ರಾಜಕೀಯ ನಾಯಕರ ಈ ಒಂದು ಮನಸ್ಥಿತಿ ಮತದಾರರನ್ನು ಕೆರಳಿಸುವುದು
ಮೈಸೂರು, ಡಿಸೆಂಬರ್ 12: ನಮ್ಮ ರಾಜಕೀಯ ನಾಯಕರ ಇದೊಂದು ಮನಸ್ಥಿತಿ ಇವತ್ತಿಗೂ ಮತದಾರರನ್ನು ಆಕ್ರೋಶಕ್ಕೀಡು ಮಾಡುತ್ತಿದೆ. ಅದೇನೆಂದರೆ, ತಾವು ಗೆದ್ದಾಗ ಜನರ ತೀರ್ಪು ಎನ್ನುತ್ತಾ, ಸೋತ ತಕ್ಷಣ ಹಣ, ಹೆಂಡದ ಹೊಳೆ ಹರಿಸಿ ಅಧಿಕಾರ ದುರುಪಯೋಗ ಮಾಡಿ ಗೆದ್ದರೆಂಬ ಆರೋಪಗಳನ್ನು ಮಾಡುವುದು. ಇದೆಷ್ಟು ಸರಿ?
ಇಷ್ಟಕ್ಕೂ ಯಾವ ಚುನಾವಣೆಯೂ ಹಣ ಮತ್ತು ಹೆಂಡ ಇಲ್ಲದೆ ನಡೆಯಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಾಗೆಂದು ಪ್ರತಿ ಮನೆ ಮನೆಗೆ ಹೆಂಡ ಮತ್ತು ಹಣ ಹಂಚಿ ಮತ ಕೇಳೋದಕ್ಕೆ ಸಾಧ್ಯವಾಗುತ್ತಾ? ಹಾಗೊಂದು ವೇಳೆ ಯಾವುದಾದರೂ ಪಕ್ಷದ ಅಭ್ಯರ್ಥಿ ಮಾಡಿದ ಎನ್ನುವುದಾದರೆ, ಅದು ಗೊತ್ತಾದ ಮೇಲೂ ಇತರೆ ಪಕ್ಷಗಳ ಅಭ್ಯರ್ಥಿ ಕಣ್ಣು ಮುಚ್ಚಿ ಕೈಕಟ್ಟಿ ಕುಳಿತು ಕೊಳ್ಳೋಕೆ ಸಾಧ್ಯವೇ? ಚುನಾವಣಾ ಆಯೋಗಕ್ಕೆ ದೂರು ನೀಡಬಹುದಲ್ಲವೆ? ಚುನಾವಣಾ ಸಮಯದಲ್ಲಿ ಮತದಾನದ ದಿನವರೆಗೂ ತೆಪ್ಪಗಿದ್ದು, ಫಲಿತಾಂಶ ಬಂದ ತಕ್ಷಣವೇ ಹಣ, ಹೆಂಡದ ಹೊಳೆ ಹರಿಸಿ ಗೆದ್ದರೆಂಬ ಆರೋಪ ಮಾಡುವುದೆಷ್ಟು ಸರಿ? ಇದೊಂದು ರೀತಿ ಮತದಾರರನ್ನು ಹೀಯಾಳಿಸಿದಂತೆ ಆಗುವುದಿಲ್ಲವೆ? ಅಷ್ಟೇ ಅಲ್ಲದೆ ಮತದ ಮೌಲ್ಯವನ್ನು ಕುಗ್ಗಿಸಿದಂತೆ ಅಲ್ಲವೆ?
ಹಣ-ಹೆಂಡದಿಂದ ಮತ ಪಡೆಯಬಹುದಾ?
ರಾಜಕೀಯ ನಾಯಕರೆಲ್ಲರೂ ಹಣ ಮತ್ತು ಹೆಂಡ ನೀಡಿಯೇ ಮತ ಪಡೆಯುವುದಾದರೆ ಚುನಾವಣೆ ಏಕೆ ಬೇಕು? ಎಲ್ಲವನ್ನು ಹಣದಿಂದ ಖರೀದಿಸಿ ಗೆಲ್ಲಬಹುದಲ್ಲವೆ? ಒಂದು ವೇಳೆ ಯಾವುದಾದರೂ ಅಭ್ಯರ್ಥಿ ಹಣ ನೀಡಿದರೂ ಯಾರಿಗೆ ನೀಡಬಹುದು? ಎಷ್ಟು ಪ್ರಮಾಣದಲ್ಲಿ ನೀಡಬಹುದು? ಎಂಬುದನ್ನು ಊಹೆ ಮಾಡಿ ನೋಡಿ. ಶೇ.10ರಷ್ಟು ಮಂದಿಗೆ ಹಣ ಮತ್ತು ಹೆಂಡದ ಆಮಿಷವೊಡ್ಡಬಹುದಷ್ಟೆ. ಒಬ್ಬ ಪ್ರಜ್ಞಾವಂತ ನಾಗರಿಕ, ವಿದ್ಯಾವಂತನಿಗೆ ಯಾರೂ ಹಣ ನೀಡಿ ಮತ ಕೇಳಲು ಸಾಧ್ಯವಿಲ್ಲ. ಜೊತೆಗೆ ಆತ ಅದನ್ನು ಪುರಸ್ಕರಿಸಲ್ಲ ಎಂಬುದು ಅಷ್ಟೇ ಸತ್ಯ.
ಎಲ್ಲೋ ಒಂದು ಕಡೆ ಅವಿದ್ಯಾವಂತರನ್ನು, ಬಡತನದಲ್ಲಿರುವವರನ್ನು ಟಾರ್ಗೆಟ್ ಮಾಡಿಕೊಂಡು ಅಂಥ ಪ್ರದೇಶಗಳಲ್ಲಿ, ಬಡಾವಣೆಗಳಲ್ಲಿ ಹಣ ಮತ್ತು ಹೆಂಡದ ಹೊಳೆ ಹರಿಸಿದ್ದರೂ ಹರಿಸಿರಬಹುದೇನೋ? ಕೆಲವು ಪಕ್ಷಗಳ ನಾಯಕರಿಗೆ ಎಲ್ಲೆಲ್ಲಿ ಏನು ಮಾಡಬೇಕು ಎಂಬುದು ಗೊತ್ತು. ಆ ತಂತ್ರಗಳನ್ನು ಎಲ್ಲ ರಾಜಕೀಯ ಪಕ್ಷಗಳ ನಾಯಕರು ಮಾಡುತ್ತಾರೆ. ಹೀಗಾಗಿ ಎಲ್ಲರೂ ಅದನ್ನೇ ಮಾಡುವುದರಿಂದ ಅವರು ಯಾರೂ ಚುನಾವಣೆ ಸಂದರ್ಭ ಯಾವುದೇ ದೂರಗಳನ್ನು ನೀಡುವುದಿಲ್ಲ. ಬದಲಾಗಿ ಫಲಿತಾಂಶ ಬಂದ ಬಳಿಕ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗುತ್ತಾರೆ.
ಉಪಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಭಿನ್ನ ಕಾರಣ ಬಿಚ್ಚಿಟ್ಟ ರೇವಣ್ಣ
ಮತದಾರರಿಗೆ ರಾಜಕೀಯ ಪ್ರಜ್ಞೆಯಿಲ್ಲವೆ?
ಇವತ್ತು ಯುವ ಮತದಾರರು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದಾರೆ. ಅವರಿಗೆ ಯಾರಿಗೆ ಮತ ಹಾಕಬೇಕು ಎಂಬ ಪ್ರಜ್ಞೆಯಿದೆ. ಜತೆಗೆ ರಾಜಕೀಯ ವಿದ್ಯಮಾನಗಳನ್ನು ಅರಿಯುವ ಆಸಕ್ತಿಯೂ ಇದೆ. ಪ್ರತಿದಿನ ರಾಜ್ಯ, ದೇಶದ ರಾಜಕೀಯ ವಿದ್ಯಮಾನಗಳನ್ನು ತಿಳಿಯುವ ಅವರು ಅದರ ಬಗ್ಗೆ ಚರ್ಚೆ ಮಾಡುತ್ತಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದೆಲ್ಲದರ ಅರಿವು ಇರಬೇಕಾದ ನಮ್ಮ ನಾಯಕರು ಮಾತ್ರ ಇನ್ನೂ ಒಂದೆರಡು ದಶಕಗಳ ಹಿಂದಿನ ರಾಜಕೀಯವನ್ನೇ ತಲೆಯಲ್ಲಿಟ್ಟುಕೊಂಡು ಆ ರೀತಿಯಾಗಿಯೇ ಆಲೋಚಿಸುತ್ತಿದ್ದಾರೆ. ಜನ ಬದಲಾಗಿದ್ದಾರೆ, ಎಲ್ಲವನ್ನೂ ವಿಶ್ಲೇಷಿಸಿ ನೋಡುತ್ತಿದ್ದಾರೆ ಎಂಬುದನ್ನು ನಮ್ಮ ರಾಜಕೀಯ ನಾಯಕರು ಮನನ ಮಾಡಿಕೊಳ್ಳಬೇಕಾಗಿದೆ.
ಇದೆಲ್ಲವನ್ನು ಏಕೆ ಹೇಳಬೇಕಾಗುತ್ತಿದೆ ಎಂದರೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಸೋಲು ಕಂಡ ಹಲವು ನಾಯಕರು ಹಣ, ಹೆಂಡದ ಆರೋಪ ಮಾಡುತ್ತಿದ್ದರು. ಇದೆಲ್ಲದರ ನಡುವೆ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಹಾಗೂ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿಯಾಗಿರುವ ರೇಖಾ ಶ್ರೀನಿವಾಸ್ ಅವರು ಕೂಡ ಇಂತಹದ್ದೇ ಆರೋಪವನ್ನು ಮಾಡಿದ್ದಾರೆ.
ಎಲ್ಲವನ್ನೂ ಗಮನಿಸುತ್ತಾರೆ ರಾಜ್ಯದ ಜನ
ಉಪಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಮ್ಮ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಂಗೀಕರಿಸಬಾರದು ಎಂದು ಒತ್ತಾಯಿಸಿರುವ ಕಾಂಗ್ರೆಸ್ ಮಂದಿ, ರಾಜ್ಯದ ರಾಜಕೀಯ ಮೇಲಾಟದಲ್ಲಿ ಎದುರಾದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿಗಳ ಗೆಲುವಿಗಾಗಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಎಲ್ಲಾ ಕ್ಷೇತ್ರದಲ್ಲೂ ಹಗಲಿರುಳು ಶ್ರಮಿಸಿದ್ದನ್ನು ಇಡೀ ರಾಜ್ಯದ ಜನತೆ ಗಮನಿಸಿದೆ.
ವಿರೋಧ ಪಕ್ಷಗಳ ಮಾತು ಮತದಾರರಿಗೆ ಅವಮಾನ; ಗೃಹ ಸಚಿವ
ನಿಲ್ಲಬೇಕಿದೆ ಆರೋಪಗಳ ಸುರಿಮಳೆ
ಆದರೆ ಬಿಜೆಪಿ ಹರಿಸಿದ ಹಣದ ಹೊಳೆ, ಅಧಿಕಾರ ದುರುಪಯೋಗದಿಂದ ಕಾಂಗ್ರೆಸ್ಸಿಗೆ ಹಿನ್ನಡೆ ಆಗಿದೆ. ಹೀಗಿದ್ದರೂ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇಬ್ಬರೂ ನಾಯಕರೂ ತಾವು ನಂಬಿದ್ದ ತತ್ವ ಸಿದ್ದಾಂತ, ಮೌಲ್ಯಗಳಿಗೆ ಸಾಕ್ಷಿಯಾಗಿದೆ. ಈ ಇಬ್ಬರೂ ನಾಯಕರ ರಾಜೀನಾಮೆಯಿಂದ ಕಾಂಗ್ರೆಸ್ ಪಕ್ಷ ಸಂಘಟನೆ ದೊಡ್ಡ ನಷ್ಟವಾಗಿದೆ ಎಂದಿದ್ದಾರೆ.
ಅದು ಏನೇ ಇರಲಿ. ಯಾವುದೇ ಪಕ್ಷದ ನಾಯಕರು ಇರಲಿ, ಎದುರಾಳಿ ಪಕ್ಷವನ್ನು ಟೀಕೆ ಮಾಡುವ ಭರದಲ್ಲಿ ಮತದಾರರನ್ನು ಎಳೆದು ತರುವುದೆಷ್ಟು ಸರಿ? ಮೊದಲಿಗೆ ಅಂತಹ ಆರೋಪಗಳು ನಿಲ್ಲಬೇಕಾಗಿದೆ. ಇನ್ನಾದರೂ ಆರೋಪ, ನಿಂದನೆಗಳನ್ನು ಮಾಡುವ ಮುನ್ನ ರಾಜಕೀಯ ನಾಯಕರು ಆಲೋಚಿಸುವುದು ಒಳ್ಳೆಯದು.