ಥಾಯ್ಲೆಂಡ್ ನ ಅಪಾಯದ ಗುಹೆಯಿಂದ ಆಚೆ ಬರುವ ಮಾರ್ಗಗಳೇನು?
ಆ ಹನ್ನೆರಡು ಹುಡುಗರ ಪ್ರಾಣ ಜತೆಗೆ ಆ ತರಬೇತುದಾರ. ಈಗ ಹೇಳುತ್ತಿರುವುದು ಅದೇ ಥಾಯ್ಲೆಂಡ್ ಗುಹೆಯ ಬಗ್ಗೆಯೇ. ಅಯ್ಯೋ, ಇದನ್ನೇ ಕೇಳಿ ಕೇಳಿ ಬೋರೆದ್ದು ಹೋಗಿದ್ದೀವಿ. ಮತ್ತೆ ಅದನ್ನೇ ಹೇಳ್ತೀರಾ ಅಂತ ಕೆಲವರಾದರೂ ಬೇಸರಿಸಿಕೊಂಡರೆ, ಕ್ಷಮಿಸಿ, ಈ ವರದಿ ಹೇಳಲು ಹೊರಟ ವಿಷಯ- ಹೂರಣದ ಬಗ್ಗೆ ಬಹಳ ಬೇಗ ತೀರ್ಮಾನಕ್ಕೆ ಬರಬೇಡಿ ಅಂತ ಹೇಳಲೇ ಬೇಕಾಗುತ್ತದೆ.
ಇನ್ನು ಅದೇನು ಹೇಳಬೇಕೋ ಹೇಳಿಬಿಡಿ, ಇದನ್ನೂ ಓದಿಬಿಡೋಣ ಅನ್ನೋದಾದರೆ ನಿಮ್ಮ ನಿರೀಕ್ಷೆಗೂ ಮೀರಿದಂಥ ಮಾಹಿತಿ ಈ ವರದಿಯಲ್ಲಿ ಖಂಡಿತಾ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಇಡಿ. ಸಮಯದೊಂದಿಗೆ ಪೋಟಿಗೆ ಬಿದ್ದವರಂತೆ ಥಾಯ್ಲೆಂಡ್ ನಲ್ಲಿ ಆ ಬಾಲಕರು ಹಾಗೂ ತರಬೇತುದಾರನ ರಕ್ಷಣೆ ಮಾಡುವ ಕಾರ್ಯಾಚರಣೆ ನಡೆಯುತ್ತಿದೆಯಲ್ಲಾ ಅದಕ್ಕೆ ಜಗತ್ತಿನಾದ್ಯಂತ ತಜ್ಞರ ತಂಡ ನೆರವಿಗೆ ನಿಂತಿದೆ.
ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ ಬಾಲಕರನ್ನು ರಕ್ಷಿಸಿದ್ದು ಹೇಗೆ?
ಉತ್ತರ ಥಾಯ್ಲೆಂಡ್ ನಲ್ಲಿ ಈಗ ಮುಂಗಾರಿನ ಸಮಯ. ಆದ್ದರಿಂದಲೇ ಈ ಕಾರ್ಯಾಚರಣೆ ಸಿಕ್ಕಾಪಟ್ಟೆ ಸವಾಲಾಗಿ, ಗುಹೆಯೊಳಗೆ ಆಮ್ಲಜನಕದ ಟ್ಯಾಂಕ್ ಪೂರೈಸುವುದರಲ್ಲಿ ತೊಡಗಿದ್ದ ಒಬ್ಬ ಮುಳುಗು ತಜ್ಞರು ಆಮ್ಲಜನಕದ ಕೊರತೆಯಿಂದಲೇ ಪ್ರಾಣವನ್ನು ಕಳೆದುಕೊಂಡುಬಿಟ್ಟರು. ಇಡೀ ಕಾರ್ಯಾಚರಣೆ ಬಗ್ಗೆ ಏನೇನು ಮುಖ್ಯ ಪ್ರಶ್ನೆಗಳು ಉದ್ಭವಿಸಬಹುದೋ ಅವೆಲ್ಲವನ್ನೂ ಪಟ್ಟಿ ಮಾಡಿಕೊಂಡು ಉತ್ತರ ಕಂಡುಕೊಂಡಿರುವ ವರದಿ ಇದು. ಮುಂದೆ ಓದಿ.
ಪ್ರಶ್ನೆ: ಬಾಲಕರು ಎಲ್ಲಿದ್ದಾರೆ ಎಂಬುದು ಗೊತ್ತಾದ ನಂತರ ಆ ಜಾಗದಲ್ಲಿ ರಂಧ್ರ ಮಾಡಿ, ಹೊರತರಲು ಆಗಲ್ಲವಾ?
ಉತ್ತರ: ಈಗ ಬಾಲಕರು ಮತ್ತು ಅವರ ತರಬೇತುದಾರ ಸಿಕ್ಕಿಕೊಂಡಿರುವುದು ಅರ್ಧ ಮೈಲಿ ಕೆಳ ಭಾಗದಲ್ಲಿ. ಉದ್ದಕ್ಕೂ ಗಟ್ಟಿಯಾದ ಬಂಡೆಗಳಿವೆ. ಇನ್ನು ಗುಹೆಯ ಮೇಲ್ಭಾಗದಲ್ಲಿ ಇರುವುದು ದಟ್ಟವಾದ ಕಾನನ. ಇನ್ನು ರಸ್ತೆಗಳು ಅಂತಿರುವುದು ಕಡಿಮೆಯಲ್ಲಿ ಕಡಿಮೆ. ಇಂಥ ಗುಹೆಗಳಲ್ಲಿ ಸಿಕ್ಕಿಕೊಂಡಾಗ ಕಾರ್ಯಾಚರಣೆ ನಡೆಸುವ ವಿಚಾರದಲ್ಲಿ ಈಗ ನೇತೃತ್ವ ವಹಿಸಿಕೊಂಡಿರುವ ಫಾರೆಸ್ಟ್ ವಿಲ್ಸನ್ ಗೆ ಐವತ್ತು ವರ್ಷದ ಅನುಭವ ಇದೆ.
ಅವರದೇ ಮಾತಿನಲ್ಲಿ ಹೇಳಬೇಕು ಅಂದರೆ, ಗುಹೆಯ ಮೇಲ್ಭಾಗದಿಂದ ರಂಧ್ರ ಕೊರೆಯುವುದು ಕಷ್ಟವೇನಲ್ಲ. ಆದರೆ ಗುಹೆಯ ನಕ್ಷೆ ನಿಖರವಾಗಿಲ್ಲ. ಆದ್ದರಿಂದಲೇ ಎಲ್ಲಿ ರಂಧ್ರ ಕೊರೆಯಬೇಕು ಎಂಬ ವಿಚಾರದಲ್ಲಿ ಖಾಚಿತ್ಯ ಇಲ್ಲ. ಇನ್ನು ಅರ್ಧ ಕಿಲೋಮೀಟರ್ ನಷ್ಟು ಗುಹೆಯ ಬಂಡೆಯನ್ನು ಕೊರೆಯುವಷ್ಟು ಸಮಯ ಖಂಡಿತಾ ಇಲ್ಲ.
ಪ್ರಶ್ನೆ: ಆಧುನಿಕ ತಂತ್ರಜ್ಞಾನ ಬಳಸಿ ಮೇಲ್ಭಾಗದಿಂದಲೇ ಬಾಲಕರು ಇರುವ ನಿಖರ ಸ್ಥಳ ಗುರುತಿಸಲು ಆಗಲ್ಲವಾ?
ಉತ್ತರ: ಆಗುತ್ತದೆ. ಆ ರೀತಿಯ ತಂತ್ರಜ್ಞಾನವೂ ಇದೆ. ಅದನ್ನು ರೇಡಿಯೋ ಕೇವ್ ಲೊಕೇಟರ್ ಅಂತಾರೆ. ಅದೊಂದು ದೀಪದ ವ್ಯವಸ್ಥೆ, ಅದು ಗುಹೆಯ ಒಳಗೆ ರೇಡಿಯೋ ತರಂಗಗಳನ್ನು ಹರಿಸುತ್ತದೆ ಮತ್ತು ಗುಹೆಯ ಒಳಗಿರುವವರನ್ನು ಗುರುತಿಸಲು ನೆರವಾಗುತ್ತದೆ. ಆದರೆ ಅಂಥ ತಂತ್ರಜ್ಞಾನ ಥಾಯ್ಲೆಂಡ್ ನಲ್ಲಿ ಬಳಸುತ್ತಾರೆಯೇ ಎಂಬ ಬಗ್ಗೆ ಖಾತ್ರಿ ಇಲ್ಲ. ಇದರ ಬಳಕೆಯಿಂದ ರಕ್ಷಣಾ ಕಾರ್ಯಕ್ಕೆ ಸಹಾಯ ಆಗಲಾರದು ಎಂಬ ನಿಲುವು ಕೂಡ ಇರಬಹುದು.
ವಾರಗಳ ಕಾಲ ರಂಧ್ರ ಕೊರೆದು, ಆ ನಿರ್ದಿಷ್ಟ ಸ್ಥಳ ಗುರ್ತಿಸಲು ಪ್ರಯತ್ನಿಸುವುದು ಒಳ್ಳೆ ಆಯ್ಕೆ ಅಲ್ಲ ಅನ್ನೋ ಕಾರಣಕ್ಕೆ ಈ ನಿರ್ಧಾರಕ್ಕೆ ಕೂಡ ಬಂದಿರಬಹುದು.
ಗುಹೆಯಲ್ಲಿ ಸಿಲುಕಿರುವ ಕೋಚ್ನ ಬದುಕು ಇನ್ನೂ ದುರಂತಮಯ
ಪ್ರಶ್ನೆ: ಅಷ್ಟು ದೊಡ್ಡ ಗುಹೆ ಇದ್ದರೂ ಆಮ್ಲಜನಕ ಪೂರೈಕೆ ಬಗ್ಗೆ ಏಕೆ ಅಷ್ಟು ತಲೆ ಕೆಡಿಸಿಕೊಂಡಿದ್ದಾರೆ?
ಉತ್ತರ: ಮೇಲ್ಭಾಗದಿಂದ ಗುಹೆಯ ಒಳಗೆ ಯಾವುದೇ ಬೆಳಕಿಂಡಿ ಇಲ್ಲ. ಸರಳವಾಗಿ ಹೇಳಬೇಕು ಅಂದರೆ, ಗುಹೆಯ ಒಳಗಿರುವವರಿಗೆ ದೀರ್ಘಾವಧಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಆಗುವುದಿಲ್ಲ. ಆದ್ದರಿಂದಲೇ ಗುಹೆಯ ಮುಂಭಾಗದಿಂದಲೇ ಆಮ್ಲಜನಕದ ಪೂರೈಕೆ ಮಾಡಲಾಗುತ್ತಿದೆ. ಅಲ್ಲಿಂದ ಈಗ ಗುಹೆಯಲ್ಲಿ ಸಿಕ್ಕಿಕೊಂಡವರು ಮೂರು ಮೈಲು ದೂರದಲ್ಲಿದ್ದಾರೆ.
ಗುಹೆಯೊಳಗೆ ಆಮ್ಲಜನಕದ ಪ್ರಮಾಣ ಹದಿನೈದು ಪರ್ಸೆಂಟ್ ಗಿಂತ ಸ್ವಲ್ಪ ಹೆಚ್ಚಿರಬಹುದು (ಸಾಧಾರಣವಾಗಿ ಇದು ಇಪ್ಪತ್ತೊಂದು ಪರ್ಸೆಂಟ್ ಗೆ ಸ್ವಲ್ಪ ಹೆಚ್ಚಿರಬೇಕು). ಆಮ್ಲಜನಕದ ಪ್ರಮಾಣ ಕಡಿಮೆ ಅಂದರೆ ದೈಹಿಕ ಚೈತನ್ಯ ನಿಧಾನಕ್ಕೆ ಕಡಿಮೆ ಆಗುತ್ತಾ ಹೋಗುತ್ತದೆ ಅಂತಲೇ.
ಪ್ರಶ್ನೆ: ಗುಹೆಯೊಳಗಿನ ನೀರನ್ನು ಸುಲಭವಾಗಿ ಆಚೆ ಹಾಕಲು ಆಗಲ್ಲವಾ?
ಉತ್ತರ: ಎಲ್ಲವನ್ನೂ ಹಾಕಲು ಸಾಧ್ಯವಿಲ್ಲ. ಭಾರೀ ಪ್ರಮಾಣದ ಇಂಡಸ್ಟ್ರಿಯಲ್ ಪಂಪ್ ಗಳಿಂದ ಹಗಲು-ರಾತ್ರಿ ನೀರನ್ನು ಹೊರ ಹಾಕಲಾಗುತ್ತಿದೆ. ಅಧಿಕಾರಿಗಳು ಮೂರ್ನಾಲ್ಕು ದಿನದ ಹಿಂದೆ ಅಂದಾಜು ಮಾಡಿದಂತೆಯೇ ಮೂವತ್ತೈದು ಮಿಲಿಯನ್ ಗ್ಯಾಲನ್ಸ್ ನಷ್ಟು ನೀರನ್ನು ಕಳೆದ ವಾರದಿಂದ ಹೊರ ಹಾಕಿದ್ದಾರೆ.
ಆ ಗುಹೆಯಲ್ಲಿ ಇರುವ ನೀರು ಯಾವ ಪ್ರಮಾಣ ಅಂದರೆ, ಅಷ್ಟಾದರೂ ಒಂದು ದೊಡ್ಡ ಬಕೆಟ್ ನಿಂದ ಹನಿ ನೀರನ್ನು ಆಚೆ ತೆಗೆದು ಹಾಕಿದಂತಾಗಿದೆ ಅಷ್ಟೆ. ಇನ್ನು ನಾಲ್ಕು ತಿಂಗಳಿಗೆ ಥಾಯ್ಲೆಂಡ್ ನಲ್ಲಿ ಬೇಸಿಗೆ ಕಾಲ. ಆಗ ಸಹಜವಾಗಿಯೇ ಗುಹೆಯೊಳಗಿನ ನೀರು ಇಂಗಿ ಹೋಗುತ್ತದೆ. ಅಷ್ಟು ಕಾಲ ಬಾಲಕರು ಗುಹೆಯೊಳಗೆ ಇರಲು ಸಾಧ್ಯವೇ ಇಲ್ಲ. ಏಕೆಂದರೆ ಆಮ್ಲಜನಕ ಪ್ರಮಾಣದ ಕೊರತೆ ಮತ್ತಿತರ ಸಮಸ್ಯೆಗಳಿವೆ ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿದವರು ಅಭಿಪ್ರಾಯ ಪಡುತ್ತಾರೆ.
ಪ್ರಶ್ನೆ: ಈ ಗುಹೆಯಿಂದ ಆಚೆ ಬರಲು ಇರುವ ಸರಳ ಮಾರ್ಗ ಯಾವುದು?
ಉತ್ತರ: ಗುಹೆಯ ಹಿಂಭಾಗದ ಪ್ರವೇಶ ಹುಡುಕಬೇಕು. ಅದು ಗೊತ್ತಾದರೆ ಅಲ್ಲಿಂದ ಬಾಲಕರನ್ನು ಹೊರ ಕರೆತರಬಹುದು. ಆದರೆ ದಟ್ಟ ಕಾಡಿನಲ್ಲಿ ಅಷ್ಟು ದೊಡ್ಡ ಗುಹೆಯ ಹಿಂಭಾಗದ ಪ್ರವೇಶ ಹುಡುಕುವುದು ಅಸಾಧ್ಯ. ಇನ್ನು ಚಿಮಣಿ ರೀತಿಯಲ್ಲಿ ರಂಧ್ರ ಮಾಡಿ, ಅದರಿಂದ ರಕ್ಷಣೆಗೆ ಪ್ರಯತ್ನಿಸಬಹುದು.
ಆದರೆ, ಆ ಇಡೀ ಸ್ಥಳವೇ ದೊಡ್ಡ ಕಾಡು. ಆದ್ದರಿಂದ ಚಿಮಣಿಯಂಥದ್ದನ್ನು ಮಾಡಿದರೆ ಬಾಲಕರನ್ನು ಗುರುತಿಸುವಷ್ಟು ಬೆಳಕು ಗುಹೆಯೊಳಗೆ ಹೋಗುವ ಸಾಧ್ಯತೆಯೇ ಇಲ್ಲ. ಆದರೂ ಕಾಡಿನ ಪೂರ್ತಿ ಜನರನ್ನು ಬಿಟ್ಟು, ಗುಹೆಯ ಹಿಂಭಾಗದ ಪ್ರವೇಶ ಹುಡುಕಿಸುವ ಕೆಲಸ ಮಾಡುತ್ತಿದ್ದಾರೆ ವಿಲ್ಸನ್.
ಥೈಲ್ಯಾಂಡ್ ಗುಹೆಯೊಳಗೆ ಸಿಲುಕಿರುವ ಕೋಚ್ ಬರೆದ ಮನಮಿಡಿಯುವ ಪತ್ರ
ಪ್ರಶ್ನೆ: ಮುಳುಗುತಜ್ಞರ ನೆರವಿನಿಂದ ಬಾಲಕರು ಈಜುತ್ತಾ ಹೊರಬರಲು ಸಾಧ್ಯವಿಲ್ಲವಾ?
ಉತ್ತರ: ಖಂಡಿತಾ ಸಾಧ್ಯವಿದೆ. ಆದರೆ ಅದರಲ್ಲಿ ಬಹಳ ಅಪಾಯವಿದೆ. ಬಾಲಕರು ಮತ್ತು ತರಬೇತುದಾರ ಒಳಗೆ ಸಿಕ್ಕಿಹಾಕಿಕೊಂಡು ಎರಡು ವಾರ ಆಗಿದೆ. ದಿನದಿನಕ್ಕೂ ಅವರು ದೈಹಿಕವಾಗಿ ದುರ್ಬಲರಾಗಿದ್ದಾರೆ. ಇನ್ನು ಆ ಪೈಕಿ ಕೆಲವರಿಗೆ ಈಜಲು ಸಹ ಬರುವುದಿಲ್ಲ. ಆದರೂ ಇದು ಉತ್ತಮ ಆಯ್ಕೆ ಅಂತಲೇ ಥಾಯ್ಲೆಂಡ್ ಅಧಿಕಾರಿಗಳು ಭಾವಿಸುತ್ತಾರೆ.
ಆದರೆ, ಇದು ಬಹು ಪ್ರಯಾಸದ ಕೆಲಸ. ಏಕೆಂದರೆ ಬಾಲಕರು ಈಜುವಷ್ಟು ಸದೃಢರಾಗಿಲ್ಲ. ಏಕೆಂದರೆ ಗುಹೆಯಿಂದ ಹೊರಗೆ ಬರುವುದಕ್ಕೆ ಐದು ಗಂಟೆಗಳ ಕಾಲ ಈಜಬೇಕಾಗುತ್ತದೆ. ಇದು ಭಯ ಹುಟ್ಟುವ ಸಂಗತಿ.