏನು ಮಾಡಬಲ್ಲರು? ಅವರು ಮಸ್ಕ್ಯುಲಾರ್ ಇರಬಹುದು, ಆದರೆ ಭಾರತೀಯರು ನಾವು ಬ್ರೈನಿಗಳು. ಆಟದಲ್ಲೂ ಬುದ್ಧಿವಂತಿಕೆ ಬಹಳ ಮುಖ್ಯ ಎನ್ನುತ್ತಾರೆ.
ಕ್ರೀಡೆ ಆರಿಸಿಕೊಂಡರೆ ಸ್ಪರ್ಧೆಯೇ ಕಡಿಮೆ
ಎಲ್ಲ ಕಡೆ ಸ್ಪರ್ಧೆ ಸ್ಪರ್ಧೆ ಅಂತಾರೆ. ಕ್ರೀಡಾ ಕೋಟಾ ಅಂತ ನಿರ್ಧರಿಸಿ. ನೂರಾ ಮೂವತ್ತು ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಂಡವರ ಪರ್ಸಂಟೇಜ್ ಎಷ್ಟಿದೆ? ನೀವು ಜಾಗತಿಕ ಮಟ್ಟದ ಸಾಧನೆ ಮಾಡಿದರೆ ಕೀರ್ತಿ-ಹಣ ಹುಡುಕಿಕೊಂಡು ಬರುತ್ತದೆ. ಪಿವಿ ಸಿಂಧು, ಸಾಕ್ಷಿ ಮಲ್ಲಿಕ್ ಅಂಥವರನ್ನು ಒಮ್ಮೆ ಕಣ್ಣೆದುರು ತಂದುಕೊಳ್ಳಿ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಹುಡುಗನ ಕೈಯಲ್ಲಿ ಸರ್ಟಿಫಿಕೇಟ್
ಅನೂಪ್ ಮಂಗಳವಾರ ಬೆಳಗ್ಗೆ ಬಸವನಗುಡಿ ನ್ಯಾಷನಲ್ ಕಾಲೇಜು ರಸ್ತೆಯ ಮಹಿಳಾ ಸಮಾಜದ ಟೆನಿಸ್ ಕೋರ್ಟ್ ನೆಡೆಗೆ ಕಣ್ಣು ನೆಟ್ಟು ಕೂತಿದ್ದ. ಸೆಮಿಫೈನಲ್ ವರೆಗೆ ಬಂದು ಪಂದ್ಯ ಸೋತಿದ್ದ. ಕೈಯಲ್ಲಿ ಸರ್ಟಿಫಿಕೇಟ್ ಇತ್ತು. ಮಗನನ್ನು ಪಕ್ಕದಲ್ಲಿ ಕೂರಿಸಿಕೊಂಡು ಫೈನಲ್ ಆಟ ನೋಡುವ ಉತ್ಸಾಹದಲ್ಲಿದ್ದ ಕೇಶವಮೂರ್ತಿಯವರು ಒನ್ಇಂಡಿಯಾ ಕನ್ನಡ ಜತೆಗೆ ಮಾತನಾಡಿದರು.
ಸಾಕಷ್ಟು ಖರ್ಚು ಬರುತ್ತಿದೆ
ಪೋಷಕರು- ಗುರು ಹಾಗೂ ಸ್ವತಃ ಆ ಹುಡುಗ ಮೂವರು ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ಇದ್ದ ಹಾಗೆ. ಎಲ್ಲವೂ ಪರಿಣಾಮಕಾರಿಯಾಗಿ ಕೆಲಸ ಮಾಡಿದರಷ್ಟೇ ಉತ್ತಮ ಫಲಿತಾಂಶ ಬರುತ್ತದೆ. ನಮಗೆ ಅವನ ತರಬೇತಿ ಮತ್ತಿತರಕ್ಕೆ ಸಾಕಷ್ಟು ಖರ್ಚು ಬರುತ್ತಿದೆ. ಆದರೆ ನಮ್ಮ ಉದ್ದೇಶ- ಅವನ ಗುರಿಯಲ್ಲಿ ಯಾವ ಬದಲಾವಣೆ ಆಗಿಲ್ಲ ಎನ್ನುತ್ತಾರೆ ತೀರ್ಥಹಳ್ಳಿ ಕೇಶವಮೂರ್ತಿ.