ಸಿಸೇರಿಯನ್ಗೆ ಮುಹೂರ್ತ ಇಡಲ್ಲ: ತೆಲಂಗಾಣ ಜ್ಯೋತಿಷಿಗಳ ನಿರ್ಧಾರ!
ಹೈದರಾಬಾದ್, ಮೇ 5: ಒಳ್ಳೆಯ ಮುಹೂರ್ತದಲ್ಲಿ ಮಗು ಹುಟ್ಟಲೆಂದು ನಾರ್ಮಲ್ ಡೆಲಿವರಿ ಬದಲು ಸಿಸೇರಿಯನ್ ಮಾಡಿಸಿಕೊಳ್ಳುವ ತಾಯಂದಿರ ಸಂಖ್ಯೆ ಹೆಚ್ಚುತ್ತಿದೆಯಂತೆ. ಹಾಗೆಯೇ, ಬೇರೆ ಬೇರೆ ಕಾರಣಗಳಿಗೆ ತಾಯಂದಿರು ಸಿಸೇರಿಯನ್ ಮೊರೆ ಹೋಗುತ್ತಿದ್ದಾರೆ. ಸಾಧ್ಯವಾದಷ್ಟೂ ನಾರ್ಮಲ್ ಡೆಲಿವರಿ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ತೆಲಂಗಾಣದ ಜಿಲ್ಲಾಡಳಿತ ಪ್ರಯತ್ನ ಮಾಡುತ್ತಿದೆ.
ಈ ನಿಟ್ಟಿನಲ್ಲಿ ದೇವಸ್ಥಾನದ ಅರ್ಚಕರು ಮತ್ತು ಜ್ಯೋತಿಷಿಗಳ ನೆರವನ್ನೂ ಸರಕಾರ ಬಳಸಿಕೊಳ್ಳುತ್ತಿದೆ. ಸಿಸೇರಿಯನ್ ಆಪರೇಷನ್ಗೆ ಯಾರು ಮುಹೂರ್ತ ಕೇಳಿದರೂ ಕೊಡಬೇಡಿ ಎಂದು ಜಿಲ್ಲಾಡಳಿತ ಮಾಡಿರುವ ಮನವಿಗೆ ಜ್ಯೋತಿಷಿಗಳು ಸ್ಪಂದಿಸಿದ್ದಾರೆ.
ಕೆಸಿಆರ್ ಬಳಿ ಹಣ ಪಡೆಯಿರಿ, ಬಿಜೆಪಿಗೆ ಓಟ್ ಹಾಕಿ: ಬಂಡಿ ಸಂಜಯ್
"ಒಳ್ಳೆಯ ಗ್ರಹಗತಿ, ನಕ್ಷತ್ರಗಳಿರುವ ಮುಹೂರ್ತದಲ್ಲಿ ತಮ್ಮ ಮಗು ಹುಟ್ಟಬೇಕೆಂದು ತಾಯಂದಿರು ಹಾಗೂ ಅವರ ಕುಟುಂಬದ ಇತರ ಸದಸ್ಯರು ಆಸೆ ಪಡುತ್ತಾರೆ. ಅದಕ್ಕಾಗಿ ಜ್ಯೋತಿಷಿ ಮತ್ತು ಪಂಡಿತರ ಬಳಿ ಹೋಗಿ ಮುಹೂರ್ತ ಸಮಯಗಳನ್ನು ತಿಳಿದುಕೊಳ್ಳುತ್ತಾರೆ. ಆ ಸಮಯದಲ್ಲೇ ಸಿಸೇರಿಯನ್ ಆಪರೇಷನ್ ಮಾಡಿಸಿಕೊಳ್ಳಲು ಮುಂದಾಗುತ್ತಾರೆ" ಎಂದು ಕರೀಮ್ ನಗರ ಜಿಲ್ಲಾಧಿಕಾರಿ ಆರ್. ವಿ. ಕರ್ಣನ್ ಹೇಳಿದ್ದಾರೆ.
ಅನಿವಾರ್ಯವಾದರೆ ಮಾತ್ರ ಸಿ-ಸೆಕ್ಷನ್: ಗರ್ಭಿಣಿಗೆ ನಾರ್ಮಲ್ ಡೆಲಿವರಿ ಆದರೆ ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೂ ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ. ಆದರೆ ತೆಲಂಗಾಣ ರಾಜ್ಯ, ಅದರಲ್ಲೂ ಕರೀಂ ನಗರ ಜಿಲ್ಲೆಯಲ್ಲಿ ಹೆಚ್ಚು ಪ್ರಮಾಣದ ಗರ್ಭಿಣಿಯರು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಕರೀಂ ನಗರ ಜಿಲ್ಲಾಡಳಿತವು ಎಚ್ಚೆತ್ತುಕೊಂಡಿದ್ದು, ಜಿಲ್ಲೆಯಾದ್ಯಂತ ನಾರ್ಮಲ್ ಡೆಲಿವರಿಗೆ ಪ್ರೋತ್ಸಾಹ ಕೊಡುವ ಪ್ರಯತ್ನ ಮಾಡುತ್ತಿದೆ.
ಹುಸೇನ್ ಸಾಗರ್ ಬಳಿ ಡಿಸೆಂಬರ್ ವೇಳೆಗೆ 125 ಅಡಿ ಎತ್ತರದ ಡಾ. ಅಂಬೇಡ್ಕರ್ ಪ್ರತಿಮೆ
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಇತ್ತೀಚೆಗೆ ಜಿಲ್ಲೆಯ ಜ್ಯೋತಿಷಿಗಳು, ಪುರೋಹಿತರು, ಪ್ರಸೂತಿ ವೈದ್ಯರು, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು (ಸಿಡಿಪಿಒ) ಮೊದಲಾದವರ ಸಭೆ ಕರೆದು ಸಹಜ ಪ್ರಸವ ಪ್ರಕ್ರಿಯೆಗೆ ಉತ್ತೇಜನ ನೀಡಲು ಯಾವ್ಯಾವ ಕ್ರಮ ಕೈಗೊಳ್ಳಬಹುದು ಎಂದು ಚರ್ಚಿಸಿದ್ದಾರೆ.
"ನಾರ್ಮಲ್ ಡೆಲಿವರಿ ಕಷ್ಟವಾದರೆ ಮಾತ್ರ ಸಿ-ಸೆಕ್ಷನ್ ಮಾಡಬಹುದು. ಇಲ್ಲದಿದ್ದರೆ ಸಿಸೇರಿಯನ್ ಅಗತ್ಯವೇ ಇಲ್ಲ. ಮುಹೂರ್ತ ನೋಡಿ ಸಿಸೇರಿಯನ್ ಮಾಡಿಸಿಕೊಳ್ಳುವ ತಾಯಂದಿರಿಗೆ ಜ್ಯೋತಿಷಿಗಳು ತಿಳಿಹೇಳಬೇಕೆಂದು ಮನವಿ ಮಾಡಿದ್ದೇನೆ. ಯಾರೂ ಕೂಡ ಅವೈಜ್ಞಾನಿಕವಾಗಿ ಮಗು ಪ್ರಸವಕ್ಕೆ ಸಮಯ ನಿಗದಿ ಮಾಡಬಾರದು" ಎಂದು ಜಿಲ್ಲಾಧಿಕಾರಿ ಕರ್ಣನ್ ತಿಳಿಸಿದ್ದಾರೆ.
"ನಾರ್ಮಲ್ ಡೆಲಿವರಿ ಸಾಧ್ಯವಿದ್ದರೂ ತಮ್ಮ ಮಗು ಒಳ್ಳೆಯ ಮುಹೂರ್ತದಲ್ಲೇ ಹುಟ್ಟಬೇಕೆಂದು ಬಯಸುವ ತಾಯಂದಿರು, ಅದೇ ನಿಗದಿತ ಸಮಯದಲ್ಲಿ ಸಿಸೇರಿಯನ್ ಆಪರೇಷನ್ ಮಾಡಿ ಡೆಲಿವರಿ ಮಾಡಿಸಬೇಕೆಂದು ವೈದ್ಯರ ಮೇಲೆ ಒತ್ತಡ ಹೇರುತ್ತಿರುವುದು ಕಂಡುಬರುತ್ತಿದೆ ಇದು ತಪ್ಪು. ವೈದ್ಯರು ಇಂಥ ತಾಯಂದಿರಿಗೆ ಸಿಸೇರಿಯನ್ ಆಪರೇಷನ್ನಿಂದ ಆಗುವ ಅಪಾಯದ ಬಗ್ಗೆ ಅರಿವು ಮಾಡಿಕೊಡಬೇಕು" ಎಂದು ಕರೀಮ್ ನಗರ್ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಇದೇ ವೇಳೆ, ಜಿಲ್ಲಾಧಿಕಾರಿಗಳು ಸಿಸೇರಿಯನ್ ಆಪರೇಷನ್ನಿಂದ ಆಗುವ ಪ್ರತಿಕೂಲಗಳು ಹಾಗೂ ಸಹಜ ಪ್ರಸವದಿಂದ ಆಗುವ ಅನುಕೂಲಗಳನ್ನ ತಿಳಿಸುವ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್ಗಳನ್ನು ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಕಬೇಕೆಂದೂ ಸೂಚಿಸಿದ್ದಾರೆ.
ಮನವಿಗೆ ಕಿವಿಗೊಟ್ಟ ಜ್ಯೋತಿಷಿಗಳು: ಸಿಸೇರಿಯನ್ ಆಪರೇಷನ್ಗೆ ಮುಹೂರ್ತ ಕೇಳಿಕೊಂಡು ಬರುವವರಿಗೆ ತಾವು ಇನ್ನುಮುಂದೆ ಉತ್ತೇಜನ ಕೊಡುವುದಿಲ್ಲ ಎಂದು ಜಿಲ್ಲೆಯ ಅನೇಕ ಜ್ಯೋತಿಷಿಗಳು ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ. ಸಿ-ಸೆಕ್ಷನ್ಗೆ ಯಾರೂ ಮುಹೂರ್ತ ಕೇಳಬೇಡಿ ಎಂದು ತಿಳಿಸುವ ಪೋಸ್ಟರ್ ಅನ್ನು ಅನೇಕ ದೇವಸ್ಥಾನಗಳಲ್ಲಿ ಪ್ರದರ್ಶಿಸಲಾಗಿದೆ.
ಮಗುವಿನ ಜನ್ಮಸಮಯ ದೈವನಿರ್ಧಾರ: "ಇಂಥದ್ದೇ ಮುಹೂರ್ತದಲ್ಲಿ ಪ್ರಸವ ಮಾಡಬೇಕೆಂದು ಯಾವ ಮಹಿಳೆಗೂ ನಾವು ಸಲಹೆ ಕೊಟ್ಟಿಲ್ಲ. ಮಗು ಜನ್ಮ ಒಂದು ನೈಸರ್ಗಿಕ ಪ್ರಕ್ರಿಯೆ. ಜನನಗೆ ದೇವರೇ ಮುಹೂರ್ತ ನಿಗದಿ ಮಾಡಿರುತ್ತಾನೆ. ಈ ಸತ್ಯವನ್ನು ಅರಿಯದೇ ಜನರು ನಮ್ಮ ಬಳಿ ಬಂದು ಸಿಸೇರಿಯನ್ಗೆ ಮುಹೂರ್ತ ಕೇಳುತ್ತಾರೆ. ನಾವಾದರೂ ಏನು ಮಾಡೋಣ" ಎಂದು ಕರೀಮ್ ನಗರದ ಜ್ಯೋತಿಷಿ ನಾಗರಾಜ ಶರ್ಮಾ ಅಸಹಾಯಕತೆ ತೋಡಿಕೊಳ್ಳುತ್ತಾರೆ.
ತೆಲಂಗಾಣ, ಕರೀಂನಗರದಲ್ಲಿ ಹೆಚ್ಚು ಸಿ-ಸೆಕ್ಷನ್: ನೀತಿ ಆಯೋಗ ನಡೆಸಿರುವ ಅಧ್ಯಯನವೊಂದರ ಪ್ರಕಾರ ಸಿಸೇರಿಯನ್ ಆಪರೇಷನ್ ಮೂಲಕ ಮಗುವಿನ ಡೆಲಿವರಿ ಹೆಚ್ಚು ಆಗುತ್ತಿರುವ ರಾಜ್ಯಗಳಲ್ಲಿ ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು ಅಗ್ರಸ್ಥಾನದಲ್ಲಿವೆ. ತಮಿಳುನಾಡಿನಲ್ಲಿ ಶೇ. 55.15 ಡೆಲಿವರಿಗಳು ಸಿಸೇರಿಯನ್ ಆಪರೇಷನ್ನಿಂದಲೇ ಅಗಿವೆ. ತೆಲಂಗಾಣದಲ್ಲಿ ಇದು ಶೇ. 53.51 ಇದೆ. ದೇಶದ ಸರಾಸರಿ ಆದ ಶೇ. 20.80ಕ್ಕೆ ಹೋಲಿಸಿದರೆ ಈ ಎರಡು ರಾಜ್ಯಗಳಲ್ಲಿ ತೀರಾ ಹೆಚ್ಚು ಸಿಸೇರಿಯನ್ ಶಸ್ತ್ರ ಚಿಕಿತ್ಸೆಗಳಾಗುತ್ತಿವೆ.
ದೊಡ್ಡ ಆಸ್ಪತ್ರೆಗಳ ಸಮೀಕ್ಷೆ ನಡೆಸಿದಾಗ ತೆಲಂಗಾಣದ ಕರೀಂ ನಗರ ಜಿಲ್ಲೆಯಲ್ಲಿ ಶೇ. 69.93ರಷ್ಟು ಸಿಸೇರಿಯನ್ ಆಪರೇಷನ್ಗಳು ಅಗುತ್ತಿವೆ. ಮಧ್ಯಮ ಗಾತ್ರದ ಆಸ್ಪತ್ರೆಗಳ ಸಮೀಕ್ಷೆಯಲ್ಲಿ ತೆಲಂಗಾಣದ ಕಮ್ಮಂ ಜಿಲ್ಲೆ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ.
(ಒನ್ಇಂಡಿಯಾ ಸುದ್ದಿ)