ಬೂತ್ ಕಾಯೋಕೂ ಕಾರ್ಯಕರ್ತರಿಲ್ಲ: ಇದೇನು ಚಂದ್ರಬಾಬು ನಾಯ್ಡುಗೆ NTR ಶಾಪನಾ?
2019ರ ಲೋಕಸಭಾ ಚುನಾವಣೆಗೂ ಮುನ್ನ ಎನ್ಡಿಎ ಮೈತ್ರಿಕೂಟದಿಂದ ಹೊರಬಂದ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಕೈಜೋಡಿಸಿ, ಬಿಜೆಪಿ ವಿರುದ್ದ ದೇಶಾದ್ಯಂತ ಸಮರ ಸಾರಿದ್ದರು.
ಅತ್ತ, ಮಮತಾ ಬ್ಯಾನರ್ಜಿ ಏನೋ ಪಶ್ಚಿಮ ಬಂಗಾಳ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಇತ್ತ, ಚಂದ್ರಬಾಬು ನಾಯ್ಡು ಆಂಧ್ರ ಪ್ರದೇಶದ ರಾಜಕೀಯದಲ್ಲಿ ಪ್ರಪಾತಕ್ಕೆ ಇಳಿಯುತ್ತಾ ಸಾಗುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗುತ್ತಿದೆ, ಅಲ್ಲಿನ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ.
ಆಂಧ್ರಪ್ರದೇಶ ಬಂದ್ಗೆ ಕರೆ ನೀಡಿದ ಟಿಡಿಪಿ, ಕಾರಣವೇನು?
ಕೆಲವು ವಾರಗಳ ಹಿಂದೆ ಚಂದ್ರಬಾಬು ನಾಯ್ಡು ದೆಹಲಿಯಲ್ಲಿ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿಯಾಗಲು ಹೋಗಿದ್ದರು. ಆದರೆ, ಅವರಿಬ್ಬರ ಅಪಾಯಿಂಟ್ಮೆಂಟ್ ಸಿಗದೇ ಖಾಲಿ ಕೈಯಲ್ಲಿ ವಾಪಾಸಾಗಿದ್ದರು. ಬಿಜೆಪಿಯ ಅಗ್ರಗಣ್ಯ ಯಾವ ನಾಯಕರು ಕೂಡಾ ನಾಯ್ಡು ಅವರನ್ನು ಭೇಟಿಯಾಗಲು ಉತ್ಸುಕ ತೋರಿಲ್ಲ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿದ್ದವು.
ಆಂಧ್ರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆ; ಜಗನ್ ಪಕ್ಷದ ಜಯಭೇರಿ
ಕೇಂದ್ರದಲ್ಲಿ ಚಂದ್ರಬಾಬು ನಾಯ್ಡುಗೆ ಆಗುತ್ತಿರುವ ದೊಡ್ಡ ಹಿನ್ನಡೆಯೆಂದರೆ, ಹಾಲೀ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯವರು ಮೋದಿ ಮತ್ತು ಅಮಿತ್ ಶಾ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿರುವುದು. ಎನ್ಡಿಎ ಮೈತ್ರಿಕೂಟದ ಜೊತೆ ಜಗನ್ ಗುರುತಿಸಿಕೊಳ್ಳದಿದ್ದರೂ, ಬಿಜೆಪಿಗೆ ಬಾಹ್ಯ ಬೆಂಬಲವಂತೂ ಜಗನ್ ನಿಂದ ಸಿಗುತ್ತಿದೆ. ಸ್ವಂತ ಊರಲ್ಲೇ ನೆಲಕಚ್ಚಿದ ಟಿಡಿಪಿ, ಇದೇನು, ನಾಯ್ಡುಗೆ ಅವರ ಮಾವ ಎನ್.ಟಿ.ರಾಮರಾವ್ ಅವರ ಶಾಪವೇ?
ನಾಯ್ಡು ಪ್ರತಿನಿಧಿಸುವ ಚಿತ್ತೂರು ಜಿಲ್ಲೆಯ ಕುಪ್ಪಂ ಮುನ್ಸಿಪಾಲಿಟಿ
ಚಂದ್ರಬಾಬು ನಾಯ್ಡು ಪ್ರತಿನಿಧಿಸುವ ಚಿತ್ತೂರು ಜಿಲ್ಲೆಯ ಕುಪ್ಪಂ ಮುನ್ಸಿಪಾಲಿಟಿ ಚುನಾವಣೆಯಲ್ಲಿ ವೈಎಸ್ಆರ್ ಪಕ್ಷ ವಿಜಯದ ಪತಾಕೆಯನ್ನು ಹಾರಿಸಿದೆ. ಅಲ್ಲಿ ಇದೇ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ, 25 ವಾರ್ಡುಗಳ ಪೈಕಿ, ಒಬ್ಬರ ಅವಿರೋಧ ಆಯ್ಕೆ ಸೇರಿದಂತೆ, ಜಗನ್ ಪಕ್ಷ ಇಪ್ಪತ್ತು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ತನ್ನ ರಾಜಕೀಯ ಕರ್ಮಭೂಮಿಯಲ್ಲಿ ಪಕ್ಷಕ್ಕಾದ ಸೋಲಿಗೆ ಚಂದ್ರಬಾಬು ನಾಯ್ಡು ಕಣ್ಣೀರು ಹಾಕಿದ್ದಾರೆ. ಕೇವಲ ಐದು ಕ್ಷೇತ್ರದಲ್ಲಿ ಮಾತ್ರ ಟಿಡಿಪಿ ಗೆಲುವು ಕಂಡಿದೆ. ಕುಪ್ಪಂನಿಂದ ಕನಿಷ್ಠ ಹತ್ತು ಸಾವಿರ ಜನ ಬೆಂಗಳೂರಿಗೆ ಅಪ್ ಎಂಡ್ ಡೌನ್ ಕೆಲಸಕ್ಕೆ ಬರುತ್ತಿರುವುದರಿಂದ ಟಿಡಿಪಿಗೆ ಅಲ್ಲಿ ಹಿನ್ನಡೆಯಾಗಿರುವುದಕ್ಕೆ ಮುಖ್ಯ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಕ್ಷೇತ್ರದ ಉಸ್ತುವಾರಿ, ಸಚಿವರೂ ಆಗಿರುವ ಪೆದ್ದರೆಡ್ಡಿ ರಾಮಚಂದ್ರ ರೆಡ್ಡಿ
ಹನ್ನೆರಡು ಮುನ್ಸಿಪಾಲಿಟಿ ಮತ್ತು ನೆಲ್ಲೂರು ನಗರಪಾಲಿಕೆಯ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಬಹುತೇಕ ಎಲ್ಲಾ ಕಡೆ ವೈಎಸ್ಆರ್ ಪಕ್ಷ ಬರೀ ಗೆಲುವಲ್ಲ, ಕ್ಲೀನ್ ಸ್ವೀಪ್ ಮಾಡುವತ್ತ ಮುನ್ನಡೆಯುತ್ತಿದೆ. ನೆಲ್ಲೂರಿನಲ್ಲಂತೂ ವೈಎಸ್ಆರ್ ಪಕ್ಷ ಎಲ್ಲಾ 54 ಕ್ಷೇತ್ರಗಳಲ್ಲಿ ಗೆದ್ದಿದೆ. "ಇನ್ನು ನೀವು ಅಲ್ಲಿಂದ (ಕುಪ್ಪಂ) ಗೆಲ್ಲಲಾರಿರಿ, ಬೇಕಾದರೆ ನನ್ನ ಕ್ಷೇತ್ರಕ್ಕೆ ಬನ್ನಿ"ಎಂದು ಕುಪ್ಪಂ ಕ್ಷೇತ್ರದ ಉಸ್ತುವಾರಿ, ಸಚಿವರೂ ಆಗಿರುವ ಪೆದ್ದರೆಡ್ಡಿ ರಾಮಚಂದ್ರ ರೆಡ್ಡಿಯವರು ಚಂದ್ರಬಾಬು ನಾಯ್ಡುಗೆ ಪಂಥಾಹ್ವಾನ ನೀಡಿದ್ದಾರೆ.
ಟಿಡಿಪಿಗೆ ಕನಿಷ್ಠ ಬೂತ್ ನೋಡಿಕೊಳ್ಳಲೂ ಕಾರ್ಯಕರ್ತರ ಅಭಾವ
ಕುಪ್ಪಂ ಮುನ್ಸಿಪಾಲಿಟಿ ಚುನಾವಣೆಯ ನಡೆಯುತ್ತಿದ್ದ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕೆ ಚಂದ್ರಬಾಬು ಆಗಮಿಸಿದ್ದಾಗ, ಕಾರ್ಯಕರ್ತರು, ಜನರಿಲ್ಲದೇ ಬಾಡಿಗೆ ಜನರನ್ನು ಕರೆಸಲಾಯಿತು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇನ್ನು ಚುನಾವಣೆಯ ದಿನ ಕನಿಷ್ಠ ಬೂತ್ ನೋಡಿಕೊಳ್ಳಲೂ ಕಾರ್ಯಕರ್ತರ ಅಭಾವ ಚಂದ್ರಬಾಬು ನಾಯ್ಡುಗೆ ಎದುರಾಗಿತ್ತು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ತೆಲುಗುದೇಶಂ ಸಿದ್ದಾಂತಕ್ಕೆ ತಿಲಾಂಜಲಿ ಇಡುತ್ತಿದ್ದಾರೆ ಎಂದ ಬಿಜೆಪಿಯ ರಾಮ್ ಮಾಧವ್
ದಿನದಿಂದ ದಿನಕ್ಕೆ ಚಂದ್ರಬಾಬು ನಾಯ್ಡು ಅವರ ಜನಪ್ರಿಯತೆ ಕಮ್ಮಿಯಾಗಲು ಕಾರಣವೇನು ಎಂದಾಗ ಅಲ್ಲಲ್ಲಿ ಆಂಧ್ರದ ಜನತೆ ಹೇಳುವುದು, ಎಲ್ಲಾ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗುದೇಶಂ ಸಂಸ್ಥಾಪಕ ಎನ್.ಟಿ.ರಾಮರಾವ್ ಅವರ ಶಾಪ ಎಂದು. "ಉತ್ತಮ ಉದ್ದೇಶವನ್ನು ಇಟ್ಟುಕೊಂಡು NTR ಅವರು ತೆಲುಗುದೇಶಂ ಸ್ಥಾಪನೆ ಮಾಡಿದ್ದರು. ತನ್ನ ಹಿತಾಶಕ್ತಿಗಾಗಿ ಅವರಿಗೆ ಮೋಸ ಮಾಡಿದ ಚಂದ್ರಬಾಬು ನಾಯ್ಡು ಈಗ ತೆಲುಗುದೇಶಂ ಸಿದ್ದಾಂತಕ್ಕೆ ತಿಲಾಂಜಲಿ ಇಡುತ್ತಿದ್ದಾರೆ"ಎಂದು ಹಿಂದೆ ಬಿಜೆಪಿಯ ರಾಮ್ ಮಾಧವ್ ಹೇಳಿದ್ದರು.
ಇದೇನು ಚಂದ್ರಬಾಬು ನಾಯ್ಡುಗೆ NTR ಶಾಪನಾ?
ಇನ್ನು, "ಎನ್.ಟಿ.ರಾಮರಾವ್ ಅವರ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಲಕ್ಷಾಂತರ ಕೋಟಿ ರೂಪಾಯಿಯನ್ನು ಲೂಟಿ ಹೊಡೆದಿದ್ದೀರಾ, ಚುನಾವಣೆಯಲ್ಲಿ ನಿಮ್ಮ ಪತನ ಆರಂಭವಾಗುತ್ತದೆ" ಎಂದು ಮೋಹನ್ ಬಾಬು ಕೂಡಾ ಹಿಂದೆ ಹೇಳಿದ್ದರು. ಈಗ, ಚಂದ್ರಬಾಬುಗೆ ಆಗುತ್ತಿರುವ ಹಿನ್ನಡೆಯನ್ನು ನೋಡುತ್ತಿದ್ದರೆ ಈ ಮಾತು ಸತ್ಯವೇ ಎನ್ನುವ ಅನುಮಾನ ತೆಲುಗು ನಾಡಲ್ಲಿ ಕಾಡಲಾರಂಭಿಸಿದೆ.