ಮೈಸೂರಲ್ಲಿ ಭಾರೀ ಬೇಡಿಕೆ ಸೃಷ್ಟಿಸಿರುವ ಸಗಣಿಯ ಹಣತೆಗಳು
ಮೈಸೂರು, ನವೆಂಬರ್ 8: ಈ ಬಾರಿ ಕೊರೊನಾ ಮಹಾಮಾರಿಯು ಎಲ್ಲ ಹಬ್ಬಗಳ ಸಂಭ್ರಮ ಸಡಗರವನ್ನು ಕಸಿದುಕೊಂಡಿದೆ. ರಾಜ್ಯ ಸರ್ಕಾರ ಈ ಬಾರಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬಕ್ಕೆ ತೀವ್ರ ಶಬ್ಧದ ಪಟಾಕಿಯನ್ನು ನಿಷೇಧಿಸಿ ಆದೇಶಿಸಿದೆ.
ದೀಪಾವಳಿ ಎಂದರೆ ಅದು ಅಕ್ಷರಶಃ ಬೆಳಕಿನ ಹಬ್ಬ, ಬೆಳಕಿಗೆ ಹಣತೆಗಳು ಬೇಕೇ ಬೇಕು. ಸಾಮಾನ್ಯವಾಗಿ ಎಲ್ಲೆಡೆಯೂ ಮಣ್ಣಿನಿಂದ ಮಾಡಿದ ಹಣತೆಗಳನ್ನು ಸಹಸ್ರ ಸಂಖ್ಯೆಯಲ್ಲಿ ಬಳಸಲಾಗುತ್ತದೆ. ಇವು ಪರಿಸರ ಸ್ನೇಹಿ ಕೂಡ. ಈ ನಡುವೆ ಮೈಸೂರಿನ ಹಲವು ಕುಟುಂಬಗಳು ಈ ಬಾರಿ ದೀಪಾವಳಿಗೆ ದೀಪ ಹಚ್ಚಲು ಇನ್ನಷ್ಟು ಸುಧಾರಿತ ಪರಿಸರ ಸ್ನೇಹಿ ದೀಪ ಬಳಸಲು ಮುಂದಾಗಿವೆ.
ದುರ್ನಾತ ತಾಳಲಾರದೆ ಕಾರ್ಖಾನೆಗೆ ಬೀಗ ಹಾಕಿದ ಕೂರ್ಗಳ್ಳಿ ಗ್ರಾಮಸ್ಥರು
ಸಾಮಾನ್ಯ ಮಣ್ಣಿನ ಹಣತೆಯ ಬದಲಿಗೆ ಪರಿಸರ ಸ್ನೇಹಿಯಾಗಿ ಹಸುವಿನ ಸಗಣಿಯಿಂದ ಮಾಡಿದ ದೀಪಗಳನ್ನು ಹಚ್ಚಿ, ದೀಪಾವಳಿ ಆಚರಣೆಗೆ ನಿರ್ಧರಿಸಿವೆ. ಅಷ್ಟೇ ಅಲ್ಲ, ಈ ಸಗಣಿ ಬಳಸಿ ತಯಾರಿಸಿದ ದೀಪಗಳನ್ನು ಮಾರಾಟ ಮಾಡಲೂ ಮುಂದಾಗಿದ್ದಾರೆ.
ಜೀವ್ ದಯಾ ಜೈನ್ ಚಾರಿಟಿಯ ಕಾರ್ಯ
ಹಸುವಿನ ಸಗಣಿ, ಗೋಮೂತ್ರ(ಹಸುವಿನ ಮೂತ್ರ) ಮತ್ತು ಗೋಧಿ ಪುಡಿಯನ್ನು ಬಳಸಿ ತಯಾರಿಸಲಾಗುವ ಈ ದೀಪಗಳು ಅರಿಶಿನ ಮತ್ತು ಕುಂಕುಮದ ಬಣ್ಣ ಹೊಂದಿರುತ್ತದೆ. ಈ ಬಾರಿ ಈ ರೀತಿಯ 5000ಕ್ಕಿಂತ ಹೆಚ್ಚು ದೀಪಗಳನ್ನು ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ಉದ್ದೇಶಿಸಿದ್ದಾರೆ. ಇದರಿಂದ ಸಂಗ್ರಹವಾದ ಹಣವನ್ನು ಸಂಪೂರ್ಣವಾಗಿ ಪಿಂಜರಾಪೋಲ್ ಸೊಸೈಟಿಯ ದತ್ತಿ ಕಾರ್ಯಗಳಿಗೆ ಬಳಸಲಾಗುತ್ತದೆ. ಈ ಯೋಜನೆಯ ಹಿಂದಿನ ಶಕ್ತಿ ಜೀವ್ ದಯಾ ಜೈನ್ ಚಾರಿಟಿಯ ಅಧ್ಯಕ್ಷರಾದ ಕೋಕಿಲಾ ರಮೇಶ್ ಜೈನ್ ಅವರಾಗಿದ್ದಾರೆ.
ಸಕಾರಾತ್ಮಕ ಶಕ್ತಿ ಹರಡುತ್ತದೆ
ಈ ಕುರಿತು ಒನ್ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಕೋಕಿಲಾ ಅವರು, ""ನಾವು ಮಣ್ಣಿನ ಹಣತೆಯ ಬದಲಿಗೆ ಹಸುವಿನ ಸಗಣಿಯನ್ನು ಬಳಸಲು ಪ್ರೋತ್ಸಾಹಿಸುತಿದ್ದೇವೆ. ಮಣ್ಣಿನ ಹಣತೆ ಮಣ್ಣಿನಲ್ಲಿ ಮಣ್ಣಾಗಲು ಸಮಯ ತೆಗೆದುಕೊಳ್ಳುತ್ತದೆ, ಆದರೆ ಹಸುವಿನ ಸಗಣಿಯಿಂದ ತಯಾರಿಸಿದ ದೀಪಗಳು ಬಹುಬೇಗ ಮಣ್ಣಿನೊಂದಿಗೆ ಸೇರಿಕೊಳ್ಳುತ್ತವೆ. ಅಲ್ಲದೆ ಇಂತಹ ದೀಪಗಳಿಂದ ಬೆಳಗಿದಾಗ ಸಕಾರಾತ್ಮಕ ಶಕ್ತಿ ಹರಡುತ್ತದೆ. ಇದು ಗೊಬ್ಬರವಾಗಿಯೂ ಬಳಸಬಹುದು. ಈ ದೀಪಗಳು ಹಸುವಿನ ಸಗಣಿಗೂ ಆದಾಯ ತರಬಲ್ಲವು'' ಎಂದರು.
ಪ್ರಚಾರದಿಂದಾಗಿ ವಿಪರೀತ ಬೇಡಿಕೆ ಬಂದಿದೆ
ಮೊದ ಮೊದಲು ಸಗಣಿಯಿಂದ ಎಂತಹ ದೀಪ ಎಂದು ಮೂಗು ಮುರಿದವರು, ಇಂದು ದೀಪದ ಅಂದ ನೋಡಿ ಬೆರಗಾಗಿದ್ದಾರೆ. ನಾವು ಮಹಿಳೆಯರೇ ಸೇರಿ ಈ ದೀಪಗಳನ್ನು ತಯಾರಿಸುತ್ತಿದ್ದು, ಸಾಮಾಜಿಕ ತಾಣಗಳಲ್ಲಿನ ಪ್ರಚಾರದಿಂದಾಗಿ ವಿಪರೀತ ಬೇಡಿಕೆ ಬಂದಿದೆ. ಆದರೆ ನಮಗೆ ತಯಾರಿಸಲು ಆಗುತ್ತಿಲ್ಲ, ಮುಂದಿನ ವರ್ಷ ಬೇಡಿಕೆಗೆ ತಕ್ಕಂತೆ ಹೆಚ್ಚು ದೀಪಗಳನ್ನು ತಯಾರಿಸುವುದಾಗಿ ಹೇಳಿದರು.
ಈಗ ದೀಪವೊಂದಕ್ಕೆ 10 ರುಪಾಯಿ ದರ ವಿಧಿಸುತ್ತಿದ್ದೇವೆ ಎಂದ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ವಸ್ತುಗಳನ್ನು ತಯಾರಿಸಲು ಯೋಚಿಸುತ್ತಿರುವುದಾಗಿಯೂ ಕೋಕಿಲಾ ಹೇಳಿದರು.
ಪರಿಸರ ಸ್ನೇಹಿಯಾಗಿ ದೀಪಾವಳಿ ಆಚರಣೆ
ಮತ್ತೋರ್ವ ಸದಸ್ಯೆ ರೋಹಿಣಿ ಮಾತನಾಡಿ, ""ನಾವು ಪರಿಸರಕ್ಕೆ ಹಾನಿಯಾಗದ ಪರಿಸರ ಸ್ನೇಹಿ ಬಣ್ಣಗಳನ್ನು ಬಳಸಿ ದೀಪಗಳನ್ನು ಅಲಂಕರಿಸಿದ್ದೇವೆ. ಹಬ್ಬಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸಲು ನಾವು ಜನರನ್ನು ವಿನಂತಿಸುತ್ತೇವೆ'' ಎಂದು ಹೇಳಿದ್ದಾರೆ. ಪ್ರಗತಿ ಪ್ರತಿಷ್ಠಾನ ಮತ್ತು ಜೀವ್ ದಯಾ ಜೈನ್ ಚಾರಿಟಿಗಳ ಸ್ವಯಂಸೇವಕರು ಈ ದೀಪಗಳನ್ನು ತಯಾರಿಸಿದ್ದಾರೆ.
Recommended Video