ಎರಡೇ ವರ್ಷದಲ್ಲಿ ಕೋಲಾರದ ಈ ಶಾಲೆಯ ಚಿತ್ರಣವನ್ನೇ ಬದಲಿಸಿದ ಶಿಕ್ಷಕರು
ಕೋಲಾರ, ಜನವರಿ 31: ಈ ಶಾಲೆಗೆ ಮಕ್ಕಳಿರಲಿ, ಶಿಕ್ಷಕರು ಕೂಡ ಬರಲು ಹಿಂದೇಟು ಹಾಕುವಂತಾಗಿತ್ತು. ಕೆಸರು ಗದ್ದೆಯಂತಾಗಿದ್ದ ಶಾಲಾ ಆವರಣ ದಾಟಿಕೊಂಡು ತರಗತಿಗೆ ಬರಬೇಕಾದರೆ ಆಗುತ್ತಿದ್ದ ಕಿರಿಕಿರಿ ಅನುಭವಿಸಿದವರಿಗಷ್ಟೇ ಗೊತ್ತು. ಆದರೆ ಇದನ್ನೇ ಸವಾಲಾಗಿ ತೆಗೆದುಕೊಂಡರು ಇಲ್ಲಿನ ಶಿಕ್ಷಕರು. ಆ ಸವಾಲಿನಿಂದ ಕೇವಲ ಎರಡೇ ವರ್ಷದಲ್ಲಿ ಇಡೀ ಶಾಲೆಯ ಚಿತ್ರಣವನ್ನೇ ಬದಲಿಸಿದರು.
ಇದಕ್ಕಾಗಿ ತಮ್ಮ ಸಂಬಳದ ಒಂದು ಭಾಗವನ್ನು ಮೀಸಲಿರಿಸಿದರು ಶಿಕ್ಷಕರು. ದಾನಿಗಳಿಂದ ದೇಣಿಗೆ ಪಡೆದು ಈ ಸರ್ಕಾರಿ ಶಾಲೆಯನ್ನು ಒಂದು ಮಾದರಿ ಶಾಲೆಯನ್ನಾಗಿ ರೂಪಿಸಲು ಹೊರಟರು. ಎರಡು ವರ್ಷಗಳಲ್ಲಿ ತಾವು ಅಂದುಕೊಂಡಿದ್ದನ್ನು ಪೂರೈಸಿದರು.
ಮರದ ನೆರಳೇ ಈ ಮಕ್ಕಳಿಗೆ ಕ್ಲಾಸ್ ರೂಂ; ಯರ್ರೇನಹಳ್ಳಿ ಸರ್ಕಾರಿ ಶಾಲೆ ಕಥೆಯಿದು
ಆ ಶಾಲೆ ಬೇರಾವುದೂ ಅಲ್ಲ, ಕೋಲಾರದ ಬಂಗಾರಪೇಟೆ ಪಟ್ಟಣದಲ್ಲಿರುವ ಸರ್ಕಾರಿ ಕನ್ನಡ ಉನ್ನತೀಕರಿಸಿದ ಪ್ರಾಥಮಿಕ ಶಾಲೆ. ಈ ಶಾಲೆ ಮುನ್ನ ಹೇಗಿತ್ತು? ನಂತರ ಹೇಗೆ ಬದಲಾಯಿತು? ಇಲ್ಲಿದೆ ಶಾಲೆ ಬದಲಾದ ಕಥೆ...
ಎರಡು ವರ್ಷದ ಹಿಂದೆ ಶಾಲೆ ಹೀಗಿರಲಿಲ್ಲ
ಎರಡು ವರ್ಷಗಳ ಹಿಂದೆ ಈ ಸರ್ಕಾರಿ ಶಾಲೆಯ ಸ್ಥಿತಿ ಬೇರೆಯೇ ಆಗಿತ್ತು. ಮಕ್ಕಳ ಸಂಖ್ಯೆ ಕೂಡ ಕಡಿಮೆಯಾಗುತ್ತಾ ಬಂದಿತ್ತು. ಇದನ್ನ ಗಮನಿಸಿದ ಶಾಲೆಯ ಮುಖ್ಯ ಶಿಕ್ಷಕಿ ಸುಜಾತ, ಸಹ ಶಿಕ್ಷಕರಾದ ಆಶಾ ಕುಮಾರಿ, ಪುಟ್ಟ ವೀರಮ್ಮ, ಶಹತಾಜ್ ಬೇಗಂ, ಪುಷ್ಪಲತಾ, ನಿರ್ಮಲ ಅವರೊಂದಿಗೆ ಕೂಡಿ, ನಾವೇ ಏನಾದರೂ ಬದಲಾವಣೆ ಮಾಡಿ ಈ ಶಾಲೆಯನ್ನು ಉಳಿಸಿಕೊಳ್ಳಬೇಕು ಎಂದು ತಮ್ಮ ಆಲೋಚನೆಯನ್ನು ಹಂಚಿಕೊಂಡರು. ಇದಕ್ಕೆ ಶಿಕ್ಷಕರೆಲ್ಲಾ ಒಟ್ಟಾದರು.
ಶಿಕ್ಷಕರ ಸಂಬಳದ ಶೇ.20ರಷ್ಟು ಹಣ ಅಭಿವೃದ್ಧಿಗೆ
ಶಾಲೆಯ ಅಭಿವೃದ್ಧಿಗೆ ಮುಂದಾದ ಶಿಕ್ಷಕರು ತಮ್ಮ ಸಂಬಳದ ಶೇ.20 ರಷ್ಟು ಹಣವನ್ನು ಶಾಲೆಗೆ ಮುಡುಪಾಗಿಡಲು ನಿರ್ಧರಿಸಿದರು. ಕೂಡಿಟ್ಟ ಒಂದಿಷ್ಟು ಹಣದಲ್ಲಿ ಪಾಳುಬಿದ್ದ ಶಾಲಾ ಕಟ್ಟಡ ದುರಸ್ತಿಯನ್ನು ಮೊದಲು ಮಾಡಿಸಿದರು. ಒಬ್ಬರದ್ದು ಸುಣ್ಣ-ಬಣ್ಣ ಬಳೆಯುವ ಖರ್ಚು, ಮತ್ತೊಬ್ಬರದ್ದು ಗಿಡ-ಮರ ಪೋಷಣೆ ಹಾಗೂ ಶಾಲೆಯ ಸುಧಾರಣೆ ಒಬ್ಬರ ಪಾಲಿನದ್ದು. ಹೀಗೆ ಒಂದೊಂದು ಕೆಲಸದ ಜವಾಬ್ದಾರಿಯನ್ನು ಒಬ್ಬೊಬ್ಬ ಶಿಕ್ಷಕರು ಕೈಗೊಂಡರು. ಮಕ್ಕಳಿಗೆ ಬೇಕಾದ ಕಲಿಕೆಯ ಸಾಮಗ್ರಿಗಳನ್ನು ನೀಡುವ ಮೂಲಕ ಶಾಲೆಗಳತ್ತ ಅವರು ಬರುವಂತೆ ಮಾಡಿದರು.
ಬಿಸಾಡಿದ್ದ ರೈಲು ಬೋಗಿಗಳೀಗ ಮೈಸೂರಿನ ಈ ಮಕ್ಕಳ ಸುಂದರ ಪಾಠ ಶಾಲೆ
ಶಾಲೆ ಈಗ ಹೇಗಿದೆ ಗೊತ್ತಾ?
ಆಗ ಪಾಳುಬಿದ್ದ ಕಟ್ಟಡದಂತೆ ಕಾಣುತ್ತಿದ್ದ ಶಾಲೆ ಈಗ ಸುಣ್ಣ-ಬಣ್ಣ ಬಳೆದು ಸುಂದರವಾಗಿ ಕಂಗೊಳಿಸುತ್ತಿದೆ. ಈ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅತ್ಯಾಧುನಿಕ ಶಿಕ್ಷಣ ವ್ಯವಸ್ಥೆಯೂ ಇದೆ. ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ, ಅಡುಗೆ ಮನೆ, ಪಠ್ಯೋಪಕರಣಗಳು, ವ್ಯವಸ್ಥಿತ ತರಗತಿಗಳನ್ನು ಹೊಂದಿದೆ. ಖಾಸಗಿ ಶಾಲೆ ಎಂಬಂತೆ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡಿದೆ ಈ ಸರ್ಕಾರಿ ಶಾಲೆ.
ಶಾಲೆ ನೋಡಲೂ ಸುಂದರ
ಶಾಲಾ ಆವರಣದಲ್ಲಿ ನೀರು ತುಂಬಿಕೊಂಡು ಕೆಸರು ಗದ್ದೆಯಂತ್ತಾಗುತ್ತಿದ್ದುದನ್ನು ಕಂಡು ಎಚ್ಚೆತ್ತ ಶಿಕ್ಷಕಿಯರು ಮಣ್ಣು ಹಾಸು ಹಾಕಿ, ಗಿಡ ಮರಗಳನ್ನು ಪೋಷಣೆ ಮಾಡಿದ್ದಾರೆ. ಶಾಲೆಯ ಗೋಡೆಗಳ ತುಂಬ ಮಕ್ಕಳ ಪಠ್ಯ ಹಾಗೂ ಸಾಮಾನ್ಯ ಜ್ಞಾನಕ್ಕೆ ಅನುಕೂಲಕರವಾದ ಬರಹಗಳನ್ನು ಬರೆಸಲಾಗಿದೆ. ಜೊತೆಗೆ ದಾನಿಗಳ ಸಹಾಯದಿಂದ ಸರ್ಕಾರದ ಸಮವಸ್ತ್ರದ ಜೊತೆಗೆ ಮತ್ತೊಂದು ಯೂನಿಫಾಂ, ಟೈ, ಬೆಲ್ಟ್ ಹಾಗೂ ಶೂಗಳನ್ನು ನೀಡಲಾಗಿದೆ. ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಶಿಕ್ಷಣದ ಗುಣಮಟ್ಟ, ಮಕ್ಕಳ ದಾಖಲಾತಿಯನ್ನು ಕಾಯ್ದುಕೊಳ್ಳಲಾಗುತ್ತಿರುವುದು ಮತ್ತೊಂದು ಹಿರಿಮೆ. ಮಕ್ಕಳು ಕೂಡ ಆಸಕ್ತಿಯಿಂದ ಶಾಲೆಗೆ ಬರುತ್ತಿದ್ದು, ನಲಿಯುತ್ತಾ ಕಲಿಯುತ್ತಿದ್ದಾರೆ.