ಗುರು-ಗುರಿ ಇದ್ದರೆ ಯಶಸ್ಸು ಖಚಿತ: ಶಿಕ್ಷಕರ ದಿನಾಚರಣೆಯ ಮಹತ್ವ
ಬೋಧನಾ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಗಳಲ್ಲಿ ಒಂದು ಎಂಬುದನ್ನು ಪರಿಗಣಿಸಿರುವ ದೇಶ ನಮ್ಮದು. ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದರ ಜತೆಗೆ ಸರಿ ತಪ್ಪುಗಳನ್ನು ತಿದ್ದುವ, ಅವರಲ್ಲಿನ ಆಸಕ್ತಿಗಳನ್ನು ವೃದ್ಧಿಸುವ ಮತ್ತು ಅವರ ಬದುಕಿಗೆ ಗುರಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಮೌಲ್ಯಯುತ ಸಮಾಜ ರೂಪಿಸುವ ಶಿಕ್ಷಕರಿಗೆ ತಮ್ಮದೇ ಆದ ದಿನವೊಂದನ್ನು ಸಂಭ್ರಮಿಸುವ ಅವಕಾಶ ಇದು.
ಶಿಕ್ಷಕರ ಮೇಲಿನ ಜವಾಬ್ದಾರಿಗಳು, ಅವರನ್ನು ವಿದ್ಯಾರ್ಥಿಗಳು ಮತ್ತು ಜನರು ನೋಡುವ ಬಗೆ ಹಾಗೂ ಶಿಕ್ಷಕರ ಮನೋಭಾವಗಳು ಕೂಡ ಈ ಕಾಲಘಟ್ಟದಲ್ಲಿ ಬದಲಾಗಿದೆ. ಆದರೆ ಅವರ ಹೊಣೆಗಾರಿಕೆಗಳು ಬದಲಾಗಿಲ್ಲ. ಅವರ ಜವಾಬ್ದಾರಿ ಮತ್ತು ಒತ್ತಡಗಳು ಇನ್ನಷ್ಟು ಹೆಚ್ಚಾಗಿವೆ. ಇಂತಹ ಅನೇಕ ಕಾರಣಗಳಿಂದಾಗಿ 'ಶಿಕ್ಷಕರ ದಿನಾಚರಣೆ' ಮಹತ್ವ ಪಡೆದುಕೊಳ್ಳುತ್ತದೆ.
ಸೆ. 5ರಂದು ಶಾಲೆಗಳಲ್ಲಿನ ವಾತಾವರಣ ಒಂದಷ್ಟು ಬದಲಾಗುತ್ತದೆ. ಮಕ್ಕಳೊಂದಿಗೆ ಶಿಕ್ಷಕರೂ ಮಕ್ಕಳಾಗುತ್ತಾರೆ. ಶಿಕ್ಷಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಮಕ್ಕಳೂ ಶಿಕ್ಷಕರಿಗೆ ವಿವಿಧ ರೀತಿಯಲ್ಲಿ ಗೌರವ ಅರ್ಪಿಸುತ್ತಾರೆ. ಆದರೆ ಈ ಬಾರಿ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆ ಸಾಧ್ಯವಾಗುತ್ತಿಲ್ಲ. ಆನ್ಲೈನ್ ಮೂಲಕ ತರಗತಿಗಳನ್ನು ನಡೆಸುತ್ತಿರುವ ಶಿಕ್ಷಕರಿಗೆ ತಮ್ಮ ದಿನವನ್ನು ಸಂಭ್ರಮಿಸುವ ಅವಕಾಶವೂ ಸಿಗುತ್ತಿಲ್ಲ.
ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ
ಭಾರತದ ಮೊದಲ ಉಪ ರಾಷ್ಟ್ರಪತಿ ಮತ್ತು ಎರಡನೆಯ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನಿಸಿದ್ದು 1888ರ ಸೆ. 5ರಂದು. ಅವರ ಗೌರವಾರ್ಥ ಸೆ. 5ರ ದಿನವನ್ನು ಶಿಕ್ಷಕರ ದಿನವೆಂದು ಆಚರಿಸುತ್ತಿರುವುದು ಎಲ್ಲರಿಗೂ ತಿಳಿದಿದೆ. ರಾಜಕಾರಣಕ್ಕೆ ಪ್ರವೇಶಿಸುವ ಮುನ್ನ ಅವರು ಸುದೀರ್ಘ ಸಮಯ ವಿವಿಧ ಕಾಲೇಜುಗಳಲ್ಲಿ ಪ್ರೊಫೆಸರ್ ಆಗಿ ಬೋಧನಾ ವೃತ್ತಿ ನಡೆಸಿದ್ದರು. ಶಿಕ್ಷಕರಲ್ಲದೆ ಅವರು ಬರಹಗಾರರೂ ಆಗಿದ್ದರು.
ಸರ್ವೆಪಲ್ಲಿ ರಾಧಾಕೃಷ್ಣನ್ ನೀಡಿದ ಸಲಹೆ
ದೇಶದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ನಂತರ 1962ರಲ್ಲಿ ರಾಷ್ಟ್ರಪತಿ ಹುದ್ದೆಗೆ ಏರಿದ ಡಾ, ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಆಚರಿಸಲು ಅನುಮತಿ ನೀಡುವಂತೆ ಅವರ ವಿದ್ಯಾರ್ಥಿಗಳು ಕೋರಿದ್ದರು. ಆಗ ಅವರು ತಮ್ಮ ಜನ್ಮದಿನದ ಬದಲು ಅಂದು ಶಿಕ್ಷಕರ ದಿನ ಎಂದು ಆಚರಣೆ ಮಾಡುವಂತೆ ಸಲಹೆ ನೀಡಿದ್ದರು. ಹೀಗೆ 1962ರಲ್ಲಿ ಮೊದಲ ಬಾರಿಗೆ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಅಲ್ಲಿಂದ ಪ್ರತಿ ವರ್ಷ ರಾಧಾಕೃಷ್ಣನ್ ಅವರ ಜನ್ಮದಿನ 'ಶಿಕ್ಷಕರ ದಿನ'ವಾಗಿ ಆಚರಣೆಯಾಗುತ್ತಿದೆ.
ಪ್ರಜೆಗಳನ್ನು ರೂಪಿಸುವ ಪಾತ್ರ
ವಿದ್ಯಾರ್ಥಿಗಳ ಜೀವನ ಮತ್ತು ವೃತ್ತಿಗೆ ಸೂಕ್ತ ರೂಪು ನೀಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವವರು ಶಿಕ್ಷಕರು. ಹೀಗಾಗಿ ಶಿಕ್ಷಕರನ್ನು ನೆನಪಿಸಿಕೊಳ್ಳುವುದು ಮತ್ತು ಗೌರವಿಸುವುದು ಈ ಆಚರಣೆಯ ಉದ್ದೇಶ. ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಘೋಷ ವಾಕ್ಯಗಳನ್ನು ಕೇಳಿರುತ್ತೇವೆ. ಅಂತಹ ಭವಿಷ್ಯದ ಪ್ರಜೆಗಳನ್ನು ಸಿದ್ಧಪಡಿಸುವ ಹಾಗೂ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಹೊಣೆ ಶಿಕ್ಷಕರ ಮೇಲಿರುತ್ತದೆ.
ಹಲವಾರು ಗುರುಗಳು
ಪಠ್ಯದಲ್ಲಿನ ವಿಷಯಗಳನ್ನು ಕಲಿಸುವುದರಾಚೆಗೆ ವಿದ್ಯಾರ್ಥಿಗಳನ್ನು ಅವರ ವೈಯಕ್ತಿಕ ಸಾಮರ್ಥ್ಯ ಮತ್ತು ಶಕ್ತಿಗೆ ಅನುಗುಣವಾಗಿ ತಿದ್ದುವ, ಅವರಿಗೆ ಮಾರ್ಗದರ್ಶನ ಮಾಡುವ ಕಾರ್ಯಗಳನ್ನೂ ಶಿಕ್ಷಕರು ಮಾಡುತ್ತಾರೆ. ಶಾಲೆ ಮತ್ತು ಕಾಲೇಜಿನಲ್ಲಿ ಪಾಠ ಮಾಡಿದವರಷ್ಟೇ ಶಿಕ್ಷಕರಾಗಬೇಕಿಲ್ಲ. ಶೈಕ್ಷಣಿಕ ಬದುಕಿನಾಚೆಗೂ ನಮಗೆ ಹಲವಾರು ರೀತಿಯ ಗುರುಗಳು ಸಿಗುತ್ತಾರೆ. ನಮ್ಮ ಬದುಕಿಗೆ ಸುಂದರವಾದ ಚೌಕಟ್ಟು ನೀಡಿದವರು, ಗುರಿ ನೀಡಿದವರೆಲ್ಲರೂ ಶಿಕ್ಷಕರೇ. ಗುರು-ಗುರಿ ಇದ್ದರೆ ಯಶಸ್ಸು ಖಂಡಿತಾ ಎಂಬ ಮಾತಿದೆ. ಇಂತಹ ಶಿಕ್ಷಕರ ಕಠಿಣ ಪರಿಶ್ರಮಕ್ಕೆ ಸಲ್ಲಬೇಕಾದ ಗೌರವ ಇದು.