ಶಿಕ್ಷಕರ ದಿನಾಚರಣೆ ವಿಶೇಷ: "ಗುರುವಿನ ಗುಲಾಮನಾಗುವ ತನಕ.."
'ಬದುಕು' ಎಂಬ ಮೂರು ಅಕ್ಷರಕ್ಕೆ ತಂದೆ, ತಾಯಿ, ಮತ್ತು ಗುರು ಎಂಬ ಮೂರು ಪದಗಳೇ ಶಕ್ತಿ. ಪ್ರತಿಯೊಬ್ಬರ ಜೀವನದಲ್ಲಿ ತಂದೆ-ತಾಯಿಗಿಂತಲೂ ಮಹತ್ವದ ಪಾತ್ರ ವಹಿಸುವ ಮತ್ತೊಂದು ದೈವವೇ ಗುರು. ಬಾಲ್ಯದ ಬದುಕಿನ ಸ್ಪೂರ್ತಿ, ಯವ್ವನದ ಬದುಕಿಗೆ ಚೈತನ್ಯ ತುಂಬುತ್ತಾ ಪ್ರತಿಯೊಂದು ಹಂತದಲ್ಲಿ ಬೆಂಬಲವಾಗಿ ನಿಲ್ಲುವ ಶಕ್ತಿಗೆ ಇನ್ನೊಂದು ಹೆಸರೇ ಗುರು.
ಅಜ್ಞಾನ ಕತ್ತಲೆಯನ್ನು ತೊಡೆದು ಹಾಕಿ ಜ್ಞಾನ ಬೆಳಕು ಚೆಲ್ಲುತ್ತಾ ಜೀವನವನ್ನು ಪ್ರಕಾಶಮಾನಗೊಳಿಸುವ ಶಿಕ್ಷಕರನ್ನು ಪೂಜ್ಯರಂತೆ ಮನೋಭಾವನೆಯನ್ನು ಬೆಳೆಸಬೇಕಿದೆ. ಈ ಸದುದ್ದೇಶದಿಂದಲೇ ಸರ್ವಶ್ರೇಷ್ಠ ಶಿಕ್ಷಕರು ಎನಿಸಿದ್ದ ದೇಶದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನವನ್ನು ಶಿಕ್ಷಕರ ದಿನವೆಂದು ಆಚರಿಸಲಾಗುತ್ತಿದೆ.
ನಿಸ್ವಾರ್ಥ, ಸಮಾನತೆಯ ಪ್ರತಿರೂಪದ ಶಿಕ್ಷಕರಿಗೊಂದು ದೊಡ್ಡ ಸಲಾಮ್
ನಮ್ಮ ದೇಶದಲ್ಲಿ ಶಿಕ್ಷಕ ವೃತ್ತಿಗೆ ಪವಿತ್ರ ಸ್ಥಾನ ನೀಡಲಾಗಿದೆ. ವಿದ್ಯಾರ್ಥಿಗಳ ಬದುಕಿನ ಪ್ರತಿಯೊಂದು ಹಂತದಲ್ಲಿ ಶಿಕ್ಷಕರು ಬಂದು ಹೋಗುತ್ತಾರೆ. ಬಾಲ್ಯದಿಂದ ವೃದ್ಯಾಪ್ಯದವರೆಗೂ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಬದುಕಿಗೆ ಪಾಠ ಕಲಿಸುವ ಶಿಕ್ಷಕರಾಗುತ್ತಾರೆ. ಜೀವನದ ಗುರಿಯನ್ನು ತೋರಿದ ಗುರುವಿನ ನೆನೆಯಲು ಇದೊಂದು ಸುವರ್ಣ ಅವಕಾಶ. ನಿಮ್ಮ ಬದುಕಿನಲ್ಲೂ ಬಂದು ಹೋಗಿರುವ ಗುರುಗಳ ಬಗ್ಗೆ ಈ ಕಥೆಯನ್ನು ಓದುತ್ತಾ ಒಮ್ಮೆ ಮೆಲುಕು ಹಾಕಿರಿ. ಇದೇ ಶಿಕ್ಷಕರ ದಿನಾಚರಣೆಯ ವಿಶೇಷ.
ವಿದ್ಯಾರ್ಥಿಗಳ ಸಂತಸವನ್ನು 'ಇಮ್ಮಡಿ'ಗೊಳಿಸಿದ 'ಸಂಗೀತ'
ಶಿಕ್ಷಕರಲ್ಲಿ ಶಿಕ್ಷಣವೊಂದು ಅಸ್ತ್ರವಾಗಿದ್ದರೆ ಇಂಥ ಶಿಕ್ಷಕರಲ್ಲೂ ಅನೇಕ ಕಲೆಗಳು ಅಡಗಿರುತ್ತವೆ. ವಿದ್ಯಾರ್ಥಿಗಳ ಬದುಕಿನ ಸ್ಪೂರ್ತಿ ತುಂಬುವ ಮಾತುಗಳಷ್ಟೇ ಅಲ್ಲ. ಕ್ಲಾಸ್ ಗಳಲ್ಲಿ ಜಾನಪದ ಮತ್ತು ಭಾವಗೀತೆಗಳ ಮೂಲಕ ವಿದ್ಯಾರ್ಥಿಗಳಲ್ಲಿನ ಚೈತನ್ಯವನ್ನು 'ಇಮ್ಮಡಿ'ಗೊಳಿಸುವಂತಾ ಶಿಕ್ಷಕರು ಕೂಡಾ ಸಿಕ್ಕೇ ಸಿಗುತ್ತಾರೆ.
"ನಿಮ್ಗೆ ಬುದ್ಧಿ ಹೇಳುವುದೋ, ಬಂಡೆ ಮೇಲೆ ನೀರು ಸುರಿದಂತೆ"
ಸರ್ಕಾರಿ ಶಾಲೆ, ಕನ್ನಡ ಮೀಡಿಯಂ ವಿದ್ಯಾರ್ಥಿಗಳಿಗೆ ಈ ಗಾದೆ 100% ನೆನಪು ಇರುತ್ತದೆ. ಏಕೆಂದರೆ ಇಂಗ್ಲೀಷ್, ಗಣಿತ ಹಾಗೂ ವಿಜ್ಞಾನ ಬೋಧಿಸುವ ಶಿಕ್ಷಕರು ಈ ಮಾತುಗಳನ್ನು ಹೇಳದೇ ಇರೋದಿಲ್ಲ. ಕ್ಲಾಸಿನ ಕಟ್ಟಕಡೆಯ ವಿದ್ಯಾರ್ಥಿಗಳಿಗೂ ಇದೊಂದು ಮಾತು ಜ್ಞಾಪಕದಲ್ಲಿ ಇರುತ್ತದೆ. ಕನ್ನಡ ಮೀಡಿಯಂ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಬ್ಬಿಣದ ಕಡಲೆಯಾದರೆ, ಗಣಿತ ವಿಷಯದ ಬಗ್ಗೆ ಲೆಕ್ಕವಿಲ್ಲದಷ್ಟು ಭಯ. ವಿಜ್ಞಾನವಂತೂ ಕನಸಿನಲ್ಲಿರುವ ವಿದ್ಯಾರ್ಥಿಗಳನ್ನೂ ಬೆಚ್ಚಿ ಬೀಳಿಸುವಂತಿರುತ್ತದೆ. ಇಂಥ ವಿದ್ಯಾರ್ಥಿಗಳನ್ನೂ ತಿದ್ದಿ ತೀಡಿ ಒಂದು ವಿಷಯದಲ್ಲಿ ಪಾಂಡಿತ್ಯವನ್ನು ಪಡೆಯುವಂತೆ ಮಾಡುವ ಜವಾಬ್ದಾರಿಯನ್ನು ಈ ವಿಷಯಗಳ ಶಿಕ್ಷಕರು ಅಂದಿನಿಂದ ಇಂದಿನವರೆಗೂ ಯಶಸ್ವಿಯಾಗಿಯೇ ನಿರ್ವಹಿಸಿಕೊಂಡು ಬರುತ್ತಿದ್ದಾರೆ.
ಗುರು-ಗುರಿ ಇದ್ದರೆ ಯಶಸ್ಸು ಖಚಿತ: ಶಿಕ್ಷಕರ ದಿನಾಚರಣೆಯ ಮಹತ್ವ
"ಪಿಯುಸಿಯಲ್ಲಿ ಯಾವ ವಿಷಯ ತೆಗೆದುಕೊಳ್ಳುತ್ತೀಯಾ ನೋಡು"
ಪಿಯುಸಿಯಲ್ಲಿ ನಮ್ಮ ಮುಂದಿನ ಆಯ್ಕೆ ಏನು. ಹೈಸ್ಕೂಲ್ ಮುಗಿದ ಹಂತದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಎದುರಾಗುವ ಸವಾಲು ಇದೇ. ಕಬ್ಬಿಣದ ಕಡಲೆ ಎನಿಸಿದ್ದ ವಿಷಯಗಳಲ್ಲೇ ವಿದ್ಯಾರ್ಥಿಗಳು ಪರಿಣಿತ ಪಡೆದ ಉದಾಹರಣೆಗಳು ಸಾಕಷ್ಟಿವೆ. ನೆಚ್ಚಿನ ಶಿಕ್ಷಕರು ಬೋಧಿಸಿದ ವಿಷಯದಲ್ಲಿಯೇ ನಮ್ಮ ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಆಯ್ದುಕೊಂಡಿದ್ದು ಇದೆ. ಹೀಗೆ ಪ್ರತಿಯೊಂದು ಹಂತದಲ್ಲಿ ದಾರಿದೀಪವಾಗಿ ವಿದ್ಯಾರ್ಥಿಗಳ ಜೀವನವನ್ನು ಉಜ್ವಲಗೊಳಿಸುವ ಶಿಕ್ಷಕರ ಈ ಮಾತುಗಳನ್ನು ನೆನೆಯುತ್ತಾ ನಮ್ಮ ಗುರುಗಳನ್ನು ಮೆಲುಕು ಹಾಕೋಣ. ಏಕೆಂದರೆ "ಗುರುವಿನ ಗುಲಾಮನಾಗುವ ತನಕ ದೊರೆಯದು ಎನಗೆ ಮುಕ್ತಿ"..