ಶಿಕ್ಷಕರು ಸರ್ವಾಂಗೀಣ ವ್ಯಕ್ತಿತ್ವ ರೂಪಿಸಲು ಸಹಕಾರಿ : ರೋಹಿಣಿ ಸಿಂಧೂರಿ
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ಶುಭಾಷಯ ತಿಳಿಸಿ ಲಿಖಿತ ಪತ್ರ ಬರೆದಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಮೂಲಕ ಎಲ್ಲಾ ಶಿಕ್ಷಕರಿಗೆ ರವಾನಿಸಿ, ಶಿಕ್ಷಕ ವೃತ್ತಿಯ ಮಾಹತ್ವ ನೆನಪಿಸಿ ಇನ್ನಷ್ಟು ಮಾದರಿಯಾಗಿ ವೃತ್ತಿ ಧರ್ಮ ಪಾಲಿಸುವಂತೆ ಕೋರಿದ್ದಾರೆ.
ತಮಗೆಲ್ಲಾ - ಶಿಕ್ಷಕ ದಿನಾಚರಣೆಯ ಶುಭಾಶಯಗಳು.
ಸಮರ್ಥ ಶಿಕ್ಷಕ ಉತ್ತಮ ರಾಷ್ಟ್ರ ನಿರ್ಮಾಪಕ ಎಂಬುದು ಅತಿಶಯೋಕ್ತಿಯ ಮಾತಲ್ಲ. ಒಂದು ಸದೃಢ ರಾಷ್ಟ್ರವನ್ನು ನಿರ್ಮಾಣ ಮಾಡುವುದಕ್ಕೆ ಶಿಕ್ಷಕ ಸಮುದಾಯದಿಂದ ಮಾತ್ರವೇ ಸಾಧ್ಯ. ಅದರಲ್ಲಿಯೂ ಪ್ರಾಥಮಿಕ, ಪ್ರೌಢಶಾಲಾ ಹಂತದ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಬೀರುವ ಪ್ರಭಾವವನ್ನು ಮತ್ತಾರೂ ಬೀರಲು ಸಾಧ್ಯವಿಲ್ಲ. ತಮ್ಮ ಭವಿಷ್ಯತ್ತಿಗೆ ಬಾಲ್ಯದಲ್ಲೇ ಬುನಾದಿ ಹಾಕಿದ ಶಿಕ್ಷಕರನ್ನು - ಉಪನ್ಯಾಸಕರು, ಪ್ರಾಧ್ಯಾಪಕರೂ ಸಹ ನೆನಪಿಸಿಕೊಳ್ಳುತ್ತಾರೆ ಆದ್ದರಿಂದ ಶಿಕ್ಷಕರು ಸದಾ ಅಭಿನಂದನಾರ್ಹರಾಗಿರುತ್ತಾರೆ.
ನಿಮಗೆ ತಂದೆ-ತಾಯಿ ಎರಡೂ ಆಗಬಲ್ಲವನೇ ಗುರು
ಶಿಕ್ಷಕರು ಕೇವಲ ಪಾಠ ಬೋಧಿಸದೆ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗಿರುತ್ತಾರೆ. ನನ್ನ ಉದಾಹರಣೆಯನ್ನೇ ಹೇಳುವುದಾದರೆ, ನಾನು ಆರನೇ ತರಗತಿಯಲ್ಲಿ ಓದುತ್ತಿರಬೇಕಾದರೆ ನನ್ನ ಮೇಲೆ ಪ್ರಭಾವ ಬೀರಿದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.
"ಒಂದು ದಿನ ನನ್ನ ಶಾಲೆಯ ವಿದ್ಯಾರ್ಥಿಯೋರ್ವ ತನ್ನ ಹುಟ್ಟುಹಬ್ಬದ ಸಂಬಂಧ ಎಲ್ಲರಿಗೂ ಸಿಹಿ ಹಂಚುತ್ತಿದ್ದಾಗ ಅವರು ವಿದ್ಯಾರ್ಥಿಯನ್ನು ಕರೆದು ನಮ್ಮ ಹುಟ್ಟು ಹಬ್ಬವನ್ನು ನಾವು ಆಚರಿಸದೆ ಬೇರೆಯವರು ಆಚರಿಸುವಂತೆ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು. ಅಂದಿನಿಂದ ನಾನು ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿಲ್ಲ.
ಆದ್ದರಿಂದ ಶಿಕ್ಷಕರು ಕೇವಲ ಪಾಠಕ್ಕಷ್ಟೇ ಸೀಮಿತವಾಗದೆ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಬಹುಮುಖವಾಗಿ ಬೆಳೆಸಲು ಸಹಕಾರಿಯಾಗುತ್ತಾರೆ.
ಗುರುವಿಗೆ ಮಹತ್ತರವಾದ ಸ್ಥಾನವಿದೆ
ತಾವು ಅಬ್ರಹಾಂ ಲಿಂಕನ್ ಅವರು ತಮ್ಮ ಮಗನ ಶಿಕ್ಷಕರಿಗೆ ಬರೆದ ಪತ್ರವನ್ನು ಗಮನಿಸಿದ್ದೀರಿ. ಪೋಷಕರು ಮತ್ತು ಸಮಾಜ ಶಿಕ್ಷಕರಿಂದ ಏನ್ನನ್ನು ನಿರೀಕ್ಷಿಸುತ್ತದೆ ಎಂಬುದು ಇದರಿಂದ ವೇದ್ಯವಾಗುತ್ತದೆ. ಮಗು ಶಾಲೆಯಲ್ಲಿ 8 ಗಂಟೆಗಳ ಸಮಯವನ್ನು ಶಿಕ್ಷಕರೊಂದಿಗೆ ಕಳೆಯುತ್ತದೆ. ಪೋಷಕರೊಂದಿಗೆ ನಿದ್ರೆಯ ಅವಧಿಯನ್ನು ಕಳೆದು ಕೇವಲ ಆರು ಗಂಟೆಯನ್ನು ಕಳೆಯುತ್ತದೆ. ಪೋಷಕರು ಶಿಕ್ಷಕರನ್ನು "ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ" ಎಂದು ತಿಳಿದಿರುತ್ತಾರೆ, ಪುರಾಣಗಳಲ್ಲಿ ಗುರುವಿಗೆ ಮಹತ್ತರವಾದ ಸ್ಥಾನವಿದೆ.
ಸರ್ಕಾರಿ ಶಾಲೆಗಳ ದಾಖಲಾತಿ ಕ್ಷೀಣಿಸುತ್ತಿದೆ
ಇತ್ತೀಚೆಗೆ ಸರ್ಕಾರಿ ಶಾಲೆಗಳ ದಾಖಲಾತಿ ಕ್ಷೀಣಿಸುತ್ತಿದೆ. ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡುತ್ತಿಲ್ಲ. ನಮ್ಮ ಸರ್ಕಾರಿ ಶಾಲೆಗಳ ಮೇಲೆ ನಮಗೇ ನಂಬಿಕೆಯಿಲ್ಲ ಎಂಬುದನ್ನು ಇದು ತೋರಿಸುತ್ತದೆ, ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂಬ ಪೈಪೋಟಿ ಸೃಷ್ಟಿಯಾಗುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕಾಗಿದೆ. ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ.
ಎಸ್.ಎಸ್.ಎಲ್.ಸಿ.ಫಲಿತಾಂಶದ ಏರುಪೇರು
ಕಳೆದ ಒಂದು ದಶಕದ ಎಸ್.ಎಸ್.ಎಲ್.ಸಿ.ಫಲಿತಾಂಶದ ಏರುಪೇರುಗಳನ್ನು ಗಮನಿಸಿದ್ದೇವೆ. 2011-12ರಲ್ಲಿ 3ನೇ ಸ್ಥಾನ ಪಡೆದಿದ್ದೆವು. ನಂತರದ ವರ್ಷಗಳಲ್ಲ್ಲಿ ಇಳಿಕೆಯಾಗಿ 2016-17ರಲ್ಲಿ 31ನೇ ಸ್ಥಾನ ಪಡೆದಿದ್ದುದು ಗಂಭೀರವಾಗಿ ಚಿಂತಿಸುವ ಸಂಗತಿಯಾಗಿದೆ. ಇದು ಕೇವಲ ಅಂಕಿ-ಅಂಶವಲ್ಲ. ಇದರಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ. ಎಸ್.ಎಸ್.ಎಲ್.ಸಿ ಅನುತ್ತೀರ್ಣನಾದಂತಹ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದರೆ ಮುಖ್ಯವಾಹಿನಿಗೆ ಬರದೆ ಸಮಾಜದಿಂದ ವಿಮುಖರಾಗುತ್ತಾರೆ.
ಪರಿಣಾಮಕಾರಿ ಬೋಧನೆಯ ಅಗತ್ಯವಿದೆ
ಇಂತಹ ಸಂದರ್ಭಕ್ಕೆ ನಾವು ಕಾರಣರಾಗುತ್ತೇವೆ. ಆದರೆ 2017-18ರಲ್ಲಿ 7ನೇ ಸ್ಥಾನಕ್ಕೆ ಉನ್ನತಿ ಹೊಂದಿದ್ದು ತಮ್ಮೆಲ್ಲರ ಶ್ರಮದ ಕೊಡುಗೆ. ಆದರೆ ಒಂದು ಬಾರಿ ಪಡೆದ ಸಫಲತೆ ಏರಿಕೆಯಾಗದಿದ್ದರೆ, ಅದು ಅದೃಷ್ಟದಿಂದ ದೊರಕಿದ್ದು ಎಂಬಂತೆ ಆಗುತ್ತದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಈ ವರ್ಷ ರಾಜ್ಯದಲ್ಲಿ ಜಿಲ್ಲೆಯು ಅತ್ಯುತ್ತಮ ಸ್ಥಾನ ಬರಲು ಪರಿಣಾಮಕಾರಿ ಬೋಧನೆಯ ಅಗತ್ಯವಿದೆ.
ಇತ್ತೀಚೆಗೆ ಕೇಂದ್ರ ಪಠ್ಯಕ್ರಮದ ಅಳವಡಿಕೆಯೂ ಆಗುತ್ತಿರುವುದರಿಂದ ನಾವೂ ನಮ್ಮ ಗುಣಮಟ್ಟವನ್ನು ಉನ್ನತೀಕರಿಸಿಕೊಳ್ಳಬೇಕಿದೆ. ಶಿಕ್ಷಣದ ಯಶಸ್ಸು ಅಂತಿಮವಾಗಿ ಶಿಕ್ಷಕರ ಬದ್ದತೆಯನ್ನು ಅವಲಂಭಿಸಿರುತ್ತದೆ. ಅದಕ್ಕಾಗಿ ಶಿಕ್ಷಕರಾದವರು ನಿರಂತರ ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ.
ಉತ್ತಮ ಶಿಕ್ಷಣದಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ
ಶಿಕ್ಷಕರ ತರಗತಿಯ ಕೋಣೆಯಲ್ಲಿನ ಪರಿಶ್ರಮವು ಪ್ರಸ್ತುತ ಸಮಾಜದಲ್ಲಿ ಪ್ರತಿಫಲನಗೊಳ್ಳಬೇಕಿದೆ. "ಯಾವುದೇ ಸಮಾಜ ಶಿಕ್ಷಕನ ಗುಣಮಟ್ಟವನ್ನು ಮೀರಿ ನಿಲ್ಲಲಾರದು" ಎಂಬ ಅಂಶವನ್ನು ಗಮನದಲ್ಲಿರಿಸಿಕೊಂಡು ಶಿಕ್ಷಕರಾದ ನಾವುಗಳು ಕಾರ್ಯನಿರ್ವಹಿಸಬೇಕಾಗಿದೆ.
ನಿಮ್ಮ ಬೋಧನೆಯಿಂದ ಉತ್ತಮ ಹಾಗೂ ಸಚ್ಚಾರಿತ್ರ್ಯದ ಸಮಾಜ ರೂಪಿತವಾಗಲಿ. ಸೈನಿಕರು ಮತ್ತು ರೈತರು ಹೇಗೆ ಎಂತಹ ಸಮಯದಲ್ಲೂ ಯಾವುದೇ ಕಠಿಣ ಪರೀಕ್ಷೆಗೆ ಸನ್ನದ್ಧರೋ, ಹಾಗೆಯೇ ನಮ್ಮ ವಿದ್ಯಾರ್ಥಿಗಳೂ ಸನ್ನದ್ಧರಿರಲಿ ಎಂದು ಆಶಿಸುತ್ತಾ ಆರೋಗ್ಯಕರ ಸದೃಢ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಕೈ ಜೋಡಿಸೊಣ. ಉತ್ತಮ ಶಿಕ್ಷಣದಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ