ರಾಡಾರ್ಗಳಿಗೆ ನಿಲುಕದ ಹವಾಮಾನ: ಮುನ್ಸೂಚನೆಗೂ ಮೀರಿದ ವೈಪರೀತ್ಯ
ಬೆಂಗಳೂರು ಆಗಸ್ಟ್ 09: ದೇಶಾದ್ಯಂತ ಮುಂಗಾರು ಮಳೆಯ ಮೇಲೆ ಹವಾಮಾನ ವೈಪರೀತ್ಯಗಳ ಪ್ರಭಾವ ಅಷ್ಟಾಗಿ ಪರಿಣಾಮ ಬೀರದಿದ್ದರೂ ಸಹ ಲಘುವಾಗಿ ಉಂಟಾಗುತ್ತಿರುವ ಹವಾಮಾನ ಬದಲಾವಣೆಗಳು ಭಾರಿ ಮಳೆ ಮುನ್ಸೂಚನೆಯನ್ನು ತಿಳಿಸುವ ಹವಾಮಾನ ಕೇಂದ್ರಗಳಿಗೆ ಅಡ್ಡಿ ಉಂಟು ಮಾಡುತ್ತಿವೆ. ಹೀಗಾಗಿಯೇ ಭವಿಷ್ಯದಲ್ಲಿ ಇನ್ನಷ್ಟು ನಿಖರ ಮುನ್ಸೂಚನೆ ಮಾಹಿತಿ ಒದಗಿಸುವ ಸಂಬಂಧ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಮಾಪಕ, ರಾಡಾರ್ಗಳು, ಹವಾಮಾನ ಕೇಂದ್ರಗಳು ಉಪಗ್ರಹದೊಂದಿಗೆ ವಿಸ್ತರಣೆ ಆಗಲು ಸಜ್ಜಾಗಿವೆ.
ಹಾಲಿ ವೀಕ್ಷಣಾ ನೆಟ್ವರ್ಕ್, ಮಾಡೆಲಿಂಗ್, ಕಂಪ್ಯೂಟರಿಂಗ್ ವ್ಯವಸ್ಥೆಯಿಂದಾಗಿ ಕಳೆದ 5 ವರ್ಷಗಳಲ್ಲಿ ಚಂಡಮಾರುತ, ಭಾರಿ ಮಳೆ, ಗುಡುಗು, ಬಿಸಿ ಅಲೆಗಳು, ಶೀತ ಅಲೆಗಳು ಮತ್ತು ಮಂಜಿನ ವಾತಾವರಣ ಕುರಿತು ಹವಾಮಾನ ಇಲಾಖೆ ತಿಳಿಸುವ ಮುನ್ಸೂಚನೆಯ ನಿಖರತೆಯು ಸುಮಾರು ಶೇ.30ರಿಂದ 40ರಷ್ಟು ಸುಧಾರಣೆ ಕಂಡಿದೆ ಎಂದು ಐಎಂಡಿ ಹಾಗೂ ಭೂ ವಿಜ್ಞಾನ ಸಚಿವಾಲಯ (ಎಂಒಇಎಸ್) ತಿಳಿಸಿದೆ.
ಈ ನಿಖರತೆ ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಭಾರತೀಯ ಹವಾಮಾನ ಇಲಾಖೆಯ ವೀಕ್ಷಣಾ ಜಾಲದ ರಾಡಾರ್ಗಳು, ಸ್ವಯಂಚಾಲಿತ ಹವಾಮಾನ ಕೇಂದ್ರಗಳು, ಮಳೆ ಮಾಪಕಗಳು ಉಪಗ್ರಹಗಳೊಂದಿಗೆ ವಿಸ್ತರಿಸುತ್ತಿದೆ. ಇದರಿಂದ ಏಕಾಎಕಿ ಬದಲಾಗುವ ವಾತಾವರಣದ ಬದಲಾವಣೆಗಳನ್ನು ಮತ್ತಷ್ಟು ನಿಖರವಾಗಿ ಹೇಳಲು ಸಾಧ್ಯವಾಗಲಿದೆ ಎಂದು ಐಎಂಡಿಯ ಮುಖ್ಯಸ್ಥರು, ನಿರ್ದೇಶಕರು ಆದ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಮಾಹಿತಿ ನೀಡಿದ್ದಾರೆ.
2025ರ ವೇಳೆಗೆ ರಾಡಾರ್ ಸಂಖ್ಯೆ ದ್ವಿಗುಣ
ಐಎಂಡಿ ದೇಶದ ವಾಯುವ್ಯ ಹಿಮಾಲಯದಲ್ಲಿ ಆರು ರಾಡಾರ್ಗಳನ್ನು ಸ್ಥಾಪಿಸಿದ್ದು, ಪ್ರಸಕ್ತ ವರ್ಷ ಮತ್ತೆ 4 ರಾಡಾರ್ಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಇನ್ನೂ ಉದ್ದೇಶಿತ ಈಶಾನ್ಯ ಹಿಮಾಲಯ ಪ್ರದೇಶದಲ್ಲಿ ಸ್ಥಾಪಿಸಲು 8 ರಾಡಾರ್ ಖರೀದಿ ಪ್ರಕ್ರಿಯೆಯಲ್ಲಿದೆ. ಇನ್ನೂ ದೇಶದ ಇತರೆಡೆ ಒಟ್ಟು 11 ರಾಡಾರ್ಗಳು ಚಾಲ್ತಿಯಲ್ಲಿವೆ. ಸದ್ಯ ಒಟ್ಟು 34 ಇರುವ ರಾಡಾರ್ಗಳ ಸಂಖ್ಯೆ 2025ರ ಹೊತ್ತಿಗೆ 67ಕ್ಕೆ ಏರಿಕೆ ಆಗಲಿವೆ.
ಭೂ ವಿಜ್ಞಾನ ಸಚಿವಾಲಯ (ಎಂಒಇಎಸ್) ವು ಉನ್ನತ ಕಾರ್ಯಕ್ಷಮತೆಗಾಗಿ ಹಾಲಿ ಹೊಂದಿರುವ 10 ಕಂಪ್ಯೂಟಿಂಗ್ ಸಿಸ್ಟಮ್ನ ಪೆಟಾಫ್ಲಾಪ್ ಸಾಮರ್ಥ್ಯವನ್ನು ಕೆಲವೇ ವರ್ಷಗಳಲ್ಲಿ 30ಪೆಟಾಫ್ಲಾಪ್ ಗಳಿಗೆ ನವೀಕರಿಸುವ ಚಿಂತನೆಯಲ್ಲಿದೆ. ಇದು ಹೆಚ್ಚೆಚ್ಚು ಡಾಟಾ ಸಂಗ್ರಹಿಸಲು ನೆರವಾಗುತ್ತದೆ.
ಭವಿಷ್ಯದಲ್ಲಿ ನಿರ್ದಿಷ್ಟ ಸ್ಥಳದ ಮಳೆ ಮುನ್ಸೂಚನೆ ಲಭ್ಯ
ಪಸ್ತುತದಲ್ಲಿ ಐಎಂಡಿ ಮತ್ತು ಎಂಒಇಎಸ್ಗಳು ಹವಾಮಾನ ಮುನ್ಸೂಚನೆ ಸಾಮರ್ಥ್ಯ/ವ್ಯವಸ್ಥೆ 12 ಕಿಲೋ ಮೀಟರ್ಗಳ ರೆಸಲ್ಯೂಶನ್ ನಷ್ಟಿದೆ. 6 ಕಿ.ಮೀ. ವೇಗದ ಸಾಮರ್ಥ್ಯ ಹೊಂದಿದೆ. ಇದನ್ನು ಪ್ರಾದೇಶಿಕವಾಗಿ ನೋಡುವುದಾದರೆ ಮಾಡೆಲಿಂಗ್ ವ್ಯವಸ್ಥೆಯ ರೆಸಲ್ಯೂಶನ್ 3-1 ಕಿಲೋ ಮೀಟರ್ಗೆ ಇಳಿಕೆ ಕಂಡು ಬರುತ್ತದೆ. ಸದ್ಯ ಭಾರತೀಯ ಹವಾಮಾನ ಇಲಾಖೆ ಜಿಲ್ಲೆ ಮತ್ತು ಬ್ಲಾಕ್ ಮಟ್ಟದವರೆಗೆ ಮಳೆ, ವಾತಾವರಣದ ಮುನ್ಸೂಚನೆ ನೀಡುತ್ತಿದೆ. ಭವಿಷ್ಯದಲ್ಲಿ ಪಂಚಾಯತಿ, ಕ್ಲಸ್ಟರ್ಗಳು ಮತ್ತು ನಗರಗಳೊಳಗಿನ ನಿರ್ದಿಷ್ಟ ಸ್ಥಳಗಳವರೆಗೆ ಮುನ್ಸೂಚನೆ ನೀಡಲು ಸಿದ್ಧರಾಗುತ್ತಿದ್ದೇವೆ. ಹವಾಮಾನ ಬದಲಾವಣೆಯು ನಿರಂತರವಾಗಿದ್ದು, ಐಎಂಡಿ ಎಲ್ಲಾ ಚಟುವಟಿಕೆಗಳನ್ನು ಅದಕ್ಕೆ ಅನುಗುಣವಾಗಿ ಯೋಜಿಸಬೇಕಿದೆ ಎಂದು ಮೊಹಾಪಾತ್ರ ವಿವರಿಸಿದರು.
ಐಎಂಡಿಯ ಎಚ್ಚರಿಕೆ, ಮಳೆ ಮುನ್ಸೂಚನೆಗಳು ವೇಗವಾಗಿ ಜನರನ್ನು ತಲುಪುತ್ತಿರುವ ಕಾರಣಕ್ಕೆ ಹವಾಮಾನದಲ್ಲಿ ಉಂಟಾಗುವ ಚಂಡಮಾರುತಗಳು, ಶಾಖದ ಅಲೆಗಳು ಇನ್ನಿತರ ನೈಸರ್ಗಿಕ ವಿಕೋಪಗಳಿಂದ ಉಂಟಾಗುತ್ತಿದ್ದ ಸಾವಿನ ಸಂಖ್ಯೆ ವರ್ಷದಿಂದ ವರ್ಷಗಳಿಗೆ ಕಡಿಮೆ ಆಗಿದೆ. ಈ ಹಿಂದಿನ ಮೂರು ವರ್ಷದಲ್ಲಿ ಆರೋಗ್ಯ, ವಿದ್ಯುತ್, ಕೃಷಿ, ವಾಯು ಗುಣಮಟ್ಟ, ಜಲ ವಿಜ್ಞಾನ, ವಿಮಾನ ನಿಲ್ದಾಣ ಇನ್ನಿತರ ಕ್ಷೇತ್ರಗಳಿಗೆ ಹವಾಮಾನ ಇಲಾಖೆ ನೀಡುತ್ತಿರುವ ಮಾಹಿತಿ, ಮುನ್ಸೂಚನೆ ಸೇವೆಯಲ್ಲಿ ಭಾರಿ ಅಭಿವೃದ್ಧಿ ಆಗಿರುವುದು ಕಂಡು ಬಂದಿದೆ.
ಮಳೆ ಮುನ್ಸೂಚನಾ ಕೇಂದ್ರಗಳಿಗೆ ತೊಂದರೆ
ಮುನ್ಸೂಚನೆ ಪ್ರಕಾರ ಭಾರತದ ಹಾಲಿ ಮುಂಗಾರು ಮಳೆ ಆಗಮನದಲ್ಲಿ ಯಾವುದೇ ಗಂಭೀರ ಬದಲಾವಣೆಗಳು ಇಲ್ಲವಾಗಿವೆ. ಹೀಗಿದ್ದರೂ ಲಘುವಾಗಿ ಉಂಟಾಗುತ್ತಿರುವ ಹವಾಮಾನ ವೈಪರಿತ್ಯಗಳಿಂದ ಲಘು ಮಳೆ ಬೀಳುವಿಕೆ ಪ್ರಮಾಣ ಕಡಿಮೆಯಾಗಿ, ಭಾರಿ ಮಳೆ ಬೀಳುವ ಪ್ರಮಾಣ ಸಂಖ್ಯೆ ಹೆಚ್ಚಾಗಿದೆ. ಅಂದರೆ ಲಘು ಮಳೆಗಿಂತ ಭಾರಿ ಮಳೆ ಬೀಳುವ ಸಂಖ್ಯೆ ದ್ವಿಗುಣಗೊಂಡಿದೆ.
ಏಕಾಎಕಿ ಉಂಟಾಗುವ ಹವಾಮಾನ ಬದಲಾವಣೆಯು ಮಳೆ ಮುನ್ಸೂಚಕ ಏಜೆನ್ಸಿ/ಕೇಂದ್ರಗಳು ನಿಖರವಾಗಿ ಊಹಿಸುವ ಸಾಮರ್ಥ್ಯಕ್ಕೆ ತೊಂದರೆ ಉಂಟು ಮಾಡುತ್ತಿದೆ. ವಿಶ್ವದಾದ್ಯಂತ ಇರುವ ಹವಾಮಾನ ಕೇಂದ್ರಗಳು, ವೀಕ್ಷಣಾ ಜಾಲದ ಸಾಂಧ್ರತೆಯನ್ನು ಹೆಚ್ಚಿಸುವ ಮತ್ತು ಮುನ್ಸೂಚನೆಯನ್ನು ಸುಧಾರಿಸಲು ಹವಾಮಾನ ಮುನ್ಸೂಚನೆ ಮಾಡೆಲಿಂಗ್ ಅನ್ನು ಅವಲಂಬಿಸಿರುತ್ತವೆ ಎಂದು ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.
30ವರ್ಷದಿಂದ ನಿರಂತರ ಮಳೆ ಇಳಿಕೆ
ಭಾರತವು 1901ರ ನಂತರ ಮುಂಗಾರು ಮಳೆ ಡಿಜಿಟಲ್ ಮಾಹಿತಿ (ಡಾಟಾ) ಹೊಂದಿದೆ. ಅಲ್ಲಿಂದ ಇಲ್ಲಿಯವರೆಗಿನ ಮಾಹಿತಿ ನೋಡಿದರೆ ಉತ್ತರ, ಪೂರ್ವ ಮತ್ತು ಈಶಾನ್ಯ ಭಾರತದ ಭಾಗಗಳಲ್ಲಿ ಮಳೆಯು ಕಡಿಮೆಯಾಗಿರುವುದು ಕಂಡು ಬಂದಿದೆ. ಇದೇ ಅವಧಿಯಲ್ಲಿ ದೇಶದ ಪಶ್ಚಿಮ ರಾಜಸ್ಥಾನ್ ಸೇರಿದಂತೆ ಪಶ್ಚಿಮ ಭಾಗಗಳಲ್ಲಿ ಮಳೆಯು ಅಧಿಕವಾಗಿದೆ.
ಜುಲೈ ತಿಂಗಳವರೆಗೆ ಮಳೆ ಗಮನಿಸಿದರೆ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ನಾಗಾಲ್ಯಾಂಡ್ಗಳಲ್ಲಿ ಮುಂಗಾರು ಕಳೆದ 30ವರ್ಷದ ಅವಧಿಯಲ್ಲಿ (1989-2019) ಗಣನೀಯ ಇಳಿಕೆ ಕಂಡಿದೆ ಎಂದು ಕೇಂದ್ರ ಇತ್ತೀಚೆಗೆ ಸಂಸತ್ತಿಗೆ ತಿಳಿಸಿದೆ. ಅಲ್ಲದೇ ದೇಶದ ಈ 5 ರಾಜ್ಯಗಳಲ್ಲಿ ವಾರ್ಷಿಕ ಮಳೆ ಪ್ರಮಾಣ ಇಳಿಕೆ ಆಗಿದ್ದನ್ನು ಐಎಂಡಿ ವರದಿಯಲ್ಲಿ ಕಾಣಬಹುದು.
ಹವಾಮಾನ ವೈಪರಿತ್ಯದಿಂದ ವಾತಾವರಣದ ಅಸ್ತಿರತೆ
ಹವಾಮಾನ ವೈಪರಿತ್ಯ/ಬದಲಾವಣೆಗಳು ವಾತಾವರಣದಲ್ಲಿನ ಸ್ಥಿರತೆ ಕಡಿಮೆ ಮಾಡಿ, ಅಸ್ತಿರತೆ ಅಧಿಕವಾಗಿಸಿದೆ. ಪರಿಣಾಮವಾಗಿ ಗುಡುಗು, ಮಿಂಚು, ಭಾರಿ ಅತೀ ಭಾರಿ ಮಳೆ ಹೆಚ್ಚಾಗಿದ್ದು, ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳು ಹೆಚ್ಚು ಶಕ್ತಿಶಾಲಿಯಾಗುತ್ತಿವೆ. ಹವಾಮಾನ ಬದಲಾವಣೆಗಳ ಆವರ್ತನ ಹೆಚ್ಚಾಗಿದ್ದರಿಂದ ಹವಾಮಾನ ಮುನ್ಸೂಚಕರು ಸಾಕಷ್ಟು ಸವಾಲು ಎದುರಿಸುವಂತಾಗಿದೆ. ಅಲ್ಲದೇ ಭಾರಿ ಮಳೆ ಊಹಿಸುವ ಕಾರ್ಯಸಾಧನೆ ಅಡ್ಡಿ ಮಾಡುತ್ತಿದೆ.
ಐಎಂಡಿ ನಿರ್ದೇಶಕರ ಪ್ರಕಾರ, 1970ರ ನಂತರ ನಿತ್ಯ ಭಾರಿ ಮಳೆ ಸುರಿಯುವಿಕೆ ಸಂಖ್ಯೆ ಹೆಚ್ಚಾಗುತ್ತಾ ಬಂದಿದ್ದು, ಲಘು ಅಥವಾ ಮಧ್ಯಮ ಮಳೆಯ ದಿನಗಳ ಸಂಖ್ಯೆ ಕುಸಿತಗೊಂಡಿದೆ. ಅಂದರೆ ಸಾಧಾರಣಕ್ಕಿಂತ ಜೋರು ಮಳೆ ಬರುವ ಪ್ರಮಾಣ ಹೆಚ್ಚಾಗಿದೆ ಎನ್ನಬಹುದು. ಕಡಿಮೆ ಗಾಳಿಯ ಒತ್ತಡದ ವ್ಯವಸ್ಥೆ (ಲೋ ಪ್ರೆಸರ್ ಸಿಸ್ಟಂ) ಇದ್ದಾಗ ತೀವ್ರ ಮಳೆ ಆಗುತ್ತದೆ. ಇದು ಭಾರತ ದೇಶ ಒಳಗೊಂಡಿರುವ ಉಷ್ಣವಲಯದ ವ್ಯಾಪ್ತಿಯಲ್ಲಿ ಹೆಚ್ಚು ಕಂಡು ಬರುತ್ತಿದೆ. ಬೆಚ್ಚಗಿನ ಗಾಳಿಯಲ್ಲಿ ತೇವಾಂಶ ಕಂಡು ಬರುವುದು ಸಹ ಮಳೆಗೆ ಕಾರಣವಾಗಿದೆ ಎಂದು ಅವರು ವಿವರಿಸಿದ್ದಾರೆ.
Recommended Video