ತುಳುನಾಡು, ಅಧಿಕೃತ ಭಾಷೆ ಸ್ಥಾನಮಾನ ಬೇಡಿಕೆಯ ಇತಿಹಾಸ: ಇಲ್ಲಿದೆ ವಿವರ
ಮಂಗಳೂರು, ಜೂ. 15: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಗೂ ಅಧಿಕೃತ ಸ್ಥಾನಮಾನ ದೊರೆಯಬೇಕು ಎಂಬುವುದು ಹಲವಾರು ವರುಷಗಳಿಂದ ಕರಾವಳಿ ಜನರ ಕೂಗಾಗಿದೆ. ಈ ಈ ಬೇಡಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡ್ ಅನ್ನು ಸೃಷ್ಟಿ ಮಾಡಿದೆ. ಲಕ್ಷಾಂತರ ಮಂದಿ #TuluOfficialinKA_KL ಹ್ಯಾಷ್ ಟ್ಯಾಗ್ ಮೂಲಕ ಭಾನುವಾರ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಕರಾವಳಿ ಭಾಗದಲ್ಲಿ ಹಾಗೂ ಕಾಸರಗೋಡು ಭಾಗದಲ್ಲಿ ಮಾತನಾಡುವ ಈ ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನವನ್ನು ಕೋರಿ ವಿವಿಧ ಸಂಘಟನೆಗಳು ಟ್ವಿಟರ್ ಅಭಿಯಾನವನ್ನು ಪ್ರಾರಂಭಿಸಿದ್ದು, ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅಭಿಯಾನವನ್ನು ಬೆಂಬಲಿಸಿ 2.5 ಲಕ್ಷಕ್ಕೂ ಹೆಚ್ಚು ಜನರು ಭಾನುವಾರ ಟ್ವೀಟ್ ಮಾಡಿದ್ದಾರೆ.
ತುಳುವನ್ನು ರಾಜ್ಯಭಾಷೆಯಾಗಿ ಘೋಷಿಸುವಂತೆ ಟ್ವಿಟರ್ ಅಭಿಯಾನ
ಈ ಹಿಂದೆಯೆ ಹಲವಾರು ನಾಯಕರು ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಲಾಗುವುದು, ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ಈ ಭಾಷೆಗೂ ಇತರೆ ಭಾಷೆಯಂತೆ ಅಧಿಕೃತ ಸ್ಥಾನಮಾನ ನೀಡಲಾಗುವುದು ಎಂದು ಹೇಳಿಕೊಂಡಿದ್ದರು. ಕರಾವಳಿಯ ಹಲವಾರು ನಾಯಕರು ಕೇಂದ್ರ, ರಾಜ್ಯಗಳಲ್ಲಿ ಸಚಿವರಾಗಿದ್ದರೂ ಈ ಬೇಡಿಕೆ ಈಡೇರಿಸಲು ಏಕೆ ಧ್ವನಿ ಎತ್ತಿಲ್ಲ ಎಂಬ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಭಾನುವಾರ ಈ ಟ್ವಿಟ್ಟರ್ ಅಭಿಯಾನದಲ್ಲಿ ಹಲವಾರು ರಾಜಕೀಯ ಮುಖಂಡರು, ತುಳು ಸಿನೆಮಾ ಸೆಲೆಬ್ರೆಟಿಗಳು ಜೊತೆಯಾಗಿದ್ದಾರೆ.
ಭಾರತ ದೇಶದಲ್ಲಿ ತುಳು ಮಾತನಾಡುವವರು ಯಾರು?
ತುಳು ಎಂಬುದು ದ್ರಾವಿಡ ಭಾಷೆಯಾಗಿದ್ದು, ಮುಖ್ಯವಾಗಿ ಕರ್ನಾಟಕದ ಎರಡು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಾತನಾಡುತ್ತಾರೆ. ಹಾಗೆಯೇ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಈ ಭಾಷೆಯನ್ನು ಮಾತನಾಡುತ್ತಾರೆ. ಈ ಕರಾವಳಿ ಭಾಗದಲ್ಲಿ ಜನರು ತಮ್ಮ ಮನೆಯಲ್ಲಿ ಬ್ಯಾರಿ, ಕೊಂಕಣಿ, ಅರೆಭಾಷೆ, ಕನ್ನಡ ಹೀಗೆ ಹಲವು ಭಾಷೆಗಳನ್ನು ಮಾತನಾಡುತ್ತಿದ್ದರೂ ಕೂಡಾ ಈ ಪ್ರದೇಶದ ಹೆಚ್ಚಿನ ಜನರು ತುಳು ಭಾಷೆಯನ್ನು ಬಲ್ಲವರಾಗಿದ್ದಾರೆ. ಜನರು ಸಾಮಾನ್ಯವಾಗಿ ವ್ಯವಹರಿಸುವ ಭಾಷೆಯೇ ತುಳು ಎಂಬಂತಾಗಿದೆ.
ತುಳು ರಾಜ್ಯ ಭಾಷೆಯಾಗಲು ಪರಿಶೀಲಿಸಿ ಕ್ರಮ : ಸಿಎಂ ಯಡಿಯೂರಪ್ಪ
ತುಳು ಭಾಷೆ ಇತಿಹಾಸ
2011 ರ ಜನಗಣತಿಯ ವರದಿಯ ಪ್ರಕಾರ ಭಾರತದಲ್ಲಿ 18,46,427 ತುಳು ಮಾತನಾಡುವ ಜನರಿದ್ದಾರೆ. ಕೆಲವು ವಿದ್ವಾಂಸರು ತುಳು ಭಾಷೆ 2000 ವರ್ಷಗಳ ಇತಿಹಾಸ ಹೊಂದಿರುವ ಆರಂಭಿಕ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ ಎಂದು ಹೇಳುತ್ತಾರೆ. ರಾಬರ್ಟ್ ಕಾಲ್ಡ್ವೆಲ್ (1814-1891), ದ್ರಾವಿಡರ ತುಲನಾತ್ಮಕ ವ್ಯಾಕರಣ ಅಥವಾ ದಕ್ಷಿಣ-ಭಾರತೀಯ ಕುಟುಂಬ ಭಾಷೆಗಳ ಪುಸ್ತಕದಲ್ಲಿ ತುಳುವನ್ನು ''ದ್ರಾವಿಡ ಕುಟುಂಬದ ಅತ್ಯಂತ ಅಭಿವೃದ್ಧಿ ಹೊಂದಿದ ಭಾಷೆಗಳಲ್ಲಿ ಒಂದು,'' ಎಂದು ಉಲ್ಲೇಖ ಮಾಡಿದ್ದಾರೆ.
ತುಳು ಭಾಷಿಕರು ನಿಖರ ಬೇಡಿಕೆ ಏನು?
ತುಳು ಭಾಷಿಕರು, ಮುಖ್ಯವಾಗಿ ಕರ್ನಾಟಕ ಮತ್ತು ಕೇರಳದಲ್ಲಿ, ಈ ಭಾಷೆಗೆ ಅಧಿಕೃತ ಭಾಷಾ ಸ್ಥಾನಮಾನವನ್ನು ನೀಡುವಂತೆ ಹಾಗೂ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವಂತೆ ಸರ್ಕಾರಗಳಿಗೆ ಮನವಿ ಮಾಡುತ್ತಿದ್ದಾರೆ. ಪ್ರಸ್ತುತ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಅಸ್ಸಾಮಿ, ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಉರ್ದು, ಬೋಡೋ, ಸಂತಾಲಿ, ಮೈಥಿಲಿ ಭಾಷೆ ಸೇರಿದಂತೆ ಒಟ್ಟು 22 ಭಾಷೆಗಳು ಇದೆ.
ತುಳುವೆರೆಗು ಎಡ್ಡೆ ಸುದ್ದಿ, ಪದ ತುಳು ಆಂಡ್ರಾಯ್ಡ್ App ತೂಲೆ
ಅಭಿಯಾನಕ್ಕೆ ಯಾರ ಬೆಂಬಲ?
ಈ ಟ್ವಿಟ್ಟರ್ ಅಭಿಯಾನಕ್ಕೆ ದಕ್ಷಿಣ ಕನ್ನಡ ಸಂಸದ ಮತ್ತು ಬಿಜೆಪಿ ಕರ್ನಾಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತುಳುವಿನಲ್ಲಿ ಟ್ವೀಟ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ''ನಮ್ಮ ತಾಯಿ ಭಾಷೆಗೆ ರಾಜ್ಯ ಭಾಷೆಯ ಮರ್ಯಾದೆ ನೀಡಬೇಕು ಎಂಬ ಬೇಡಿಕೆಗೆ ನನ್ನ ಬೆಂಬಲವೂ ಇದೆ. ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲವೊಂದು ತಾಂತ್ರಿಕ ದೋಷಗಳನ್ನು ಸರಿಪಡಿಸಿ ನಮ್ಮ ಆಡಳಿತವಧಿಯಲ್ಲಿ ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆ ಎಂಬ ಸ್ಥಾನಮಾನ ನೀಡುತ್ತೇವೆ,'' ಎಂದು ಭರವಸೆ ನೀಡಿದ್ದಾರೆ.
ಹಾಗೆಯೇ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ''ತುಳು ರಾಜ್ಯದ ಆಡಳಿತಾತ್ಮಕ ಭಾಷೆ ಆಗಬೇಕು,ತುಳುವಿಗೆ ವಿಶೇಷ ಮಾನ್ಯತೆ ಸಿಗಬೇಕೆನ್ನುವ ತುಳುನಾಡಿನ ಬಂಧುಗಳ ಹೋರಾಟಕ್ಕೆ ನನ್ನದೂ ಧ್ವನಿ ಇದೆ. ತುಳು ಒಂದು ಭಾಷೆ ಮಾತ್ರವಲ್ಲ,ತುಳು ಒಂದು ಸಂಸ್ಕೃತಿ-ಪರಂಪರೆ.ಅದ್ಭುತ ಇತಿಹಾಸ ಇರುವ ತುಳುನಾಡಿನ ಭಾಷೆಗೆ ಶೀಘ್ರ ವಿಶೇಷ ಮಾನ್ಯತೆ ಸಿಗಬೇಕು ಎನ್ನುವುದು ನನ್ನ ಆಶಯ,'' ಎಂದು ಟ್ವೀಟ್ ಮಾಡಿದ್ದರು. ತುಳು ಭಾಷಿಕರಾದ ಕನ್ನಡ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ, ಪೃಥ್ವಿ ಅಂಬಾರ್ ಮೊದಲಾದವರು ಈ ಅಭಿಯಾನಕ್ಕೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದಾರೆ. ಆದರೆ ಈ ನಡುವೆ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ವಿಚಾರಕ್ಕೂ ಈ ರಾಜಕೀಯ ನಾಯಕರು ಹೆಚ್ಚು ಗಮನವಹಿಸಬೇಕು ಎಂಬ ಕೂಗು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದೆ.
ತುಳು ಭಾಷೆಯ ಪ್ರಸ್ತುತ ಸ್ಥಿತಿಗತಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಪ್ರಕಾರ, "ತುಳು ಮಾತನಾಡುವ ಜನರು ಪ್ರಸ್ತುತ ಕರ್ನಾಟಕ ಮತ್ತು ಕೇರಳದಲ್ಲಿ ಮಾತ್ರ ಇದ್ದಾರೆ". ತುಳು ಮಾತನಾಡುವ ಜನರು ಇರುವ ಪ್ರದೇಶವನ್ನು ತುಳುನಾಡು ಎಂದು ಕರೆಯಲಾಗುತ್ತಿದೆ. ತುಳು ಭಾಷೆಯ ಸಿನೆಮಾ, ನಾಟಕಗಳಲ್ಲಿಈ ತುಳು ನಾಡು ಎಂಬ ಪದದ ಉಲ್ಲೇಖ ಹೆಚ್ಚಾಗಿ ಮಾಡಲಾಗುತ್ತದೆ. "ಪ್ರಸ್ತುತ, ತುಳು ದೇಶದಲ್ಲಿ ಅಧಿಕೃತ ಭಾಷೆಯಾಗಿಲ್ಲ. ತುಳುವನ್ನು ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ತುಳುವನ್ನು ಎಂಟನೇ ಪರಿಚ್ಛೇದದಲ್ಲಿ ಸೇರಿಸಿದರೆ ತುಳುಗೆ ಸಾಹಿತ್ಯ ಅಕಾಡೆಮಿಯಿಂದ ಮಾನ್ಯತೆ ಸಿಗುತ್ತದೆ," ಎಂದು ತಿಳಿಸಿದ್ದಾರೆ.
157 ವರ್ಷಗಳ ನಂತರ ನಡೆದ ಜಠಾಧಾರಿ ಶ್ರೀ ಪಾರ್ಥಂಪಾಡಿ ಮೈಮೆ ನೇಮೋತ್ಸವ
ತುಳು ಲಿಪಿ ಮತ್ತು ಶಿಕ್ಷಣ
ಕರ್ನಾಟಕ ಸರ್ಕಾರ ಕೆಲವು ವರ್ಷಗಳ ಹಿಂದೆ ತುಳು ಲಿಪಿಯನ್ನು ಶಾಲೆಗಳಲ್ಲಿ ಭಾಷೆಯಾಗಿ ಪರಿಚಯಿಸಿತು. ರಾಜ್ಯ ಶಿಕ್ಷಣ ಇಲಾಖೆಯ ಪ್ರಕಾರ, 2020 ರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು 956 ಮಕ್ಕಳು ಎಸ್ಎಸ್ಎಲ್ಸಿ (10 ನೇ ತರಗತಿ) ಪರೀಕ್ಷೆಯಲ್ಲಿ ತುಳುವನ್ನು ಮೂರನೇ ಐಚ್ಛಿಕ ಭಾಷೆಯಾಗಿ ಬರೆದಿದ್ದಾರೆ. 2014-15ರಲ್ಲಿ ತುಳು ಭಾಷೆಯಲ್ಲಿ ಶಿಕ್ಷಣ ಆರಂಭ ಮಾಡಿದ ಸಂದರ್ಭದಲ್ಲಿ ಈ ಶೈಕ್ಷಣಿಕ ವರ್ಷಾವಧಿಯಲ್ಲಿ ಒಟ್ಟು 18 ವಿದ್ಯಾರ್ಥಿಗಳು ತುಳು ಭಾಷೆಯನ್ನು ಮೂರನೇ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿದ್ದಾರೆ. ಕಳೆದ ವರ್ಷ ಜೈ ತುಳುನಾಡ್ ಸಂಘಟನೆಯು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್ಇಪಿ) ತುಳುವನ್ನು ಸೇರಿಸಬೇಕೆಂದು ಒತ್ತಾಯಿಸಿ ಆನ್ಲೈನ್ ಅಭಿಯಾನವನ್ನು ನಡೆಸಿತು. ಈ ಸಂದರ್ಭದಲ್ಲಿ #EducationInTulu ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಹಲವಾರು ಮಂದಿ ಟ್ವೀಟ್ ಮಾಡಿದ್ದರು.
ತುಳುನಾಡು: ಪ್ರತ್ಯೇಕ ರಾಜ್ಯದ ಬೇಡಿಕೆ
ಜನಪ್ರತಿನಿಧಿ ಕಾಯ್ದೆ 1951 ರ ಸೆಕ್ಷನ್ 29 ಎ ಅಡಿಯಲ್ಲಿ ಫೆಬ್ರವರಿ 2021 ರಲ್ಲಿ ಭಾರತದ ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದ ರಾಜಕೀಯ ಪಕ್ಷ ''ತುಳುವರೆ ಪಕ್ಷ'' ತುಳು ಮಾತನಾಡುವ ಜನರ ರಾಜಕೀಯ ಆಕಾಂಕ್ಷೆಗಳಿಗೆ ತಕ್ಕಂತೆ ತನ್ನ ರಾಜಕೀಯ ಕಾರ್ಯಗಳನ್ನು ನಡೆಸಲು ಆರಂಭಿಸುತ್ತಿದೆ. ಈ ಬಗ್ಗೆ ಇಂಡಿಯನ್ಎಕ್ಸ್ಪ್ರೆಸ್ ಡಾಟ್ ಕಾಮ್ ಜೊತೆ ಮಾತನಾಡಿದ ''ತುಳುವರೆ ಪಕ್ಷ'' ಕೇಂದ್ರ ಸಮಿತಿ ಅಧ್ಯಕ್ಷ ಶೈಲೇಶ್ ಆರ್ ಜೆ, ''ಭಾಷೆಗಳನ್ನು ಆಧರಿಸಿ ದೇಶವನ್ನು ಮರುಸಂಘಟಿಸಿದಾಗ ತುಳುನಾಡು ಭಾಗಶಃ ಕೇರಳ ಮತ್ತು ಕರ್ನಾಟಕದ ನಡುವೆ ಹಂಚಿಕೆಯಾಗುತ್ತದೆ. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಮಾತನಾಡುವ ಜನರಿಗೆ ಪ್ರತ್ಯೇಕ ರಾಜ್ಯ ಇದ್ದಾಗ, ತುಳುವರಿಗೆ ಪ್ರತ್ಯೇಕ ತುಳುನಾಡು ಏಕೆ ಇರಬಾರದು,'' ಎಂದು ಪ್ರಶ್ನಿಸಿದ್ದಾರೆ.
ತುಳು ಕಲೆ, ಸಂಸ್ಕೃತಿ ಮತ್ತು ಸಿನೆಮಾ
ತುಳು ಭಾಷೆ ಮಾತನಾಡುವವರನ್ನು ಒಳಗೊಂಡ ಕರಾವಳಿ ಜಿಲ್ಲೆಗಳಲ್ಲಿ ಕಲೆ, ಸಂಸ್ಕೃತಿಯು ಶ್ರೀಮಂತವಾಗಿದೆ. ತುಳು ಭಾಷಿಕರು ತಮ್ಮದೇ ಆದ ಸಂಪ್ರದಾಯವನ್ನು ಹೊಂದಿದ್ದಾರೆ. ತುಳುನಾಡಿನಲ್ಲಿ ಜಾನಪದ-ಗೀತೆ ರೂಪಗಳಾದ ಪಾಡ್ದನ ಒಂದೆಡೆ ಸಂಸ್ಕೃತಿಗೆ ಮೇರು ನೀಡಿದರೆ, ಸಾಂಪ್ರದಾಯಿಕ ಜಾನಪದ ರಂಗ ಕಲೆ ಯಕ್ಷಗಾನವು ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ದವಾಗಿದೆ. ಆರಂಭದಲ್ಲಿ ಪುರುಷರು ಮಾತ್ರ ಯಕ್ಷಗಾನದ ಪಾತ್ರ ಮಾಡುತ್ತಿದ್ದರು. ಆದರೆ ಈಗ ಮಹಿಳೆಯರೂ ಕೂಡಾ ಯಕ್ಷಗಾನದ ತರಬೇತಿ ಪಡೆದು ಕರಾವಳಿಯ ಈ ಕಲೆಯನ್ನು ವಿಶ್ವದಾದ್ಯಂತ ಜನಪ್ರಿಯರಾಗಿಸುವಲ್ಲಿ ಕೈಜೋಡಿಸಿದ್ದಾರೆ. ನವರಾತ್ರಿಯ ಸಂದರ್ಭದಲ್ಲಿ ಹರಕೆಯಾಗಿ ಹಾಕಲಾಗುವ ಹುಲಿ ವೇಷವೂ ಕೂಡಾ ಕರಾವಳಿಯ ಕಲೆಗಳಲ್ಲಿ ಒಂದಾಗಿದೆ. ಇನ್ನು ಆಟಿ ಕಲೆಂಜೆ, ಸಿರಿವೇಷ ಮೊದಲಾದವು ಆಯಾ ಋತುವಿಗೆ ಕಂಡುಬರುವ ತುಳುವಿನ ಸಾಂಸ್ಕೃತಿಕ ಕಲೆ. ಇನ್ನು ಸಿನೆಮಾ ಲೋಕಕ್ಕೆ ಬಂದಾಗ ತುಳುವಿನಲ್ಲಿ ವರ್ಷಕ್ಕೆ ಸುಮಾರು 5 ರಿಂದ 7 ತುಳು ಭಾಷೆಯ ಚಲನಚಿತ್ರಗಳು ನಿರ್ಮಾಣವಾಗುತ್ತವೆ. ತುಳು ಚಲನಚಿತ್ರಗಳು ಮಂಗಳೂರು, ಉಡುಪಿ, ಮುಂಬಯಿ, ಬೆಂಗಳೂರು ಮತ್ತು ಗಲ್ಫ್ ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿವೆ. ಕರಾವಳಿ ಜಿಲ್ಲೆಗಳಲ್ಲಿ ತುಳು ಭಾಷೆಯ ಸಿನೆಮಾಗಳನ್ನು ಕೋಸ್ಟಲ್ವುಡ್ ಸಿನೆಮಾ ಎಂದೇ ಕರೆಯಲಾಗುತ್ತದೆ.