ಎಚ್ಡಿಕೆ-ಕೆಸಿಆರ್ ಮಾತುಕತೆ: ರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ?
ಹೈದರಾಬಾದ್, ಮೇ 06: ತೃತೀಯ ರಂಗದ ಸದ್ದು ಮರೆಯಾಗಿರುವ ಹೊತ್ತಲ್ಲೇ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿರುವುದು ರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ ಎನ್ನಿಸಿದೆ.
ತೆಲಂಗಾಣದಲ್ಲಿ ಚಿಗುರುತ್ತಲೇ ಇದೆ ಸಂಯುಕ್ತರಂಗದ ಕನಸು!
ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ಸಂಯುಕ್ತ ರಂಗ ಸೃಷ್ಟಿಸುವ ಸಲುವಾಗಿ ಓಡಾಟ ನಡೆಸಿದ್ದ ಕೆ ಸಿಆರ್, ಇದೀಗ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಮತ್ತು ಕೇರಳ ಮುಖ್ಯಮಂತ್ರಿ, ಸಿಪಿಐಎಂ ಮುಖಂಡ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಲಿದ್ದಾರೆ.
ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಭಾರೀ ಆಘಾತವನ್ನುಂಟು ಮಾಡಲು ಕೆಸಿಆರ್ ಮುಂದಾಗಿದ್ದಾರೆ.
ಕಳೆದ ಜನವರಿಯಲ್ಲಿ ಸಂಯುಕ್ತ ರಂಗಕ್ಕಾಗಿ ಕೆ ಚಂದ್ರಶೇಖರ್ ರಾವ್ ಸಾಕಷ್ಟು ಓಡಾಟ ಮಾಡಿದ್ದರು. ಬಿಜೆಪಿ-ಕಾಂಗ್ರೆಸ್ ಅನ್ನು ಹೊರಗಿಟ್ಟು ತೃತೀಯ ರಂಗ ರಚಿಸುವ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜೆಡಿಎಸ್ ಸುಪ್ರಿಮೋ ಎಚ್ ಡಿ ದೇವೇಗೌಡ, ಒಡಿಶಾದಲ್ಲಿ ಬಿಜೆಡಿ ನಾಯಕ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮುಂತಾದವರನ್ನು ಕೆಸಿಆರ್ ಭೇಟಿಯಾಗಿದ್ದರು.
ಆದರೆ ನಂತರ ಇದ್ದಕ್ಕಿದ್ದಂತೆ ಮೌನರಾಗಿದ್ದ ಕೆಸಿಆರ್, ಬಹುಶಃ ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯೂ ಇದ್ದಿದ್ದರಿಂದ ಅದರತ್ತ ಕೇಂದ್ರೀಕರಿಸುವ ಉದ್ದೇಶದಿಂದ ಸಂಯುಕ್ತ ರಂಗದ ಕನಸನ್ನು ಪಕ್ಕಕ್ಕಿಟ್ಟಿದ್ದರು.
ಆದರೆ ಇನ್ನೇನು ಲೋಕಸಭಾ ಚುನಾವಣೆಯ ಎಲ್ಲಾ ಹಂತಗಳೂ ಮುಗಿಯುವ ದಿನ ಸನಿಹವಾಗಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ. ಫಲಿತಾಂಶದ ದಿನ ಹತ್ತಿರವಾಗುತ್ತಿದ್ದಂತೆಯೇ ಕೆಸಿಆರ್ ಮತ್ತೆ ತೃತೀಯ ರಂಗದ ಓಡಾಟಕ್ಕೆ ತೊಡಗಿರುವುದು ಮೋದಿ ಸರ್ಕಾರಕ್ಕೆ ದುಃಸ್ವಪ್ನವಾದರೆ ಅಚ್ಚರಿಯಿಲ್ಲ.