ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ಇಬ್ಬರು ಮುಖ್ಯಮಂತ್ರಿಗಳು!
Recommended Video
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಇಬ್ಬರು ನಾಯಕರು ಮುಖ್ಯಮಂತ್ರಿಗಳಾಗಲಿದ್ದಾರೆ. ಅರೇ, ಇದು ಹೇಗೆ ಸಾಧ್ಯ? ಎಂದು ಅಚ್ಚರಿಪಡಬೇಡಿ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಇಬ್ಬರು ಮುಖ್ಯಮಂತ್ರಿಗಳಾಗುತ್ತಾರೆ ಎಂದರೆ ಅಚ್ಚರಿ ಸಹಜವೇ. ಆದರೆ ಕೈ ಪಾಳೆಯದ ಆಳಕ್ಕೆ ನುಗ್ಗಿದರೆ ಈ ಡಬಲ್ ಚೀಫ್ ಮಿನಿಸ್ಟರ್ಗಳು ಯಾರು? ಎಂಬ ಕತೆ ಅನಾವರಣಗೊಳ್ಳುತ್ತದೆ.
ಅಂದ ಹಾಗೆ, ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ಹಾಲಿ ಸಿಎಂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗುವುದು ಗ್ಯಾರಂಟಿ. ಸಿಎಂ ಹುದ್ದೆಯ ರೇಸಿನಲ್ಲಿ ಹಲ ನಾಯಕರಿದ್ದಾರಾದರೂ ಕನಿಷ್ಟ ಪಕ್ಷ ಮುಂದಿನ ಲೋಕಸಭಾ ಚುನಾವಣೆಯ ತನಕವಾದರೂ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿರಲಿದ್ದಾರೆ.
ರಾಜ್ಯದಲ್ಲಿ ಪಿಎಫ್ಐ ನಿಷೇಧಿಸುವ ಪ್ರಶ್ನೆಯೇ ಇಲ್ಲ: ವೇಣುಗೋಪಾಲ್
ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ಭವಿಷ್ಯದಲ್ಲಿ ನೆರೆಯ ಕೇರಳ ರಾಜ್ಯಕ್ಕೊಬ್ಬರು ಸಿಎಂ ಕ್ಯಾಂಡಿಡೇಟ್ ಪಕ್ಕಾ ಆಗಲಿದ್ದಾರೆ. ಅವರ ಹೆಸರು ಕೆ.ಸಿ.ವೇಣುಗೋಪಾಲ್. ಸದ್ಯಕ್ಕೆ ಅವರೀಗ ರಾಜ್ಯ ಕಾಂಗ್ರೆಸ್ನ ಉಸ್ತುವಾರಿ ಹೊಣೆ ಹೊತ್ತ ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ.
ಅಂದರೆ? ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ಸಹಜವಾಗಿಯೇ ಆ ಪಕ್ಷದವರೊಬ್ಬರು ಸಿಎಂ ಆಗುತ್ತಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ಕೇರಳದ ವಿಧಾನಸಭೆ ಚುನಾವಣೆಯಲ್ಲಿ ಯಾವ ರೂಪದಲ್ಲಾದರೂ ಕಾಂಗ್ರೆಸ್ ಅಧಿಕಾರ ಹಿಡಿದರೆ ಕೆ.ಸಿ.ವೇಣುಗೋಪಾಲ್ ಮುಖ್ಯಮಂತ್ರಿಯಾಗಲಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಗೆ ವಿಜಯಪುರ ಬಂಡಾಯ ಬೆಂಕಿ
ಕರ್ನಾಟಕದಲ್ಲಿ ಪಕ್ಷ ಗೆದ್ದು ಅಧಿಕಾರಕ್ಕೆ ಬರುವಂತೆ ಮಾಡಿ, ಕೇರಳದಲ್ಲಿ ನೀವು ಸಿಎಂ ಆಗುವ ದಾರಿ ಸುಗಮವಾಗುವಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಕೆ.ಸಿ.ವೇಣುಗೋಪಾಲ್ ಅವರಿಗೆ ಹೈಕಮಾಂಡ್ ಭರವಸೆ ನೀಡಿದೆ.
ಕೇರಳದಲ್ಲಿ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳ ಪ್ರಾಬಲ್ಯ ಹೆಚ್ಚು. ಹೀಗಾಗಿ ಅದು ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬಂದರೂ, ಅಥವಾ ಕಮ್ಯೂನಿಸ್ಟರ ಜತೆ ಸೇರಿ ಸರ್ಕಾರ ರಚಿಸುವಂತಾದರೂ ಕೆ.ಸಿ.ವೇಣುಗೋಪಾಲ್ ಮುಖ್ಯಮಂತ್ರಿ ಕ್ಯಾಂಡಿಡೇಟು ಎಂಬುದು ಕೈ ಪಾಳೆಯದಲ್ಲಿ ಹರಿದಾಡುತ್ತಿರುವ ಸುದ್ದಿ.
ಕರ್ನಾಟಕ ಕಾಂಗ್ರೆಸಿನ ಹೊಸ ಉಸ್ತುವಾರಿ, ಇವರೇ ಕೆ.ಸಿ ವೇಣುಗೋಪಾಲ್!
ರಾಜಕಾರಣದಲ್ಲಿ ಯಾವುದೇ ಪಕ್ಷದ ಹೈಕಮಾಂಡ್ ಕೊಡುವ ಭರವಸೆಗಳು ತಕ್ಷಣ ಈಡೇರುತ್ತವೆ ಅನ್ನಲಾಗದು. ಆದರೆ ಭವಿಷ್ಯದಲ್ಲಿ ಆ ಭರವಸೆ ಕೈ ಹಿಡಿಯುವ ಸಾಧ್ಯತೆಗಳಂತೂ ಹೆಚ್ಚು. ಹೀಗಾಗಿ ಕೆ.ಸಿ.ವೇಣುಗೋಪಾಲ್ ಅವರಿಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ತಾವೂ ಸಿಎಂ ಕ್ಯಾಂಡಿಡೇಟ್ ಆಗುವ ಬಯಕೆ.
ಹಿಂದೆ ಕೇರಳ ವಿಧಾನಸಭೆಗೆ ಆಯ್ಕೆಯಾಗಿ ಓಮನ್ ಚಾಂಡಿ ಅವರ ಸಂಪುಟದಲ್ಲಿ ಸಚಿವರಾಗಿದ್ದ, ಸಂಸತ್ತಿಗೂ ಆಯ್ಕೆಯಾಗಿ ವಿಮಾನಯಾನ ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿರುವ ಕೆ.ಸಿ.ವೇಣುಗೋಪಾಲ್ ಅವರು ತಮ್ಮ ಅನುಭವವನ್ನೆಲ್ಲ ಒತ್ತೆಯಿಟ್ಟು ಕರ್ನಾಟಕದಲ್ಲಿ ಕೈ ಪಾಳೆಯವನ್ನು ಗೆಲುವಿನ ದಡ ಸೇರಿಸಲು ಶ್ರಮಿಸುತ್ತಿದ್ದಾರೆ.
ವೇಣುಗೋಪಾಲ್ ಶ್ರಮದ ಹಿಂದೆ ಕಮ್ಯೂನಿಸ್ಟ್ ಪ್ರಭಾವ
ಅವರ ಅವಿರತ ಶ್ರಮದ ಹಿಂದೆ ಕಮ್ಯೂನಿಸ್ಟರ ಪ್ರಭಾವವಿದೆ. ಕೇಡರ್ ಲೆವೆಲ್ ರಾಜಕಾರಣದ ಮೂಲಕ ಕೇರಳದಲ್ಲಿ ಕಮ್ಯೂನಿಸ್ಟರು ಹೇಗೆ ಪ್ರಬಲರಾಗಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡಿರುವ ಕೆ.ಸಿ.ವೇಣುಗೋಪಾಲ್ ಅದೇ ಟೆಕ್ನಿಕ್ಕುಗಳನ್ನು ಕರ್ನಾಟಕದಲ್ಲಿ ಅಳವಡಿಸುತ್ತಿದ್ದಾರೆ.
ಹೀಗಾಗಿ ಬಿಜೆಪಿಗೆ ಮೋದಿಯವರ ಗುಜರಾತ್ ಮಾಡೆಲ್ ಆದರೆ, ಕರ್ನಾಟಕಕ್ಕೆ ಕೇರಳದ ಕಮ್ಯೂನಿಸ್ಟರು ಮಾಡೆಲ್. ವ್ಯತ್ಯಾಸವೆಂದರೆ, ಬಿಜೆಪಿಯದು ಬಹಿರಂಗ ಮಾಡೆಲ್, ಕರ್ನಾಟಕದ್ದು ಆಂತರಂಗಿಕ ಮಾಡೆಲ್.
ವೇಣುಗೋಪಾಲ್ ಲೈಂಗಿಕ ಸಾಹಸದ ಬಗ್ಗೆ ಸರಿತಾ ನಾಯರ್ ಹೇಳಿಕೆಗಳು
ಬೂತ್ ಕಮಿಟಿಗಳಿಗೆ ಶಕ್ತಿ ತುಂಬಿದ ವೇಣು
ಕೆ.ಸಿ.ವೇಣುಗೋಪಾಲ್ ಅವರು ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ಹೊಣೆ ಹೊರುವ ಮುನ್ನ ಬೂತ್ ಕಮಿಟಿಗಳು ಸಕ್ರಿಯವಾಗಿರಲಿಲ್ಲ. ಆದರೆ ಕೆ.ಸಿ.ವೇಣುಗೋಪಾಲ್ ಬಂದ ನಂತರ ಬಹುತೇಕ ಬೂತ್ ಕಮಿಟಿಗಳು ರಚನೆಯಾಗಿವೆ, ಸಕ್ರಿಯವಾಗಿವೆ. ಬೂತ್ ಕಮಿಟಿ ಎಂಬುದು ಯಾವುದೇ ರಾಜಕೀಯ ಪಕ್ಷಕ್ಕೆ, ಸಂಘಟನೆಗೆ ತಳಮಟ್ಟದ ಸೈನ್ಯ. ಈ ಸೈನ್ಯ ಗಟ್ಟಿಯಾಗಿದ್ದಷ್ಟೂ ಸಂಘಟನೆಯ ಬಲ ಹೆಚ್ಚು. ಎದುರಾಳಿಗಳ ವಿರುದ್ಧ ಮುಗಿಬೀಳುವುದು ಸುಲಭ.
ಮಾಸ್ಟರ್ ಮೈಂಡ್ ವೇಣುಗೋಪಾಲ್
ಎಲ್ಲಕ್ಕಿಂತ ಮುಖ್ಯವಾಗಿ, ಗುಂಡ್ಲುಪೇಟೆಯಂತಹ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಾಗಲೂ ವೇಣುಗೋಪಾಲ್ ಅಲ್ಲಿಗೆ ಹೋಗಿದ್ದರು. ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಮೇಲಿಂದ ಮೇಲೆ ಜನರ ಬಳಿ ಹೋಗುವಂತೆ ನೋಡಿಕೊಳ್ಳುತ್ತಿದ್ದಾರೆ.
ಮನೆ ಮನೆಗೆ ಕಾಂಗ್ರೆಸ್ ತಲುಪಬೇಕು ಎಂಬಲ್ಲಿಂದ ಹಿಡಿದು ಸಿದ್ದರಾಮಯ್ಯ ಅವರು ನಡೆಸಿದ ಚೈತನ್ಯ ಯಾತ್ರೆ ಇರಬಹುದು, ಈಗ ನಡೆದ ರಾಹುಲ್ ಗಾಂಧಿಯವರ ಕರ್ನಾಟಕ ಪ್ರವಾಸವಿರಬಹುದು. ಎಲ್ಲದರ ಹಿಂದಿರುವ ಮಾಸ್ಟರ್ ಮೈಂಡ್ ವೇಣುಗೋಪಾಲ್. ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಏನೇ ತಂತ್ರ ಅನುಸರಿಸಿದರೂ ಅದಕ್ಕೆ ತಕ್ಕ ಪ್ರತಿತಂತ್ರ ಅನುಸರಿಸುವ ವೇಣುಗೋಪಾಲ್, ಸಹಜವಾಗಿಯೇ ಕೈ ಪಾಳೆಯದ ಪ್ರತಿರೋಧ ಕಂಡು ಕಮಲ ಪಾಳೆಯ ಅಚ್ಚರಿ ಪಡುವಂತೆ ಮಾಡಿದ್ದಾರೆ.
ಎಲ್ಲ ಉಸ್ತುವಾರಿಗಳನ್ನು ಮೀರಿಸಿದ ವೇಣುಗೋಪಾಲ್
ವಾಸ್ತವದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳಾದವರ ಪೈಕಿ ಯಾರೂ ವೇಣುಗೋಪಾಲ್ ಅವರಷ್ಟು ಸಕ್ರಿಯರಾಗಿದ್ದವರಲ್ಲ. ಗುಲಾಂ ನಭಿ ಆಜಾದ್ ಅವರಿರಬಹುದು, ಅಂಬಿಕಾ ಸೋನಿ, ಎ.ಕೆ.ಆಂಟನಿ, ವಯಲಾರ್ ರವಿ, ಮಧುಸೂಧನ್ ಮಿಸ್ತ್ರಿ, ದಿಗ್ವಿಜಯ್ಸಿಂಗ್ ಅವರಿರಬಹುದು. ಯಾರೂ ಕೆ.ಸಿ.ವೇಣುಗೋಪಾಲ್ ಅವರಷ್ಟು ಸಕ್ರಿಯವಾಗಿ ರಾಜ್ಯ ಕಾಂಗ್ರೆಸ್ನ ವ್ಯವಹಾರಗಳಲ್ಲಿ ಪಾಲುಗೊಂಡವರಲ್ಲ.
ಹೆಚ್ಚೆಂದರೆ ರಾಜ್ಯ ಮಟ್ಟದ ಸಮಾವೇಶ, ವಿಭಾಗೀಯ ಮಟ್ಟದ ಸಮಾವೇಶಗಳಿಗೆ ಈ ನಾಯಕರು ಸೀಮಿತರಾಗಿರುತ್ತಿದ್ದರು.
ಕೆಲವರು ಹಗುರ, ಕೆಲವರು ಭಾರ
ಇದ್ದುದರಲ್ಲಿ ಅಂಬಿಕಾ ಸೋನಿ, ಎ.ಕೆ.ಆಂಟನಿ, ವಯಲಾರ್ ರವಿ ಅವರ ಸಿಂಪ್ಲಿಸಿಟಿಯ ಬಗ್ಗೆ, ಆ ಮೂಲಕ ಯಾರಿಗೂ ಹೊರೆಯಾಗದಂತೆ ನಡೆದುಕೊಂಡ ಅವರ ಕಾರ್ಯವೈಖರಿಯ ಬಗ್ಗೆ ಕೆಲವು ಕತೆಗಳು ಬಿಚ್ಚಿಕೊಳ್ಳುತ್ತವೆ.
ಅದಕ್ಕೆ ವ್ಯತಿರಿಕ್ತವಾಗಿ ಗುಲಾಂ ನಭಿ ಆಜಾದ್, ದಿಗ್ವಿಜಯ್ಸಿಂಗ್ ಅವರಂತಹ ಉಸ್ತುವಾರಿಗಳ ಕಾಲದಲ್ಲಿ ಅವರೇ ಪಕ್ಷಕ್ಕೆ, ಸರ್ಕಾರಕ್ಕೆ ಭಾರವಾಗಿದ್ದರು ಅನ್ನುವುದನ್ನು ವರ್ಣರಂಜಿತವಾಗಿ ಬಣ್ಣಿಸುವವರೂ ಇದ್ದಾರೆ.
ಸಣ್ಣ ಸೈನ್ಯ ರೆಡಿ ಮಾಡಿದ್ದ ಮಧುಸೂಧನ್ ಮಿಸ್ತ್ರಿ
ಉಳಿದಂತೆ ಮಧುಸೂಧನ್ ಮಿಸ್ತ್ರಿ ಅವರ ಕಾಲದಲ್ಲಿ ಪಕ್ಷದ ಪದಾಧಿಕಾರಿಗಳನ್ನು ನೇಮಕ ಮಾಡುವ ಕೆಲಸವಾಯಿತು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹೈಕಮಾಂಡ್ ಡಿಫರೆಂಟ್ ಟೆಕ್ನಿಕ್ಗಳನ್ನು ಅನುಸರಿಸಿದರೂ, ಕರ್ನಾಟಕದಲ್ಲಿ ಪಕ್ಷಕ್ಕಾಗಿ ದುಡಿಯುವ ಒಂದು ಸಣ್ಣ ಸೈಜಿನ ಸೈನ್ಯವನ್ನಾದರೂ ಮಧುಸೂಧನ್ ಮಿಸ್ತ್ರಿ ಅವರು ರೆಡಿ ಮಾಡಿದ್ದರು. ಇದರ ಹಿಂದೆ ಹಾಲಿ ಅಧ್ಯಕ್ಷ ಜಿ.ಪರಮೇಶ್ವರ್ ಅವರ ಶ್ರಮವೂ ಇತ್ತು.
ಯುದ್ಧ ಸಿದ್ಧತೆಗೆ ಸ್ಕೆಚ್ ಹಾಕುವುದು ವೇಣು
ಅದೇನೇ ಇರಲಿ, ಈ ಹಿಂದಿನ ಎಲ್ಲ ಉಸ್ತುವಾರಿಗಳಿಗಿಂತ ಭಿನ್ನವಾಗಿ ಕಾಣುತ್ತಿರುವವರು ಕೆ.ಸಿ. ವೇಣುಗೋಪಾಲ್. ಕಳೆದ ಏಪ್ರಿಲ್ ತಿಂಗಳಲ್ಲಿ ಈ ಜವಾಬ್ದಾರಿ ವಹಿಸಿಕೊಂಡ ನಂತರ ಅವರು ಕರ್ನಾಟಕದುದ್ದಗಲ ಸುತ್ತುತ್ತಿದ್ದಾರೆ. ಎಲ್ಲೆಲ್ಲಿ ಯಾವ್ಯಾವ ರೀತಿ ಯುದ್ಧ ಸಿದ್ಧತೆಗಳಾಗಬೇಕು ಅಂತ ಸ್ಕೆಚ್ ಹಾಕುವವರೂ ಅವರೇ.
ಬರೀ ಸ್ಕೆಚ್ ಹಾಕುವುದಷ್ಟೇ ಅಲ್ಲ, ಯಾವ ಸ್ಕೆಚ್ಚಿಗೆ ಪೂರಕವಾಗಿ ಯಾರು ಮುಂದಡಿಯಿಡಬೇಕು ಎಂಬುದನ್ನೂ ಅವರು ನಿರ್ಧರಿಸುತ್ತಾರೆ.
ಗೆದ್ದ ಕಡೆ ಸಿದ್ದು, ಸೋತ ಕಡೆ ಪರಮೇಶ್ವರ
ಸಿದ್ದರಾಮಯ್ಯ ಅವರು ತಮ್ಮ ಸಾಧನೆಯ ವಿವರ ನೀಡಲು ರಾಜ್ಯ ಪ್ರವಾಸ ಮಾಡಲು ಮುಂದಾದರಲ್ಲ?
ಈ ಸಂದರ್ಭದಲ್ಲಿ ಅವರು, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರನ್ನು ನಿರ್ಲಕ್ಷಿಸಿದ್ದಾರೆ ಎಂಬ ಕೂಗು ಕೇಳಿ ಬಂತು. ಆದರೆ ಈ ಅಸಮಾಧಾನದ ಹೊಗೆ ದಟ್ಟವಾಗದಂತೆ ನೋಡಿಕೊಂಡ ವೇಣುಗೋಪಾಲ್ ತಕ್ಷಣವೇ ಸ್ಕೆಚ್ ಹಾಕಿದರು. ಅದೆಂದರೆ, ಕಳೆದ ಚುನಾವಣೆಯಲ್ಲಿ ಪಕ್ಷ ಗೆದ್ದ ಕ್ಷೇತ್ರಗಳಿಗೆ ಸಿದ್ದರಾಮಯ್ಯ ಪ್ರವಾಸ ಹೋಗಬೇಕು. ಎಲ್ಲೆಲ್ಲಿ ಪಕ್ಷ ಸೋತಿದೆಯೋ ಅಲ್ಲೆಲ್ಲ ಪಕ್ಷವನ್ನು ಸಂಘಟಿಸಲು ಪರಮೇಶ್ವರ್ ನೇತೃತ್ವದ ತಂಡ ಲಗ್ಗೆ ಇಡಬೇಕು ಎಂಬುದು ಈ ಸ್ಕೆಚ್.
ಕರ್ನಾಟಕದಲ್ಲಿ ಅಧಿಕಾರಕ್ಕೆ ತರುವುದೇ ಗುರಿ
ಹೀಗೆ ಏಕಕಾಲಕ್ಕೆ ಪಕ್ಷದಲ್ಲಿರುವ ಆಂತರಿಕ ಭಿನ್ನಾಭಿಪ್ರಾಯಕ್ಕೆ ಮದ್ದು ಹುಡುಕುತ್ತಾ, ಪ್ರಬಲ ಎದುರಾಳಿ ಬಿಜೆಪಿಯನ್ನು ಸೈದ್ಧಾಂತಿಕವಾಗಿ ಎದುರಿಸಲು ಪಕ್ಷಕ್ಕೆ ಶಕ್ತಿ ತುಂಬುತ್ತಾ ನಡೆಯುತ್ತಿರುವ ಕೆ.ಸಿ.ವೇಣುಗೋಪಾಲ್ಗೆ ಸದ್ಯದ ಗುರಿ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು.
ಹೀಗೆ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದರೆ ಮುಂದಿನ ದಿನಗಳಲ್ಲಿ ತಾವು ಕೇರಳದ ಅಧಿಪತಿಯಾಗಬಹುದು ಎಂಬ ಕನಸು ಅವರದು.
ಬಿಜೆಪಿಗೆ ಗೆಲುವು ನಿರಾಯಾಸವಾಗಿ ಸಿಗದು
ಕರ್ನಾಟಕದಲ್ಲಿ ಕಳೆದ ಮೂರು ದಶಕಗಳ ಚುನಾವಣಾ ಇತಿಹಾಸ ನೋಡಿದರೆ, ಚುನಾವಣೆ ಹತ್ತಿರ ಬಂದಾಗಲೆಲ್ಲ ಆಡಳಿತ ಪಕ್ಷ ಮಂಕಾಗಿರುತ್ತಿತ್ತು. ಹೀಗಾಗಿ ಮತ್ತೆ ಅದು ಅಧಿಕಾರ ಹಿಡಿಯುವುದು ಕಷ್ಟ ಎಂಬ ಬಾವನೆ ಇರುತ್ತಿತ್ತು.
ಆದರೆ ಈ ಬಾರಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಲಾಗದಿದ್ದರೂ ಬಿಜೆಪಿ ನಿರಾಯಾಸವಾಗಿ ಗೆದ್ದು ಅಧಿಕಾರ ಹಿಡಿದುಬಿಡುತ್ತದೆ ಎಂದು ಹೇಳುವ ಸ್ಥಿತಿ ಇಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷವೂ ಗೆದ್ದು ಅಧಿಕಾರ ಹಿಡಿಯಬಹುದು ಎಂಬ ಭಾವನೆಯೂ ಅಸ್ತಿತ್ವದಲ್ಲಿದೆ.
ವೇಣು ಕಸರತ್ತು ಎಷ್ಟರ ಮಟ್ಟಿಗೆ ಫಲ ಕೊಡುತ್ತದೆ?
ಇಂತಹ ಸ್ಥಿತಿ ನಿರ್ಮಾಣವಾಗಲು ಕೆ.ಸಿ.ವೇಣುಗೋಪಾಲ್ ಅವರು ನಡೆಸಿರುವ ಕಸರತ್ತು ದೊಡ್ಡದು. ಅದು ಎಷ್ಟರ ಮಟ್ಟಿಗೆ ಫಲ ಕೊಡುತ್ತದೆ? ಎಂಬುದನ್ನು ಕಾಲ ಹೇಳಬೇಕು.
ಒಂದಂತೂ ನಿಜ, ಕರ್ನಾಟಕದಲ್ಲಿ ಪಕ್ಷ ಗೆದ್ದರೆ ಸಿದ್ಧರಾಮಯ್ಯ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಹೇಗೆ ಹೆಚ್ಚಿರುತ್ತದೋ? ಅಂತಹದೇ ಅವಕಾಶ ಕೇರಳದ ವಿಷಯ ಬಂದಾಗ ಕೆ.ಸಿ.ವೇಣುಗೋಪಾಲ್ ಅವರಿಗೂ ಇರುತ್ತದೆ ಎಂಬುದು.