ಮೈಸೂರು ದಸರಾ ವೈಭವಕ್ಕೆ ಸಾಕ್ಷಿಯಾಗಿರುವ ಸೀತಾವಿಲಾಸ ಛತ್ರ
ಮೈಸೂರು ಮಹಾರಾಜರ ಕಾಲದಲ್ಲಿ ನಾಡ ಹಬ್ಬ ದಸರಾದ ಸಂಭ್ರಮ ಬರೀ ನಗರ ಮಾತ್ರವಲ್ಲದೆ, ಹಳ್ಳಿಹಳ್ಳಿಗೂ ವ್ಯಾಪಿಸುತ್ತಿತ್ತು. ಮಹಾರಾಜರು ಜಂಬೂಸವಾರಿಯಲ್ಲಿ ತೆರಳುವ ಆ ಸುಂದರ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳಲು ಜನ ಸಮಾರೋಪಾದಿಯಲ್ಲಿ ಬರುತ್ತಿದ್ದರು.
ಅವತ್ತಿನ ದಿನಗಳಲ್ಲಿ ಸಾರಿಗೆ ಸಂಚಾರವೇ ಇಲ್ಲದ ಕಾಲದಲ್ಲಿ ಕೆಲವರು ಕಾಲ್ನಡಿಗೆಯಲ್ಲಿ ಬಂದರೆ ಮತ್ತೆ ಕೆಲವರು ಎತ್ತಿನ ಗಾಡಿಗಳಲ್ಲಿ ಮೈಸೂರಿಗೆ ಆಗಮಿಸಿ ದಸರಾ ಸಡಗರದಲ್ಲಿ ತಾವು ಪಾಲ್ಗೊಂಡು ರಾಜವೈಭವವನ್ನು ಕಣ್ಣಾರೆ ನೋಡಿ ಸಂತೆಯಲ್ಲಿ ಒಂದಷ್ಟು ವಸ್ತುಗಳನ್ನು ಖರೀದಿಸಿ, ಮತ್ತೊಂದಷ್ಟು ತಿನಿಸುಗಳ ರುಚಿಯನ್ನು ಸವಿದು ದಸರಾದ ಸುಂದರ ದೃಶ್ಯಗಳನ್ನು ಮೆಲುಕು ಹಾಕುತ್ತಾ ತಮ್ಮ ಊರಿನತ್ತ ಮುಖ ಮಾಡುತ್ತಿದ್ದರು.
ಇತಿಹಾಸ ಸಾರುವ ಸೀತಾವಿಲಾಸ ಛತ್ರ
ದಸರಾ ವೇಳೆ ಮಾತ್ರವಲ್ಲದೆ, ಇತರೆ ದಿನಗಳಲ್ಲಿ ದೂರದ ಊರುಗಳಿಂದ ಬರುವವರು ವಾಸ್ತವ್ಯ ಹೂಡಲೆಂದೇ ನಗರದ ಹಲವೆಡೆ ಧರ್ಮ ಛತ್ರಗಳನ್ನು ನಿರ್ಮಿಸಲಾಗಿತ್ತು. ಇಲ್ಲಿ ಕೆಲವು ದಿನಗಳವರೆಗೆ ಉಳಿದುಕೊಂಡು ನಂತರ ತೆರಳುವ ಅವಕಾಶವಿತ್ತು. ಈ ವೇಳೆ ಊಟ, ತಿಂಡಿ, ಇನ್ನಿತರ ಅಗತ್ಯಗಳನ್ನು ನೋಡಿಕೊಳ್ಳಲಾಗುತ್ತಿತ್ತು. (ಇವತ್ತು ಛತ್ರ ಎಂದರೆ ಅದು ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿದ ಭವ್ಯ ಮಹಲು ಅರ್ಥಾತ್ ವಿವಾಹ ಮಂಟಪಗಳಾಗಿವೆ) ಇಂತಹ ಛತ್ರಗಳ ಪೈಕಿ ಚಾಮರಾಜ ಜೋಡಿ ರಸ್ತೆಯ ಶಾಂತಲ ಚಿತ್ರಮಂದಿರದ ಬಳಿಯಿರುವ ಸೀತಾವಿಲಾಸ ಛತ್ರವೂ ಒಂದಾಗಿದ್ದು, ಇದು ಇತಿಹಾಸದ ಕಥೆ ಹೇಳುತ್ತಾ ಇವತ್ತೂ ನಮ್ಮ ನಡುವೆಯಿದ್ದು, ಇವತ್ತು ಹಲವು ಕುಟುಂಬಗಳಿಗೆ ಆಶ್ರಯ ನೀಡಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ್ದ ಛತ್ರ
ದಸರಾ ವೀಕ್ಷಣೆಗೆ ಬರುವವರಿಗೆ ವಾಸ್ತವ್ಯಕ್ಕೆ ತೊಂದರೆಯಾಗದಂತೆ ನಿರ್ಮಿಸಲಾಗಿರುವ ಸೀತಾ ವಿಲಾಸ ಛತ್ರ ಮೈಸೂರಿನ ಪಾರಂಪರಿಕ ಕಟ್ಟಡ. ಮೈಸೂರು ರಾಜರು ತಮ್ಮ ಆಡಳಿತಾವಧಿಯಲ್ಲಿ ಕೇವಲ ಅರಮನೆಗಳನ್ನಷ್ಟೆ ಅಲ್ಲದೆ ಅಲ್ಲಲ್ಲಿ ನೂರಾರು ಕಟ್ಟಡಗಳನ್ನು ನಿರ್ಮಿಸಿದ್ದು ಅವುಗಳು ಇವತ್ತಿಗೂ ಇತಿಹಾಸದ ಕಥೆ ಹೇಳುತ್ತಾ ನಿಂತಿವೆ.
ಸೀತಾ ವಿಲಾಸ ಛತ್ರವೂ ಅಷ್ಟೇ. ಇವತ್ತು ಅದು ಮೇಲ್ನೋಟಕ್ಕೆ ಪಾಳುಬಿದ್ದ ಕಟ್ಟಡದಂತೆ ಕಂಡು ಬಂದರೂ ಅದು ಇತರೆ ಕಟ್ಟಡಗಳಿಗಿಂತ ವಿಭಿನ್ನವಾಗಿ ನಮ್ಮನ್ನು ಸೆಳೆಯುತ್ತದೆ. ಈ ಕಟ್ಟಡವು ಸುಮಾರು ಒಂದು ಕಾಲು ಶತಮಾನವನ್ನು ಪೂರೈಸಿದೆ ಎಂದು ಹೇಳಲಾಗುತ್ತಿದ್ದು ಇದರ ನಿರ್ಮಾತೃ ರಾಜರ್ಷಿ ನಾಲ್ವಡಿಕೃಷ್ಣರಾಜ ಒಡೆಯರ್ ಆಗಿದ್ದಾರೆ.
ಇಂದಿಗೂ ಗಟ್ಟಿಮುಟ್ಟಾಗಿರುವ ಕಟ್ಟಡ
ಅವತ್ತು ಈ ಕಟ್ಟಡವನ್ನು ಛತ್ರದ ಪರಿಕಲ್ಪನೆಯಲ್ಲಿಯೇ ನಿರ್ಮಿಸಿದ್ದು ವಿಶಾಲವಾದ ಜಗಲಿ, ಮುಂದೆ ವಿಶಾಲ ಪ್ರಾಂಗಣ, ಕಟ್ಟಡಕ್ಕೆ ಬೃಹತ್ ಕಂಬಗಳು ಆಸರೆಯಾಗಿವೆಯಲ್ಲದೆ, ಆಕರ್ಷಣೆಯೂ ಹೌದು. ಇಲ್ಲಿನ ಪ್ರತಿಯೊಂದು ಕೊಠಡಿಯೂ ವಿಶಾಲವಾಗಿದ್ದು, ಮಹಡಿಗೆ ತೆರಳಲು ಮರದ ಮೆಟ್ಟಿಲು ನಿರ್ಮಿಸಲಾಗಿದೆ. ವಿದ್ಯುತ್ ಸಂಪರ್ಕಕ್ಕೆ ಮರದ ಪಟ್ಟಿಯನ್ನು ಬಳಸಲಾಗಿದೆ. ಮದ್ರಾಸ್ ತಾರಸಿಯಿಂದ ನಿರ್ಮಿಸಿದ ಕಟ್ಟಡವಾಗಿದ್ದು, ಇಂದಿಗೂ ಇದು ಗಟ್ಟಿಮುಟ್ಟಾಗಿರುವುದು ಕಟ್ಟಡದ ವಿಶೇಷವಾಗಿದೆ.
ಮೈಸೂರಿಗೆ ಬಂದರೆ ಈ ಸ್ಥಳಗಳಿಗೂ ಹೋಗುವುದನ್ನು ಮರೆಯಬೇಡಿ
ಹತ್ತಾರು ಕುಟುಂಬಗಳಿಗೆ ಆಶ್ರಯ ತಾಣ
ಈ ಕಟ್ಟಡವನ್ನು ಮಹಾರಾಜರು ದಸರಾ ವೀಕ್ಷಿಸಲು ರಾಜ್ಯದ ಇತರೆ ಕಡೆಗಳಿಂದ ಬರುವ ಪ್ರವಾಸಿಗರ ವಾಸ್ತವ್ಯಕ್ಕೆ ನಿರ್ಮಿಸಿದ್ದರು ಎಂದು ಹೇಳಲಾಗಿದೆ. ಅವತ್ತಿನ ಕಾಲಕ್ಕೆ ಇದು ವಿಶಾಲ ಕಟ್ಟಡವಾಗಿತ್ತು. ಜತೆಗೆ ಅರಮನೆಗೆ ಹತ್ತಿರದಲ್ಲಿತ್ತು. ಹೀಗಾಗಿ ದಸರಾ ನೋಡಲು ಆಗಮಿಸುತ್ತಿದ್ದ ಜನರು ಇಲ್ಲಿ ತಂಗುತ್ತಿದ್ದರು. ತದ ನಂತರದ ವರ್ಷಗಳಲ್ಲಿ ಮೈಸೂರು ಅಭಿವೃದ್ಧಿಯಾಯಿತು. ಹೀಗಾಗಿ ಈ ಛತ್ರವನ್ನು ಭಾಗಗಳನ್ನಾಗಿ ಮಾಡಿ ಅರಮನೆಯಲ್ಲಿ ವಿವಿಧ ಕೆಲಸಗಳನ್ನು ಮಾಡುತ್ತಿದ್ದ ಸುಮಾರು ಹತ್ತೊಂಬತ್ತು ನೌಕರರಿಗೆ ಬಾಡಿಗೆ ರೂಪದಲ್ಲಿ ನೀಡಲಾಯಿತು. ಇವತ್ತಿಗೂ ಈ ಕುಟುಂಬಗಳ ತಲೆಮಾರಿನವರು ಇಲ್ಲಿ ವಾಸಿಸುತ್ತಿದ್ದಾರೆ.
ಒಟ್ಟಾರೆ ಹೇಳುವುದಾದರೆ ಮೈಸೂರು ದಸರಾ ಬರೀ ದಸರಾ ಅಲ್ಲ ಅದೊಂದು ಕಲೆ ಸಾಹಿತ್ಯ ಸಾಂಸ್ಕೃತಿಕ ಸಂಪ್ರದಾಯ ಸಡಗರದ ಸಂಗಮ. ಮಹಾರಾಜರು ಬರೀ ದಸರಾ ಆಚರಣೆ ಮಾಡಿ ಸಂಭ್ರಮಿಸಿಲ್ಲ. ಅದನ್ನು ಎಲ್ಲರೂ ನೋಡಬೇಕು ಮತ್ತು ಆ ಸಂಭ್ರಮದಲ್ಲಿ ಒಬ್ಬರಾಗಿ ಖುಷಿಪಡಲು ಏನೆಲ್ಲ ಮಾಡಬೇಕೋ ಅದೆಲ್ಲವನ್ನು ಮಾಡಿದ್ದರು ಎಂಬುದೇ ಸಂತಸದ ವಿಚಾರವಾಗಿದೆ.